Homeಮುಖಪುಟಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು - ದೇವನೂರು ಮಹಾದೇವ

ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ

ಇಂದು ಮನುಷ್ಯರು ಧರ್ಮ-ದೇವರಿಗೆ ತಮ್ಮ ರೋಗ ಅಂಟಿಸುತ್ತಿದ್ದಾರೆ. ಇದಕ್ಕೆ ಧರ್ಮಜಾಢ್ಯ ಅಂತಾರೆ. ವಿದ್ಯಾರ್ಥಿಗಳು ಇನ್ನೂ ಎಳೆಯರು, ಇನ್ನೂ ಯಾವ ರಾಗ-ದ್ವೇಷ ಇಲ್ಲದವರು. ಅವರು ಈ ಧರ್ಮಜಾಢ್ಯದಿಂದ ಬಿಡುಗಡೆ ಪಡೆಯಲಿ.

- Advertisement -
- Advertisement -

(ಹಿಜಾಬ್ ಮತ್ತು ಕೇಸರಿ ಶಾಲಿನ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತಲೆದೋರಿರುವ ವಿವಾದ ಕುರಿತಂತೆ ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಅತ್ಯಂತ ಕಳಕಳಿಯಿಂದ ತಮ್ಮ ಅಭಿಪ್ರಾಯಗಳನ್ನು ಟಿವಿ-9 ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಸಹಜ ಹಾಗೂ ಚಿಂತನಾ ಅಭಿಪ್ರಾಯಗಳನ್ನು ನಮ್ಮ ಓದುಗರಿಗೆ ನೀಡುತ್ತಿದ್ದೇವೆ. – ಸಂಪಾದಕ)

ಈ ಬೆಳವಣಿಗೆ ತುಂಬಾ, ಅಂದರೆ ತುಂಬಾನೇ ದುಃಖವಾಗುತ್ತದೆ. ಈ ಹಿಂದೆ ಏನಾಗುತ್ತಿತ್ತು? ಹಿಜಾಬ್ ಅನ್ನು ಅಲ್ಲೊಬ್ಬರು ಇಲ್ಲೊಬ್ಬರು ಧರಿಸುತ್ತಿದ್ದರು. ಅದು ಸಹಜವಾಗಿ ನಡೆದುಕೊಂಡು ಹೋಗುತ್ತಿತ್ತು. ಎದ್ದು ಕಾಣಿಸುತ್ತಿರಲಿಲ್ಲ. ಯಾವಾಗ ಹಾಕಿಕೊಂಡು ಬರಬಾರದೆಂದು ನಿಷೇಧ ಹೇರಲಾಯಿತೋ ಆಗ ಪ್ರತಿರೋಧ ಆರಂಭವಾಯಿತು. ಜೊತೆಗೆ ಹಿಜಾಬ್ ಧರಿಸುವುದು ಹೆಚ್ಚೇ ಆಯಿತು.

ಈ ಹೆಚ್ಚಾಗುವುದರ ಹಿಂದೆ ಅಲ್ಪಸ್ವಲ್ಪ ಪಟ್ಟಭದ್ರರ ಹಿತಾಸಕ್ತಿ ಇದ್ದೇ ಇದೆ ಎನ್ನಿಸುತ್ತೆ. ಆದರೆ ಯಾವಾಗ ಕೇಸರಿ ಬಣ್ಣವು ಹಿಜಾಬ್ ವಿರುದ್ಧ ಪ್ರತಿಕ್ರಿಯೆಯಾಗಿ ಬಂತೋ, ಆ ಕೇಸರಿ ಬಣ್ಣದ ಅದ್ಧೂರಿತನ ನೋಡಿದರೆ, ಆ ಕೇಸರಿ ಪೇಟ ನೋಡಿದರೆ, ಅದರ ವ್ಯಾಪಕತೆ ನೋಡಿದರೆ, ಇದೆಲ್ಲಾ ವಿದ್ಯಾರ್ಥಿಗಳದ್ದಲ್ಲಾ ಎಂದು ಹೆಚ್ಚು ಸ್ಪಷ್ಟವಾಗುತ್ತೆ. ಹಣ ಉಳ್ಳವರು, ಪಟ್ಟಭದ್ರ ಹಿತಾಸಕ್ತಿಗಳು ಚೆಲ್ಲಾಟ ನಡೆಸುತ್ತಿದ್ದಾರೆ ಎನ್ನಿಸುತ್ತದೆ.

