Homeಅಂಕಣಗಳು2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

- Advertisement -
- Advertisement -

ಯೋಗೇಂದ್ರ ಯಾದವ್ |

ಇದನ್ನು ರಾಜಕೀಯ ವಿಜ್ಞಾನಿಗಳು ಚುನಾವಣಾ ಪ್ರಜಾತಂತ್ರದ ‘ಸ್ವಯಂ ಸುಧಾರಣೆಯ ಮೆಕ್ಯಾನಿಸಂ’ ಎಂದು ಕರೆಯುತ್ತಾರೆ. ಮಾರುಕಟ್ಟೆ ಆರ್ಥಿಕತೆಯ ವಿಕೃತಿಗಳನ್ನು ಸರಿಪಡಿಸುವ ಆದಂ ಸ್ಮಿತ್‍ರ ಪ್ರಖ್ಯಾತ ನಿಗೂಢ ಹಸ್ತದ ರೀತಿಯಲ್ಲೇ, ಸ್ಪರ್ಧಾತ್ಮಕ ಚುನಾವಣೆಗಳು ರಾಜಕೀಯ ವ್ಯವಸ್ಥೆಗಳ ಅತಿರೇಕಗಳನ್ನು ಸರಿ ಮಾಡಬೇಕು. 2018ರ ವಿಧಾನಸಭಾ ಚುನಾವಣೆಗಳು ಮಾಡಿರುವುದು ಇದನ್ನೇ. ಸರ್ವೋಚ್ಚ ನಾಯಕನೊಬ್ಬನ ಕದಲಿಸಲಾಗದ ಶಕ್ತಿಗೆ ಎಲ್ಲಾ ಸಂಸ್ಥೆಗಳು, ನಿಯಮಗಳು ಮತ್ತು ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಅಡವಿಡುವ ಸಂಸದೀಯ ಸರ್ವಾಧಿಕಾರದತ್ತ ದೇಶ ಸಾಗುತ್ತಿರುವಾಗ, ಸ್ವಯಂಚಾಲಿತ ಬ್ರೇಕ್‍ಗಳು ಚುರುಕುಗೊಂಡಿವೆ. ಇದ್ದಕ್ಕಿದ್ದ ಹಾಗೆ, 2019ರ ಚುನಾವಣೆಯು ಯಾರೂ ಗೆಲ್ಲಬಹುದಾದ ಸ್ಪರ್ಧೆಯಾಗಿಬಿಟ್ಟಿದೆ.
ಮೊಟ್ಟಮೊದಲನೆಯದಾಗಿ, ಈ ಫಲಿತಾಂಶವು ಜನರು ಮತಚಲಾಯಿಸುವ ಅಸಲೀ ಅಜೆಂಡಾ ಯಾವುದೆಂಬುದನ್ನು ಒತ್ತಿ ಹೇಳಿದೆ. ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಸಂಕಷ್ಟವು ನಿಜವೆಂಬುದನ್ನು ಇದು ಸಾಬೀತುಪಡಿಸಿದೆ. ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವ ಅಂತಿಮ ಸಮೀಕರಣ ಯಾವುದೆಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಛತ್ತೀಸ್‍ಗಢ, ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಯ ವಿರುದ್ಧದ ಸ್ಪಷ್ಟ ಅಲೆ ಕಂಡಿದೆ. ಮಧ್ಯಪ್ರದೇಶದ ಮಾಲ್ವಾ, ಪೂರ್ವ ರಾಜಸ್ತಾನ ಮತ್ತು ಕೇಂದ್ರ ಛತ್ತೀಸ್‍ಗಡದಲ್ಲಿ ಬಿಜೆಪಿಯ ಸೋಲುಗಳು ಗುಜರಾತ್‍ನಂತೆಯೇ ರೈತರ ಸಿಟ್ಟು ಬಿಜೆಪಿಯ ವಿರುದ್ಧ ಕೆಲಸ ಮಾಡಿರುವುದನ್ನು ತೋರುತ್ತಿವೆ. ಟ್ರೆಂಡ್ ಏನಿದೆ ಎಂಬುದನ್ನು ಗ್ರಹಿಸುವ ಫಲಿತಾಂಶದ ಸಾಮಾಜಿಕ ಸಂಗತಿಗಳು, ಬಿಜೆಪಿಯ ನಷ್ಟವು ಗ್ರಾಮೀಣ ಭಾಗದಲ್ಲೇ ಸಾಪೇಕ್ಷವಾಗಿ ಹೆಚ್ಚಿದೆ ಎಂಬುದನ್ನು