Homeಅಂಕಣಗಳು2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

- Advertisement -
- Advertisement -

ಯೋಗೇಂದ್ರ ಯಾದವ್ |

ಇದನ್ನು ರಾಜಕೀಯ ವಿಜ್ಞಾನಿಗಳು ಚುನಾವಣಾ ಪ್ರಜಾತಂತ್ರದ ‘ಸ್ವಯಂ ಸುಧಾರಣೆಯ ಮೆಕ್ಯಾನಿಸಂ’ ಎಂದು ಕರೆಯುತ್ತಾರೆ. ಮಾರುಕಟ್ಟೆ ಆರ್ಥಿಕತೆಯ ವಿಕೃತಿಗಳನ್ನು ಸರಿಪಡಿಸುವ ಆದಂ ಸ್ಮಿತ್‍ರ ಪ್ರಖ್ಯಾತ ನಿಗೂಢ ಹಸ್ತದ ರೀತಿಯಲ್ಲೇ, ಸ್ಪರ್ಧಾತ್ಮಕ ಚುನಾವಣೆಗಳು ರಾಜಕೀಯ ವ್ಯವಸ್ಥೆಗಳ ಅತಿರೇಕಗಳನ್ನು ಸರಿ ಮಾಡಬೇಕು. 2018ರ ವಿಧಾನಸಭಾ ಚುನಾವಣೆಗಳು ಮಾಡಿರುವುದು ಇದನ್ನೇ. ಸರ್ವೋಚ್ಚ ನಾಯಕನೊಬ್ಬನ ಕದಲಿಸಲಾಗದ ಶಕ್ತಿಗೆ ಎಲ್ಲಾ ಸಂಸ್ಥೆಗಳು, ನಿಯಮಗಳು ಮತ್ತು ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಅಡವಿಡುವ ಸಂಸದೀಯ ಸರ್ವಾಧಿಕಾರದತ್ತ ದೇಶ ಸಾಗುತ್ತಿರುವಾಗ, ಸ್ವಯಂಚಾಲಿತ ಬ್ರೇಕ್‍ಗಳು ಚುರುಕುಗೊಂಡಿವೆ. ಇದ್ದಕ್ಕಿದ್ದ ಹಾಗೆ, 2019ರ ಚುನಾವಣೆಯು ಯಾರೂ ಗೆಲ್ಲಬಹುದಾದ ಸ್ಪರ್ಧೆಯಾಗಿಬಿಟ್ಟಿದೆ.
ಮೊಟ್ಟಮೊದಲನೆಯದಾಗಿ, ಈ ಫಲಿತಾಂಶವು ಜನರು ಮತಚಲಾಯಿಸುವ ಅಸಲೀ ಅಜೆಂಡಾ ಯಾವುದೆಂಬುದನ್ನು ಒತ್ತಿ ಹೇಳಿದೆ. ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಸಂಕಷ್ಟವು ನಿಜವೆಂಬುದನ್ನು ಇದು ಸಾಬೀತುಪಡಿಸಿದೆ. ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವ ಅಂತಿಮ ಸಮೀಕರಣ ಯಾವುದೆಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಛತ್ತೀಸ್‍ಗಢ, ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಯ ವಿರುದ್ಧದ ಸ್ಪಷ್ಟ ಅಲೆ ಕಂಡಿದೆ. ಮಧ್ಯಪ್ರದೇಶದ ಮಾಲ್ವಾ, ಪೂರ್ವ ರಾಜಸ್ತಾನ ಮತ್ತು ಕೇಂದ್ರ ಛತ್ತೀಸ್‍ಗಡದಲ್ಲಿ ಬಿಜೆಪಿಯ ಸೋಲುಗಳು ಗುಜರಾತ್‍ನಂತೆಯೇ ರೈತರ ಸಿಟ್ಟು ಬಿಜೆಪಿಯ ವಿರುದ್ಧ ಕೆಲಸ ಮಾಡಿರುವುದನ್ನು ತೋರುತ್ತಿವೆ. ಟ್ರೆಂಡ್ ಏನಿದೆ ಎಂಬುದನ್ನು ಗ್ರಹಿಸುವ ಫಲಿತಾಂಶದ ಸಾಮಾಜಿಕ ಸಂಗತಿಗಳು, ಬಿಜೆಪಿಯ ನಷ್ಟವು ಗ್ರಾಮೀಣ ಭಾಗದಲ್ಲೇ ಸಾಪೇಕ್ಷವಾಗಿ ಹೆಚ್ಚಿದೆ ಎಂಬುದನ್ನು