ಹೈದರಾಬಾದ್: ಛತ್ತೀಸಘಡದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನದಲ್ಲಿ ಭದ್ರತಾ ಪಡೆಗಳಿಂದ ಜೂನ್ 5ರಂದು ಬಂಧಿಸಲ್ಪಟ್ಟ 10 ಮಾವೋವಾದಿಗಳಲ್ಲಿ 7 ಜನರನ್ನು ಸತತ ಮೂರು ದಿನಗಳ ಕಾಲ ಪ್ರತ್ಯೇಕ ಪ್ರತ್ಯೇಕವಾಗಿ ‘ಎನ್ಕೌಂಟರ್’ ಹೆಸರಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ನಾಗರೀಕ ಹಕ್ಕುಗಳ ಸಂಘಟನೆ ಆರೋಪಿಸಿದೆ.
1,250 ಚದರ ಕಿಲೋಮೀಟರ್ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ಶಗಾರ್ ಎಂಬ ಹಳ್ಳಿಯಲ್ಲಿ ತಂಗಿದ್ದ 10 ಮಾವೋವಾದಿಗಳನ್ನು ಪೊಲೀಸರು ಕರೆದೊಯ್ದಿದ್ದರು ಎಂದು ಸಂಘಟನೆಯು ಹೇಳಿದೆ.
ದೈನಂದಿನ ಆಧಾರದ ಮೇಲೆ ಈ ಬಂಧಿಸಲ್ಪಟ್ಟ ನಕ್ಸಲರಿಗೆ ಅಮಾನವೀಯ ಚಿತ್ರಹಿಂಸೆ ನೀಡಿ ಅವರಲ್ಲಿ ಏಳು ಮಂದಿಯನ್ನು ರಕ್ತದ ಮಡುವಿನಲ್ಲಿ ಕೊಲ್ಲಲಾಗಿದೆ ಎಂದು ಮಾನವ ಹಕ್ಕುಗಳ ಸಂಸ್ಥೆಗಳು ತಿಳಿಸಿವೆ. ಜೂ.5ರಂದು ಒಬ್ಬರು, ಜೂ.6ರಂದು ನಾಲ್ಕು ಮತ್ತು ಜೂ.7ರಂದು ಇಬ್ಬರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಇತರ ಮೂವರು ಪೊಲೀಸ್ ವಶದಲ್ಲಿದ್ದಾರೆ ಎಂದು ನಾಗರೀಕ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಗದ್ದಮ್ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣ ರಾವ್ ಮತ್ತು ಇತರ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಇಲ್ಲಿಯವರೆಗೆ ಕೇವಲ ಎರಡು ಮೃತದೇಹಗಳನ್ನು ಮಾತ್ರ ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಕ್ಕುಗಳ ಕಾರ್ಯಕರ್ತರು ಪೊಲೀಸ್ ಕಸ್ಟಡಿಯಲ್ಲಿದ್ದ ಹತ್ತು ಮಾವೋವಾದಿಗಳ ಹೆಸರನ್ನು ಬಿಡುಗಡೆ ಮಾಡಿದ್ದಾರೆ. ಜೂನ್ 5ರಂದು ಕೊಲ್ಲಲ್ಪಟ್ಟ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯ ತೆಂಡು ಲಕ್ಷ್ಮಿನರಸಿಂಹ ಚಲಂ ಅಲಿಯಾಸ್ ಸುಧಾಕರ್ ಮತ್ತು ಜೂನ್ 6ರಂದು ಕೊಲ್ಲಲ್ಪಟ್ಟ ಸಿಪಿಐ (ಮಾವೋವಾದಿ) ತೆಲಂಗಾಣ ರಾಜ್ಯ ಸಮಿತಿಯ ಸದಸ್ಯ ಮೈಲರಾಪು ಅದೆಲು ಅಲಿಯಾಸ್ ಭಾಸ್ಕರ್ ಕೊಲ್ಲಲ್ಪಟ್ಟವರಲ್ಲಿ ಸೇರಿದ್ದಾರೆ.
