ಕಳೆದ ವಾರ ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಎರಡು ಸಭೆಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಮಾಡಲಾಗಿರುವ ದ್ವೇಷ ಭಾಷಣಗಳ ಸಂಭಾವ್ಯ ಪರಿಣಾಮಗಳನ್ನು ತಡೆಗಟ್ಟುವಂತೆ ದೇಶದ 76 ಖ್ಯಾತ ವಕೀಲರು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಪತ್ರ ಬರೆದಿದ್ದಾರೆ. ಎರಡೂ ಸಭೆಗಳಲ್ಲಿ ಬಲಪಂಥೀಯ ಹಿಂದೂ ಧಾರ್ಮಿಕ ಮುಖಂಡರು ಭಾರತದ ಜನಾಂಗೀಯ ಶುದ್ಧೀಕರಣಕ್ಕೆ ಕರೆ ನೀಡಿದ್ದರು. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ಮಾಡುವಂತೆ ಪತ್ರವು ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
“ಮೇಲೆ ತಿಳಿಸಿದ ಘಟನೆಗಳು ಮತ್ತು ಅದೇ ಸಮಯದಲ್ಲಿ ಮಾಡಿದ ಭಾಷಣಗಳು ಕೇವಲ ದ್ವೇಷದ ಭಾಷಣಗಳಲ್ಲ. ಅದು ಇಡೀ ಸಮುದಾಯದ ಹತ್ಯೆಗೆ ಮುಕ್ತ ಕರೆ ನೀಡಿದ್ದಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:‘ಖಾಲಿಸ್ತಾನಿ & LTTE ಭಯೋತ್ಪಾದಕರಾಗಿ’: ಹಿಂದೂ ಯುವಕರಿಗೆ ಬಹಿರಂಗ ಕರೆ ನೀಡಿದ ಯತಿ ನರಸಿಂಗಾನಂದ!
“ಅಲ್ಲಿ ಮಾಡಲಾಗಿರುವ ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ IPC ಯ 153, 153A, 153B, 295A, 504, 506, 120B, 34 ರ ನಿಬಂಧನೆಗಳ ಅಡಿಯಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ, ಇಂತಹ ಘಟನೆಗಳನ್ನು ತಡೆಯಲು ತುರ್ತು ನ್ಯಾಯಾಂಗ ಹಸ್ತಕ್ಷೇಪದ ಅಗತ್ಯವಿದೆ” ಎಂದು ಹೇಳಲಾಗಿದೆ.
ಪತ್ರ ಬರೆದ ಪ್ರಮುಖರದಲ್ಲಿ ವಕೀಲರು ಮತ್ತು ಪಾಟ್ನಾ ಹೈಕೋರ್ಟ್ ಮಾಜಿ ನ್ಯಾಯಾಧೀಶರಾಗಿರುವ ಅಂಜನಾ ಪ್ರಕಾಶ್, ವಕೀಲ ಸಲ್ಮಾನ್ ಖುರ್ಷಿದ್, ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಅನೇಕರು ಇದ್ದಾರೆ.
“… ಹೀಗೆ ಹೇಳಿದ ಭಾಷಣಗಳು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಗಂಭೀರ ಬೆದರಿಕೆಯನ್ನುಂಟುಮಾಡುತ್ತವೆ. ಜೊತೆಗೆ ಲಕ್ಷಾಂತರ ಮುಸ್ಲಿಂ ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ:ಸಿಎಂ ಕೇಜ್ರಿವಾಲ್ಗೆ ಶೂಟ್ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ ನರಸಿಂಗಾನಂದ ಹಿಂಬಾಲಕ
ಹಿಂದೂ ಹಿಂದೂ ರಕ್ಷಣಾ ಸೇನೆಯ ಪ್ರಬೋಧಾನಂದ ಗಿರಿ ಅವರು ಮ್ಯಾನ್ಮಾರ್ ಮಾದರಿಯಲ್ಲಿ ಭಾರತವನ್ನು ಕೂಡಾ “ಜನಾಂಗೀಯ ಶುದ್ಧೀಕರಣ” ಕ್ಕೆ ಕರೆ ನೀಡಿದ್ದ ಪ್ರಚೋದಕ ಹೇಳಿಕೆಗಳನ್ನು ವಕೀಲರು ಪತ್ರದಲ್ಲಿ ಎತ್ತಿ ತೋರಿಸಿದ್ದಾರೆ.
ಇವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.
ಸಮಾವೇಶದಲ್ಲಿ ‘ಸಾಧ್ವಿ ಅನ್ನಪೂರ್ಣ’ ಮಾಡಿದ ಮತ್ತೊಂದು ಭಾಷಣದಲ್ಲಿ, ಮುಸ್ಲಿಮರನ್ನು ಕೊಲ್ಲಲು ಮತ್ತು ಸೋಲಿಸಲು ಹಿಂದೂ ‘ಸೈನಿಕರ’ ಅಗತ್ಯವಿದೆ ಎಂದು ಹೇಳಿದ್ದರು. ಈ ಸಮಾವೇಶವನ್ನು ಧಾರ್ಮಿಕ ಮುಖಂಡರಾದ ಯತಿ ನರಸಿಂಹಾನಂದ್ ಅವರು ಆಯೋಜಿಸಿದ್ದರು.
ಇದನ್ನೂ ಓದಿ:ವಿವಾದಿತ ಯತಿ ನರಸಿಂಗಾನಂದ ಅರ್ಚಕನಾಗಿರುವ ದೇವಾಲಯದಲ್ಲಿ ವ್ಯಕ್ತಿಗೆ ಚೂರಿ ಇರಿತ