ಕಾಣಿಸಿವೆ. ನಿರುದ್ಯೋಗಿ ಯುವಜನರೂ ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಿರುವುದನ್ನು ತೋರಿವೆ. ಎಲ್ಲಾ ಚುನಾವಣಾಪೂರ್ವ ಸಮೀಕ್ಷೆಗಳು ಉದ್ಯೋಗದ ಇಶ್ಯೂ ಚುನಾವಣೆಯ ಪ್ರಮುಖ ಅಂಶವನ್ನಾಗಿರುವುದನ್ನು ಗುರುತಿಸಿದ್ದವು. ಯೋಗಿ ಆದಿತ್ಯನಾಥರ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಮಂದಿರವು ಒಂದು ಇಶ್ಯೂವಾಗಿ ಮುನ್ನೆಲೆಗೆ ಬಂದಿಲ್ಲವೆಂಬುದನ್ನೂ ಫಲಿತಾಂಶವು ಖಚಿತಪಡಿಸಿದೆ. ದೇಶದ ಉಳಿದ ಭಾಗಗಳ ಬಗ್ಗೆ ಇದೇ ಮಾತನ್ನು ಈಗಲೇ ಹೇಳುವುದು ಸಾಧ್ಯವಿಲ್ಲವಾದರೂ ಹಿಂದಿ ಪ್ರದೇಶದ 2019ರ ಚುನಾವಣಾ ವಿಷಯವು ಇದಾಗಿರುತ್ತದೆ: ಹಿಂದೂ ಮುಸಲ್ಮಾನ್ ಅಲ್ಲ ಕಿಸಾನ್ (ರೈತ) ಮತ್ತು ಜವಾನ್ (ಯುವಜನತೆ).
ಫಲಿತಾಂಶವು ಇನ್ನೂ ಒಂದು ಪ್ರಜಾತಾಂತ್ರಿಕ ಸಂದೇಶವನ್ನು ಕಳಿಸಿದೆ. ಹಣ ಮತ್ತು ಮಾಧ್ಯಮಗಳು ಚುನಾವಣಾ ಗೆಲುವಿಗೆ ಅಗತ್ಯ, ಆದರೆ ಅವಷ್ಟೇ ಸಾಲದು. ಬಿಜೆಪಿಯು ಅದರ ಎದುರಾಳಿಗಿಂತ 10:1ರ ಅನುಪಾತದಲ್ಲಿ ಹಣ ವ್ಯಯಿಸಿರುವುದು ರಹಸ್ಯವೇನಲ್ಲ. ನಿಗೂಢವಾದ ಆದರೆ ಕಾನೂನುಬದ್ಧ ಮಾರ್ಗವಾದ ಚುನಾವಣಾ ಬಾಂಡ್‍ಗಳ ಮೂಲಕ ಒಟ್ಟು ಚುನಾವಣಾ ವಂತಿಗೆಯ ಶೇ.95ರಷ್ಟನ್ನು ಬಿಜೆಪಿಯೊಂದೇ ಪಡೆದುಕೊಂಡಿತ್ತು. ಮಾಧ್ಯಮಗಳ ಬಗ್ಗೆ ಎಷ್ಟು ಕಡಿಮೆ ಮಾತಾಡಿದರೆ ಅಷ್ಟು ಒಳ್ಳೆಯದು. ಆದರೆ ಇಷ್ಟನ್ನಂತೂ ಹೇಳಬೇಕು: ‘ಸ್ವತಂತ್ರ’ ಮಾಧ್ಯಮದ ಅತೀ ದೊಡ್ಡ ವಿಭಾಗವು ಆಡಳಿತ ಪಕ್ಷದ ಮುಖವಾಣಿಯಾಗಿ ಬದಲಾಗಿದೆಯೆಂಬುದು ಭಾರತದ ಪ್ರಜಾತಂತ್ರದ ಚರಿತ್ರೆಯ ಅತ್ಯಂತ ನಾಚಿಕೆಗೇಡು ಅಧ್ಯಾಯವಾಗಿ ಉಳಿಯಲಿದೆ. ಇದರ ಜೊತೆಗೆ ಎದುರಾಳಿ ಪಕ್ಷಗಳನ್ನು ದುರ್ಬಲಗೊಳಿಸುವ ಬಂಡಾಯ ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಬಿಜೆಪಿಯು ಹಣದ ಹೊಳೆಯನ್ನೇ ಹರಿಸಿದ್ದೂ ಎಲ್ಲರಿಗೆ ಗೊತ್ತಿರುವ ಸತ್ಯ. ಇವೆಲ್ಲವೂ ತೆಲಂಗಾಣದಲ್ಲಿ ಟಿಆರ್‍ಎಸ್‍ಗೆ ಸಹಾಯ ಮಾಡಿದಂತೆಯೇ ಬಿಜೆಪಿಗೂ ಸಹಾಯ ಮಾಡಿವೆ. ಆದರೆ, ಬಿಜೆಪಿಯ ಸೋಲು ನಮಗೆ ಮತ್ತೊಮ್ಮೆ ನೆನಪಿಸುವುದೇನೆಂದರೆ, ನೀವು ಅಸಲೀ ಮತದಾರರ ಅಸಲೀ ಇಶ್ಯೂಗಳೊಂದಿಗೆ ಜೀವಂತ ಸಂಬಂಧವಿಟ್ಟುಕೊಂಡಿರಬೇಕು.
