Homeಅಂಕಣಗಳು2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

- Advertisement -
- Advertisement -

ಯೋಗೇಂದ್ರ ಯಾದವ್ |

ಇದನ್ನು ರಾಜಕೀಯ ವಿಜ್ಞಾನಿಗಳು ಚುನಾವಣಾ ಪ್ರಜಾತಂತ್ರದ ‘ಸ್ವಯಂ ಸುಧಾರಣೆಯ ಮೆಕ್ಯಾನಿಸಂ’ ಎಂದು ಕರೆಯುತ್ತಾರೆ. ಮಾರುಕಟ್ಟೆ ಆರ್ಥಿಕತೆಯ ವಿಕೃತಿಗಳನ್ನು ಸರಿಪಡಿಸುವ ಆದಂ ಸ್ಮಿತ್‍ರ ಪ್ರಖ್ಯಾತ ನಿಗೂಢ ಹಸ್ತದ ರೀತಿಯಲ್ಲೇ, ಸ್ಪರ್ಧಾತ್ಮಕ ಚುನಾವಣೆಗಳು ರಾಜಕೀಯ ವ್ಯವಸ್ಥೆಗಳ ಅತಿರೇಕಗಳನ್ನು ಸರಿ ಮಾಡಬೇಕು. 2018ರ ವಿಧಾನಸಭಾ ಚುನಾವಣೆಗಳು ಮಾಡಿರುವುದು ಇದನ್ನೇ. ಸರ್ವೋಚ್ಚ ನಾಯಕನೊಬ್ಬನ ಕದಲಿಸಲಾಗದ ಶಕ್ತಿಗೆ ಎಲ್ಲಾ ಸಂಸ್ಥೆಗಳು, ನಿಯಮಗಳು ಮತ್ತು ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಅಡವಿಡುವ ಸಂಸದೀಯ ಸರ್ವಾಧಿಕಾರದತ್ತ ದೇಶ ಸಾಗುತ್ತಿರುವಾಗ, ಸ್ವಯಂಚಾಲಿತ ಬ್ರೇಕ್‍ಗಳು ಚುರುಕುಗೊಂಡಿವೆ. ಇದ್ದಕ್ಕಿದ್ದ ಹಾಗೆ, 2019ರ ಚುನಾವಣೆಯು ಯಾರೂ ಗೆಲ್ಲಬಹುದಾದ ಸ್ಪರ್ಧೆಯಾಗಿಬಿಟ್ಟಿದೆ.
ಮೊಟ್ಟಮೊದಲನೆಯದಾಗಿ, ಈ ಫಲಿತಾಂಶವು ಜನರು ಮತಚಲಾಯಿಸುವ ಅಸಲೀ ಅಜೆಂಡಾ ಯಾವುದೆಂಬುದನ್ನು ಒತ್ತಿ ಹೇಳಿದೆ. ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಸಂಕಷ್ಟವು ನಿಜವೆಂಬುದನ್ನು ಇದು ಸಾಬೀತುಪಡಿಸಿದೆ. ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವ ಅಂತಿಮ ಸಮೀಕರಣ ಯಾವುದೆಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಛತ್ತೀಸ್‍ಗಢ, ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಯ ವಿರುದ್ಧದ ಸ್ಪಷ್ಟ ಅಲೆ ಕಂಡಿದೆ. ಮಧ್ಯಪ್ರದೇಶದ ಮಾಲ್ವಾ, ಪೂರ್ವ ರಾಜಸ್ತಾನ ಮತ್ತು ಕೇಂದ್ರ ಛತ್ತೀಸ್‍ಗಡದಲ್ಲಿ ಬಿಜೆಪಿಯ ಸೋಲುಗಳು ಗುಜರಾತ್‍ನಂತೆಯೇ ರೈತರ ಸಿಟ್ಟು ಬಿಜೆಪಿಯ ವಿರುದ್ಧ ಕೆಲಸ ಮಾಡಿರುವುದನ್ನು ತೋರುತ್ತಿವೆ. ಟ್ರೆಂಡ್ ಏನಿದೆ ಎಂಬುದನ್ನು ಗ್ರಹಿಸುವ ಫಲಿತಾಂಶದ ಸಾಮಾಜಿಕ ಸಂಗತಿಗಳು, ಬಿಜೆಪಿಯ ನಷ್ಟವು ಗ್ರಾಮೀಣ ಭಾಗದಲ್ಲೇ ಸಾಪೇಕ್ಷವಾಗಿ ಹೆಚ್ಚಿದೆ ಎಂಬುದನ್ನು