Homeಮುಖಪುಟಟ್ರಯಾಂಗಲ್ ಆಫ್ ಸ್ಯಾಡ್‌ನೆಸ್: ಕ್ಯಾಪಿಟಲಿಸಂನ ಅಮಾನುಷತೆಯ ಅನಾವರಣ

ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್: ಕ್ಯಾಪಿಟಲಿಸಂನ ಅಮಾನುಷತೆಯ ಅನಾವರಣ

- Advertisement -
- Advertisement -

ಮೈಕೆಲ್ ಜೆ ಸ್ಯಾಂಡಲ್ ಎಂಬ ಪೊಲಿಟಿಕಲ್ ಫಿಲಾಸಫ್‌ರ್, ಕ್ಯಾಲಿಪೋರ್ನಿಯಾದ ಜೈಲುಗಳಲ್ಲಿ ಅಪರಾಧಿಗಳು ಹಣ ಪಾವತಿಸಿದರೆ ಅವರಿಗೆ ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆ, ಮಿನ್ನೆಪೊಲಿಸ್ ಮತ್ತು ಇತರೆ ನಗರಗಳಲ್ಲಿ ಹೆಚ್ಚು ಟೋಲ್ ಪಾವತಿಸುವ ಸಿರಿವಂತರಿಗೆ ಟ್ರಾಫಿಕ್ ಕಡಿಮೆಯಿರುವ ಪ್ರತ್ಯೇಕ ರಸ್ತೆಯನ್ನು ಕಲ್ಪಿಸುವುದು, ಪಶ್ಚಿಮದ ದಂಪತಿಗಳು ತಮ್ಮ ಮಗುವನ್ನು ಹೆರಲು ಇಂಡಿಯಾದಂತಹ ದೇಶಗಳಲ್ಲಿ ಬಾಡಿಗೆ ತಾಯಂದಿರಿಗೆ ಎಡತಾಗುವುದು- ಇಂತಹ ಇನ್ನೂ ಹಲವು ಸಂಗತಿಗಳನ್ನು ತಮ್ಮ ‘What Money Can’t Buy’ ಪುಸ್ತಕದಲ್ಲಿ ಚರ್ಚಿಸುತ್ತಾರೆ. ಮಾರ್ಟಿನ್ ಸ್ಕಾಸೆಸೆ ನಿರ್ದೇಶನದ Wolf Of Wall Street ಸಿನಿಮಾದಲ್ಲಿ ನ್ಯೂಯಾರ್ಕ್ ನಗರದ ಸ್ಟಾಕ್ ಬ್ರೋಕರ್ ಒಬ್ಬ ಕೇವಲ ತನ್ನ ಮಾತನ್ನೆ ಬಂಡವಾಳ ಮಾಡಿಕೊಂಡು (ಮಾರ್ಕೆಟಿಂಗ್ ಸ್ಕಿಲ್) ವಂಚನೆ ಮತ್ತು ಭ್ರಷ್ಟ ಮಾರ್ಗದಿಂದ ಅಸಾಧ್ಯವಾದ ಸಂಪತ್ತನ್ನು ಗಳಿಸುತ್ತಾನೆ; ಹೇಸಿಗೆ ಹುಟ್ಟಿಸುವ ಅವನ ಐಷಾರಾಮಿ ಜೀವನಶೈಲಿಯನ್ನು ವ್ಯಂಗ್ಯ ಮಾಡುವುದು ಮಾತ್ರವಲ್ಲದೆ ವಾಕರಿಕೆ ಬರುವಷ್ಟು ತೀವ್ರ ಚಿತ್ರಣವನ್ನು ಸ್ಕಾಸೆಸಿ ಮೂಡಿಸುತ್ತಾರೆ.