ಮೂರನೆಯದಾಗಿ ಚುನಾವಣೆಗಳು ತೋರಿಸುತ್ತಿರುವುದೇನೆಂದರೆ ವ್ಯಕ್ತಿ ಆರಾಧನೆಗೂ ಒಂದು ಮಿತಿಯಿರುತ್ತದೆ. ಆದರೆ, ಮೋದಿಯುಗ ಮುಗಿದಿದೆ ಎಂದು ಹೇಳುವುದು ತಪ್ಪಾದೀತು. ಎಲ್ಲಾ ಸಮೀಕ್ಷೆಗಳು ತೋರುತ್ತಿರುವುದೇನೆಂದರೆ ಮೋದಿ ಈಗಲೂ ಅತ್ಯಂತ ಜನಪ್ರಿಯ ನಾಯಕ ಮತ್ತು ರಾಹುಲ್‍ಗಾಂಧಿಗಿಂತಲೂ ಮತ್ತು ತನ್ನದೇ ಪಕ್ಷಕ್ಕಿಂತಲೂ ಹೆಚ್ಚು ಜನಪ್ರಿಯ ವ್ಯಕ್ತಿ. ಆದರೆ, ಇಷ್ಟು ಹೇಳುವುದು ಸಾಧ್ಯ. ಮೋದಿ ತನ್ನ ಆಡಳಿತದ ಮೊದಲೆರಡು ವರ್ಷಗಳಲ್ಲಿ ಮಾಡಿದಂತೆ ಯಾವುದೇ ಚುನಾವಣೆಯನ್ನು ಹೇಗೆ ಬೇಕಾದರೂ ತಿರುಗಿಸುವುದು ಇನ್ನು ಮುಂದೆ ಸಾಧ್ಯವಿಲ್ಲ. ಅವರ ಮಾಂತ್ರಿಕ ಇನ್ನಿಂಗ್ಸ್ ಮುಗಿದಿದೆ; ಈಗವರು ಆರ್ಥಿಕತೆಯ ಕುರಿತು, ದ್ವೇಷದ ವಾತಾವರಣದ ಕುರಿತು, ಸಂಸ್ಥೆಗಳ ನಾಶದ ಕುರಿತು ಮತ್ತು ರಾಫೇಲ್‍ನ ಕುರಿತಂತೆ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್‍ನ ಅತ್ಯಂತ ದೊಡ್ಡ ಗೆಲುವು ಎಲ್ಲಿಂದ ಬಂತೆಂದು ನೋಡಿ, ವ್ಯಕ್ತಿ ಆರಾಧನೆಯಿರಲಿ ಸರಿಯಾಗಿ ಒಬ್ಬ ದೊಡ್ಡ ನಾಯಕನೂ ಇಲ್ಲದಿದ್ದ ಛತ್ತೀಸ್‍ಗಢದಿಂದ ಅದು ಬಂದಿದೆ.