ಕಾಣಿಸಿವೆ. ನಿರುದ್ಯೋಗಿ ಯುವಜನರೂ ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಿರುವುದನ್ನು ತೋರಿವೆ. ಎಲ್ಲಾ ಚುನಾವಣಾಪೂರ್ವ ಸಮೀಕ್ಷೆಗಳು ಉದ್ಯೋಗದ ಇಶ್ಯೂ ಚುನಾವಣೆಯ ಪ್ರಮುಖ ಅಂಶವನ್ನಾಗಿರುವುದನ್ನು ಗುರುತಿಸಿದ್ದವು. ಯೋಗಿ ಆದಿತ್ಯನಾಥರ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಮಂದಿರವು ಒಂದು ಇಶ್ಯೂವಾಗಿ ಮುನ್ನೆಲೆಗೆ ಬಂದಿಲ್ಲವೆಂಬುದನ್ನೂ ಫಲಿತಾಂಶವು ಖಚಿತಪಡಿಸಿದೆ. ದೇಶದ ಉಳಿದ ಭಾಗಗಳ ಬಗ್ಗೆ ಇದೇ ಮಾತನ್ನು ಈಗಲೇ ಹೇಳುವುದು ಸಾಧ್ಯವಿಲ್ಲವಾದರೂ ಹಿಂದಿ ಪ್ರದೇಶದ 2019ರ ಚುನಾವಣಾ ವಿಷಯವು ಇದಾಗಿರುತ್ತದೆ: ಹಿಂದೂ ಮುಸಲ್ಮಾನ್ ಅಲ್ಲ ಕಿಸಾನ್ (ರೈತ) ಮತ್ತು ಜವಾನ್ (ಯುವಜನತೆ).
ಫಲಿತಾಂಶವು ಇನ್ನೂ ಒಂದು ಪ್ರಜಾತಾಂತ್ರಿಕ ಸಂದೇಶವನ್ನು ಕಳಿಸಿದೆ. ಹಣ ಮತ್ತು ಮಾಧ್ಯಮಗಳು ಚುನಾವಣಾ ಗೆಲುವಿಗೆ ಅಗತ್ಯ, ಆದರೆ ಅವಷ್ಟೇ ಸಾಲದು. ಬಿಜೆಪಿಯು ಅದರ ಎದುರಾಳಿಗಿಂತ 10:1ರ ಅನುಪಾತದಲ್ಲಿ ಹಣ ವ್ಯಯಿಸಿರುವುದು ರಹಸ್ಯವೇನಲ್ಲ. ನಿಗೂಢವಾದ ಆದರೆ ಕಾನೂನುಬದ್ಧ ಮಾರ್ಗವಾದ ಚುನಾವಣಾ ಬಾಂಡ್‍ಗಳ ಮೂಲಕ ಒಟ್ಟು ಚುನಾವಣಾ ವಂತಿಗೆಯ ಶೇ.95ರಷ್ಟನ್ನು ಬಿಜೆಪಿಯೊಂದೇ ಪಡೆದುಕೊಂಡಿತ್ತು. ಮಾಧ್ಯಮಗಳ ಬಗ್ಗೆ ಎಷ್ಟು ಕಡಿಮೆ ಮಾತಾಡಿದರೆ ಅಷ್ಟು ಒಳ್ಳೆಯದು. ಆದರೆ ಇಷ್ಟನ್ನಂತೂ ಹೇಳಬೇಕು: ‘ಸ್ವತಂತ್ರ’ ಮಾಧ್ಯಮದ ಅತೀ ದೊಡ್ಡ ವಿಭಾಗವು ಆಡಳಿತ ಪಕ್ಷದ ಮುಖವಾಣಿಯಾಗಿ ಬದಲಾಗಿದೆಯೆಂಬುದು ಭಾರತದ ಪ್ರಜಾತಂತ್ರದ ಚರಿತ್ರೆಯ ಅತ್ಯಂತ ನಾಚಿಕೆಗೇಡು ಅಧ್ಯಾಯವಾಗಿ ಉಳಿಯಲಿದೆ. ಇದರ ಜೊತೆಗೆ ಎದುರಾಳಿ ಪಕ್ಷಗಳನ್ನು ದುರ್ಬಲಗೊಳಿಸುವ ಬಂಡಾಯ ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಬಿಜೆಪಿಯು ಹಣದ ಹೊಳೆಯನ್ನೇ ಹರಿಸಿದ್ದೂ ಎಲ್ಲರಿಗೆ ಗೊತ್ತಿರುವ ಸತ್ಯ. ಇವೆಲ್ಲವೂ ತೆಲಂಗಾಣದಲ್ಲಿ ಟಿಆರ್‍ಎಸ್‍ಗೆ ಸಹಾಯ ಮಾಡಿದಂತೆಯೇ ಬಿಜೆಪಿಗೂ ಸಹಾಯ ಮಾಡಿವೆ. ಆದರೆ, ಬಿಜೆಪಿಯ ಸೋಲು ನಮಗೆ ಮತ್ತೊಮ್ಮೆ ನೆನಪಿಸುವುದೇನೆಂದರೆ, ನೀವು ಅಸಲೀ ಮತದಾರರ ಅಸಲೀ ಇಶ್ಯೂಗಳೊಂದಿಗೆ ಜೀವಂತ ಸಂಬಂಧವಿಟ್ಟುಕೊಂಡಿರಬೇಕು.