ಜೂನ್ 7ರಂದು ಇನ್ನೊಬ್ಬ ತೆಲಂಗಾಣ ರಾಜ್ಯ ಸಮಿತಿಯ ಸದಸ್ಯ ಬಂಡಿ ಪ್ರಕಾಶ್ ಮತ್ತು ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಸದಸ್ಯ ಪಾಪಾ ರಾವ್ ಅವರ ಸಾವಿನ ಬಗ್ಗೆ ನಮಗೆ ತಿಳಿದು ಬಂದಿದೆ. ಪೊಲೀಸ್ ಕಸ್ಟಡಿಯಲ್ಲಿರುವವರಲ್ಲಿ ವಿಭಾಗೀಯ ಸಮಿತಿ ಸದಸ್ಯ ರಾಮಣ್ಣ, ರಾಷ್ಟ್ರೀಯ ಉದ್ಯಾನ ಪ್ರದೇಶ ಸಮಿತಿ ಕಾರ್ಯದರ್ಶಿ ದಿಲೀಪ್, ದಂಡಕಾರಣ್ಯ ಪ್ರದೇಶ ಸಮಿತಿ ಮಹಿಳಾ ಕಾರ್ಯದರ್ಶಿ ಸಿತು ಸೇರಿದ್ದಾರೆ, ಮತ್ತು ರಾಷ್ಟ್ರೀಯ ಉದ್ಯಾನವನ ಪ್ರದೇಶ ಸಮಿತಿ ಸದಸ್ಯರಾದ ಸುನಿತಾ, ಮಹೇಶ್ ಮತ್ತು ಮುನ್ನಾ ಎಂದು ಗದ್ದಂ ಲಕ್ಷ್ಮಣ್ ಹೇಳಿದ್ದಾರೆ.
ಲಕ್ಷ್ಮಣ್ ಅವರು ಜೂನ್ 5ರ ಸಂಜೆ ಪತ್ರಿಕಾ ಹೇಳಿಕೆ ನೀಡಿ, ಪೊಲೀಸ್ ಕಸ್ಟಡಿಯಲ್ಲಿರುವ ಪ್ರಕಾಶ್ ಮತ್ತು ಇತರರ ಜೀವಕ್ಕೆ ಅಪಾಯವಿದೆ ಎಂದಿದ್ದರು. ಇವರುಗಳ ಜೀವಕ್ಕೆ ಯಾವುದೇ ಹಾನಿ ಮಾಡದೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಕೋರಿದ್ದರು. ಕದನ ವಿರಾಮವನ್ನು ಘೋಷಿಸಲು ಮತ್ತು ಮಾವೋವಾದಿಗಳೊಂದಿಗೆ ಶಾಂತಿ ಮಾತುಕತೆ ನಡೆಸಲು ಅವರು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದ್ದರು.
ಮೃತಪಟ್ಟವರಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10 ಮಾವೋವಾದಿಗಳು ತಮ್ಮ ಸಮವಸ್ತ್ರವನ್ನು ತ್ಯಜಿಸಿ ಸಾಮಾನ್ಯ ಉಡುಪಿನಲ್ಲಿದ್ದರು. ಜೂನ್ 5ರಂದು ಅವರು ಪರ್ಶಗಾರ್ ಗ್ರಾಮದಲ್ಲಿ ಆಶ್ರಯ ಪಡೆದಿದ್ದರು. ಪೊಲೀಸರಿಗೆ ತಮ್ಮ ಮಾಹಿತಿದಾರರಿಂದ ನಕ್ಸಲರ ಇರುವಿಕೆ ಕುರಿತು ತಿಳಿದು ಬಂದಿತ್ತು. ಅಂದು ಬೆಳಿಗ್ಗೆ 7 ಗಂಟೆಗೆ ಈ 10 ಮಂದಿ ಮಾವೋವಾದಿಗಳನ್ನು ಪೊಲೀಸರು ಕರೆದೊಯ್ದರು ಎಂದು ಗ್ರಾಮಸ್ಥರ ಹೇಳಿಕೆಯನ್ನು ಉಲ್ಲೇಖಿಸಿ ಲಕ್ಷ್ಮಣ್ ಅವರು ಪತ್ರಿಕಾ ವರದಿಗಾರರಿಗೆ ತಿಳಿಸಿದ್ದಾರೆ. ನಂತರ ಅವರನ್ನು ಒಬ್ಬರ ನಂತರ ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸುಪ್ರೀಂ ಕೋರ್ಟ್ ಸುಮೋಟು ವಿಚಾರಣೆಯನ್ನು ಪ್ರಾರಂಭಿಸುವಂತೆ ಅವರು ಕೇಳಿಕೊಂಡಿದ್ದಾರೆ.