**

ಮೇಲೆ ಉದಾಹರಿಸಿದ ಸಂಗತಿಗಳು ಬಂಡವಾಳಿಶಾಹಿ ವ್ಯವಸ್ಥೆಯ ಕೇವಲ ಸಣ್ಣಸಣ್ಣ ಮತ್ತು ಬಿಡಿ ಪರಿಣಾಮಗಳಷ್ಟೆ. ಇವುಗಳ ಹಿನ್ನೆಲೆಯಲ್ಲಿ ಅನುಕೂಲ ಮತ್ತು ಪ್ರತಿಕೂಲಗಳ ಎರಡರ ಪರವಾಗಿಯೂ ಚರ್ಚೆ ಮಾಡಬಹುದಾದ ಸಾಧ್ಯತೆ ಇದೆ. ಪ್ರಸ್ತುತ ಜಗತ್ತಿನ ಬಹಳ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಅದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಅಪೋಶನ ತೆಗೆದುಕೊಳ್ಳುತ್ತಿರುವ ಸರ್ವಾಧಿಕಾರ ಮನಸ್ಥಿತಿಯ ಪಕ್ಷಗಳು ಮತ್ತು ಅದರ ನಾಯಕರು ಆಳುತ್ತಿದ್ದಾರೆ. ಇದಕ್ಕೆ ಬಂಡವಾಳಶಾಹಿಯ ಕೊಡುಗೆ ನಿಚ್ಚಳವಾಗಿದೆ.

ನಿರ್ದೇಶಕ ರುಬೆನ್ ಆಸ್ಟ್‌ಲಂಡ್ ತಮ್ಮ ’ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್’ ಸಿನಿಮಾದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಮತ್ತದರ ಅಸಹ್ಯಕರ ಪರಿಣಾಮಗಳನ್ನು, ಅದರ ಪ್ರಧಾನ ಫಲಾನುಭವಿಗಳ ದಾರ್ಷ್ಟ್ಯ, ಅಮಾನವೀಯತೆ, ಹುಚ್ಚಾಟಗಳ ಮೂಲಕವೇ ಚಿತ್ರಿಸುತ್ತಾರೆ; ಈ ಮುಖಾಂತರ ತಾತ್ವಿಕ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಬಿಡಿಬಿಡಿ ತುಣುಕುಗಳನ್ನು ಪೋಣಿಸಿ ಅತಿ ವಿಡಂಬನಾತ್ಮಕವಾಗಿ ನಿರೂಪಿಸುತ್ತಾರೆ.

ರುಬೆನ್ ಆಸ್ಟ್‌ಲಂಡ್

ಸಿನಿಮಾವನ್ನು ನಿರ್ದಿಷ್ಟವಾಗಿ ಮೂರು ಅಂಕಗಳಲ್ಲಿ ಕಟ್ಟಲಾಗಿದೆ. ಮೊದಲ ಅಂಕದಲ್ಲಿ, ಖಾಸಗಿ ಸಂಬಂಧಗಳಲ್ಲಿ ಹಣ ಹೇಗೆ ಪ್ರಧಾನವಾದ ಸಂಗತಿಯಾಗಿ ನುಸುಳಿ, ಸಂಬಂಧಗಳನ್ನು ಸಂಕೀರ್ಣಗೊಳಿಸಿ, ಅಪನಂಬಿಕೆ ಮತ್ತು ಅನೈತಿಕ ಅನುಸಂಧಾನದ ಅನಿವಾರ್ಯತೆಗೆ ದೂಡುತ್ತದೆ ಎಂಬ ವಿಡಂಬನಾತ್ಮಕ ಚಿತ್ರಣವಿದೆ. ಎರಡನೇ ಅಂಕದಲ್ಲಿ ಕ್ರೋನಿ ಕ್ಯಾಪಿಟಲಿಸ್ಟ್‌ಗಳು ಮತ್ತು ಅದರ ಫಲಾನುಭವಿಗಳಾದ ಜಗತ್ತಿನ ಅತಿ ಶ್ರೀಮಂತರು ವಿಹಾರಕ್ಕೆಂದು ಪ್ರಯಾಣಿಸುವ ನೌಕೆಯೊಂದರಲ್ಲಿ ಹಣದ ಮೂಲವಾಗಿ ಹುಟ್ಟುವ ಸಂಘರ್ಷವಿದೆ; ಅವರಲ್ಲಿರುವ ಅಮಾನವೀಯತೆ, ದಾರ್ಷ್ಟ್ಯ ಮತ್ತು ಹುಚ್ಚಾಟಗಳ ಚಿತ್ರಣದ ಜೊತೆ, ರಷ್ಯನ್ ಕ್ಯಾಪಿಟಲಿಸ್ಟ್ ಪ್ರಯಾಣಿಕ ಮತ್ತು ನೌಕೆಯ ಕ್ಯಾಪ್ಟನ್ (ಸೋಷಿಯಲಿಸ್ಟ್) ಇವರಿಬ್ಬರ ನಡುವಿನ ಸಂವಾದದ ಸಂಭಾಷಣೆಯ ನಿರೂಪಣೆ ಬಹಳ ಪ್ರಮುಖವಾದದ್ದು. ಮೂರನೇ ಅಂಕದಲ್ಲಿ ದಾಳಿಗೆ ಒಳಗಾದ ನೌಕೆಯಿಂದ ಬದುಕುಳಿದ ಕೆಲವರು ಅಜ್ಞಾತಸ್ಥಳಕ್ಕೆ ಬಂದು ಸೇರುತ್ತಾರೆ; ಯಾವುದೇ ವ್ಯವಸ್ಥೆಯ ಚೌಕಟ್ಟಿಗೆ ಒಳಪಡದ ಆ ಅಜ್ಞಾತ ಸ್ಥಳದಲ್ಲಿ ಬದುಕುಳಿಯಲು ಹೊಸ ವ್ಯವಸ್ಥೆ ಮತ್ತು ಅಧಿಕಾರ ರೂಪುಗೊಳ್ಳುವುದನ್ನು ಮತ್ತು ಅಧಿಕಾರ ಕೇಂದ್ರ ಹೇಗೆ ತನ್ನ ಸ್ವಹಿತಾಶಕ್ತಿಗೆ ಮಾತ್ರ ಶ್ರಮಿಸುತ್ತದೆ ಎಂಬುದನ್ನು ರುಬೆನ್ ಚಿತ್ರಿಸುತ್ತಾರೆ.