ಇದರ ಜೊತೆಗೆ ರಾಜಕಾರಣಿಗಳದ್ದೂ ಕೈವಾಡ ಇದೆ. ಏಕೆಂದರೆ ಈ ಗಲಾಟೆ ಉಲ್ಬಣ ಮಾಡಿಕೊಂಡು ತಮ್ಮ ಸೋಲು-ಗೆಲುವನ್ನು ಇದರಲ್ಲಿ ನಿರ್ಧರಿಸಿಕೊಳ್ಳಬೇಕು. ಚಾನ್ಸ್ ಇದು. ಬಳಸಿಕೊಳ್ಳಬೇಕೆನ್ನುವ ದುರಾಸೆ ಅಥವಾ ಕೆಟ್ಟ ದುಷ್ಟತನ ಇದರಲ್ಲಿ ಕಂಡು ಬರುತ್ತಿದೆ. ಒಟ್ಟಿನಲ್ಲಿ ಇದರಲ್ಲಿ ಬಡಿದಾಡುತ್ತಿರುವವರು ಯಾರು ಎಂದು ನೋಡಿದರೆ, ಎರಡೂ ಕಡೆಯ ವಿದ್ಯಾರ್ಥಿಗಳೇ. ಅವರೇ ಬಲಿಪಶುಗಳು.

ಇದೇ ರೀತಿಯಾದರೆ, ಇದು ಎಲ್ಲಿಗೆ ಕರೆದೊಯ್ಯುತ್ತದೆ ಎಂದರೆ, ನಾಳೆ ಮಹಿಳೆಯರು ಪಿಂಕ್ ಗುಲಾಬಿ ಬಣ್ಣದ ವಸ್ತ್ರ ಧರಿಸಿ ಬರಬಹುದು. ಹಾಗೆಯೇ ದಲಿತರು ನೀಲಿ, ರೈತರು ಹಸಿರು ಟವೆಲ್, ಮತ್ತೆ ದುಡಿಯುವ ವರ್ಗ ಕೆಂಪು, ದ್ರಾವಿಡರು ಕಪ್ಪು, ಹಿಂದುಳಿದ ವರ್ಗ ಹಳದಿ, ಆಮೇಲೆ ಅದರೊಳಗಡೆನೇ ಮದಕರಿ ಬಣ್ಣವಾಗಿ ಮೆರೂನ್… ಹೀಗೆ ಬಣ್ಣ ಬಣ್ಣಗಳಲ್ಲಿ ಬರಲು ಈ ಗಲಾಟೆ ಉಲ್ಬಣಗೊಂಡರೆ ಪ್ರೇರಣೆಯಾಗಲಿದೆ.
ಸುಸ್ತು ಆದ ಮೇಲೆ ಶಾಂತಿ ಬೇಕೆನ್ನುವ ಬಿಳಿಬಣ್ಣ ಕೂಡ ಬರುತ್ತೆ.

ಈಗ ನಾವು ಯೋಚಿಸಬೇಕಿರುವುದು ಇದೆಲ್ಲಾ ನಮಗೆ ಬೇಕಿತ್ತಾ? ಎನ್ನುವುದಾಗಿದೆ. ಈಗ ತಾಯಂದಿರು, ಎಲ್ಲಾ ಜಾತಿ-ಧರ್ಮದ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ತಮ್ಮ ಮಕ್ಕಳು ಪಟ್ಟಭದ್ರ ಹಿತಾಸಕ್ತಿಗೆ ಮತ್ತು ರಾಜಕಾರಣಿಗಳ ಚೆಲ್ಲಾಟಕ್ಕೆ ಈ ತರ ದಾಳವಾಗುತ್ತಿದ್ದಾರೆ ಎಂದರೆ, ಅವರ ಆತಂಕ ಹೆಚ್ಚಾಗುವುದಿಲ್ಲವೇ? ಇದು ಬಹುಸಂಖ್ಯಾತ ಮಹಿಳೆಯರು, ತಾಯಂದಿರಲ್ಲಿ ಆತಂಕ ಹೆಚ್ಚು ಮಾಡಿದೆ ಎಂದು ನನಗೆ ಅನ್ನಿಸುತ್ತೆ. ಇದೇ ರೀತಿ ಉಲ್ಬಣವಾದರೆ ಒಂದಲ್ಲಾ ಒಂದು ದಿನ ಈ ತಾಯಂದಿರ ಆತಂಕವು ಆಕ್ರೋಶ ಆಗಬಹುದು. ಅದು ಸಹಜ. ನೆನಪಿರಲಿ.