ಕಾಣಿಸಿವೆ. ನಿರುದ್ಯೋಗಿ ಯುವಜನರೂ ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಿರುವುದನ್ನು ತೋರಿವೆ. ಎಲ್ಲಾ ಚುನಾವಣಾಪೂರ್ವ ಸಮೀಕ್ಷೆಗಳು ಉದ್ಯೋಗದ ಇಶ್ಯೂ ಚುನಾವಣೆಯ ಪ್ರಮುಖ ಅಂಶವನ್ನಾಗಿರುವುದನ್ನು ಗುರುತಿಸಿದ್ದವು. ಯೋಗಿ ಆದಿತ್ಯನಾಥರ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಮಂದಿರವು ಒಂದು ಇಶ್ಯೂವಾಗಿ ಮುನ್ನೆಲೆಗೆ ಬಂದಿಲ್ಲವೆಂಬುದನ್ನೂ ಫಲಿತಾಂಶವು ಖಚಿತಪಡಿಸಿದೆ. ದೇಶದ ಉಳಿದ ಭಾಗಗಳ ಬಗ್ಗೆ ಇದೇ ಮಾತನ್ನು ಈಗಲೇ ಹೇಳುವುದು ಸಾಧ್ಯವಿಲ್ಲವಾದರೂ ಹಿಂದಿ ಪ್ರದೇಶದ 2019ರ ಚುನಾವಣಾ ವಿಷಯವು ಇದಾಗಿರುತ್ತದೆ: ಹಿಂದೂ ಮುಸಲ್ಮಾನ್ ಅಲ್ಲ ಕಿಸಾನ್ (ರೈತ) ಮತ್ತು ಜವಾನ್ (ಯುವಜನತೆ).
ಫಲಿತಾಂಶವು ಇನ್ನೂ ಒಂದು ಪ್ರಜಾತಾಂತ್ರಿಕ ಸಂದೇಶವನ್ನು ಕಳಿಸಿದೆ. ಹಣ ಮತ್ತು ಮಾಧ್ಯಮಗಳು ಚುನಾವಣಾ ಗೆಲುವಿಗೆ ಅಗತ್ಯ, ಆದರೆ ಅವಷ್ಟೇ ಸಾಲದು. ಬಿಜೆಪಿಯು ಅದರ ಎದುರಾಳಿಗಿಂತ 10:1ರ ಅನುಪಾತದಲ್ಲಿ ಹಣ ವ್ಯಯಿಸಿರುವುದು ರಹಸ್ಯವೇನಲ್ಲ. ನಿಗೂಢವಾದ ಆದರೆ ಕಾನೂನುಬದ್ಧ ಮಾರ್ಗವಾದ ಚುನಾವಣಾ ಬಾಂಡ್‍ಗಳ ಮೂಲಕ ಒಟ್ಟು ಚುನಾವಣಾ ವಂತಿಗೆಯ ಶೇ.95ರಷ್ಟನ್ನು ಬಿಜೆಪಿಯೊಂದೇ ಪಡೆದುಕೊಂಡಿತ್ತು. ಮಾಧ್ಯಮಗಳ ಬಗ್ಗೆ ಎಷ್ಟು ಕಡಿಮೆ ಮಾತಾಡಿದರೆ ಅಷ್ಟು ಒಳ್ಳೆಯದು. ಆದರೆ ಇಷ್ಟನ್ನಂತೂ ಹೇಳಬೇಕು: ‘ಸ್ವತಂತ್ರ’ ಮಾಧ್ಯಮದ ಅತೀ ದೊಡ್ಡ ವಿಭಾಗವು ಆಡಳಿತ ಪಕ್ಷದ ಮುಖವಾಣಿಯಾಗಿ ಬದಲಾಗಿದೆಯೆಂಬುದು ಭಾರತದ ಪ್ರಜಾತಂತ್ರದ ಚರಿತ್ರೆಯ ಅತ್ಯಂತ ನಾಚಿಕೆಗೇಡು ಅಧ್ಯಾಯವಾಗಿ ಉಳಿಯಲಿದೆ. ಇದರ ಜೊತೆಗೆ ಎದುರಾಳಿ ಪಕ್ಷಗಳನ್ನು ದುರ್ಬಲಗೊಳಿಸುವ ಬಂಡಾಯ ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಬಿಜೆಪಿಯು ಹಣದ ಹೊಳೆಯನ್ನೇ ಹರಿಸಿದ್ದೂ ಎಲ್ಲರಿಗೆ ಗೊತ್ತಿರುವ ಸತ್ಯ. ಇವೆಲ್ಲವೂ ತೆಲಂಗಾಣದಲ್ಲಿ ಟಿಆರ್‍ಎಸ್‍ಗೆ ಸಹಾಯ ಮಾಡಿದಂತೆಯೇ ಬಿಜೆಪಿಗೂ ಸಹಾಯ ಮಾಡಿವೆ. ಆದರೆ, ಬಿಜೆಪಿಯ ಸೋಲು ನಮಗೆ ಮತ್ತೊಮ್ಮೆ ನೆನಪಿಸುವುದೇನೆಂದರೆ, ನೀವು ಅಸಲೀ ಮತದಾರರ ಅಸಲೀ ಇಶ್ಯೂಗಳೊಂದಿಗೆ ಜೀವಂತ ಸಂಬಂಧವಿಟ್ಟುಕೊಂಡಿರಬೇಕು.