ಮೂರನೆಯದಾಗಿ ಚುನಾವಣೆಗಳು ತೋರಿಸುತ್ತಿರುವುದೇನೆಂದರೆ ವ್ಯಕ್ತಿ ಆರಾಧನೆಗೂ ಒಂದು ಮಿತಿಯಿರುತ್ತದೆ. ಆದರೆ, ಮೋದಿಯುಗ ಮುಗಿದಿದೆ ಎಂದು ಹೇಳುವುದು ತಪ್ಪಾದೀತು. ಎಲ್ಲಾ ಸಮೀಕ್ಷೆಗಳು ತೋರುತ್ತಿರುವುದೇನೆಂದರೆ ಮೋದಿ ಈಗಲೂ ಅತ್ಯಂತ ಜನಪ್ರಿಯ ನಾಯಕ ಮತ್ತು ರಾಹುಲ್‍ಗಾಂಧಿಗಿಂತಲೂ ಮತ್ತು ತನ್ನದೇ ಪಕ್ಷಕ್ಕಿಂತಲೂ ಹೆಚ್ಚು ಜನಪ್ರಿಯ ವ್ಯಕ್ತಿ. ಆದರೆ, ಇಷ್ಟು ಹೇಳುವುದು ಸಾಧ್ಯ. ಮೋದಿ ತನ್ನ ಆಡಳಿತದ ಮೊದಲೆರಡು ವರ್ಷಗಳಲ್ಲಿ ಮಾಡಿದಂತೆ ಯಾವುದೇ ಚುನಾವಣೆಯನ್ನು ಹೇಗೆ ಬೇಕಾದರೂ ತಿರುಗಿಸುವುದು ಇನ್ನು ಮುಂದೆ ಸಾಧ್ಯವಿಲ್ಲ. ಅವರ ಮಾಂತ್ರಿಕ ಇನ್ನಿಂಗ್ಸ್ ಮುಗಿದಿದೆ; ಈಗವರು ಆರ್ಥಿಕತೆಯ ಕುರಿತು, ದ್ವೇಷದ ವಾತಾವರಣದ ಕುರಿತು, ಸಂಸ್ಥೆಗಳ ನಾಶದ ಕುರಿತು ಮತ್ತು ರಾಫೇಲ್‍ನ ಕುರಿತಂತೆ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್‍ನ ಅತ್ಯಂತ ದೊಡ್ಡ ಗೆಲುವು ಎಲ್ಲಿಂದ ಬಂತೆಂದು ನೋಡಿ, ವ್ಯಕ್ತಿ ಆರಾಧನೆಯಿರಲಿ ಸರಿಯಾಗಿ ಒಬ್ಬ ದೊಡ್ಡ ನಾಯಕನೂ ಇಲ್ಲದಿದ್ದ ಛತ್ತೀಸ್‍ಗಢದಿಂದ ಅದು ಬಂದಿದೆ.