ಮೊದಲ ಅಂಕ: ಕಾರ್ಲ್ ಮತ್ತು ಯಾಯ ಇಬ್ಬರು ರೂಪದರ್ಶಿಗಳು ಮತ್ತು ಸಂಗಾತಿಗಳು. ಹೋಟೆಲ್‌ನಲ್ಲಿ ಊಟದ ಬಿಲ್ ಪಾವತಿಸುವ ವಿಚಾರಕ್ಕೆ ಇಬ್ಬರಿಗೂ ಜಗಳವಾಗುತ್ತದೆ. ಕಾರ್ಲ್, ಯಾಯಳನ್ನು ’ಬಿಲ್ ನೋಡಿಯೂ ಕಾಣದ ಹಾಗೆ ಸುಮ್ಮನಾಗುತ್ತೀಯ; ಕಳೆದ ಬಾರಿ ನಾನು ಊಟದ ಬಿಲ್ ನೀಡಿದಾಗ ಮುಂದಿನ ಬಾರಿ ನೀನು ಕೊಡುತ್ತೀಯಾ ಎಂದು ಹೇಳಿದ್ದೆ’ ಎಂದು ಅಸಮಧಾನಗೊಳ್ಳುವ ಮುಖಾಂತರ ಜಗಳ ಪ್ರಾರಂಭವಾಗುತ್ತದೆ. ಲಿಂಗ ಸಮಾನತೆಯನ್ನು ನಂಬುತ್ತೇನೆ ಎಂದು ಹೇಳುವ ಕಾರ್ಲ್‌ನ ಆಳದಲ್ಲಿರುವುದು ಪೇಟ್ರಿಯಾರ್ಕಿ, ಫೆಮಿನಿಸಂಅನ್ನು ಮೂದಲಿಸುವ ಭಾವನೆ; ನಾನು ನಿನಗಿಂತ ಹೆಚ್ಚು ದುಡಿಯುತ್ತೇನೆ ಎಂದು ಹೇಳುವ ಯಾಯ ಕೊನೆಗೆ ಕಾರ್ಲ್‌ನ ಪ್ರತಿಷ್ಠೆಯ ಸಂಧಾನ ಮಾಡಿಕೊಳ್ಳುತ್ತಾಳೆ. ಈ ಜಗಳದ ದೃಶ್ಯಗಳಲ್ಲಿ ಹಣ ಹೇಗೆ ಸಂಬಂಧಗಳನ್ನು ಸಂಕೀರ್ಣಗೊಳಿಸುತ್ತದೆ ಮತ್ತು ಅನಗತ್ಯ ಹಾಗೂ ಅನಿವಾರ್ಯ ಸಂದರ್ಭಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ರುಬೆನ್ ಹಲವು ಲೇಯರ್‌ಗಳಲ್ಲಿ ಕಟ್ಟಿಕೊಡುತ್ತಾರೆ. ಕಾರ್ಲ್‌ನ ಲಿಂಗಸಮಾನತೆ ಬಗೆಗಿನ ಸರಳ ವ್ಯಾಖ್ಯಾನ, ಅದೇರೀತಿ ಯಾಯ ಕಾರ್ಲ್‌ನ ಅಸಂಗತ ಪ್ರತಿಷ್ಠೆಯನ್ನು ಒಪ್ಪುವುದು- ಇಂತಹ ಬಹುತೇಕ ಉದಾಹರಣೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ಕಾಣಸಿಗುವಂತವೇ.