ಮೂರನೆಯದಾಗಿ ಚುನಾವಣೆಗಳು ತೋರಿಸುತ್ತಿರುವುದೇನೆಂದರೆ ವ್ಯಕ್ತಿ ಆರಾಧನೆಗೂ ಒಂದು ಮಿತಿಯಿರುತ್ತದೆ. ಆದರೆ, ಮೋದಿಯುಗ ಮುಗಿದಿದೆ ಎಂದು ಹೇಳುವುದು ತಪ್ಪಾದೀತು. ಎಲ್ಲಾ ಸಮೀಕ್ಷೆಗಳು ತೋರುತ್ತಿರುವುದೇನೆಂದರೆ ಮೋದಿ ಈಗಲೂ ಅತ್ಯಂತ ಜನಪ್ರಿಯ ನಾಯಕ ಮತ್ತು ರಾಹುಲ್‍ಗಾಂಧಿಗಿಂತಲೂ ಮತ್ತು ತನ್ನದೇ ಪಕ್ಷಕ್ಕಿಂತಲೂ ಹೆಚ್ಚು ಜನಪ್ರಿಯ ವ್ಯಕ್ತಿ. ಆದರೆ, ಇಷ್ಟು ಹೇಳುವುದು ಸಾಧ್ಯ. ಮೋದಿ ತನ್ನ ಆಡಳಿತದ ಮೊದಲೆರಡು ವರ್ಷಗಳಲ್ಲಿ ಮಾಡಿದಂತೆ ಯಾವುದೇ ಚುನಾವಣೆಯನ್ನು ಹೇಗೆ ಬೇಕಾದರೂ ತಿರುಗಿಸುವುದು ಇನ್ನು ಮುಂದೆ ಸಾಧ್ಯವಿಲ್ಲ. ಅವರ ಮಾಂತ್ರಿಕ ಇನ್ನಿಂಗ್ಸ್ ಮುಗಿದಿದೆ; ಈಗವರು ಆರ್ಥಿಕತೆಯ ಕುರಿತು, ದ್ವೇಷದ ವಾತಾವರಣದ ಕುರಿತು, ಸಂಸ್ಥೆಗಳ ನಾಶದ ಕುರಿತು ಮತ್ತು ರಾಫೇಲ್‍ನ ಕುರಿತಂತೆ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್‍ನ ಅತ್ಯಂತ ದೊಡ್ಡ ಗೆಲುವು ಎಲ್ಲಿಂದ ಬಂತೆಂದು ನೋಡಿ, ವ್ಯಕ್ತಿ ಆರಾಧನೆಯಿರಲಿ ಸರಿಯಾಗಿ ಒಬ್ಬ ದೊಡ್ಡ ನಾಯಕನೂ ಇಲ್ಲದಿದ್ದ ಛತ್ತೀಸ್‍ಗಢದಿಂದ ಅದು ಬಂದಿದೆ.
