ಕಬ್ಬು ಕಟಾವಿಗೆ ಬಂತೆಂದರೆ ಗುತ್ತಿಗೆದಾರರಿಗದು ದುಡ್ಡಿನ ಸುಗ್ಗಿಯ ಸಮಯ. ಪುಣೆ ಬೆಳಗಾವಿ, ಪುಣೆ ಸೊಲ್ಲಾಪುರ ರೋಡುಗಳು ತುಂಬಿದ ಟ್ರ್ಯಾಕ್ಟರುಗಳಿಂದ ಗುಡುಗುಡಿಸುತ್ತವೆ. ಆ ಟ್ರ್ಯಾಕ್ಟರುಗಳಲ್ಲಿ ಮನೆಯ ಎಲ್ಲಾ ಸಾಮಾನುಗಳು, ಹಾಸಿಗೆ ಹೊದಿಕೆ, ಗುಡಾರ, ಪ್ಲಾಸ್ಟಿಕ್ ಹೊದಿಕೆಗಳು, ಅವನ್ನು ನಿಲ್ಲಿಸುವ ಕಂಬಗಳು. . . ಮಕ್ಕಳು ಮರಿಗಳು, ಮನೆಯ ಎಲ್ಲಾ ಸದಸ್ಯರುಗಳು. ಹೊರಡುವುದೆಲ್ಲಿಗೆ? ಸಾಂಗ್ಲಿ, ಸಾತಾರ, ಕೊಲ್ಲಾಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಕಬ್ಬಿನ ಗದ್ದೆಗಳಿಗೆ. ನೋಡ ನೋಡುವಷ್ಟರಲ್ಲಿ ಗದ್ದೆಗಳಲ್ಲಿ ಕಂಬಗಳು ಎದ್ದು ನಿಲ್ಲುತ್ತವೆ, ಪ್ಲಾಸ್ಟಿಕ್ ಹೊದಿಕೆಯ ಮುಸುಕು ಹಾಕಿಕೊಂಡು ಅವು ಮನೆಗಳೆನಿಸುತ್ತವೆ. ಮನೆಯ ಸಾಮಾನು, ಹಾಸಿಗೆ ಹೊದಿಕೆ ಮಕ್ಕಳೆಲ್ಲ ಟ್ರ್ಯಾಕ್ಟರ್ ಇಳಿದು ಆ ಮನೆಯೊಳಗೆ ತುಂಬಿಕೊಳ್ಳುತ್ತವೆ. ಮುಂದಿನ ಎರಡು ತಿಂಗಳು ಇದೇ ಅವರ ಮನೆ, ಇದೇ ಅವರ ಊರು.
ಎಲ್ಲಿಯ ಜನರಿವರು? ಎಳೆ ಹಿಡಿದು ಹುಡುಕುತ್ತ ಹೋದರೆ ದಾರ ಅತ್ತ ಸಾಂಗ್ಲಿ ಸಾತಾರ ದಾಟಿ ದೂರದ ಮಧ್ಯಪ್ರದೇಶದವರೆಗೂ ಸಾಗುತ್ತದೆ. ದೇಶ ಭಾಷೆ ಗೊತ್ತಿಲ್ಲದ ಈ ಜಾಗಕ್ಕೆ ಕಬ್ಬು ಕಡಿಯಲು ಬಂದಿಳಿದ ಈ ಕುಟುಂಬಗಳಿಗೆ ಗೊತ್ತಿರುವುದೊಂದೇ, ದುಡಿತ ದುಡಿತ ದುಡಿತ. . .
ಮಹಾರಾಷ್ಟ್ರ ಕರ್ನಾಟಕಗಳಲ್ಲಿ ಕಬ್ಬು ಬೆಳೆಗಾರರಿಗೆ ನಿಶ್ಚಿಂತೆ. ಲಾರಿ ತಂದು ಕೂಲಿಕಾರರನ್ನು ತಂದು ಫ್ಯಾಕ್ಟರಿಗಳವರು ತಾವೇ ಕಬ್ಬು ಕೊಯ್ದು, ಸುಲಿಸಿ ಒಯ್ಯುತ್ತಾರೆ ಎಂದು. ಆದರೆ ಆ ಫ್ಯಾಕ್ಟರಿಗಳು ಎಲ್ಲಿಂದ ಕೂಲಿಕಾರರನ್ನು ತರುತ್ತಾರೆ, ಹೇಗೆ ತರುತ್ತಾರೆ, ಹೇಗೆ ಅವರನ್ನು ನಡೆಸಿಕೊಳ್ಳುತ್ತಾರೆ ಕಲ್ಪನೆಯೂ ಇಲ್ಲ. ಹೆಚ್ಚಾಗಿ ಮಂತ್ರಿ ಮಹೋದಯರುಗಳ ಒಡೆತನದಲ್ಲಿಯೇ ಇರುವ ಮಹಾರಾಷ್ಟ್ರ ಕರ್ನಾಟಕದ ಈ ಶುಗರ್ ಫ್ಯಾಕ್ಟರಿಗಳು ಅಕ್ರಮ ಗುತ್ತಿಗೆದಾರರ ಮೂಲಕ ಅತೀವ ಬಡತನ ಇರುವಂತಹ ಮಧ್ಯಪ್ರದೇಶದ ಗುಡ್ಡಗಾಡು ಜನರಿಗೆ ಮಳೆಗಾಲವಿನ್ನೂ ಮುಗಿಯುವ ಮೊದಲೇ ಮೂವತ್ತು-ನಲವತ್ತು ಸಾವಿರಗಳ ಆಮಿಷವೊಡ್ಡಿ ಬಲೆ ಹಾಕುತ್ತಾರೆ. ಉದ್ಯೋಗವಿಲ್ಲದೆ ಹಸಿವೆಯಿಂದ ಕಂಗೆಟ್ಟಿರುವ ಬುಡಕಟ್ಟು ಸಮುದಾಯಗಳಿಗೆ ಸಾಲ ಕೊಡುವವನೇ ದೇವರು. ಒಳ್ಳೆಯ ಉದ್ಯೋಗ, ಉತ್ತಮ ವೇತನ, ಉತ್ತಮ ಪರಿಸರ ಎಂದೆಲ್ಲಾ ಹುರಿದುಂಬಿಸಿ ಆ ಮುಗ್ಧರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ ಗುತ್ತಿಗೆದಾರ. ಎಂತೆಂಥವರು ಹೇಗೆ ಹೇಗೆ ದೂರದೂರಿಗೆ ಉದ್ಯೋಗಕ್ಕಾಗಿ ಹೋಗಿರುತ್ತಾರೆ ಎಂಬ ಕಲ್ಪನೆ ಎಲ್ಲರಿಗೂ ಲಾಕ್ಡೌನ್ ಅವಧಿಯಲ್ಲಿ ಬಂದಿರಲಿಕ್ಕೆ ಸಾಕು. ಅಂದಿಗೂ ಇಂದಿಗೂ ಕೂಲಿಕಾರರ ಪರಿಸ್ಥಿತಿ ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಉದ್ಯೋಗ ಭದ್ರತೆ, ಜೀವನ ಭದ್ರತೆ, ಸಾಮಾಜಿಕ ಭದ್ರತೆ, ಆಹಾರ ಭದ್ರತೆ ಎಲ್ಲವೂ ಕಾನೂನಿನ ಪುಸ್ತಕಗಳಲ್ಲಿಯೇ ಅವಿತುಕೊಂಡಿರುವಾಗ ಈ ಜನರ ಬದುಕು ಇನ್ನೂ ಎಪ್ಪತ್ತು ವರ್ಷಗಳಾದರೂ ಕತ್ತಲಲ್ಲಿಯೇ!
ಅಕ್ಟೋಬರ್ದಿಂದ ತಾವು ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡಲು ಬರುತ್ತೇವೆಂದು ಹೇಳಿ ಕೂಲಿಕಾರರು ಸಾಲ ಸ್ವೀಕರಿಸಿದವರು ಹೇಳಿದ ವೇಳೆಗೆ ಹೇಳಿದ ಜಾಗದಲ್ಲಿ ಹಾಜರಾಗುತ್ತಾರೆ. ಬೆಳಗಿನ ಜಾವ 5 ರಿಂದ ಸಂಜೆಯವರೆಗೆ ಕಬ್ಬು ಕಟಾವು, ಆ ನಂತರ ಕತ್ತಲಲ್ಲಿಯೇ ಲಾರಿಗೆ ಹೇರುವ ಕೆಲಸ. ದಿನಕ್ಕೆ ಎರಡು ಜನರ ಕೆಲಸ, ಎರಡು ದಿನದ ಕೆಲಸ ಮಾಡಿದರೂ ಕನಿಷ್ಟ ಕೂಲಿಯ ಹೆಸರಿಲ್ಲ. ಗುತ್ತಿಗೆದಾರನ ಕೃಪಾಕಟಾಕ್ಷವಿದ್ದರೆ ಕೂಲಿ. ಸಂಬಳ ಹೇಳದಿದ್ದರೂ ಆತ ಹೇಳಿದಷ್ಟು ಕೆಲಸ, ಆತ ಸಾಕು ಎಂದೆನ್ನುವವರೆಗೆ ಕೆಲಸ. ಈ ಗುತ್ತಿಗೆದಾರರ ಬಳಿ ಲೈಸೆನ್ಸ್ ಇಲ್ಲ. ಅಂತರರಾಜ್ಯ ಕೂಲಿಕಾರರಿಗೆ ಸಂಬಂಧಿಸಿದ ಕಾನೂನಿನ ಪಾಲನೆ ಇಲ್ಲ. ಕೆಲಸಗಾರರ ನೋಂದಣಿ ಇಲ್ಲ. ಅತ್ಯಾಚಾರದಿಂದ ಹಿಡಿದು ಎಲ್ಲಾ ರೀತಿಯ ದೌರ್ಜನ್ಯ ನಡೆಯುವುದಿಲ್ಲಿ.
ದೌರ್ಜನ್ಯ ಸಹಿಸಲಾರದೆ ಮಹಾರಾಷ್ಟ್ರದ ಜಿರ್ನಿಯಾ ತಾಲೂಕಿನ ಖಾರ್ಗೊನೆಯಿಂದ ಓಡಿ ಹೋದ ಒಂದಷ್ಟು ಕೂಲಿಕಾರರು ತಮ್ಮೂರು ತಲುಪಿ 6 ಹುಡುಗಿಯರ ಮೇಲೆ ಸತತವಾಗಿ ಅತ್ಯಾಚಾರ ನಡೆಯುತ್ತಿದ್ದ ಕತೆಗಳನ್ನು ಹೇಳಿಕೊಂಡಾಗಲೇ ಏನು ನಡೆಯುತ್ತಿದೆ ಎಂಬುದು ಸುತ್ತಲಿನವರಿಗೆ ಅರಿವು. `ನಮ್ಮ ಲೆಕ್ಕ ಪತ್ರ ಮಾಡಿಕೊಡಿ ನಾವು ಹೋಗುತ್ತೇವೆ’ ಎಂದಾಗ ನಾಲ್ವರನ್ನು ನಿರಾಣಿ ಶುಗರ್ಸ್ ಫ್ಯಾಕ್ಟರಿಯಲ್ಲಿ ಲಾಕಪ್ನಲ್ಲಿಡಲಾಯಿತೆಂದು ಈ ಕೂಲಿಕಾರರೇ ಹೇಳುತ್ತಾರೆ. ಮಧ್ಯಪ್ರದೇಶದ ಬರ್ವಾನಿಯ `ಜಾಗೃತ ಆದಿವಾಸಿ ದಲಿತ ಸಂಘಟನೆ’ಗೆ ತಿಳಿಸಿದಾಗ ಅವರು ಅಲ್ಲಿನ ಪೊಲೀಸ್ ಸಹಾಯದಿಂದ ಬೆಳಗಾವಿ ಜಿಲ್ಲಾಡಳಿತಕ್ಕೆ ಸಂಪರ್ಕಿಸಿ ಈ ಕೂಲಿಕಾರರ ಬಿಡುಗಡೆಗೆ ಪ್ರಯತ್ನ ಮಾಡಿದರು. ಬೆಳಗಾವಿ, ಬಾಗಲಕೋಟೆ, ಪುಣೆ, ಸಾತಾರಾ, ಜಿಲ್ಲೆಗಳಲ್ಲಿ ಹರಡಿ ಹೋಗಿರುವ ಕೂಲಿಕಾರರನ್ನು ರಕ್ಷಿಸಲು ಮಧ್ಯಪ್ರದೇಶದ ಜಾಗೃತ ಆದಿವಾಸಿ ಸಂಘಟನೆ ಮತ್ತು ಬೆಳಗಾವಿಯ ಸ್ಥಳೀಯ ಸಂಘಟನೆ, ಪಿಯುಸಿಎಲ್ ಎಲ್ಲವೂ ಸತತ ಪ್ರಯತ್ನ ಮಾಡಿ 250 ಕೂಲಿಕಾರರನ್ನು ಜೀತಮುಕ್ತಗೊಳಿಸಿದ್ದಾರೆ.
ಅವಧಿ ಮೀರಿ ಕೆಲಸ ಮಾಡಿಸುವುದು, ಸಂಬಳ ಕೊಡದೆ ಕೆಲಸ ಮಾಡಿಸುವುದು, ಸಾಲ ಕೊಟ್ಟು ಕನಿಷ್ಟ ಕೂಲಿಗಿಂತಲೂ ಕಡಿಮೆ ಸಂಬಳ ಕೊಡುವುದು ಇವೆಲ್ಲವೂ ಜೀತ (ವಿಮುಕ್ತಿ) ಕಾನೂನಿನ ಪ್ರಕಾರ ಜೀತವೆನಿಸಿಕೊಳ್ಳುತ್ತವೆ. ಬುಡಕಟ್ಟು ಜನರನ್ನು ಒತ್ತಾಯದಿಂದ ದುಡಿಸಿಕೊಳ್ಳುವುದು, ದೌರ್ಜನ್ಯವೆಸಗುವುದು ಎಸ್ಸಿ, ಎಸ್ಟಿ ದೌರ್ಜನ್ಯ (ತಡೆ) ಕಾನೂನಿನಡಿ ಅಪರಾಧವಾಗುತ್ತದೆ. 1979ರ ಅಂತರರಾಜ್ಯ ವಲಸೆ ಕಾನೂನಿನಡಿಯಲ್ಲಿ ಈ ರೀತಿ ಕೆಲಸಗಾರರನ್ನು ಒಯ್ಯುವವ ಲೈಸೆನ್ಸ್ ಇರುವ ಗುತ್ತಿಗೆದಾರನಾಗಿರಬೇಕಲ್ಲದೆ ಆ ಕೂಲಿಕಾರರನ್ನು ಎರಡೂ ರಾಜ್ಯಗಳಲ್ಲಿ ನೋಂದಣಿ ಮಾಡಿಸಿರಬೇಕು. ತಾವು ಎಲ್ಲಿ, ಏನು ಕೆಲಸ ಮಾಡುತ್ತಿದ್ದೇವೆ, ನಿಯಮಿತವಾಗಿ ಕನಿಷ್ಟ ಕೂಲಿಗಿಂತ ಹೆಚ್ಚು ಹಣವನ್ನು ಕೂಲಿಯಾಗಿ ಪಡೆಯುತ್ತಿದ್ದೇವೆ, ಜೀವನ ಸೌಲಭ್ಯಗಳೆಲ್ಲ ಇವೆ ಎಂದು ಹೇಳುವಂಥ ಪಾಸ್ ಬುಕ್ ಒಂದನ್ನು ಕೂಲಿಕಾರರಿಗೆ ಕೊಟ್ಟಿರಬೇಕು. ಇವೊಂದನ್ನೂ ಮಾಡದ ಈ ಗುತ್ತಿಗೆದಾರರು ಮಾನವ ಕಳ್ಳಸಾಗಾಣಿಕೆಯಲ್ಲಿ ನಿರತರಾಗಿರುವಂತೇ ಅಪರಾಧಿಗಳು.
ಜೀತಕ್ಕೊಳಪಟ್ಟ ಕೂಲಿಕಾರರನ್ನು ಬಿಡುಗಡೆಗೊಳಿಸಿ ಸೂಕ್ತ ರಕ್ಷಣೆ ಮತ್ತು ಪುನರ್ವಸತಿ ಒದಗಿಸಬೇಕೆಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ಜಿಲ್ಲಾ ನ್ಯಾಯಾಧೀಶರುಗಳಿಗೆ ಸೂಕ್ತವಾದ ಆದೇಶಗಳನ್ನು ಕೊಟ್ಟಿದೆ. ಆದಾಗ್ಯೂ ಇನ್ನೂವರೆಗೆ ಯಾವುದೇ ನ್ಯಾಯಾಲಯ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಘಾತಕಾರಿ ವಿಚಾರ.
ಮಧ್ಯ ಪ್ರದೇಶದ ಸರಕಾರ ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ಮುಂದಾಳು ಬಿರ್ಸಾ ಅವರ ಜಯಂತಿ ಅಂಗವಾಗಿ 23 ಕೋಟಿ ಖರ್ಚು ಮಾಡಿ ಬುಡಕಟ್ಟು ವೀರರನ್ನು ಸ್ಮರಿಸಿದೆ. ಆದರೆ ಇದೇ ಸರಕಾರ ತನ್ನಲ್ಲಿರುವ ಅಪಾರ ಸಂಖ್ಯೆಯ ಬುಡಕಟ್ಟು ಜನರ ಹಸಿವು, ದೈನೇಸಿ ಸ್ಥಿತಿಯಲ್ಲಿ ಬದಲಾವಣೆ ತರಲು ಏನೂ ಮಾಡುತ್ತಿಲ್ಲ. ಪೊಲೀಸರು ಮತ್ತು ಆಡಳಿತದ ನಿಷ್ಕ್ರಿಯತೆ ಆದಿವಾಸಿಗಳಿಗೆ ಹೊಸದೇನೂ ಅಲ್ಲ. ನರ್ಮದಾ ಹೋರಾಟದ ದಿನಗಳಿಂದಲೂ ನೋಡುತ್ತಲೇ ಬರುತ್ತಿದ್ದೇವೆ ಅದನ್ನು. ಆದರೂ ಎದೆಗುಂದದ ಆದಿವಾಸಿಗಳು ತಮ್ಮ ಸಂಘಟನೆಯ ಮೂಲಕ ಅಕ್ರಮ ಗುತ್ತಿಗೆದಾರರನ್ನು ಜೈಲಿಗಟ್ಟುವ ದಿಶೆಯಲ್ಲಿ ಮುಂದುವರೆಯುತ್ತಿದ್ದಾರೆ.
ಸರಕಾರ ಬೃಹತ್ ಅಣೆಕಟ್ಟು ಕಟ್ಟುತ್ತದೆ. ಆದಿವಾಸಿಗಳ ಜೀವನವನ್ನು ಮುಳುಗಿಸುತ್ತದೆ. ಜಲಾಶಯದಿಂದ ನೀರು ಹರಿಸಿ ಕಬ್ಬು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ. ಮಂತ್ರಿ ಮಹೋದಯರುಗಳ ಸಕ್ಕರೆ ಕಾರ್ಖಾನೆಗಳೇಳುತ್ತವೆ. ಜೋಳ, ಗೋಧಿ, ಭತ್ತ ಬೆಳೆಗಳ ಜಾಗದಲ್ಲಿ ಎದ್ದು ನಿಂತ ಕಬ್ಬು. ಅತ್ತ ಭೂಮಿ ಕಳೆದುಕೊಂಡು, ಪುನರ್ವಸತಿ ಇಲ್ಲದೆಯೇ, ಉದ್ಯೋಗವೂ ಇಲ್ಲದೆಯೇ ಹಸಿವಿನಿಂದ ಕಂಗೆಟ್ಟುಹೋದ ಬುಡಕಟ್ಟು ಜನರು. ಅವರನ್ನು ಕೂಲಿಕಾರರನ್ನಾಗಿ ಬಳಸಿಕೊಳ್ಳಲು ಅದೇ ಫ್ಯಾಕ್ಟರಿಗಳಿಂದ ಅಕ್ರಮ ಗುತ್ತಿಗೆದಾರರು. ವೃತ್ತ ಪೂರ್ಣಗೊಂಡಿತಲ್ಲವೇ?
- ಶಾರದಾ ಗೋಪಾಲ
(ಶಾರದಾ ಮಹಿಳಾಪರ ಕಾಳಜಿಯ ಚಿಂತಕಿ, ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಆಹಾರದ ಹಕ್ಕಿಗಾಗಿ ಆಂದೋಲನ, ಜನಾರೋಗ್ಯದ ಪ್ರಯತ್ನಗಳಲ್ಲಿ ಗಂಭೀರವಾಗಿ ದಶಕಗಳಿಂದ ತೊಡಗಿಸಿಕೊಂಡವರು. ಎಲ್ಲ ಸಮಾಜಮುಖಿ ಚಟುವಟಿಕೆಗಳ ಒಡನಾಡಿ. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.)
ಇದನ್ನೂ ಓದಿ: ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