ಇದನ್ನೂ ಓದಿ: ಚುನಾವಣಾ ರಾಜಕೀಯದಲ್ಲಿ ಜಾತೀಯತೆ ಪ್ರಶ್ನೆ ಎತ್ತುವ ಮಾರಿ ಸೆಲ್ವರಾಜ್‌ರ ’ಮಾಮನ್ನನ್’

ಯಾಯ ಮತ್ತು ಕಾರ್ಲ್ ಎರಡನೇ ಅಂಕದಲ್ಲಿ ಬರುವ ಐಷಾರಾಮಿ ನೌಕವಿಹಾರಕ್ಕೆ ಉಚಿತವಾಗಿ ಆಯ್ಕೆ ಆಗುತ್ತಾರೆ.

ಎರಡನೇ ಅಂಕ: ಬಹಳ ಸೂಚ್ಯವಾಗಿ ಖಾಸಗಿ ಸಂಬಂಧಗಳಲ್ಲಿ ಹಣ ನಿರ್ವಹಿಸುವ ಪಾತ್ರವನ್ನು ಮೊದಲ ಅಂಕದಲ್ಲಿ ನಿರೂಪಿಸುವ ನಿರ್ದೇಶಕ, ಎರಡನೇ ಅಂಕದಲ್ಲಿ ಅದನ್ನು ವಿಸ್ತಾರವಾಗಿ ಬೆಳೆಸುತ್ತಾರೆ; ಬಂಡವಾಳ ಮಾಲೀಕರ ದಾರ್ಷ್ಟ್ಯ, ಕುಚೇಷ್ಟೆ, ಅಮಾನವೀಯತೆಯ ಹುಚ್ಚಾಟಗಳು ಮತ್ತು ಅವರು ಸೃಷ್ಟಿಸಿದ ಹೇಸಿಗೆಯಲ್ಲಿ ಅವರೇ ಬಿದ್ದು ಹೊರಳಾಡುವ ರೂಪಕ ದೃಶ್ಯಗಳನ್ನು ಬಹಳ ಮಾರ್ಮಿಕವಾಗಿ ಅದೇ ಮಟ್ಟದ ವಿಡಂಬಣೆಯಲ್ಲಿ ಕಟ್ಟಿಕೊಡಲಾಗಿದೆ. ಜಗತ್ತಿನ ಅತಿದೊಡ್ಡ ಶ್ರೀಮಂತರು ವಿಹಾರ ಮಾಡುವ ಒಂದು ಐಷಾರಾಮಿ ನೌಕೆ. ಇಲ್ಲಿ ವಿಹಾರಕ್ಕೆ ಜಗತ್ತಿನ ನಾನಾ ಮೂಲೆಯಿಂದ ಬಂದಿರುವ ಶ್ರೀಮಂತರ ಸೌಖ್ಯಕ್ಕೆ ಯಾವ ಕೊರತೆಯೂ ಬರದ ಹಾಗೆ ನೋಡಿಕೊಳ್ಳುವುದು ಮತ್ತು ಆ ಮುಖಾಂತರ ತಮ್ಮ ಈ ಐಷಾರಾಮಿ ವಿಹಾರದ ವ್ಯವಹಾರವನ್ನು ಅಭಿವೃದ್ಧಿಪಡಿಸಿ ಹೆಚ್ಚು ಹಣ ಗಳಿಸುವುದು ವಿಹಾರದ ಏಜೆಂಟ್ ಪೌಲ್‌ಳ ಆದ್ಯತೆ; ಒಂದು