ಈ ಫಲಿತಾಂಶವು ಆಡಳಿತ ಕೂಟದಲ್ಲಿದ್ದ ದುರಹಂಕಾರಕ್ಕೆ ಪೆಟ್ಟು ಕೊಟ್ಟಿರುವಂತೆಯೇ, ವಿರೋಧಿ ಕೂಟದಲ್ಲಿರುವ ಅಲ್ಪತೃಪ್ತಿಗೂ ಮದ್ದು ನೀಡಿದೆ. ರಾಜಸ್ತಾನದಲ್ಲಿ ನಿರೀಕ್ಷಿಸಲಾಗಿದ್ದ ದೊಡ್ಡ ಗೆಲುವನ್ನು ಪಡೆಯಲಾಗದ್ದು ಮತ್ತು ಮಧ್ಯಪ್ರದೇಶದಲ್ಲಿ ಬಹುಮತ ಸಿಗದಿರುವುದು ಕಾಂಗ್ರೆಸ್ ಸುಮ್ಮನೇ ಕುಳಿತು ಮೋದಿಯ ಆಡಳಿತವು ತನ್ನಂತೆ ತಾನೇ ಕರಗಲಿ ಎಂದು ಬಯಸಲಾಗುವುದಿಲ್ಲವೆಂಬುದು ಸ್ಪಷ್ಟ. ವಸುಂಧರಾ ರಾಜೇ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿದ್ದ ಆಕ್ರೋಶ ಮತ್ತು ಶಿವರಾಜ್ ಚೌಹಾಣ್‍ರ ಆಡಳಿತದಲ್ಲಿದ್ದ ಜನರ ವ್ಯಾಪಕ ಸಂಕಷ್ಟವನ್ನು ಕಾಂಗ್ರೆಸ್ ತನ್ನ ಗೆಲುವಾಗಿ ಪರಿವರ್ತಿಸಲಾಗಲಿಲ್ಲವೆಂಬುದು, ಆ ಪಕ್ಷದೊಳಗೆ ಇರುವ ಗಂಭೀರ ಸಮಸ್ಯೆಯನ್ನು ಎತ್ತಿ ತೋರುತ್ತದೆ. ಕಳೆದ ಐದು ವರ್ಷಗಳಿಂದ ವಿಪಕ್ಷದಲ್ಲಿರುವ ಕಾಂಗ್ರೆಸ್ಸು, ಆ ಪಾತ್ರಕ್ಕೆ ತಕ್ಕಂತೆ ಬೀದಿಯಲ್ಲಿ ಪ್ರತಿಭಟಿಸಿದ್ದು ಎಲ್ಲೂ ಕಾಣಲಿಲ್ಲ. ಛತ್ತೀಸ್‍ಗಢದಲ್ಲಿ ಇದು ಭಿನ್ನವಾಗಿತ್ತು; ಅಲ್ಲಿನ ನಾಯಕತ್ವವು ತಳಮಟ್ಟದ ಚಳವಳಿ ಮತ್ತು ಪ್ರತಿಭಟನೆಗಳನ್ನು ಕಳೆದೈದು ವರ್ಷಗಳಲ್ಲಿ ನಡೆಸುತ್ತಾ ಕ್ರಿಯಾಶೀಲವಾಗಿತ್ತು.
ಕಡೆಯದಾಗಿ, ಚುನಾವಣಾ ಫಲಿತಾಂಶವು ಚುನಾವಣಾ ಅಂಕಗಣಿತಕ್ಕಿರುವ ಮಿತಿಯನ್ನೂ ತೋರಿಸಿದೆ. ಕಾಗದದ ಮೇಲೆ ಬಲಿಷ್ಠವಾಗಿದ್ದ ಮೈತ್ರಿಯನ್ನು ಕಾಂಗ್ರೆಸ್ಸು ತೆಲಂಗಾಣದಲ್ಲಿ ಮಾಡಿಕೊಂಡಿತ್ತು. ಲೆಕ್ಕ ಹಾಕಿ ನೋಡಿದರೆ, ಕಾಂಗ್ರೆಸ್-ಟಿಡಿಪಿ-ಸಿಪಿಐ-ಟಿಜೆಎಸ್‍ನ ಸಂಯುಕ್ತ ಶಕ್ತಿಯು ಟಿಆರ್‍ಎಸ್‍ಗಿಂತ ಎಷ್ಟೋ ಹೆಚ್ಚಿನದ್ದಾಗಿತ್ತು. ಆದರೆ, ತೆಲಂಗಾಣದ ಹುಟ್ಟಿಗೇ ವಿರುದ್ಧವಾಗಿದ್ದ ಪಕ್ಷದೊಂದಿಗಿನ ಅಪಕ್ವ ಮೈತ್ರಿಯು ಜನರಿಂದ ತಿರಸ್ಕರಿಸಲ್ಪಟ್ಟಿತು. ಛತ್ತೀಸ್‍ಗಢದಲ್ಲೂ ಅಜಿತ್ ಜೋಗಿ-ಬಿಎಸ್‍ಪಿ ಕೂಟವು ಕಾಂಗ್ರೆಸ್‍ಅನ್ನು ಬೀಳಿಸಬೇಕಿತ್ತು. ಆದರೆ, ಛತ್ತೀಸ್‍ಗಡದ ಜನರು ರಾಜ್ಯ ರಾಜಕಾರಣದ ಅತ್ಯಂತ ಸಂಶಯಾಸ್ಪದ ದಲ್ಲಾಳಿಯನ್ನು ತಿರಸ್ಕರಿಸಿದರು. 2019ಕ್ಕೆ ಮಹಾಘಟಬಂಧನ ಮಾಡುವ ಪ್ರಯತ್ನದಲ್ಲಿರುವ ತೀವ್ರ ಸಮಸ್ಯೆಯ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಮೈತ್ರಿಗಳು ಅಗತ್ಯ, ಆದರೆ ಅವು ವಿಶ್ವಾಸಾರ್ಹತೆಗೆ ಬದಲಿಯಾಗಿ ಕೆಲಸಕ್ಕೆ ಬರುವುದಿಲ್ಲ. ಚುನಾವಣೆಗಳೆಂದರೆ ನೀವು ಕನಸನ್ನು ಬಿತ್ತಬೇಕು, ಭರವಸೆ ಹುಟ್ಟಿಸಬೇಕು, ಕಥನವನ್ನು ಕಟ್ಟಬೇಕು. ಈಗ ಹುಟ್ಟಿಕೊಳ್ಳುತ್ತಿರುವ ಮೋದಿ-ವಿರೋಧಿ ಕೂಟದಲ್ಲಿ ಅದಿನ್ನೂ ರೂಪುಗೊಂಡಿಲ್ಲ.
