ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕ್ಯುರೇಟಿವ್ ಅರ್ಜಿಯು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿರುವಾಗ ಅವರು ಸಲ್ಲಿಸಿರುವ ನಿಯಮಿತ ಜಾಮೀನು ಅರ್ಜಿಯನ್ನು ಆಲಿಸಬಹುದೇ ಎಂಬ ನಿರ್ಧಾರವನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಬುಧವಾರ ಮುಂದೂಡಿದೆ.
ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ ಹಿಂದಿನ ಆದೇಶದ ವಿರುದ್ಧ ಸಿಸೋಡಿಯಾ ಅವರ ಕ್ಯುರೇಟಿವ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. 2023ರ ಫೆಬ್ರುವರಿಯಲ್ಲಿ ಬಂಧಿಸಲ್ಪಟ್ಟ ಸಿಸೋಡಿಯಾ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣವನ್ನು ಪ್ರಸ್ತಾಪಿಸಿ ವಿಚಾರಣೆಗೆ ಮನವಿ ಮಾಡಿದ್ದರು. ಈ ಹಿಂದೆ, ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ತನ್ನದೇ ತೀರ್ಪಿನ ವಿರುದ್ಧದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಫೆಬ್ರವರಿ 5 ರಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಸಿಬಿಐ ಪ್ರಕರಣದಲ್ಲಿ ಫೆಬ್ರವರಿ 22 ರವರೆಗೆ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು. ದೆಹಲಿ ಕೋರ್ಟ್ ಇಂದು ಮುಂದಿನ ವಿಚಾರಣೆಗೆ ನಿರ್ಧಾರವನ್ನು ಮುಂದೂಡಿದೆ. ಪ್ರಕರಣವನ್ನು ಮಾರ್ಚ್ 2ಕ್ಕೆ ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ; ಸಾಮೂಹಿಕ ಆಧಾರ್ ನಿಷ್ಕ್ರಿಯ; ಪ್ರಧಾನಿ ಮೋದಿಗೆ ಪತ್ರ ಬರೆದ ಪಶ್ಚಿಮ ಬಂಗಾಳ ಸಿಎಂ