ದೃಶ್ಯದಲ್ಲಿ ನೌಕೆಯ ಒಬ್ಬ ಸಿಬ್ಬಂದಿ ಸೆಖೆಯ ಕಾರಣಕ್ಕೆ ಅರೆ ಬೆತ್ತಲೆಯಾಗಿ ಕೆಲಸ ಮಾಡುವುದನ್ನು ಯಾಯ ನೋಡುತ್ತಾಳೆ ಮತ್ತು ಅವನ ಫಿಟ್ನೆಸ್‌ಗೆ ಆಕರ್ಷಿತಳಾಗುತ್ತಾಳೆ. ಇದನ್ನು ಸಹಿಸದ ಕಾರ್ಲ್ ’ನಿಮ್ಮ ಸಿಬ್ಬಂದಿ ಅರೆಬೆತ್ತಲಾಗಿ ಕೆಲಸ ಮಾಡುತ್ತಾರೆ’ ಎಂದು ವಿವಾರದ ಮುಖ್ಯಸ್ಥೆ ಪೌಲ್ ಬಳಿ ದೂರುತ್ತಾನೆ. ಮರುಕ್ಷಣದಲ್ಲೆ ಪೌಲ್ ಆ ಸಿಬ್ಬಂದಿಯನ್ನು ಕೆಲಸದಿಂದ ಉಚ್ಚಾಟಿಸುತ್ತಾಳೆ. ರಷ್ಯನ್ ಬ್ಯುಸಿನೆಸ್ ಮ್ಯಾನ್ ಡಿಮಿಟ್ರಿ ಹೆಂಡತಿ ವೆರಾ ಒಮ್ಮೆ ನೌಕಾ ಸಿಬ್ಬಂದಿಯನ್ನು ಸ್ವಿಮ್ ಮಾಡಲು ಅಹ್ವಾನಿಸುತ್ತಾಳೆ; ನಯವಾಗಿ ನಿರಾಕರಿಸುವ ಆ ಸಿಬ್ಬಂದಿಯನ್ನು ಪರಿಗಣಿಸದೆ ಇಡೀ ನೌಕಾ ಸಿಬ್ಬಂದಿ ಸ್ವಿಮ್ ಮಾಡಬೇಕು ಎಂದು ಹೇಳುತ್ತಾಳೆ. ಗ್ರಾಹಕರ (ಶ್ರೀಮಂತ) ಅಭಿಲಾಷೆ ಎಂಬ ಕಾರಣ ನೀಡಿ ಪೌಲ್ ಎಲ್ಲ ನೌಕರರು ಸ್ವಿಮ್ ಮಾಡಬೇಕು ಎಂದು ಆದೇಶಿಸುತ್ತಾಳೆ.

ನೌಕೆಯ ಕ್ಯಾಪ್ಟನ್ ಮತ್ತು ತನ್ನನ್ನು ಕ್ಯಾಪಿಟಲಿಸ್ಟ್ ಎಂದು ಕರೆದುಕೊಳ್ಳುವುದಷ್ಟೇ ಅಲ್ಲ ಸೋಷಿಯಲಿಸ್ಟ್‌ರನ್ನು ವ್ಯಂಗ್ಯ ಮಾಡುವ ರಷ್ಯಾದ ಶ್ರೀಮಂತ ಡಿಮಿಟ್ರಿ ಅವರ ಸಂಭಾಷಣೆಗಳು ಎರಡನೇ ಅಂಕದಲ್ಲಿ ಬಹಳ ಪ್ರಮುಖವಾದದ್ದು.