ನಾನು ವಿದ್ಯಾರ್ಥಿಗಳಲ್ಲಿ ಗಮನಕ್ಕೆ ತರುವುದು ಒಂದೇ ವಿಚಾರ. ಈ ರೀತಿಯ ಭಾವನಾತ್ಮಕ ವಿಚಾರಗಳನ್ನು ಉಂಡು, ತಿಂದು, ಕುಣಿದು ಕುಪ್ಪಳಿಸುತ್ತ ಗದ್ದಲ ಮಾಡುತ್ತಿದ್ದೀರಲ್ಲಾ ನೀವು, ನಿಮಗೆ ನನ್ನ ಪ್ರಶ್ನೆ ಇಷ್ಟು: ನಾಳೆ ಬದುಕಿ ಬಾಳಬೇಕಾದ ನಿಮಗೆ ಈ ಭಾವನಾತ್ಮಕ ವಿಷಯಗಳು, ಈ ಭ್ರಮೆಗಳು ನಿಮ್ಮ ಭವಿಷ್ಯವನ್ನು ಮತ್ತು ನಾಳಿನ ಜೀವನವನ್ನು ರೂಪಿಸುತ್ತಾ? ಈ ಪ್ರಶ್ನೆಯನ್ನು ಎಲ್ಲಾ ವಿದ್ಯಾರ್ಥಿಗಳು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕಾಗಿದೆ ಈಗ.

ಈಗ ಎಲ್ಲರಿಗೂ ಗೊತ್ತು ನಿರುದ್ಯೋಗ ಹೆಚ್ಚುತ್ತಿದೆ. ಕಳೆದ 50 ವರ್ಷಗಳಲ್ಲೆ ಈಗ ಉದ್ಯೋಗ ಕಡಿಮೆ ಆಗಿದೆ. ಶಿಕ್ಷಣಕ್ಕೆ ಬಜೆಟ್‌ನಲ್ಲಿ ಕಮ್ಮಿ ಹಣ ನಿಗದಿ ಮಾಡಿದರು. ಶಿಕ್ಷಣ ಉಳಿಯುತ್ತದಾ? ಇದರ ಉದ್ದೇಶವೇನು? ಶಿಕ್ಷಣ ಕೊಡಬೇಕು ಅಂತಾನೋ? ನಿಧಾನವಾಗಿ ನಿಲ್ಲಿಸಬೇಕು ಅಂತಾನೋ? ಮತ್ತು ಪ್ರಾಥಮಿಕ ಆರೋಗ್ಯಕ್ಕೆ ಬಜೆಟ್‌ನಲ್ಲಿ ಅನುದಾನ ಕಡಿಮೆ ಮಾಡಿದ್ದಾರೆ. ಇದನ್ನೆಲ್ಲಾ ವಿದ್ಯಾರ್ಥಿಗಳು ಪ್ರಶ್ನೆ ಮಾಡಬೇಕಿತ್ತು. ಏಕೆಂದರೆ ಶಿಕ್ಷಣ, ಉದ್ಯೋಗ ನಿಮ್ಮದೇ ಸಮಸ್ಯೆಯಲ್ಲವೆ? ನಾಳೆ ಬದುಕಿ ಉಳಿಯಬೇಕಾದ ವಿದ್ಯಾರ್ಥಿ ಯುವಜನರಿಗೆ ಈ ಪ್ರಶ್ನೆ ಕೇಳುತ್ತಿದ್ದೇನೆ.