ಈ ಫಲಿತಾಂಶವು ಆಡಳಿತ ಕೂಟದಲ್ಲಿದ್ದ ದುರಹಂಕಾರಕ್ಕೆ ಪೆಟ್ಟು ಕೊಟ್ಟಿರುವಂತೆಯೇ, ವಿರೋಧಿ ಕೂಟದಲ್ಲಿರುವ ಅಲ್ಪತೃಪ್ತಿಗೂ ಮದ್ದು ನೀಡಿದೆ. ರಾಜಸ್ತಾನದಲ್ಲಿ ನಿರೀಕ್ಷಿಸಲಾಗಿದ್ದ ದೊಡ್ಡ ಗೆಲುವನ್ನು ಪಡೆಯಲಾಗದ್ದು ಮತ್ತು ಮಧ್ಯಪ್ರದೇಶದಲ್ಲಿ ಬಹುಮತ ಸಿಗದಿರುವುದು ಕಾಂಗ್ರೆಸ್ ಸುಮ್ಮನೇ ಕುಳಿತು ಮೋದಿಯ ಆಡಳಿತವು ತನ್ನಂತೆ ತಾನೇ ಕರಗಲಿ ಎಂದು ಬಯಸಲಾಗುವುದಿಲ್ಲವೆಂಬುದು ಸ್ಪಷ್ಟ. ವಸುಂಧರಾ ರಾಜೇ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿದ್ದ ಆಕ್ರೋಶ ಮತ್ತು ಶಿವರಾಜ್ ಚೌಹಾಣ್‍ರ ಆಡಳಿತದಲ್ಲಿದ್ದ ಜನರ ವ್ಯಾಪಕ ಸಂಕಷ್ಟವನ್ನು ಕಾಂಗ್ರೆಸ್ ತನ್ನ ಗೆಲುವಾಗಿ ಪರಿವರ್ತಿಸಲಾಗಲಿಲ್ಲವೆಂಬುದು, ಆ ಪಕ್ಷದೊಳಗೆ ಇರುವ ಗಂಭೀರ ಸಮಸ್ಯೆಯನ್ನು ಎತ್ತಿ ತೋರುತ್ತದೆ. ಕಳೆದ ಐದು ವರ್ಷಗಳಿಂದ ವಿಪಕ್ಷದಲ್ಲಿರುವ ಕಾಂಗ್ರೆಸ್ಸು, ಆ ಪಾತ್ರಕ್ಕೆ ತಕ್ಕಂತೆ ಬೀದಿಯಲ್ಲಿ ಪ್ರತಿಭಟಿಸಿದ್ದು ಎಲ್ಲೂ ಕಾಣಲಿಲ್ಲ. ಛತ್ತೀಸ್‍ಗಢದಲ್ಲಿ ಇದು ಭಿನ್ನವಾಗಿತ್ತು; ಅಲ್ಲಿನ ನಾಯಕತ್ವವು ತಳಮಟ್ಟದ ಚಳವಳಿ ಮತ್ತು ಪ್ರತಿಭಟನೆಗಳನ್ನು ಕಳೆದೈದು ವರ್ಷಗಳಲ್ಲಿ ನಡೆಸುತ್ತಾ ಕ್ರಿಯಾಶೀಲವಾಗಿತ್ತು.
ಕಡೆಯದಾಗಿ, ಚುನಾವಣಾ ಫಲಿತಾಂಶವು ಚುನಾವಣಾ ಅಂಕಗಣಿತಕ್ಕಿರುವ ಮಿತಿಯನ್ನೂ ತೋರಿಸಿದೆ. ಕಾಗದದ ಮೇಲೆ ಬಲಿಷ್ಠವಾಗಿದ್ದ ಮೈತ್ರಿಯನ್ನು ಕಾಂಗ್ರೆಸ್ಸು ತೆಲಂಗಾಣದಲ್ಲಿ ಮಾಡಿಕೊಂಡಿತ್ತು. ಲೆಕ್ಕ ಹಾಕಿ ನೋಡಿದರೆ, ಕಾಂಗ್ರೆಸ್-ಟಿಡಿಪಿ-ಸಿಪಿಐ-ಟಿಜೆಎಸ್‍ನ ಸಂಯುಕ್ತ ಶಕ್ತಿಯು ಟಿಆರ್‍ಎಸ್‍ಗಿಂತ ಎಷ್ಟೋ ಹೆಚ್ಚಿನದ್ದಾಗಿತ್ತು. ಆದರೆ, ತೆಲಂಗಾಣದ ಹುಟ್ಟಿಗೇ ವಿರುದ್ಧವಾಗಿದ್ದ ಪಕ್ಷದೊಂದಿಗಿನ ಅಪಕ್ವ ಮೈತ್ರಿಯು ಜನರಿಂದ ತಿರಸ್ಕರಿಸಲ್ಪಟ್ಟಿತು. ಛತ್ತೀಸ್‍ಗಢದಲ್ಲೂ ಅಜಿತ್ ಜೋಗಿ-ಬಿಎಸ್‍ಪಿ ಕೂಟವು ಕಾಂಗ್ರೆಸ್‍ಅನ್ನು ಬೀಳಿಸಬೇಕಿತ್ತು. ಆದರೆ, ಛತ್ತೀಸ್‍ಗಡದ ಜನರು ರಾಜ್ಯ ರಾಜಕಾರಣದ ಅತ್ಯಂತ ಸಂಶಯಾಸ್ಪದ ದಲ್ಲಾಳಿಯನ್ನು ತಿರಸ್ಕರಿಸಿದರು. 2019ಕ್ಕೆ ಮಹಾಘಟಬಂಧನ ಮಾಡುವ ಪ್ರಯತ್ನದಲ್ಲಿರುವ ತೀವ್ರ ಸಮಸ್ಯೆಯ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಮೈತ್ರಿಗಳು ಅಗತ್ಯ, ಆದರೆ ಅವು ವಿಶ್ವಾಸಾರ್ಹತೆಗೆ ಬದಲಿಯಾಗಿ ಕೆಲಸಕ್ಕೆ ಬರುವುದಿಲ್ಲ. ಚುನಾವಣೆಗಳೆಂದರೆ ನೀವು ಕನಸನ್ನು ಬಿತ್ತಬೇಕು, ಭರವಸೆ ಹುಟ್ಟಿಸಬೇಕು, ಕಥನವನ್ನು ಕಟ್ಟಬೇಕು. ಈಗ ಹುಟ್ಟಿಕೊಳ್ಳುತ್ತಿರುವ ಮೋದಿ-ವಿರೋಧಿ ಕೂಟದಲ್ಲಿ ಅದಿನ್ನೂ ರೂಪುಗೊಂಡಿಲ್ಲ.