ಕ್ಯಾಪ್ಟನ್ ಮತ್ತು ಡಿಮಿಟ್ರಿ ತಮಾಷೆಯಾಗಿಯೇ ಮಾಡುವ ಸಂಭಾಷಣೆಯ ಕೆಲವು ತುಣುಕುಗಳು:

ಡಿಮಿಟ್ರಿ ರೋನಾಲ್ಡ್ ರೆಗನ್ ಮಾತನ್ನು ಉಲ್ಲೇಖಿಸುತ್ತಾ ಕಮ್ಯುನಿಸ್ಟ್‌ಗಳ ಬಗ್ಗೆ ಕೆಟ್ಟ ಜೋಕ್ ಮಾಡಿದಾಗ..

ಕ್ಯಾಪ್ಟನ್: ಮೂರ್ಖನ ಜೊತೆ ಯಾವುದೇ ಕಾರಣಕ್ಕೂ ವಾದಕ್ಕೆ ಇಳಿಯವಾರದು, ಅವನು ತನ್ನ ಯೋಗ್ಯತೆಗಿಂತ ನಿನ್ನನ್ನು ಕೆಳಗೆ ಇಳಿಸುತ್ತಾನೆ ಮತ್ತು ಅವನ ಅನುಭವದಿಂದ ನಿನ್ನನ್ನು ಸೋಲಿಸುತ್ತಾನೆ. (ಮಾರ್ಕ್ ಟ್ವೇನ್).

ಡಿಮಿಟ್ರಿ: ಸಮಾಜವಾದ ಸಾಧ್ಯವಾಗುವುದು ಸ್ವರ್ಗದಲ್ಲಿ ಮಾತ್ರ, ಯಾಕೆಂದರೆ ಅದರ ಅಗತ್ಯ ಅವರಿಗಿರುವುದಿಲ್ಲ. ಆದರೆ ನರಕದಲ್ಲಿ ಈಗಾಗಲೆ ಸಮಾಜವಾದ ಹೊಂದಿರುತ್ತಾರೆ. (ರೋನಾಲ್ಡ್ ರೆಗನ್).

ಕ್ಯಾಪ್ಟನ್: ಬೆಳವಣಿಗೆ ಅನ್ನೋದು ಬೆಳವಣಿಗೆಗೆ ಮಾತ್ರವಷ್ಟೆ, ಇದು ಕ್ಯಾನ್ಸರ್ ಸೆಲ್‌ನ ತಾತ್ವಿಕತೆ. (Growth for the sake of Growth is the Ideology of cancer cell) (ಎಡ್ವರ್ಡ್ ಅಬಿ).

ಡಿಮಿಟ್ರಿ: ಸಮಾಜವಾದದ ಸಮಸ್ಯೆ ಎಂದರೆ ನೀವು ಅಂತಿಮವಾಗಿ ಇತರ ಜನರ ಹಣದಿಂದ ಹೊರಗುಳಿಯುತ್ತೀರಿ. (ಮಾರ್ಗರೆಟ್ ಥ್ಯಾಚರ್).

ಕ್ಯಾಪ್ಟನ್: ನಾವು ಗಲ್ಲಿಗೇರಿಸುವ ಕೊನೆಯ ಬಂಡವಾಳಶಾಹಿ, ಯಾರು ನಮಗೆ ಕುಣಿಕೆಯನ್ನು ಮಾರಿರುತ್ತಾನೊ ಅವನೇ ಆಗಿರುತ್ತಾನೆ. (ಕಾರ್ಲ್ ಮಾರ್ಕ್ಸ್).

ಮುಂದುವರಿದಂತೆ, ಡಿಮಿಟ್ರಿ ಪದೇಪದೇ ಕಮ್ಯುನಿಸ್ಟ್ ಎಂದು ಕರೆಯುತಿದ್ದದ್ದನ್ನು ತಡೆದು ಕ್ಯಾಪ್ಟನ್ ’ನಾನು ಕಮ್ಯುನಿಸ್ಟ್ ಅಲ್ಲ ಮಾರ್ಕ್ಸಿಸ್ಟ್’ ಎಂದು ಹೇಳುತ್ತಾನೆ.

