ಜಾರ್ಖಂಡ್ನ ಧನ್ಬಾದ್ ಜಿಲ್ಲೆಯ ಶಾಲೆಯೊಂದರ 4 ನೇ ತರಗತಿ ಮಗುವನ್ನು ಶಾಲೆಯ ವಿಶ್ರಾಂತಿ ಕೊಠಡಿಯಲ್ಲಿ ಉಪ ಪ್ರಾಂಶುಪಾಲರು ಮತ್ತು ತರಗತಿ ಶಿಕ್ಷಕರು ಸೇರಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಶಾಲೆಯ ವಿಶ್ರಾಂತಿ ಕೊಠಡಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಕತ್ರಾಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂಬತ್ತು ವರ್ಷದ ಸಂತ್ರಸ್ತ ಮಗುವಿನ ದೂರಿನ ಆಧಾರದ ಮೇಲೆ ಶನಿವಾರ ಎಫ್ಐಆರ್ ದಾಖಲಿಸಲಾಗಿದೆ. ವಿಷಯ ಗಂಭೀರವಾಗಿದೆ, ಹಾಗಾಗಿ “ಪೊಲೀಸರು ಈ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಮತ್ತು ವೈದ್ಯಕೀಯ ಪರೀಕ್ಷಾ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು.” ಎಂದು ಧನ್ಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಕಿಶೋರ್ ಕೌಶಲ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ
ಪಾಟಲಿಪುತ್ರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ಭಾನುವಾರ ನಡೆಸಲಾಗಿದೆ ಎಂದು ಪಿಎಂಸಿಎಚ್ ಅಧೀಕ್ಷಕ ಡಾ.ಎಚ್.ಕೆ.ಸಿಂಗ್ ತಿಳಿಸಿದ್ದಾರೆ. ಎಫ್ಐಆರ್ ದಾಖಲಾದ ನಂತರ ಪೊಲೀಸರು ಬಾಲಕಿಯ ಹೇಳಿಕೆಯನ್ನು ಸೆಕ್ಷನ್ 164 ರ ಅಡಿಯಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಪೊಕ್ಸೊ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಉಪ-ಪ್ರಾಂಶುಪಾಲರು ಮತ್ತು ಶಾಲೆಯ ಸಿಕ್ ರೂಂ ನರ್ಸ್ ಸೇರಿದಂತೆ ಇಬ್ಬರು ಶಿಕ್ಷಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಏನಾಯಿತು?
ಎಫ್ಐಆರ್ ಪ್ರಕಾರ, ಒಂದು ತಿಂಗಳ ಹಿಂದೆ ಬಾಲಕಿ ತನ್ನ ತರಗತಿಯಲ್ಲಿ ಮೂರ್ಚೆ ಹೋಗಿದ್ದಳು. ಆಗ ಒಬ್ಬ ಶಿಕ್ಷಕ ಬಾಲಕಿಯನ್ನು ವಿಶ್ರಾಂತಿ ಕೊಠಡಿಗೆ ಕಳಿಸಿದ್ದನು. ಅಲ್ಲಿ ನರ್ಸ್ ಅವಳ ಔಷಧಿಯನ್ನು ಕೊಟ್ಟ ನಂತರ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ಆಗ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಉಪ ಪ್ರಾಂಶುಪಾಲರು ಮತ್ತು ತರಗತಿ ಶಿಕ್ಷಕರು (ಕ್ಲಾಸ್ ಟೀಚರ್) ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಬಾಲಕಿಯ ಆರೋಗ್ಯ ಸುಧಾರಿಸದ ಕಾರಣದಿಂದ ಕೆಲವು ದಿನಗಳ ನಂತರ ಬಾಲಕಿಯ ಕುಟುಂಬದವರು ವೈದ್ಯರ ಬಳಿಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಬಾಲಕಿಯ ಮೇಲೆ ಏನಾದರೂ ಸಂಭವಿಸಿದೆ ಎಂದು ಭಾವಿಸಿ ವಿಚಾರಿಸಿದಾಗ ಬಾಲಕಿಯು ತನ್ನ ಮೇಲಾದ ದೌರ್ಜನ್ಯವನ್ನು ತನ್ನ ಹೆತ್ತವರಿಗೆ ವಿವರಿಸಿದ್ದಾಳೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲೆಯ ಪ್ರಾಂಶುಪಾಲರನ್ನು ವಿಚಾರಣೆಗೊಳಪಡಿಸಿದೆ.
ಆಪಾದಿತ ಘಟನೆಯ ಬಗ್ಗೆ ಸಂತ್ರಸ್ತ ಮಗು ತನಗೆ ಮಾಹಿತಿ ನೀಡಿಲ್ಲ ಎಂದು ಶಾಲೆಯ ಪ್ರಾಂಶುಪಾಲ ತನುಶ್ರೀ ಬ್ಯಾನರ್ಜಿ ತಿಳಿಸಿದ್ದಾರೆ. “ಶಾಲೆಯ ವಿಶ್ರಾಂತಿ ಕೊಠಡಿಯು ಯಾವಾಗಲೂ ತುಂಬಿರುವುದರಿಂದ ಇದನ್ನು ನಾನು ನಂಬುವುದಿಲ್ಲ. ಆದರೂ ಆರೋಪವು ಗಂಭೀರವಾಗಿದೆ ಮತ್ತು ಶಾಲೆಯು ಪೊಲೀಸರೊಂದಿಗೆ ಅವರ ತನಿಖೆಯಲ್ಲಿ ಸಹಕರಿಸುತ್ತದೆ” ಎಂದು ಅವರು ಹೇಳಿದ್ದಾರೆ.