ದಿ ವೈರ್ನೊಂದಿಗೆ ಮಾತನಾಡಿದ ಎಸ್ಪಿ ಯಾದವ್ ಸಂಘಟನೆಯ ಕಾರ್ಯಕರ್ತರ ಆರೋಪಗಳನ್ನು ನಿರಾಕರಿಸಿದರು ಮತ್ತು ಅದನ್ನು ಸುಳ್ಳು ಪ್ರಚಾರ ಎಂದು ಕರೆದಿದ್ದಾರೆ. ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಮಾವೋವಾದಿಗಳಾದ ಸುಧಾಕರ್, ಬಂಡಿ ಪ್ರಕಾಶ್ ಮತ್ತು ಪಾಪಾ ರಾವ್ ಸೇರಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿಯ ಮೇಲೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ವಿಶೇಷ ಕಾರ್ಯಪಡೆ, ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಕೋಬ್ರಾ ಪಡೆಗಳನ್ನು ಅರಣ್ಯದಲ್ಲಿ ಈ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.
ಮೊದಲ ದಿನ ಗುಂಡಿನ ಚಕಮಕಿಯಲ್ಲಿ ನಕ್ಸಲರ ಕೇಂದ್ರ ಸಮಿತಿ ಸದಸ್ಯ ಸುಧಾಕರ್ ಕೊಲ್ಲಲ್ಪಟ್ಟರು ಮತ್ತು ಆ ಸ್ಥಳದಿಂದ ಎಕೆ -47 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಮೇ 21ರಂದು ನಾರಾಯಣಪುರ ಜಿಲ್ಲೆಯ ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ನಂಬಲಾ ಕೇಶವ ರಾವ್ ಹತ್ಯೆಯ ನಂತರ ಪೊಲೀಸರ ಮತ್ತೊಂದು ದೊಡ್ಡ ಯಶಸ್ಸು ಎಂದು ಎಸ್ಪಿ ಹೇಳಿದ್ದಾರೆ.
ಭಾಸ್ಕರ್ ಸೇರಿದಂತೆ ನಾಲ್ಕು ಮಂದಿ ಮಾವೋವಾದಿಗಳು ಜೂನ್ 6ರ ಬೆಳಿಗ್ಗೆ ಮತ್ತು ತಡರಾತ್ರಿಯಲ್ಲಿ ಕೊಲ್ಲಲ್ಪಟ್ಟರು ಮತ್ತು ಜೂನ್ 7ರಂದು ಇಬ್ಬರು ಕೊಲ್ಲಲ್ಪಟ್ಟರು ಎಂದು ಎಸ್ಪಿ ಯಾದವ್ ಹೇಳಿದರು. ಸುಧಾಕರ್ ಮತ್ತು ಭಾಸ್ಕರ್ ಹೊರತುಪಡಿಸಿ ಉಳಿದ ಐದು ಮಾವೋವಾದಿಗಳ ಮೃತದೇಹಗಳ ಗುರುತನ್ನು ಪತ್ತೆಹಚ್ಚುವ ಪ್ರಯತ್ನಗಳು ಸಾಗಿವೆ ಎಂದು ಅವರು ಹೇಳಿದರು.
