ಮಣಿಪುರದ ಹೇಯ ಕೃತ್ಯ, ಬಿಲ್ಕಿಸ್ ಬಾನೋ ಪ್ರಕರಣ ಮತ್ತು ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳ ವಿಚಾರವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ‘ಬೇಟಿ ಬಚಾವೋ’ ಘೋಷಣೆ ಈಗ ‘ಬೇಟಿ ಜಲಾವೋ(ಸುಡುವುದು)’ ಆಗಿ ಬದಲಾಗಿದೆ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.
ಶುಕ್ರವಾರ ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ಆಡಳಿತ ಪಕ್ಷದ ‘ಹುತಾತ್ಮರ ದಿನ’ ರ್ಯಾಲಿಯಲ್ಲಿ ಮಾತನಾಡಿದ ಅವರು, ”ನೀವು (ಬಿಜೆಪಿ) ‘ಬೇಟಿ ಬಚಾವೋ’ ಘೋಷಣೆಯನ್ನು ನೀಡಿದ್ದೀರಿ, ಈಗ ನಿಮ್ಮ ಘೋಷಣೆ ಎಲ್ಲಿದೆ?” ಎಂದು ಪ್ರಶ್ನೆ ಮಾಡಿದ್ದಾರೆ.
”ಮಣಿಪುರದ ಜನರೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಇಂದು ಮಣಿಪುರ ಹೊತ್ತಿ ಉರಿಯುತ್ತಿದೆ, ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ (ಬ್ರಿಜ್ ಭೂಷಣ್ ಸಿಂಗ್) ಕೂಡ ಜಾಮೀನು ಪಡೆದಿದ್ದಾರೆ… ಮುಂಬರುವ ಚುನಾವಣೆಯಲ್ಲಿ ದೇಶದ ಮಹಿಳೆಯರು ನಿಮ್ಮನ್ನು ದೇಶದ ರಾಜಕೀಯದಿಂದ ಹೊರಹಾಕುತ್ತಾರೆ… ಬಿಜೆಪಿಯ ‘ಬೇಟಿ ಬಚಾವೋ’ ಇದೀಗ ‘ಬೇಟಿ ಜಲಾವೋ(ಸುಡುವುದು)’ ಆಗಿ ಬದಲಾಗಿದೆ ಎಂದು ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ತೃಣಮೂಲ ಕಾಂಗ್ರೆಸ್ಗೆ ಯಾವುದೇ ಕುರ್ಚಿ ಬೇಕಾಗಿಲ್ಲ, ಆದರೆ ”ಈ ಬಿಜೆಪಿ ಆಡಳಿತ ಹೋಗಬೇಕೆಂದು ನಾವು ಬಯಸುತ್ತೇವೆ” ಎಂದು ಬ್ಯಾನರ್ಜಿ ಪ್ರತಿಪಾದಿಸಿದರು.
”ನಾವು ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ಮೈತ್ರಿ I.N.D.I.A. ಬ್ಯಾನರ್ ಅಡಿಯಲ್ಲಿ ಎಲ್ಲಾ ಪ್ರತಿಭಟನೆಗಳನ್ನು ಆಯೋಜಿಸುತ್ತೇವೆ” ಎಂದು ತಿಳಿಸಿದರು.
ಇದನ್ನೂ ಓದಿ: ಮಣಿಪುರದಲ್ಲಿ ಶಾಂತಿ-ಭದ್ರತೆ ಸ್ಥಾಪಿಸಲು ಸಾಧ್ಯವಾಗದಿದ್ದರೆ, ಅಧಿಕಾರದಲ್ಲಿರಲು ಹಕ್ಕಿಲ್ಲ: ಮೋದಿ ಹಳೆಯ ಟ್ವೀಟ್ ವೈರಲ್