2019ರ ದಾರಿಯಲ್ಲಿ ಬಿಜೆಪಿಯು ಐದು ಘೋಷಣೆಗಳೊಂದಿಗೆ ಹೊರಟಿದೆ: ಅದರ ಭಾರೀ ಯಂತ್ರಾಂಗ, ಮೋದಿ, ಮಂದಿರ, ಮಾಧ್ಯಮ ಮತ್ತು ಹಣ (Machinery, Modi, Mandir, Media, Money). ಈ ವಿಧಾನಸಭಾ ಚುನಾವಣೆಗಳು ಮೊದಲ ಮೂರನ್ನು ಸರಿ ಮಾಡಿಕೊಳ್ಳಲು ಸೂಚಿಸುತ್ತವೆ. ಬಿಜೆಪಿಯ ಸಂಘಟನಾತ್ಮಕ ಶಕ್ತಿಯು ಅಜೇಯವಲ್ಲದಿದ್ದರೂ, ಮಣಿಸುವುದು ಸುಲಭವಲ್ಲ. ಮೋದಿಯನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ, ಆದರೆ ಜನಪ್ರಿಯತೆ ನಿಸ್ಸಂದೇಹವಾಗಿ ಕಡಿಮೆಯಾಗಿದೆ. ಮಂದಿರವು ನಿಷ್ಠಾವಂತರಲ್ಲಿ ಉತ್ಸಾಹ ಮೂಡಿಸುತ್ತದಾದರೂ, ಮತದಾರರನ್ನು ಸೆಳೆಯಲಾಗದು. ಬದಲಿಗೆ ಉಳಿದೆರಡನ್ನೂ ಅದು ಬದಲಿಸಬಲ್ಲದು. ಮಾಧ್ಯಮ ದೊರೆಗಳು ಅವರ ಇದುವರೆಗಿನ ರೀತಿಯ ಕುರಿತು ಪುನರಾಲೋಚಿಸುತ್ತಾರೆ. ಕನಿಷ್ಠ ಇವತ್ತಿರುವ ರೀತಿಯ ಆಡಳಿತದ ಪರ ತುತ್ತೂರಿಯು ಸ್ವಲ್ಪವಾದರೂ ಕಡಿಮೆಯಾಗುತ್ತದೆಂದು ಆಶಿಸಬಹುದು. ಹಾಗೆಯೇ ದೊಡ್ಡ ಉದ್ದಿಮೆದಾರರು ತಮ್ಮೆಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ಬಯಸುವುದಿಲ್ಲ. ಚುನಾವಣಾ ರಂಗದಲ್ಲಿ ಉಳಿಯಲು ಬೇಕಾದ ಸಂಪನ್ಮೂಲವನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಪಡೆದುಕೊಳ್ಳಲು ಆರಂಭವಾಗುತ್ತದೆ. ಅಷ್ಟು ಅಸಮಾನವಲ್ಲದ ಮೈದಾನದಲ್ಲಿ 2019ರ ಲೋಕಸಭಾ ಚುನಾವಣೆಯ ಸಂಗ್ರಾಮ ನಡೆಯಲಿದೆ. ಪ್ರಜಾತಂತ್ರಕ್ಕೆ ಅಗತ್ಯವಿದ್ದ ತಿದ್ದುಪಡಿಯು ಬಹಳ ತಡವಾಗಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...