ಇಂದು ಪೆಟ್ರೋಲ್, ಗ್ಯಾಸ್ ಬೆಲೆ ಜಾಸ್ತಿಯಾಗುತ್ತಿದೆ. ಈ ಬೆಲೆ ಏರಿಕೆ ಸಿಕ್ಕಾಪಟ್ಟೆ ಕಂಟ್ರೋಲ್ ತಪ್ಪಿ ಹೆಚ್ಚುತ್ತಿದೆ. ಇದನ್ನು ಪ್ರಶ್ನೆ ಮಾಡಬೇಕಾದವರು ವಿದ್ಯಾರ್ಥಿಗಳಲ್ಲವೇ? ಈ ಎಚ್ಚರ ಎಲ್ಲಾ ಜಾತಿಯ, ಎಲ್ಲಾ ಧರ್ಮೀಯರ ವಿದ್ಯಾರ್ಥಿಗಳಲ್ಲೂ ಇರಬೇಕಾಗಿದೆ. ಇದನ್ನೂ ವಿದ್ಯಾರ್ಥಿಗಳು ಯೋಚನೆ ಮಾಡಬೇಕು.

ಈ ನೋಟ್ ಬ್ಯಾನ್ ಆವಾಂತರ, ಜಿಎಸ್‌ಟಿ ಅವಿವೇಕಿತನವು ದೇಶವನ್ನು ದಿಕ್ಕೆಡಿಸಿದೆ. ಗಮನಿಸಿ, ಇವತ್ತು ಮಧ್ಯಮ ವರ್ಗವು ಬಡತನದ ಕಡೆಗೆ ಹೋಗುತ್ತಿದೆ. ಮತ್ತು ಬಡವರು ಹಸಿವಿನ ಕಡೆಗೆ ಹೋಗುತ್ತಿದ್ದಾರೆ. ಈ ಸಮಸ್ಯೆಯನ್ನು ವಿದ್ಯಾರ್ಥಿಗಳಲ್ಲವೇ ಕೈಗೆ ತೆಗೆದುಕೊಳ್ಳಬೇಕಾದ್ದು. ಕೆಲವೇ ಜನ ಕಾರ್ಪೊರೇಟ್ ಕಂಪನಿ ಮಾಲೀಕರು, ಅವರ ಸಂಪತ್ತು ದೇಶದ ಸಂಪತ್ತಿನಲ್ಲಿ ಅರ್ಧ ಭಾಗವಿದೆ. ಅಂದರೆ ಕೆಲವೇ ಜನ ಕಾರ್ಪೋರೇಟ್ ಕುಟುಂಬಗಳ ಕೈಯಲ್ಲಿ ದೇಶದ ಅರ್ಧ ಭಾಗದ ಸಂಪತ್ತಿದೆ. ಕೊರೊನಾ, ಜಿಎಸ್‌ಟಿ, ನೋಟ್ ಬ್ಯಾನ್ ಆಗಿ ಜನರು ತತ್ತರಿಸುವಾಗ ಕಾರ್ಪೋರೇಟ್ ಕಂಪನಿಗಳ ಆದಾಯ ಹೆಚ್ಚಾಗಿದೆ. ಇದಕ್ಕೆ ಕಾರಣವೇನು? ಲೂಟಿ ಎಲ್ಲಿ ಆಗುತ್ತಿದೆ. ಇದನ್ನು ಎಚ್ಚೆತ್ತ ವಿದ್ಯಾರ್ಥಿಗಳು ಸಮಾಜಕ್ಕೆ ಹೇಳಬೇಕು. ಆ ಜವಾಬ್ದಾರಿ ಯುವ ಜನಾಂಗದ ಮೇಲಿದೆ.