2019ರ ದಾರಿಯಲ್ಲಿ ಬಿಜೆಪಿಯು ಐದು ಘೋಷಣೆಗಳೊಂದಿಗೆ ಹೊರಟಿದೆ: ಅದರ ಭಾರೀ ಯಂತ್ರಾಂಗ, ಮೋದಿ, ಮಂದಿರ, ಮಾಧ್ಯಮ ಮತ್ತು ಹಣ (Machinery, Modi, Mandir, Media, Money). ಈ ವಿಧಾನಸಭಾ ಚುನಾವಣೆಗಳು ಮೊದಲ ಮೂರನ್ನು ಸರಿ ಮಾಡಿಕೊಳ್ಳಲು ಸೂಚಿಸುತ್ತವೆ. ಬಿಜೆಪಿಯ ಸಂಘಟನಾತ್ಮಕ ಶಕ್ತಿಯು ಅಜೇಯವಲ್ಲದಿದ್ದರೂ, ಮಣಿಸುವುದು ಸುಲಭವಲ್ಲ. ಮೋದಿಯನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ, ಆದರೆ ಜನಪ್ರಿಯತೆ ನಿಸ್ಸಂದೇಹವಾಗಿ ಕಡಿಮೆಯಾಗಿದೆ. ಮಂದಿರವು ನಿಷ್ಠಾವಂತರಲ್ಲಿ ಉತ್ಸಾಹ ಮೂಡಿಸುತ್ತದಾದರೂ, ಮತದಾರರನ್ನು ಸೆಳೆಯಲಾಗದು. ಬದಲಿಗೆ ಉಳಿದೆರಡನ್ನೂ ಅದು ಬದಲಿಸಬಲ್ಲದು. ಮಾಧ್ಯಮ ದೊರೆಗಳು ಅವರ ಇದುವರೆಗಿನ ರೀತಿಯ ಕುರಿತು ಪುನರಾಲೋಚಿಸುತ್ತಾರೆ. ಕನಿಷ್ಠ ಇವತ್ತಿರುವ ರೀತಿಯ ಆಡಳಿತದ ಪರ ತುತ್ತೂರಿಯು ಸ್ವಲ್ಪವಾದರೂ ಕಡಿಮೆಯಾಗುತ್ತದೆಂದು ಆಶಿಸಬಹುದು. ಹಾಗೆಯೇ ದೊಡ್ಡ ಉದ್ದಿಮೆದಾರರು ತಮ್ಮೆಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ಬಯಸುವುದಿಲ್ಲ. ಚುನಾವಣಾ ರಂಗದಲ್ಲಿ ಉಳಿಯಲು ಬೇಕಾದ ಸಂಪನ್ಮೂಲವನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಪಡೆದುಕೊಳ್ಳಲು ಆರಂಭವಾಗುತ್ತದೆ. ಅಷ್ಟು ಅಸಮಾನವಲ್ಲದ ಮೈದಾನದಲ್ಲಿ 2019ರ ಲೋಕಸಭಾ ಚುನಾವಣೆಯ ಸಂಗ್ರಾಮ ನಡೆಯಲಿದೆ. ಪ್ರಜಾತಂತ್ರಕ್ಕೆ ಅಗತ್ಯವಿದ್ದ ತಿದ್ದುಪಡಿಯು ಬಹಳ ತಡವಾಗಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...