ಮೂರನೇ ಅಂಕ: ಸ್ಥಳೀಯ ದಂಗೆಕೋರರಿಂದ ದಾಳಿಗೆ ಒಳಗಾಗುವ ಈ ಐಷಾರಾಮಿ ನೌಕೆಯಲ್ಲಿ, ಕೆಲವೇ ಕೆಲವರು ಲೈಫ್ ಜಾಕೆಟ್ ಮುಖಾಂತರ ಬದುಕುಳಿದು ಅಜ್ಞಾತಸ್ಥಳ ಒಂದಕ್ಕೆ ಬಂದು ಸೇರುತ್ತಾರೆ. ಬದುಕುಳಿಯುವವರಲ್ಲಿ ಕಾರ್ಲ್, ಯಾಯ, ಪೌಲ್, ಡಿಮಿಟ್ರಿ, ಇನ್ನು ನಾಲ್ಕು ಜನರ ಜೊತೆ ನೌಕೆಯ ಶೌಚಾಲಯದ ಸ್ವಚ್ಛತೆಯನ್ನು ನೋಡಿಕೊಳ್ಳುತ್ತಿದ್ದ ಅಬಿಗೈಲ್ ಕೂಡ ಒಬ್ಬಳು. ಯಾವ ವ್ಯವಸ್ಥೆ ಮತ್ತು ಸೌಕರ್ಯಗಳು ಇಲ್ಲದ ಆ ಅಜ್ಞಾತಸ್ಥಳದಲ್ಲಿ ಬದುಕುಳಿಯುವ ಜ್ಞಾನ ಅಲ್ಲಿ ಯಾರಿಗೂ ಇಲ್ಲ. ಅದಿರುವುದು ಐಷಾರಾಮಿ ನೌಕೆಯಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತಿದ್ದ ಅಬಿಗೈಲ್‌ಗೆ ಮಾತ್ರ. ಇಲ್ಲೂ ಗ್ರಾಹಕರ ಸೌಕರ್ಯಕ್ಕೆ ಮುಂದಾಗುವ ಮತ್ತು ಅಧಿಕಾರವನ್ನು ಚಲಾಯಿಸುವ ಪೌಲ್‌ಳ ವರ್ತನೆಯನ್ನು ಅಬಿಗೈಲ್ ನಿರಾಕರಿಸಿ, ಇಲ್ಲಿ ಎಲ್ಲರೂ ಅವಳಿಗೆ ಅವಲಂಬಿತರಾಗಿರುವುದರಿಂದ, ತಾನೇ ಇಲ್ಲಿ ಕ್ಯಾಪ್ಟನ್ ಎಂದು ಘೋಷಿಸಿಕೊಳ್ಳುತ್ತಾಳೆ. ನೌಕೆಯಲ್ಲಿದ್ದ ಶ್ರೇಣಿ ಇಲ್ಲಿ ಸಂಪೂರ್ಣ ಉಲ್ಟಾ ಆಗುತ್ತದೆ. ಲೈಫ್ ಬೋಟ್‌ನಲ್ಲಿದ್ದ ಆಹಾರ ಕೂಡ ಅಬಿಗೈಲ್ ಕಸ್ಟಡಿಗೆ ಬರುತ್ತದೆ.

ಅಜ್ಞಾತಸ್ಥಳದಲ್ಲಿ ಬದುಕುಳಿಯಲು ಹೊಸ ವ್ಯವಸ್ಥೆ ಮತ್ತು ಅಧಿಕಾರ ರೂಪುಗೊಳ್ಳುವುದು ಮತ್ತು ಅಧಿಕಾರ ಕೇಂದ್ರ ಹೇಗೆ ತನ್ನ ಸ್ವಹಿತಾಶಕ್ತಿಗೆ ಮಾತ್ರ ಶ್ರಮಿಸುತ್ತದೆ ಎಂದು ರುಬೆನ್ ಕ್ಲೈಮ್ಯಾಕ್ಸ್‌ನಲ್ಲಿ ಚಿತ್ರಿಸುತ್ತಾರೆ.

ಬಂಡವಾಳಶಾಹಿ ವ್ಯವಸ್ಥೆಯ ಅಡ್ಡ ಮತ್ತು ಅಸಹ್ಯಕರ ಪರಿಣಾಮಗಳ ಬಗ್ಗೆ ಚರ್ಚೆಗೆ ಆಹ್ವಾನಿಸುವ ’ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್’ ಒಂದು ಅಪರೂಪದ ಚಿತ್ರ.

ಯದುನಂದನ್ ಕೀಲಾರ
ಜಾಗತಿಕವಾಗಿ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...