ನಾಗರೀಕ ಹಕ್ಕುಗಳ ಸಂಘಟನೆಗಳು ಹತ್ಯೆಗೀಡಾದ 7 ಮಾವೋವಾದಿಗಳ ಗುರುತನ್ನು ಬಹಿರಂಗಪಡಿಸಿವೆ ಮತ್ತು ತನಗೆ ಅದರ ಬಗ್ಗೆ ತಿಳಿದಿಲ್ಲ. ಕೆಲವು ಭದ್ರತಾ ಸಿಬ್ಬಂದಿಗಳು ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ ಮತ್ತು ಕೆಲವರು ಹಾವಿನ ಕಡಿತದ ಕಾರಣದಿಂದಾಗಿ ಗಾಯಗೊಂಡಿದ್ದಾರೆ. ಕೆಲವರು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಸಿಪಿಐ (ಮಾವೋವಾದಿ)ನ 18 ಹಿರಿಯ ನಾಯಕರು ಪೊಲೀಸ್ ವಶದಲ್ಲಿದ್ದಾರೆ ಎಂದು ಶಾಂತಿಗಾಗಿ ಸಮನ್ವಯ ಸಮಿತಿಯ ಮಧ್ಯವರ್ತಿ ಜಿ.ಹರಗೋಪಾಲ್ ಮತ್ತು ಇತರ ಸದಸ್ಯರು ಹೇಳಿದ್ದಾರೆ. ಈ ನಾಯಕರು ಪೊಲೀಸರಿಂದ ಪ್ರಾಣಭಯವನ್ನು ಎದುರಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. “ಛತ್ತೀಸ್ ಘಡದಲ್ಲಿ ಈ ಮಾವೋವಾದಿಗಳ ಜೀವ ರಕ್ಷಣೆಗಾಗಿ ನ್ಯಾಯಾಲಯವು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಅವರು ಒತ್ತಾಯಿಸಿದರು.
ಈ ಹಿಂದೆ ಛತ್ತೀಸ್ ಘಡದಲ್ಲಿ ಮಾವೋವಾದಿಗಳಿಂದ ಅಪಹರಿಸಲ್ಪಟ್ಟ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮತ್ತು ವಿನೈಲ್ ಕೃಷ್ಣರ ಬಿಡುಗಡೆಗಾಗಿ ಹರಗೋಪಾಲ್ ಮಾವೋವಾದಿಗಳೊಂದಿಗೆ ಮಧ್ಯಸ್ಥಿಕೆ ವಹಿಸಿದ್ದರು.
2004ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಸರ್ಕಾರವು ಸಿಪಿಐ (ಮಾವೋವಾದಿ)ಗಳೊಂದಿಗೆ ಕದನವಿರಾಮ ಘೋಷಿಸಿ, ಶಾಂತಿ ಮಾತುಕತೆ ನಡೆಸಿದಾಗ, ಈಗ ಹತ್ಯೆಯಾಗಿರುವ ನಕ್ಸಲ್ ಸುಧಾಕರ್ ಮಾವೋವಾದಿ ನಿಯೋಗದ ಭಾಗವಾಗಿದ್ದರು. ಸುಧಾಕರ್ ಅವರು ಮಾವೋವಾದಿ ಪಕ್ಷದ ಕೇಂದ್ರ ಸಮಿತಿ ಸದಸ್ಯರು ಮಾತ್ರವಲ್ಲದೆ, ಅದರ ಪ್ರಾದೇಶಿಕ ಬ್ಯೂರೋ ಆಫ್ ರೆವಲ್ಯೂಷನರಿ ಪೊಲಿಟಿಕಲ್ ಸ್ಕೂಲ್ ನ ಉಸ್ತುವಾರಿ ಕೂಡ ಆಗಿದ್ದಾರೆ.
