ಗುಜರಾತ್ನ ಮೊರ್ಬಿ ದಲಿತ ದೌರ್ಜನ್ಯ ಘಟನೆಯ ಐವರು ಆರೋಪಿಗಳ ಪೈಕಿ ಮೂವರು ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.
ಗುಜರಾತ್ನ ಮೊರ್ಬಿಯ ಉದ್ಯಮಿ ವಿಭೂತಿ ಪಟೇಲ್ ತನ್ನ ಕಂಪೆನಿಯ ಸಿಬ್ಬಂದಿಗಳ ಜೊತೆ ಸೇರಿಕೊಂಡು ಕಂಪೆನಿಯಲ್ಲಿ ಕೆಲಸ ಮಾಡಿದ ವೇತನ ಕೇಳಿದ ದಲಿತ ವ್ಯಕ್ತಿ ಸೇರಿ ಮೂವರ ಮೇಲೆ ಹಲ್ಲೆ ನಡೆಸಿ ಆಕೆಯ ಚಪ್ಪಲಿಯನ್ನು ಬಾಯಲ್ಲಿ ಇರಿಸುವಂತೆ ಬಲವಂತ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿ ಉದ್ಯಮಿ ವಿಭೂತಿ ಪಟೇಲ್ (27), ಆಕೆಯ ಸಹೋದರ ಓಂ ಪಟೇಲ್ ಅಲಿಯಾಸ್ ಓಂ ಸಿತಾಪರಾ (21) ಮತ್ತು ರಾಜ್ ಪಡಶಾಲಾ (23) ಸೋಮವಾರ ಮುಂಜಾನೆ ಮೊರ್ಬಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಎಸ್ಸಿ-ಎಸ್ಟಿ ಸೆಲ್) ಪ್ರತಿಪಾಲ್ಸಿನ್ಹ್ ಝಾಲಾ ಅವರ ಮುಂದೆ ಶರಣಾಗಿದ್ದಾರೆ.
ಆರೋಪಿಗಳು ಸಲ್ಲಿಸಿದ ಬಂಧನ ಪೂರ್ವ ಜಾಮೀನು ಅರ್ಜಿ ತಿರಸ್ಕಾರದ ಬಳಿಕ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.
ಉದ್ಯಮಿ ವಿಭೂತಿ ಪಟೇಲ್ ಅವರ ಸಿರಾಮಿಕ್ ಟೈಲ್ಸ್ ರಫ್ತು ಮಾಡುವ ಕಂಪನಿ ರಾಣಿಬಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (RIPL) ಕಚೇರಿಯಲ್ಲಿ ನೀಲೇಶ್ ದಲ್ಸಾನಿಯಾ (21), ಅವರ ಸಹೋದರ ಮೆಹುಲ್ ಮತ್ತು ಅವರ ನೆರೆಯ ಭವೇಶ್ ಮಕ್ವಾನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನ.23ರಂದು ಎ ಡಿವಿಷನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಪ್ರಥಮ ಮಾಹಿತಿ ವರದಿ ಉಲ್ಲೇಖಿಸಿದೆ.
ಅ.2ರಿಂದ ಅ.18ರವರೆಗೆ ತಾನು ಮಾಡಿದ 16 ದಿನಗಳ ಕೆಲಸಕ್ಕೆ ಸಂಬಳವನ್ನು ಕೇಳಲು ನೀಲೇಶ್ ಕಚೇರಿಗೆ ಹೋದಾಗ ಈ ಘಟನೆ ನಡೆದಿದೆ. ವಿಭೂತಿಯು ನೀಲೇಶ್ನನ್ನು ತನ್ನ ಮುಂದೆ ಕುಳಿತು ಅವಳ ಪಾದರಕ್ಷೆಗಳನ್ನು ತೆಗೆದುಕೊಂಡು ಬಾಯಲ್ಲಿ ಇಟ್ಟು ಕ್ಷಮೆಯಾಚಿಸುವಂತೆ ಕೇಳಿದ್ದಾರೆ. ಇದಲ್ಲದೆ ಆರೋಪಿಗಳು ನೀಲೇಶ್ನಿಂದ 500 ರೂಪಾಯಿ ಮತ್ತು ಸ್ಮಾರ್ಟ್ವಾಚ್ ದೋಚಿದ್ದಾರೆ. ನೀಲೇಶ್ ದಲ್ಸಾನಿಯಾ ಅವರನ್ನು ಕಟ್ಟಡದ ಟೆರೇಸ್ಗೆ ಕರೆದೊಯ್ದು ಬೆಲ್ಟ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಐವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (2) (ಅಪರಾಧ ಬೆದರಿಕೆ), 143 (ಕಾನೂನುಬಾಹಿರ ಸಭೆ), 147 (ಗಲಭೆ) ಮತ್ತು 149 ಮತ್ತು ಭಾರತೀಯ ದಂಡ ಸಂಹಿತೆಯ 395 ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯಗಳ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ಪರೀಕ್ಷಿತ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಶರಣಾಗುವ ಒಂದು ದಿನದ ಮೊದಲು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಓದಿ; ಪಾಕ್ ಕಲಾವಿದರನ್ನು ನಿಷೇಧಿಸುವಂತೆ ಅರ್ಜಿ: ಸಂಕುಚಿತ ಮನೋಭಾವ ಬೇಡ ಎಂದ ಸುಪ್ರೀಂ