ಆರ್ಥಿಕ ತಜ್ಞರು, ತಿಳಿದವರು ಹೇಳುತ್ತಿದ್ದಾರೆ. ಅದೇನೆಂದರೆ, ಕಾರ್ಪೊರೇಟ್ ಕಂಪನಿಗಳ ಸಂಪತ್ತಿನ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಿದರೆ, ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗುತ್ತದೆ, ಪ್ರಾಥಮಿಕ ಆರೋಗ್ಯ ಸುಧಾರಣೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಕೇಂದ್ರ ಸರ್ಕಾರ ಶೇ.2ರಷ್ಟು ತೆರಿಗೆಯನ್ನು ಅವರಿಗೆ ವಿಧಿಸಲಿಲ್ಲ. ಬದಲಾಗಿ ಅವರಿಗೆ ತೆರಿಗೆ ಕಮ್ಮಿ ಮಾಡಿತು. ಉಳ್ಳವರಿಗೆ ಎಲ್ಲವನ್ನೂ ನೀಡುತ್ತದೆ. ಆದರೆ ರೈತರು, ದುಡಿಯುವ ವರ್ಗಕ್ಕೆ ಕೇಳಿದರೂ ಇಲ್ಲ. ಅವರಿಗೆ (ಉಳ್ಳವರು/ಕಾರ್ಪೊರೇಟ್ ಕಂಪನಿಗಳು) ಭೂಮಿ, ನೀರು, ವಿದ್ಯುತ್ ರಿಯಾಯಿತಿ. ಇಲ್ಲದವರಿಗೆ ಇಲ್ಲ. ಇದು ಯಾವ ನೀತಿ ಅಂತ ಸರ್ಕಾರವನ್ನು ಪ್ರಶ್ನಿಸಬೇಕಾದ ಹೊಣೆ ಹೊತ್ತುಕೊಳ್ಳಲು ವಿದ್ಯಾರ್ಥಿಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ.

ಇಂದು ಮನುಷ್ಯರು ಧರ್ಮ-ದೇವರಿಗೆ ತಮ್ಮ ರೋಗ ಅಂಟಿಸುತ್ತಿದ್ದಾರೆ. ಇದಕ್ಕೆ ಧರ್ಮಜಾಢ್ಯ ಅಂತಾರೆ. ವಿದ್ಯಾರ್ಥಿಗಳು ಇನ್ನೂ ಎಳೆಯರು, ಇನ್ನೂ ಯಾವ ರಾಗ-ದ್ವೇಷ ಇಲ್ಲದವರು. ಅವರು ಈ ಧರ್ಮಜಾಢ್ಯದಿಂದ ಬಿಡುಗಡೆ ಪಡೆಯಿರಿ ಎಂದು ವಿದ್ಯಾರ್ಥಿ ಯುವಜನರಲ್ಲಿ ಕೇಳಿಕೊಳ್ಳುತ್ತೇನೆ.