ಸುಧಾಕರ್ ಅವರು ಪಕ್ಷದಿಂದ ಎರಡು ಹಂತದ ಭದ್ರತೆಯನ್ನು ಹೊಂದಿದ್ದರು. ಇವರನ್ನು ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟಿದ್ದೆ ಆಗಿದ್ದರೆ ಅವರ ಭದ್ರತಾ ಸಿಬ್ಬಂದಿಗಳು ಸಹ ಗುಂಡಿಗೆ ಬಲಿಯಾಗಬೇಕಿತ್ತು ಎಂದು ನಾಗರೀಕ ಹಕ್ಕುಗಳ ಸಂಘಟನೆಯ ಸದಸ್ಯರು ವಾದಿಸುತ್ತಾರೆ. ಆದರೆ ಅವರ ಮೃತದೇಹವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಅವರನ್ನು ಸಾಮಾನ್ಯ ಉಡುಪಿನಲ್ಲಿದ್ದಾಗ ಕೊಲ್ಲಲಾಗಿದೆ. ವಿಜಯವಾಡದ ಆಯುರ್ವೇದ ಕಾಲೇಜಿನಿಂದ ಹೊರಗುಳಿದ ನಂತರ ಸುಧಾಕರ್ ನಕ್ಸಲ್ ಚಳವಳಿಗಾಗಿ 40 ವರ್ಷಗಳ ಕಾಲ ಭೂಗತ ಜೀವನವನ್ನು ನಡೆಸಿದ್ದರು.
ಮತ್ತೊಂದೆಡೆ, ನಕ್ಸಲ್ ಭಾಸ್ಕರ್ ಆದಿಲಾಬಾದ್ ಜಿಲ್ಲೆಯ ಈ ಹಿಂದಿನ ರಾಮಕೃಷ್ಣಪುರದಲ್ಲಿ ನೋಂದಾಯಿತ ವೈದ್ಯಕೀಯ ತರಬೇತುದಾರರಾಗಿದ್ದರು. ಅವರು 1995ರಲ್ಲಿ ನಕ್ಸಲ್ ಚಳವಳಿಗೆ ಸೇರಿದರು.
ಬಲ್ಲಾ ರವೀಂದ್ರನಾಥ್ ನೇತೃತ್ವದ ರಾಜಕೀಯ ಕೈದಿಗಳ ಬಿಡುಗಡೆಯ ಸಮಿತಿಯು ನಕಲಿ ಎನ್ ಕೌಂಟರ್ ನಲ್ಲಿ ಸುಧಾಕರ್ ಮತ್ತು ಭಾಸ್ಕರ್ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ. ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ವಕೀಲರ ಸದಸ್ಯ ಪಿಚುಕಾ ಸುಧಾಕರ್ ಅವರು, ಮತ್ತೊಂದು ಮರಣೋತ್ತರ ಪರೀಕ್ಷೆ ನಡೆಸುವವರೆಗೆ ಈ ನಕ್ಸಲರ ಮೃತದೇಹಗಳನ್ನು ಸಂರಕ್ಷಿಸಲು ಆದೇಶಗಳನ್ನು ನೀಡುವಂತೆ ಛತ್ತೀಸಘಡದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ಪತ್ರವೊಂದನ್ನು ಬರೆದಿದ್ದಾರೆ.
ಕಳೆದ ವರ್ಷ ಜನವರಿ 1ರಿಂದ ಕೇಂದ್ರ ಸರ್ಕಾರದ ಕಾಗರ್ ಕಾರ್ಯಾಚರಣೆಯಲ್ಲಿ 550 ಮಾವೋವಾದಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿವಿಲ್ ಲಿಬರ್ಟೀಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಹೇಳಿದ್ದಾರೆ.
ಅವರಲ್ಲಿ ಸುಮಾರು 400 ಜನರು ಬಡ ಬುಡಕಟ್ಟು ಜನಾಂಗದವರು. ಈ ಕಾರ್ಯಾಚರಣೆಯು ಛತ್ತೀಸ್ ಘಡದ ಖನಿಜ ಸಂಪತ್ತನ್ನು ಕಾರ್ಪೊರೇಟ್ಗಳಿಗೆ ಹಸ್ತಾಂತರಿಸುವ ಬುಡಕಟ್ಟು ಜನಾಂಗದವರ ಹೋರಾಟಗಳನ್ನು ಹೊಸಕಿಹಾಕುವ ಗುರಿಯನ್ನು ಹೊಂದಿದೆ ಎಂದು ಸಮಿತಿ ಹೇಳಿದೆ.
ಅಕ್ರಮ ವಲಸಿಗರೆಂದು ಭಾರತೀಯರ ಗಡಿಪಾರು?..ಅಸ್ಸಾಂನಲ್ಲಿ ಆಗುತ್ತಿರುವುದೇನು?


