ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ‘ದುಡಿವ ಜನರ 72 ಗಂಟೆಗಳ ಮಹಾಧರಣಿ’ ಇಂದು ಸಂಜೆ 4 ಗಂಟೆಗೆ ಸರಿಯಾಗಿ ಸಮಾಪ್ತಿಗೊಂಡಿದೆ.
ಮಹಾಧರಣಿಯ ಕೊನೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೊಯುವ ಸಂಕಲ್ಪವನ್ನು ಧರಣಿ ನಿರತರು ಮಾಡಿದರು. “ಕೇಂದ್ರದಲ್ಲಿ ಅಧಿಕಾರದಲ್ಲಿರುವ ರೈತ, ಕಾರ್ಮಿಕ ವಿರೋಧಿ ಸರ್ಕಾರಕ್ಕೆ 2024ರ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಲು ನಾಳೆಯಿಂದಲೇ ಕೆಲಸ ಮಾಡುತ್ತೇವೆ. ಸಮಾನ ಮನಸ್ಕ ಸಮುದಾಯಗಳು, ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ ಬೃಹತ್ ಆಂದೋಲನ ರೂಪಿಸಿ ಮನೆ ಮನೆಗೆ ಕೊಂಡೊಯ್ಯತ್ತೇವೆ. ದಿಲ್ಲಿಗಿಂತ ಹಳ್ಳಿ ಬಲಶಾಲಿ, ಬಂಡವಾಲಿಗರಿಗಿಂತ ದುಡಿಯುವವರು ಬಲಶಾಲಿಗಳು ಎಂಬುವುದನ್ನು ತೋರಿಸುತ್ತೇವೆ” ಎಂದು ಪ್ರತಿಜ್ಞೆ ಮಾಡಿದರು.
ಬಳಿಕ ಕ್ರಾಂತಿ ಗೀತೆ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ಪ್ರತಿಕೃತಿಗಳ ದಹನ ಕಾರ್ಯ ನಡೆಯಿತು.
ಮೂರು ದಿನಗಳ ಕಾಲ ನಡೆದ ಮಹಾಧರಣಿಯಲ್ಲಿ ರಾಜ್ಯದ ವಿವಿಧ ರೈತ, ಕಾರ್ಮಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಧರಣಿ ನಿರತರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಎರಡೂ ಸರ್ಕಾರಗಳಿಗೆ ಮಹಾಧರಣಿಯ ನಿರ್ಣಯಗಳನ್ನು ತಿಳಿಸಿದರು.
ಧರಣಿಯ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 19ರಂದು ರೈತ, ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಲು ಸಮಯ ನಿಗದಿ ಮಾಡಿದ್ದಾರೆ. ಈ ಕುರಿತ ಒಪ್ಪಿಗೆ ಪತ್ರವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಧರಣಿ ಸ್ಥಳಕ್ಕೆ ತಂದು ಸಂಯುಕ್ತ ಹೋರಾಟ ಸಮಿತಿಯ ಮುಖಂಡರಿಗೆ ಹಸ್ತಾಂತರಿಸಿದ್ದಾರೆ.
ಮಹಾಧರಣಿಗೆ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ (ಹಸಿರು ಸೇನೆ) , ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಮಹಿಳಾ ಸಂಘಟನೆಗಳು, ಕರ್ನಾಟಕ ಜನಶಕ್ತಿ ಸಂಘ, ಕರ್ನಾಟಕ ರೈತ ಸಂಘ , ಭಾರತೀಯ ಕೃಷಿಕ್ ಸಮಾಜ್ (ಸಂಯುಕ್ತ), ಕರ್ನಾಟಕ ಶ್ರಮಿಕ ಶಕ್ತಿ, ಜನಾಂದೋಲನ ಮಹಾಮೈತ್ರಿ, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ಬೆಂಬಲ ಸೂಚಿಸಿದ್ದವು.
ಇದನ್ನೂ ಓದಿ : ‘ಮಹಾಧರಣಿ’ಗೆ ಸಿಎಂ ಸಿದ್ದರಾಮಯ್ಯ ಸ್ಪಂದನೆ: ಡಿ.19ರಂದು ಸಭೆ ನಿಗದಿ