ಆಯ್ತು, ಸಮವಸ್ತ್ರದ ಜೊತೆಗೆ ಹಿಜಾಬ್ ಹಾಕಿಕೊಂಡರೆ ಏನು ತೊಂದರೆ? ಬೇಕಾದರೆ ನಿಮಗೆ ಇಷ್ಟವಾದರೆ ನಿಮ್ಮಗಿಷ್ಟವಾದ ಬಣ್ಣದ ಹಿಜಾಬ್ ಅನ್ನು ನೀವೂ ಹಾಕಿಕೊಳ್ಳಿರಿ. ಇಂದು ಕುಂಕುಮ, ಬಳೆಗಳನ್ನು ಎಲ್ಲರೂ ಹಾಕಿಕೊಳ್ಳುವುದಿಲ್ಲವೇ? ಇಂತವೆಲ್ಲವೂ ದಿನಕಳೆದಂತೆ ಅಲಂಕಾರವೇ ಆಗಿ ಬಿಡಬಹುದು. ಆದ್ದರಿಂದ ಇದನ್ನೊಂದು ವಿವಾದ ಮಾಡಿಕೊಳ್ಳಬೇಕಾಗಿರಲಿಲ್ಲ. ಆದರೆ ಇಲ್ಲಿ ಅಹಂಕಾರ ಅವಿತುಕುಳಿತಿದೆ. ದ್ವೇಷ ಬಚ್ಚಿಟ್ಟುಕೊಂಡಿದೆ. ರಾಜಕಾರಣವೂ ಇದ್ದೇಇದೆ. ಪಟ್ಟಭದ್ರ ಹಿತಾಸಕ್ತಿಗಳೂ ಗುಡುರು ಹಾಕುತ್ತಿವೆ. ಹಾಗಾಗಿ ಸಹಜವಾಗಿ ನಡೆದುಕೊಂಡು ಹೋಗುತ್ತಿದ್ದುದು ಇಂದು ವಿವಾದವಾಗಿ ಉಲ್ಬಣಿಸಿದೆ. ನನ್ನ ವಿನಂತಿ ಹಿಜಾಬ್ ಇರಲಿ ಬಿಡಿ, ಅದನ್ನು ಏಕೆ ದೊಡ್ಡದು ಮಾಡುತ್ತೀರಿ? ಅದು ತನ್ನಷ್ಟಕ್ಕೆ ತಾನೇ ಕಮ್ಮಿ ಆಗುತ್ತಾ ಹೋಗಲೂ ಬಹುದು. ನಿಷೇಧ ಮಾಡಿದರೆ ಇದು ಹೆಚ್ಚುತ್ತಾ ಪ್ರತಿಭಟನೆಯ ಜೊತೆಗೆ ಬೇರೆಯವರೂ ಬಳಸಿಕೊಳ್ಳುವುದೂ ಹೆಚ್ಚಬಹುದು. ಈ ಎಚ್ಚರ ನಮಗಿರಲಿ.

ಈಗ ಈ ವಿವಾದ ನ್ಯಾಯಾಲಯದ ಮುಂದಿದೆ. ಅವರು ತಕ್ಷಣ ಇದಕ್ಕೆ ಪರಿಹಾರ ನೀಡಬೇಕು. ಅಲ್ಲಿಯವರೆಗೂ ತೂಗುಗತ್ತಿ ಆಡುತ್ತಲೇ ಇರುತ್ತದೆ. ಇಲ್ಲಿ ಒಂದು ತುಂಬಾ ನೋವಿನ ಸಂಗತಿಯೆಂದರೆ, ಹಿಜಾಬ್ ವಿವಾದ ಎಲ್ಲಿ ಹುಟ್ಟಿತೊ, ಆ ಒಂದೆರಡು ಶಾಲೆಗಳಲ್ಲೇ ಆಯಾಯ ಜನಾಂಗಗಳ ವಿವೇಕಿ ನಾಯಕರ ಸಮ್ಮುಖದಲ್ಲಿ ಶಾಂತಿ ಸಮಾಧಾನ ಮಾಡಿದ್ದರೆ, ಈ ವಿವಾದ ಬೆಳೆಯುತ್ತಿರಲಿಲ್ಲವೇನೋ. ಯಾವಾಗ ಈ ವಿವಾದವನ್ನು ಬಗೆಹರಿಸುವ ನೆಪದಲ್ಲಿ ಶಿಕ್ಷಣ ಸಚಿವರು ಸುತ್ತೋಲೆ ಹೊರಡಿಸಿದರೋ ಆವಾಗ ಇದು ರಾಜ್ಯವ್ಯಾಪ್ತಿ ಹಬ್ಬಿತು. ಇದಾಗಬಾರದಿತ್ತು. ಇಲ್ಲಿ ವಿವೇಕ, ವಿವೇಚನೆ ಅಗತ್ಯವಿತ್ತು. ಇದನ್ನು ನೆನಸಿಕೊಂಡರೆ ನೋವುಂಟಾಗುತ್ತದೆ.

ದೇವನೂರು ಮಹಾದೇವ

(ಹಿರಿಯ ಸಾಹಿತಿಗಳು ಮತ್ತು ಚಿಂತಕರು, ಮೈಸೂರು)


ಇದನ್ನೂ ಓದಿ: ಅಧ್ಯಾಪನದ ಧರ್ಮ: ನಮ್ಮ ವಿವೇಕದ ಮೇಲೆ, ಧರ್ಮದ ಮರ್ಮದ ಮೇಲೆ ನಡೀತಿರೋ ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...