ಭಾರತದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 3 ಸಾವಿರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಚಗೊಳಿಸುವ ಅಪಾಯಕಾರಿ ಕೆಲಸಗಳಲ್ಲಿ ತೊಡಗಿರುವ, 38,000 ಕಾರ್ಮಿಕರಲ್ಲಿ ಶೇ. 91.9ರಷ್ಟು ಜನರು ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದವರು ಎಂದು ಕೇಂದ್ರ ಸರ್ಕಾರದ ವರದಿಯಿಂದ ತಿಳಿದು ಬಂದಿದೆ.
ಒಟ್ಟು ಶೇ. 91.9ರಷ್ಟು ಎಸ್ಸಿ, ಎಸ್ಟಿ ಮತ್ತು ಒಬಿಸಿ ಕಾರ್ಮಿಕರ ಪೈಕಿ, ಶೇ. 68.9ರಷ್ಟು ಪರಿಶಿಷ್ಟ ಜಾತಿ (ಎಸ್ಸಿ), ಶೇ. 14.7 ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಶೇ.8.3ರಷ್ಟು ಪರಿಶಿಷ್ಟ ವರ್ಗ (ಎಸ್ಟಿ) ಕಾರ್ಮಿಕರಿದ್ದಾರೆ. ಸಾಮಾನ್ಯ ವರ್ಗದವರು ಶೇ.8ಕ್ಕಿಂತ ಕಡಿಮೆ ಇದ್ದಾರೆ.
ಎಲ್ಲಾ ಒಳಚರಂಡಿ ಕೆಲಸಗಳನ್ನು ಯಾಂತ್ರೀಕರಿಸಲು ಮತ್ತು ಈ ಅಪಾಯಕಾರಿ ಕೆಲಸದಿಂದಾಗಿ ಸಾವುಗಳನ್ನು ತಡೆಯಲು ಹಮ್ಮಿಕೊಂಡಿರುವ ‘ನಮಸ್ತೆ’ ಕಾರ್ಯಕ್ರಮದ ಅಂಗವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ ಎಣಿಕೆ ಕಾರ್ಯವನ್ನು ನಡೆಸುತ್ತಿದೆ.
2023-24ರಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆ(ಎಸ್ಆರ್ಎಂಎಸ್)ಯ ಬದಲು ಈ ಯೋಜನೆಯನ್ನು ತರಲಾಗಿದೆ.
ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ದತ್ತಾಂಶಗಳಂತೆ 2019 ಮತ್ತು 2023ರ ನಡುವೆ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವ ಅಪಾಯಕಾರಿ ಕೆಲಸದಿಂದ ದೇಶಾದ್ಯಂತ ಕನಿಷ್ಠ 377 ಜನರು ಮೃತಪಟ್ಟಿದ್ದಾರೆ.
ಮಲ ಹೊರುವುದು ಒಂದು ಪದ್ಧತಿಯಾಗಿ ದೇಶದಾದ್ಯಂತ ಅಂತ್ಯಗೊಂಡಿದೆ. ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ಗಳ ಅಪಾಯಕಾರಿ ಶುಚಿತ್ವವನ್ನು ನಿಲ್ಲಿಸುವುದು ಈಗಿನ ಅಗತ್ಯವಾಗಿದೆ ಎನ್ನುವುದು ಕೇಂದ್ರ ಸರ್ಕಾರದ ವಾದ.
ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ವಾಹನಗಳ ಚಾಲಕರು, ಸಹಾಯಕರು,ಯಂತ್ರ ನಿರ್ವಾಹಕರು ಮತ್ತು ಕ್ಲೀನರ್ಗಳು ಸೇರಿದಂತೆ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳ ಸ್ವಚ್ಛತೆಯೊಂದಿಗೆ ನೇರವಾಗಿ ಗುರುತಿಸಿಕೊಂಡಿರುವ ಕಾರ್ಮಿಕರನ್ನು ನಮಸ್ತೆ ಕಾರ್ಯಕ್ರಮವು ಗುರಿಯಾಗಿಸಿಕೊಂಡಿದೆ ಎಂದು ಸಚಿವಾಲಯವು ಹೇಳಿದೆ.
ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಕಾರ್ಮಿಕರ ಎಣಿಕೆ, ಅವರಿಗೆ ಸುರಕ್ಷತಾ ತರಬೇತಿ ಮತ್ತು ಸಲಕರಣೆಗಳ ಒದಗಿಸುವಿಕೆ ಹಾಗೂ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರನ್ನು ‘ಸ್ಯಾನಿಪ್ರಿನಿಯರ್ಸ್’ ಅಥವಾ ನೈರ್ಮಲ್ಯ ಉದ್ಯಮಿಗಳನ್ನಾಗಿ ಪರಿವರ್ತಿಸಲು ಬಂಡವಾಳ ಸಬ್ಸಿಡಿಗಳನ್ನು ನೀಡುವುದು ಅದರ ಗುರಿಯಾಗಿದೆ.
ಜಾತಿ ಗಣತಿಗೆ ಆಗ್ರಹಿಸಿದ ಕಾಂಗ್ರೆಸ್
ಸರ್ಕಾರದ ವರದಿಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ದೇಶದಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವ 92% ಜನರು ಎಸ್ಸಿ, ಎಸ್ಟಿ, ಒಬಿಸಿ ವರ್ಗಗಳಿಂದ ಬಂದವರು. ಈ ಡೇಟಾವು ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದ ಜನರ ಜೀವನವು ಬಲವಂತದ ಪರಿಸ್ಥಿತಿಗಳಿಗೆ ತಳ್ಳಲ್ಪಟ್ಟಿದೆ ಎಂಬುವುದನ್ನು ತೋರಿಸುತ್ತದೆ. ಇಂದು ಜಾತಿ ಗಣತಿ ಅಗತ್ಯವಾಗಿದ್ದು, ಅದರಿಂದ ಸರ್ಕಾರದ ಯೋಜನೆಗಳಲ್ಲಿ ಈ ವರ್ಗಗಳ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಕಾಂಗ್ರೆಸ್ ಯಾವುದೇ ಬೆಲೆ ತೆತ್ತಾದರೂ ಜಾತಿ ಗಣತಿಯ ಆಗ್ರಹವನ್ನು ಮುಂದುವರಿಸಲಿದೆ. ದೇಶದ 90% ಜನರು ತಮ್ಮ ಹಕ್ಕುಗಳನ್ನು ಪಡೆಯುವುದನ್ನು ಖಚಿತಪಡಿಸಲಿದೆ” ಎಂದು ಹೇಳಿದೆ.
देश के सीवर और सेप्टिक टैंक की सफाई करने वाले 92% लोग SC, ST, OBC वर्ग से आते हैं।
ये आकंड़ा बताता है कि SC, ST, OBC वर्ग के लोग किन हालातों में अपना जीवन यापन करने को मजबूर हैं।
आज जातिगत जनगणना की जरूरत इसलिए है ताकि सरकार की योजनाओं में इन वर्ग की भागीदारी सुनिश्चित की जा… pic.twitter.com/hB1qwDpaYU
— Congress (@INCIndia) September 30, 2024
ಇದನ್ನೂ ಓದಿ : ‘ಪ್ರತಿಭೆ ವ್ಯರ್ಥವಾಗಲು ಬಿಡುವುದಿಲ್ಲ..’; ದಲಿತ ವಿದ್ಯಾರ್ಥಿ ಪರವಾಗಿ ಐಐಟಿಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ


