Homeಅಂಕಣಗಳುಹಳತು-ವಿವೇಕ; ಮಾಂಗ್ ಮತ್ತು ಮಹಾರರ ನೋವಿನ ಬಗ್ಗೆ

ಹಳತು-ವಿವೇಕ; ಮಾಂಗ್ ಮತ್ತು ಮಹಾರರ ನೋವಿನ ಬಗ್ಗೆ

- Advertisement -
- Advertisement -

ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ನಡೆಸುತ್ತಿದ್ದ ಶಾಲೆಯಲ್ಲಿ ಮುಕ್ತಾ ಸಾಳ್ವೆ ವಿದ್ಯಾರ್ಥಿನಿಯಾಗಿದ್ದರು. ತಮ್ಮ 14ನೇ ವಯಸ್ಸಿನಲ್ಲಿಯೇ ಮಾಂಗ್ ಮತ್ತು ಮಹಾರ್ ಸಮುದಾಯಗಳು ಎದುರಿಸುತ್ತಿದ್ದ ಕಷ್ಟ-ಕಾರ್ಪಣ್ಯಗಳು ಮತ್ತು ಅದನ್ನು ಪರಿಹರಿಸಲು ಇರುವ ಮಾರ್ಗಗಳ ಬಗ್ಗೆ ಪ್ರಬಂಧವೊಂದನ್ನು ಬರೆದರು. ಅವರ ಪ್ರಬಂಧವು ‘ ಜ್ಞಾನೋದಯ’ ಮರಾಠಿ ಪತ್ರಿಕೆಯಯಲ್ಲಿ ಪ್ರಕಟವಾಗಿತ್ತು.

ದಮನ-ದಬ್ಬಾಳಿಕೆಯನ್ನು ಕಂಡುಂಡ 14 ವರ್ಷದ ದಲಿತ ಬಾಲಕಿಯು ಅದನ್ನು ಹೇಗೆ ಗ್ರಹಿಸಿರಬಹುದು? ಆಕೆ ಅದನ್ನು ಹೇಗೆ ಅರ್ಥೈಸಿಕೊಳ್ಳಬಹುದು ಎಂಬ ದೃಷ್ಟಿಕೋನವನ್ನು ಮುಕ್ತಾ ಸಾಳ್ವೆ ನಮಗೆ ಈ ಪ್ರಬಂಧದಲ್ಲಿ ಕಟ್ಟಿಕೊಡುತ್ತಾರೆ. ಸುಮಾರು 169 ವರ್ಷಗಳ ಹಿಂದೆಯೇ ಮರಾಠಿ ಪಾಕ್ಷಿಕ ‘ ಜ್ಞಾನೋದಯ’ಕ್ಕೆ ಬರೆದ ತಮ್ಮ ಪ್ರಬಂಧದಲ್ಲಿ ಮೊಟ್ಟಮೊದಲ ದಲಿತ ಲೇಖಕಿಯಾದ ಮುಕ್ತಾ ಸಾಳ್ವೆಯವರು ದಬ್ಬಾಳಿಕೆಯನ್ನು ಪ್ರಶ್ನಿಸುತ್ತಾ ಅದರ ವಿರುದ್ಧ ಕಿಡಿ ಕಾರಿದ್ದಾರೆ. ‘ಮಾಂಗ್ ಮಹಾರಾಚ್ಯಾ ದುಃಖವಿಸಾಯಿ’ ಎಂಬ ಶೀರ್ಷಿಕೆಯಡಿ ಎರಡು ಕಂತುಗಳಲ್ಲಿ ಈ ಪ್ರಬಂಧ ಪ್ರಕಟವಾಯಿತು. ಮೊದಲ ಕಂತು ಫೆಬ್ರವರಿ 15, 1855ರಂದು ಮತ್ತು ಎರಡನೇ ಕಂತು ಮಾರ್ಚ್ 1, 1855ರಂದು ಪ್ರಕಟವಾಗಿತ್ತು.

_________________________________

ಭಗವಂತನು ಪ್ರಾಣಿಗಳಿಗಿಂತಲೂ ಕೀಳು ಎಂದು ಪರಿಗಣಿಸಲ್ಪಡುವ ನನ್ನಂತಹ ಅಸ್ಪೃಶ್ಯ ಹುಡುಗಿಯೊಬ್ಬಳ ಹೃದಯದಲ್ಲಿ ನನ್ನ ಜನರ- ಮಹಾರ್ ಮತ್ತು ಮಾಂಗರ ನೋವು-ಸಂಕಟಗಳನ್ನು ಇರಿಸಿದ್ದಾನೆ ಎಂಬುದರ ಅರಿವು ನನ್ನನ್ನು ವಿನಮ್ರಳನ್ನಾಗಿಸಿದೆ. ಎಲ್ಲರ ಸೃಷ್ಟಿಕರ್ತನೇ ನನ್ನ ಹೃದಯದಲ್ಲಿ ಇದನ್ನು ಬಿತ್ತಿದ್ದಾನೆ ಮತ್ತು ಅವನನ್ನು ನೆನೆಯತ್ತ ನಾನು ಪಡೆದುಕೊಂಡಿರುವ ಶಕ್ತಿಯೊಂದಿಗೆ ಈ ಪ್ರಬಂಧ ಬರೆಯಲು ಧೈರ್ಯಮಾಡುತ್ತಿದ್ದೇನೆ. ಆ ಸೃಷ್ಟಿಕರ್ತನೇ ಮಾಂಗರನ್ನು, ಮಹಾರರನ್ನು ಮತ್ತು ಬ್ರಾಹ್ಮಣರನ್ನು ಸೃಷ್ಟಿಸಿದವನು. ನಾನಿದನ್ನು ಬರೆಯಲು ಬುದ್ಧಿ ತುಂಬುತ್ತಿರುವವನೂ ಅವನೇ. ನನ್ನ ಶ್ರಮಕ್ಕೆ ಅವನು ಒಳ್ಳೆಯ ಪ್ರತಿಫಲವನ್ನೇ ನೀಡಿ ಆಶೀರ್ವದಿಸುತ್ತಾನೆ.

ನಮ್ಮನ್ನು ದ್ವೇಷಿಸುವ ಮತ್ತು ತಮ್ಮನ್ನು ತಾವೇ ಅತ್ಯಂತ ಶ್ರೇಷ್ಠರೆಂದು ಭಾವಿಸಿರುವ ಹೊಟ್ಟೆಬಾಕರಾದ ಈ ಬ್ರಾಹ್ಮಣರ ವಾದವನ್ನು ವೇದಗಳನ್ನಾಧರಿಸಿ ನಾವೇನಾದರು ನಿರಾಕರಿಸಲು ಪ್ರಯತ್ನಿಸಿದರೆ, ವೇದಗಳು ಅವರದ್ದೇ ಆಸ್ತಿಯೆಂದೂ, ಅದು ಅವರದ್ದೇ ಸ್ವತ್ತು ಎನ್ನುತ್ತಾರೆ. ವೇದಗಳು ಕೇವಲ ಬ್ರಾಹ್ಮಣರಿಗಾಗಿದ್ದರೆ, ನಿಸ್ಸಂಶಯವಾಗಿ ಅವು ನಮಗಲ್ಲ. ವೇದಗಳು ಕೇವಲ ಬ್ರಾಹ್ಮಣರಿಗೆ ಸೇರಿದ್ದಾಗಿದ್ದರೆ, ನಮಗೆ ಆ ಪುಸ್ತಕಗಳು ಲಭ್ಯವಿಲ್ಲ ಎಂಬುದು ಬಹಿರಂಗ ರಹಸ್ಯ. ನಮ್ಮ ಬಳಿ ಪುಸ್ತಕಗಳಿಲ್ಲ- ನಮಗೆ ಯಾವುದೇ ಧರ್ಮಗಳಿಲ್ಲ. ವೇದಗಳು ಬ್ರಾಹ್ಮಣರಿಗೆ ಮಾತ್ರ ಎಂದಾದರೆ, ನಾವದನ್ನು ಪಾಲಿಸಬೇಕಿಲ್ಲ. ಬ್ರಾಹ್ಮಣರು ಹೇಳುವಂತೆ ವೇದಗಳನ್ನು ಕಣ್ಣೆತ್ತಿ ನೋಡುವುದೇ ಘೋರ ಪಾಪವಾದರೆ, ಅವುಗಳನ್ನು ಅನುಸರಿಸುವುದು ಮೂರ್ಖತನದ ಪರಮಾವಧಿಯಲ್ಲವೇ? ಮುಸ್ಲಿಮರು ತಮ್ಮ ಕುರಾನಿನ ಪ್ರಕಾರ ತಮ್ಮ ಜೀವನವನ್ನು ನಡೆಸುತ್ತಾರೆ. ಇಂಗ್ಲಿಷರು ಬೈಬಲನ್ನು ಅನುಸರಿಸುತ್ತಾರೆ. ಬ್ರಾಹ್ಮಣರಿಗೆ ಅವರದ್ದೇ ಆದ ವೇದಗಳಿವೆ. ಅವರಿಗೆ ತಪ್ಪೋ-ಒಪ್ಪೋ ಆದ ಸ್ವಂತ ಧರ್ಮ ಇರುವುದಕ್ಕೆ ಅವರೆಲ್ಲರೂ ಅದನ್ನು ಆಚರಿಸುತ್ತಾರೆ. ಆದ್ದರಿಂದ, ಯಾವುದೇ ಧರ್ಮವಿಲ್ಲದೆ ನಮಗಿಂತ ಅವರು ಸ್ವಲ್ಪ ಹೆಚ್ಚೇ ಸಂತೋಷವಾಗಿದ್ದಾರೆ. ಓ ದೇವರೇ, ಹೇಳು ನಮ್ಮ ಧರ್ಮ ಯಾವುದು? ಓ ದೇವರೇ, ನಿನ್ನ ನಿಜ ಧರ್ಮವ ನಮಗೆ ಬೋಧಿಸು. ನಾವೆಲ್ಲರೂ ಅದರಂತೆಯೇ ನಮ್ಮ ಜೀವನ ನಡೆಸುತ್ತೇವೆ. ಯಾವ ಧರ್ಮದಿಂದ ಕೆಲವೇ ಕೆಲವರು ಸವಲತ್ತುಗಳನ್ನು ಪಡೆದು ಉಳಿದವರು ವಂಚಿತರಾಗುವರೋ ಆ ಧರ್ಮಗಳು ನಾಶವಾಗಲಿ ಮತ್ತು ಅಂತಹ [ತಾರತಮ್ಯದ] ಧರ್ಮದ ಬಗ್ಗೆ ಹೆಮ್ಮೆಯು ನಮ್ಮ ಮನಸ್ಸಿನಲ್ಲಿ ಎಂದಿಗೂ ಬೇರೂರದಿರಲಿ.

ಬಡ ಮಾಂಗರು ಮತ್ತು ಮಹಾರರಾದ ನಮ್ಮನ್ನು ಈ ಜನರು ನಮ್ಮ ಸ್ವಂತ ನೆಲದಿಂದಲೇ ಒಕ್ಕಲೆಬ್ಬಿಸಿ, ದೊಡ್ಡ ಕಟ್ಟಡಗಳನ್ನು ನಿರ್ಮಿಸಲು ಆಕ್ರಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾಂಗರು ಮತ್ತು ಮಹಾರರು ಕೆಂಪುಸೀಸ ಮಿಶ್ರಿತ ಎಣ್ಣೆಯನ್ನು ಕುಡಿಯುವಂತೆ ಮಾಡಿ, ನಮ್ಮ ಜನರನ್ನು ಶವಗಳ ಮೇಲೆ ಭವ್ಯಕಟ್ಟಡಗಳ ನಿರ್ಮಿಸಿ, ನಮ್ಮ ಬಡಜನರ ಇಡೀ ಪೀಳಿಗೆ-ಪೀಳಿಗೆಯನ್ನೇ ಅಳಿಸಿಹಾಕಿದ್ದಾರೆ. ಬ್ರಾಹ್ಮಣರು ನಮ್ಮನ್ನು ಕೀಳುಮಟ್ಟಕ್ಕಿಳಿಸಿದ್ದಾರೆಂದರೆ; ಅವರು ನಮ್ಮಂತಹ ಜನರನ್ನು ಹಸು-ಎಮ್ಮೆಗಳಿಗಿಂತಲೂ ಕಡೆಯಾಗಿ ಕಾಣುತ್ತಾರೆ. ಬಾಜಿರಾವ್ ಪೇಶ್ವೆಯ ಆಳ್ವಿಕೆಯಲ್ಲಿ ಅವರು ನಮ್ಮನ್ನು ಕತ್ತೆಗಳಿಗಿಂತಲೂ ಕೀಳಾಗಿ ಕಾಣಲಿಲ್ಲವೇ? ನೀವು ಕತ್ತೆಯೊಂದನ್ನು ಬಡಿದರು ಕೂಡ ಅದರ ಯಜಮಾನ ಸಿಡಿದೇಳುತ್ತಾನೆ. ಆದರೆ, ಮಹಾರರು ಮತ್ತು ಮಾಂಗರನ್ನು ದಿನನಿತ್ಯ ಥಳಿಸಿದರೂ ಯಾರು ತಾನೇ ಕೇಳುತ್ತಿದ್ದರು? ಬಾಜಿರಾವನ ಆಳ್ವಿಕೆಯಲ್ಲಿ ವ್ಯಾಯಾಮಶಾಲೆಯ ಮುಂದೆ ಮಾಂಗ್ ಅಥವಾ ಮಹಾರರು ಯಾರಾದರೂ ಹಾದುಹೋದರೆ, ಅಂಥವರ ತಲೆ ಕತ್ತರಿಸಿ, ತಮ್ಮ ಕತ್ತಿಗಳನ್ನೇ ಬ್ಯಾಟುಗಳನ್ನಾಗಿಸಿ ಅವರ ತಲೆಯನ್ನೇ ಚೆಂಡನ್ನಾಗಿಸಿ ಮೈದಾನದಲ್ಲಿ “ಬ್ಯಾಟ್ ಆಂಡ್ ಬಾಲ್” ಆಡುತ್ತಿದ್ದರು. ಅವರ ಮನೆಬಾಗಿಲ ಮುಂದೆ ಹಾದು ಹೋಗುವುದಕ್ಕೇ ಶಿಕ್ಷೆ ಅನುಭವಿಸಬೇಕಿದ್ದಾಗ, ಶಿಕ್ಷಣ ಪಡೆಯುವ ಅಥವಾ ಓದು-ಬರಹ ಕಲಿಯುವ ಸ್ವಾತಂತ್ರ್ಯವಾದರೂ ಎಲ್ಲಿತ್ತು? ಮಾಂಗ್ ಅಥವಾ ಮಹಾರರು ಯಾರಾದರೂ ಓದು-ಬರಹ ಕಲಿತು, ಆ ವಿಷಯವೇನಾದರೂ ಬಾಜಿರಾವನಿಗೆ ತಿಳಿದರೆ, “ಮಾಂಗ್ ಅಥವಾ ಮಹಾರನೊಬ್ಬ ಶಿಕ್ಷಿತನಾದನೆಂದರೆ ಬ್ರಾಹ್ಮಣನ ಕೆಲಸವನ್ನು ಕಸಿದುಕೊಳ್ಳುವುದಕ್ಕೆ ಸಮ” ಎನ್ನುತ್ತಿದ್ದ. “ಶಿಕ್ಷಿತರಾಗಲು ಅವರಿಗೆಷ್ಟು ಧೈರ್ಯ? ಬ್ರಾಹ್ಮಣರು ತಮ್ಮ ಕೆಲಸಗಳನ್ನೆಲ್ಲಾ ಈ ಅಸ್ಪೃಶ್ಯರಿಗೆ ವಹಿಸಿ, ಅವರು ಹಿಡಿಯುವ ಕ್ಷೌರದ ಪೆಟ್ಟಿಗಗಳ ಹಿಡಿದು ವಿಧವೆಯರ ತಲೆ ಬೋಳಿಸಿಕೊಂಡು ತಿರುಗುತ್ತಾರೆಂದು ಈ ಅಸ್ಪೃಶ್ಯರು ತಿಳಿದಿದ್ದಾರೆಯೇ?” ಎಂದು ನಿಂದಿಸಿ ಅವರನ್ನು ಶಿಕ್ಷಿಸುತ್ತಿದ್ದ.

ಇದನ್ನೂ ಓದಿ: ಅಸ್ಪೃಶ್ಯ, ಅಸಹಾಯಕ ಲೋಕಕ್ಕೆ ಅಕ್ಷರ ಕಲಿಸಿದ ಸಾವಿತ್ರಮ್ಮನನ್ನೇ ಪಠ್ಯಪುಸ್ತಕದಿಂದ ಹೊರಗಿಟ್ಟ ಕಾಲದಲ್ಲಿ ಒಂದು ಸ್ಮರಣೆ

ಎರಡನೆಯದಾಗಿ, ನಮಗೆ ಕಲಿಕೆಯನ್ನು ನಿಷೇಧಿಸಿದ ಮಾತ್ರಕ್ಕೆ ಈ ಬ್ರಾಹ್ಮಣರು ತೃಪ್ತರಾದರೆ? ಖಂಡಿತ ಇಲ್ಲ. ಕಾಶಿಗೆ ಹೋದ ಬಾಜಿರಾವನು ಅವಮಾನಕರ ರೀತಿಯಲ್ಲಿ ಸಾವನ್ನಪ್ಪಿದ. ಆದರೆ, ಮಾಂಗರಷ್ಟೇ ಅಸ್ಪೃಶ್ಯರಾದ ಮಹಾರರು ಕೂಡ ಇಲ್ಲಿ ಮಾಂಗರೊಂದಿಗಿನ ಒಡನಾಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬ್ರಾಹ್ಮಣ್ಯದ ಕೆಲ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಅವರು ತಮ್ಮನ್ನು ಮಾಂಗರಿಗಿಂತ ಶ್ರೇಷ್ಠರೆಂದು ಪರಿಗಣಿಸುತ್ತಾರೆ- ಮಾಂಗರ ನೆರಳು ಅವರ ಮೇಲೆ ಬಿದ್ದರೆ ಅವರೂ ಕಲುಷಿತರಾಗುತ್ತಾರೆ! ಅಸ್ಪೃಶ್ಯರು ಎಂಬ ಹಣೆಪಟ್ಟಿ ಹೊತ್ತ ಕಾರಣಕ್ಕೆ ನಾವು ಇಷ್ಟೆಲ್ಲಾ ನೋವು ಅನುಭವಿಸುತ್ತಿರುವಾಗ, ಮಡಿಬಟ್ಟೆ ಧರಿಸಿ ತಮ್ಮ ಶ್ರೇಷ್ಠತೆಯನ್ನು ಸಾರುತ್ತಾ ತಿರುಗಾಡುವ ಕಲ್ಲುಹೃದಯದ ಬ್ರಾಹ್ಮಣರು ನಮ್ಮ ಬಗ್ಗೆ ಎಂದಾದರೂ ಕರುಣೆ ತೋರುವರೆ? ಅಸ್ಪೃಶ್ಯರೆಂಬ ಕಾರಣಕ್ಕೆ ನಮಗೆ ಯಾರೂ ಉದ್ಯೋಗ ಕೊಡುವುದಿಲ್ಲ. ಕೆಲಸವಿಲ್ಲ ಎಂದರೆ ಹಣವಿಲ್ಲ. ಬಡತನವನ್ನು ನಾವು ಸಹಿಸಿಕೊಳ್ಳಬೇಕಾಗಿದೆ. ಓ ಕಲಿತ ಪಂಡಿತರೇ, ನಿಮ್ಮ ಸ್ವಾರ್ಥಿ ಪುರೋಹಿತಶಾಹಿಯನ್ನು ಸಾಕುಮಾಡಿ. ನಿಮ್ಮ ಟೊಳ್ಳು ಉಪದೇಶಗಳ ನಿಲ್ಲಿಸಿ ಮತ್ತು ನಾನು ಹೇಳುವುದನ್ನು ಆಲಿಸಿ. ನಮ್ಮ ಹೆಂಗಸರು ಮಕ್ಕಳ ಹೆರುವಾಗ ಅವರ ನೆತ್ತಿಯ ಮೇಲೆ ಒಂದು ಸೂರು ಕೂಡ ಇರುವುದಿಲ್ಲ. ಮಳೆಯಲ್ಲಿ ಚಳಿಯಲ್ಲಿ ಅವರು ಹೇಗೆಲ್ಲಾ ನರಳುತ್ತಾರೆ! ನಿಮ್ಮ ಸ್ವಂತ ಅನುಭವಗಳಿಂದಲೇ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಹೆರಿಗೆಯ ಸಮಯದಲ್ಲಿ ಅವರಿಗೇನಾದರೂ ಕಾಯಿಲೆಗಳು ಬಂತೆಂದರೆ, ವೈದ್ಯರಿಗೆ ಕೊಡಲು ಅಥವಾ ಔಷಧಿಗಳ ಖರ್ಚಿಗೆ ಹಣವೆಲ್ಲಿಂದ ಬರಬೇಕು? ಇಂತಹವರಿಗೆ ಉಚಿತವಾಗಿ ಚಿಕಿತ್ಸೆ ಕೊಡುವಷ್ಟು ಮಾನವೀಯತೆ ಹೊಂದಿರುವ ವೈದ್ಯನೊಬ್ಬ ನಿಮ್ಮ ನಡುವೆ ಇದ್ದಾನೆಯೇ?

ಬ್ರಾಹ್ಮಣರ ಮಕ್ಕಳು ತಮ್ಮ ಮೇಲೆ ಕಲ್ಲು ತೂರಿ ಎಷ್ಟೇ ಗಾಯಗೊಳಿಸಿದರೂ ಸಹ ಮಾಂಗ್ ಮತ್ತು ಮಹಾರರ ಮಕ್ಕಳು ದೂರು ನೀಡುವ ಧೈರ್ಯ ಮಾಡುವುದಿಲ್ಲ. ಕೊನೆಗೆ ತಂಗಳನ್ನು ಬೇಡಲು ಬ್ರಾಹ್ಮಣರ ಮನೆಗಳಿಗೇ ಹೋಗಬೇಕು ಎಂದು ತಿಳಿದಿರುವ ಅವರು ಮೌನವಾಗೇ ನರಳುತ್ತಾರೆ. ಅಯ್ಯೋ! ದೇವರೆ! ಇದೆಂತಾ ಸಂಕಟ! ಈ ಅನ್ಯಾಯಗಳ ಬಗ್ಗೆ ಹೆಚ್ಚು ಬರೆಯಲು ಹೋದರೆ ನಾನು ಕಣ್ಣೀರಲ್ಲೇ ಮುಳುಗುವೆ. ಇಂತಹ ದಬ್ಬಾಳಿಕೆಗಳಿಂದಾಗಿ, ಕರುಣಾಮಯಿಯಾದ ಆ ದೇವರು ನಮಗಾಗಿ ದಯಾಮಯಿ ಬ್ರಿಟಿಷ್ ಸರ್ಕಾರವನ್ನು ದಯಪಾಲಿಸಿದ್ದಾನೆ, ಈ ದಯಾಮಯಿ ಬ್ರಿಟಿಷ್ ಸರ್ಕಾರದಲ್ಲಿ ನಮ್ಮ ನೋವುಗಳು ಹೇಗೆ ಕಡಿಮೆಯಾಗಿದೆ ಎಂದು ನೋಡೋಣ.

ಈ ಹಿಂದೆ ಗೋಖಲೆ, ಆಪಟೆ, ತ್ರಿಮ್ಕಾಜಿ, ಅಂಧಾಳ, ಪನ್ಸಾರ, ಕಾಳೆ, ಬೆಹ್ರೆ, ಇತ್ಯಾದಿ (ಎಲ್ಲವೂ ಬ್ರಾಹ್ಮಣ ಉಪನಾಮಗಳೇ) ತಮ್ಮ ಮನೆಯಲ್ಲಿದ್ದ ಇಲಿಗಳನ್ನು ಕೊಂದು ಶೌರ್ಯತ್ವ ಪ್ರದರ್ಶಿಸಿದವರು ವಿನಾಕಾರಣ, ತಮಗನಿಸಿದಂತೆ ನಮ್ಮನ್ನು ಹಿಂಸಿಸಿದರು. ಗರ್ಭಿಣಿಯರನ್ನು ಸಹ ಅವರು ಬಿಡುತ್ತಿರಲಿಲ್ಲ. ಇವೆಲ್ಲ ಈಗ ನಿಂತಿದೆ. ಪುಣೆಯ ಪೇಶ್ವೆಗಳ ಆಳ್ವಿಕೆಯಲ್ಲಿ ಮಹಾರರು ಮತ್ತು ಮಾಂಗರಿಗೆ ನೀಡಲಾಗುತ್ತಿದ್ದ ಕಿರುಕುಳಗಳು ಚಿತ್ರಹಿಂಸೆಗಳು ನಿಂತಿದೆ. ಈಗ, ಕೋಟೆ- ಮಹಲುಗಳ ಅಡಿಪಾಯಕ್ಕೆ ನಡೆಯುತ್ತಿದ್ದ ನರಬಲಿಗಳು ನಿಂತಿದೆ- ಈಗ ಯಾರೂ ನಮ್ಮನ್ನ ಜೀವಂತವಾಗಿ ಹೂಳುವುದಿಲ್ಲ. ಈಗ, ನಮ್ಮ ಜನಸಂಖ್ಯೆಯು ಬೆಳೆಯುತ್ತಿದೆ. ಹಿಂದೆ, ಮಹಾರ್ ಅಥವಾ ಮಾಂಗರು ಯಾರಾದರೂ ಒಳ್ಳಯ ಬಟ್ಟೆ ತೊಟ್ಟುಬಿಟ್ಟರೆ ಸಾಕು ಬ್ರಾಹ್ಮಣರು ಮಾತ್ರ ಅಂತಹ ಬಟ್ಟೆಗಳ ಧರಿಸಬೇಕು ಎನ್ನುತ್ತಿದ್ದರು. ನಾವು ಒಳ್ಳೆ ಬಟ್ಟೆ ತೊಟ್ಟಿರುವುದು ಕಂಡರೆ ಸಾಕು ನಾವದನ್ನು ಕದ್ದಿದ್ದೇವೆ ಎಂದು ಆರೋಪಿಸಲಾಗುತ್ತಿತ್ತು. ಅಸ್ಪೃಶ್ಯರ ಮೈಯ ಸುತ್ತ ಬಟ್ಟೆಯಿದ್ದರೆ ಸಾಕು, ಅವರ ಧರ್ಮವು ಕಲುಷಿತವಾಗುವ ಅಪಾಯವಿತ್ತು; ಅದಕ್ಕೆ ಅಂತಹವರನ್ನು ಮರಕ್ಕೆ ಕಟ್ಟಿ ಶಿಕ್ಷಿಸುತ್ತಿದ್ದರು. ಆದರೆ, ಬ್ರಿಟಿಷರ ಆಳ್ವಿಕೆಯಲ್ಲಿ, ಹಣವಿರುವ ಯಾರಾದರೂ ಬಟ್ಟೆ ಖರೀದಿಸಿ ಅದನ್ನು ತೊಡಬಹುದು. ಈ ಹಿಂದೆ, ಮೇಲ್ಜಾತಿಗಳ ವಿರೋಧಿಸುವ ತಪ್ಪೆಸಗಿದರೆ ಅಸ್ಪೃಶ್ಯರ ಶಿರಚ್ಛೇದವಾಗುತ್ತಿತ್ತು- ಈಗ ಅದು ನಿಂತಿದೆ. ಮಿತಿಮೀರಿದ ಮತ್ತು ಶೋಷಿಸುವ ತೆರಿಗೆಗಳು ನಿಂತಿವೆ. ಕೆಲವೆಡೆ ಅಸ್ಪೃಶ್ಯತೆಯ ಆಚರಣೆ ನಿಂತಿವೆ. ಆಟದ ಮೈದಾನದಲ್ಲಿ ನಡೆಯುತ್ತಿದ್ದ ಕೊಲೆಗಳು ನಿಂತಿವೆ. ನಾವೀಗೆ ಸಂತೆ-ಮಾರುಕಟ್ಟೆಗೆಲ್ಲಾ ಭೇಟಿ ನೀಡಬಹುದು.

ನಿಷ್ಪಕ್ಷಪಾತ ಬ್ರಿಟಿಷರ ಆಳ್ವಿಕೆಯಲ್ಲಿ ಇಂತಹ ಹಲವು ವಿದ್ಯಮಾನಗಳು ನಡೆದಿವೆ. ನಾನಿದನ್ನು ಬರೆಯುವ ಹೊತ್ತಿಗೆ, ಮೇಲೆ ತಿಳಿಸಿರುವಂತೆ ನಮ್ಮನ್ನು ಕಸಕ್ಕಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಿದ್ದ ಬ್ರಾಹ್ಮಣರೀಗ ನಮ್ಮನ್ನು ಬಂಧನಗಳಿಂದ ಮುಕ್ತಗೊಳಿಸಲು ಬಯಸುತ್ತಿದ್ದಾರೆ ಎಂಬುದು ಆಶ್ಚರ್ಯವಾಗುತ್ತಿದೆ. ಹಾಗೆಂದಮಾತ್ರಕ್ಕೆ ಎಲ್ಲ ಬ್ರಾಹ್ಮಣರೂ ಅಲ್ಲ. ಸೈತಾನನ ಪ್ರಭಾವಕ್ಕೊಳಗಾದವರು ಮೊದಲಿನಂತೆಯೇ ನಮ್ಮನ್ನು ದ್ವೇಷಿಸುತ್ತಾರೆ. ಅವರುಗಳು ನಮ್ಮ ವಿಮೋಚನೆಗಾಗಿ ಶ್ರಮಿಸುತ್ತಿರುವ ಬ್ರಾಹ್ಮಣರನ್ನು ಗುರಿಯಾಗಿಸಿ ಬಹಿಷ್ಕರಿಸುತ್ತಾರೆ. ಕೆಲವು ಉದಾತ್ತರು ಮಹಾರರು ಮತ್ತು ಮಾಂಗರಿಗಾಗಿ ಶಾಲೆಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಅಂತಹ ಶಾಲೆಗಳನ್ನು ಕರುಣಾಮಯಿ ಬ್ರಿಟಿಷ್ ಸರ್ಕಾರವು ಬೆಂಬಲಿಸುತ್ತಿದೆ. ಓ ಮಹಾರರೇ ಮತ್ತು ಮಾಂಗರೇ, ನೀವು ಬಡವರು ಮತ್ತು ನೀವು ರೋಗಕ್ಕೊಳಗಾಗಿದ್ದೀರಿ. ನಿಮಗೆ ಚಿಕಿತ್ಸೆ ನೀಡಿ ನಿಮ್ಮನ್ನು ಗುಣಪಡಿಸುವುದು ಜ್ಞಾನವೆಂಬ ಔಷಧಿ ಮಾತ್ರ. ಇದು ನಿಮ್ಮನ್ನು ಮೂಢನಂಬಿಕೆಗಳಿಂದ ದೂರಾಗಿಸುತ್ತದೆ. ನೀವು ನೀತಿವಂತರೂ ಪ್ರಾಮಾಣಿಕರೂ ಆಗುವಿರಿ. ಇದರಿಂದ ನಿಮ್ಮ ಶೋಷಣೆ ನಿಲ್ಲುತ್ತದೆ. ನಿಮ್ಮನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಜನ ಇನ್ನು ಮುಂದೆ ನಿಮ್ಮನ್ನು ಹಾಗೆ ನಡೆಸಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಆದ್ದರಿಂದ, ದಯವಿಟ್ಟು ಕಷ್ಟಪಟ್ಟು ಓದಿ. ಶಿಕ್ಷಣ ಪಡೆದು ಒಳ್ಳೆಯ ಮನುಷ್ಯರಾಗಿ. ಆದರೆ ಇದನ್ನು ನಾನು ಸಾಬೀತುಪಡಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಉದಾಹರಣೆಗೆ, ಉತ್ತಮ ಶಿಕ್ಷಣ ಪಡೆದವರೇ ಕೆಲವೊಮ್ಮೆ ಕೆಟ್ಟ ಕೆಲಸಗಳ ಮಾಡಿ ನಮ್ಮನ್ನು ದಂಗುಬಡಿಸುತ್ತಾರೆ

ಕನ್ನಡಕ್ಕೆ: ಶಶಾಂಕ್ ಎಸ್.ಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...