ಈ ಫಲಿತಾಂಶವು ಆಡಳಿತ ಕೂಟದಲ್ಲಿದ್ದ ದುರಹಂಕಾರಕ್ಕೆ ಪೆಟ್ಟು ಕೊಟ್ಟಿರುವಂತೆಯೇ, ವಿರೋಧಿ ಕೂಟದಲ್ಲಿರುವ ಅಲ್ಪತೃಪ್ತಿಗೂ ಮದ್ದು ನೀಡಿದೆ. ರಾಜಸ್ತಾನದಲ್ಲಿ ನಿರೀಕ್ಷಿಸಲಾಗಿದ್ದ ದೊಡ್ಡ ಗೆಲುವನ್ನು ಪಡೆಯಲಾಗದ್ದು ಮತ್ತು ಮಧ್ಯಪ್ರದೇಶದಲ್ಲಿ ಬಹುಮತ ಸಿಗದಿರುವುದು ಕಾಂಗ್ರೆಸ್ ಸುಮ್ಮನೇ ಕುಳಿತು ಮೋದಿಯ ಆಡಳಿತವು ತನ್ನಂತೆ ತಾನೇ ಕರಗಲಿ ಎಂದು ಬಯಸಲಾಗುವುದಿಲ್ಲವೆಂಬುದು ಸ್ಪಷ್ಟ. ವಸುಂಧರಾ ರಾಜೇ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿದ್ದ ಆಕ್ರೋಶ ಮತ್ತು ಶಿವರಾಜ್ ಚೌಹಾಣ್‍ರ ಆಡಳಿತದಲ್ಲಿದ್ದ ಜನರ ವ್ಯಾಪಕ ಸಂಕಷ್ಟವನ್ನು ಕಾಂಗ್ರೆಸ್ ತನ್ನ ಗೆಲುವಾಗಿ ಪರಿವರ್ತಿಸಲಾಗಲಿಲ್ಲವೆಂಬುದು, ಆ ಪಕ್ಷದೊಳಗೆ ಇರುವ ಗಂಭೀರ ಸಮಸ್ಯೆಯನ್ನು ಎತ್ತಿ ತೋರುತ್ತದೆ. ಕಳೆದ ಐದು ವರ್ಷಗಳಿಂದ ವಿಪಕ್ಷದಲ್ಲಿರುವ ಕಾಂಗ್ರೆಸ್ಸು, ಆ ಪಾತ್ರಕ್ಕೆ ತಕ್ಕಂತೆ ಬೀದಿಯಲ್ಲಿ ಪ್ರತಿಭಟಿಸಿದ್ದು ಎಲ್ಲೂ ಕಾಣಲಿಲ್ಲ. ಛತ್ತೀಸ್‍ಗಢದಲ್ಲಿ ಇದು ಭಿನ್ನವಾಗಿತ್ತು; ಅಲ್ಲಿನ ನಾಯಕತ್ವವು ತಳಮಟ್ಟದ ಚಳವಳಿ ಮತ್ತು ಪ್ರತಿಭಟನೆಗಳನ್ನು ಕಳೆದೈದು ವರ್ಷಗಳಲ್ಲಿ ನಡೆಸುತ್ತಾ ಕ್ರಿಯಾಶೀಲವಾಗಿತ್ತು.
ಕಡೆಯದಾಗಿ, ಚುನಾವಣಾ ಫಲಿತಾಂಶವು ಚುನಾವಣಾ ಅಂಕಗಣಿತಕ್ಕಿರುವ ಮಿತಿಯನ್ನೂ ತೋರಿಸಿದೆ. ಕಾಗದದ ಮೇಲೆ ಬಲಿಷ್ಠವಾಗಿದ್ದ ಮೈತ್ರಿಯನ್ನು ಕಾಂಗ್ರೆಸ್ಸು ತೆಲಂಗಾಣದಲ್ಲಿ ಮಾಡಿಕೊಂಡಿತ್ತು. ಲೆಕ್ಕ ಹಾಕಿ ನೋಡಿದರೆ, ಕಾಂಗ್ರೆಸ್-ಟಿಡಿಪಿ-ಸಿಪಿಐ-ಟಿಜೆಎಸ್‍ನ ಸಂಯುಕ್ತ ಶಕ್ತಿಯು ಟಿಆರ್‍ಎಸ್‍ಗಿಂತ ಎಷ್ಟೋ ಹೆಚ್ಚಿನದ್ದಾಗಿತ್ತು. ಆದರೆ, ತೆಲಂಗಾಣದ ಹುಟ್ಟಿಗೇ ವಿರುದ್ಧವಾಗಿದ್ದ ಪಕ್ಷದೊಂದಿಗಿನ ಅಪಕ್ವ ಮೈತ್ರಿಯು ಜನರಿಂದ ತಿರಸ್ಕರಿಸಲ್ಪಟ್ಟಿತು. ಛತ್ತೀಸ್‍ಗಢದಲ್ಲೂ ಅಜಿತ್ ಜೋಗಿ-ಬಿಎಸ್‍ಪಿ ಕೂಟವು ಕಾಂಗ್ರೆಸ್‍ಅನ್ನು ಬೀಳಿಸಬೇಕಿತ್ತು. ಆದರೆ, ಛತ್ತೀಸ್‍ಗಡದ ಜನರು ರಾಜ್ಯ ರಾಜಕಾರಣದ ಅತ್ಯಂತ ಸಂಶಯಾಸ್ಪದ ದಲ್ಲಾಳಿಯನ್ನು ತಿರಸ್ಕರಿಸಿದರು. 2019ಕ್ಕೆ ಮಹಾಘಟಬಂಧನ ಮಾಡುವ ಪ್ರಯತ್ನದಲ್ಲಿರುವ ತೀವ್ರ ಸಮಸ್ಯೆಯ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಮೈತ್ರಿಗಳು ಅಗತ್ಯ, ಆದರೆ ಅವು ವಿಶ್ವಾಸಾರ್ಹತೆಗೆ ಬದಲಿಯಾಗಿ ಕೆಲಸಕ್ಕೆ ಬರುವುದಿಲ್ಲ. ಚುನಾವಣೆಗಳೆಂದರೆ ನೀವು ಕನಸನ್ನು ಬಿತ್ತಬೇಕು, ಭರವಸೆ ಹುಟ್ಟಿಸಬೇಕು, ಕಥನವನ್ನು ಕಟ್ಟಬೇಕು. ಈಗ ಹುಟ್ಟಿಕೊಳ್ಳುತ್ತಿರುವ ಮೋದಿ-ವಿರೋಧಿ ಕೂಟದಲ್ಲಿ ಅದಿನ್ನೂ ರೂಪುಗೊಂಡಿಲ್ಲ.
2019ರ ದಾರಿಯಲ್ಲಿ ಬಿಜೆಪಿಯು ಐದು ಘೋಷಣೆಗಳೊಂದಿಗೆ ಹೊರಟಿದೆ: ಅದರ ಭಾರೀ ಯಂತ್ರಾಂಗ, ಮೋದಿ, ಮಂದಿರ, ಮಾಧ್ಯಮ ಮತ್ತು ಹಣ (Machinery, Modi, Mandir, Media, Money). ಈ ವಿಧಾನಸಭಾ ಚುನಾವಣೆಗಳು ಮೊದಲ ಮೂರನ್ನು ಸರಿ ಮಾಡಿಕೊಳ್ಳಲು ಸೂಚಿಸುತ್ತವೆ. ಬಿಜೆಪಿಯ ಸಂಘಟನಾತ್ಮಕ ಶಕ್ತಿಯು ಅಜೇಯವಲ್ಲದಿದ್ದರೂ, ಮಣಿಸುವುದು ಸುಲಭವಲ್ಲ. ಮೋದಿಯನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ, ಆದರೆ ಜನಪ್ರಿಯತೆ ನಿಸ್ಸಂದೇಹವಾಗಿ ಕಡಿಮೆಯಾಗಿದೆ. ಮಂದಿರವು ನಿಷ್ಠಾವಂತರಲ್ಲಿ ಉತ್ಸಾಹ ಮೂಡಿಸುತ್ತದಾದರೂ, ಮತದಾರರನ್ನು ಸೆಳೆಯಲಾಗದು. ಬದಲಿಗೆ ಉಳಿದೆರಡನ್ನೂ ಅದು ಬದಲಿಸಬಲ್ಲದು. ಮಾಧ್ಯಮ ದೊರೆಗಳು ಅವರ ಇದುವರೆಗಿನ ರೀತಿಯ ಕುರಿತು ಪುನರಾಲೋಚಿಸುತ್ತಾರೆ. ಕನಿಷ್ಠ ಇವತ್ತಿರುವ ರೀತಿಯ ಆಡಳಿತದ ಪರ ತುತ್ತೂರಿಯು ಸ್ವಲ್ಪವಾದರೂ ಕಡಿಮೆಯಾಗುತ್ತದೆಂದು ಆಶಿಸಬಹುದು. ಹಾಗೆಯೇ ದೊಡ್ಡ ಉದ್ದಿಮೆದಾರರು ತಮ್ಮೆಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ಬಯಸುವುದಿಲ್ಲ. ಚುನಾವಣಾ ರಂಗದಲ್ಲಿ ಉಳಿಯಲು ಬೇಕಾದ ಸಂಪನ್ಮೂಲವನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಪಡೆದುಕೊಳ್ಳಲು ಆರಂಭವಾಗುತ್ತದೆ. ಅಷ್ಟು ಅಸಮಾನವಲ್ಲದ ಮೈದಾನದಲ್ಲಿ 2019ರ ಲೋಕಸಭಾ ಚುನಾವಣೆಯ ಸಂಗ್ರಾಮ ನಡೆಯಲಿದೆ. ಪ್ರಜಾತಂತ್ರಕ್ಕೆ ಅಗತ್ಯವಿದ್ದ ತಿದ್ದುಪಡಿಯು ಬಹಳ ತಡವಾಗಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....