Homeಮುಖಪುಟಅಸ್ಪೃಶ್ಯ, ಅಸಹಾಯಕ ಲೋಕಕ್ಕೆ ಅಕ್ಷರ ಕಲಿಸಿದ ಸಾವಿತ್ರಮ್ಮನನ್ನೇ ಪಠ್ಯಪುಸ್ತಕದಿಂದ ಹೊರಗಿಟ್ಟ ಕಾಲದಲ್ಲಿ ಒಂದು ಸ್ಮರಣೆ

ಅಸ್ಪೃಶ್ಯ, ಅಸಹಾಯಕ ಲೋಕಕ್ಕೆ ಅಕ್ಷರ ಕಲಿಸಿದ ಸಾವಿತ್ರಮ್ಮನನ್ನೇ ಪಠ್ಯಪುಸ್ತಕದಿಂದ ಹೊರಗಿಟ್ಟ ಕಾಲದಲ್ಲಿ ಒಂದು ಸ್ಮರಣೆ

- Advertisement -
- Advertisement -

ಫುಲೆ ದಂಪತಿಯ ಕುರಿತು ಯೋಚಿಸಿದಾಗಲೆಲ್ಲ ಒಂದು ರೀತಿಯ ಭಾವುಕತೆ ಆವರಿಸುತ್ತದೆ. ನೊಂದ ಹೆಣ್ಣುಮಕ್ಕಳು, ಅಸಹಾಯಕ ಅಸ್ಪೃಶ್ಯರ ನೋವಿಗೆ ಶಿಕ್ಷಣವೇ ಮದ್ದು ಎಂಬುದನ್ನು ಅರಿತು, ಅದಕ್ಕಾಗಿ ತಮ್ಮ ಇಡೀ ಜೀವನವನ್ನು ಸವೆಸಿದವರು ಫುಲೆ ದಂಪತಿ. ಜೋತಿಬಾ- ಸಾವಿತ್ರಿಬಾಯಿ ಫುಲೆಯವರು ಒಬ್ಬೊರಿಗೊಬ್ಬರು ಹೃದಯ ಮತ್ತು ಮೆದುಳಾಗಿ ಸಮಾಜಕ್ಕಾಗಿ ದುಡಿದವರು. ಬುದ್ಧಿ ಮತ್ತು ಭಾವ ಸಂಗಮವಾಗಿ ಜೋತಿಬಾ ದಂಪತಿ ಚರಿತ್ರೆ ಚಿತ್ರಿತವಾಗಿದೆ.

ಇಂದು ಅಕ್ಷರದ್ವ ಸಾವಿತ್ರಮ್ಮನ ಜನುಮ ದಿನ. ಜನವರಿ 3, 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ಖಂಡಾಲಾ ತಾಲ್ಲೂಕಿನ ನಾಲಗಾಂವದಲ್ಲಿ ಖಂಡೋಜಿ ನೆವಶೆ ಪಾಟೀಲರ ಪುತ್ರಿಯಾಗಿ ಜನಿಸಿದ ಸಾವಿತ್ರಿಬಾಯಿಯವರಿಗೆ 9ನೇ ವಯಸ್ಸಿನಲ್ಲಿಯೇ ಮದುವೆ ಮಾಡಲಾಯಿತು. ಆ ತಾಯಿಯ ಕೈ ಹಿಡಿದ ಜೋತಿಬಾರಿಗೆ ಆಗ 13 ವರ್ಷ ವಯಸ್ಸು. ತನ್ನಂತೆಯೇ ತನ್ನ ಪತ್ನಿಯೂ ಅಕ್ಷರ ಕಲಿಯಬೇಕೆಂಬ ಉತ್ಕಟ ಪ್ರೀತಿಯನ್ನು ಮೆರೆದ ಜೋತಿಬಾ ಅವರೇ ಸಾವಿತ್ರಮ್ಮನ ಮೊದಲ ಗುರು. ಇಂಗ್ಲಿಷ್ ಶಿಕ್ಷಣದ ಮೂಲಕ ವಿಚಾರವಂತಿಕೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ ಜೋತಿಬಾ, ತಾವು ವಿವಾಹವಾಗಿ ಮಾರನೇ ವರ್ಷವೇ ಅಂದರೆ 1841ನೇ ಇಸವಿಯಲ್ಲಿ ಸಾವಿತ್ರಮ್ಮನಿಗೆ ಅಕ್ಷರ ಕಲಿಕೆ ಆರಂಭಿಸಿದರು. ತಾನೂ ಒದುತ್ತಾ, ತನ್ನ ಮಡದಿಯನ್ನೂ ಶಿಕ್ಷಿತರನ್ನಾಗಿಸಿದ ಧೀಮಂತ ವ್ಯಕ್ತಿ ಜೋತಿಬಾ ಫುಲೆ.

17ನೇ ವಯಸ್ಸಿಗೆ ಶಿಕ್ಷಣ ತರಬೇತಿ ಮುಗಿಸಿ, ಹೆಣ್ಣುಮಕ್ಕಳಿಗೆ, ಅಸ್ಪೃಶ್ಯರಿಗೆ ಅಕ್ಷರ ಕಲಿಸಲು ಹೊರಟ ಈ ಮಹಾ ತಾಯಿ ನಿಂದನೆಗಳನ್ನು ಎದುರಿಸಬೇಕಾಯಿತು. ಸಂಪ್ರದಾಯವಾದಿಗಳು ಕೊಂಕು ನುಡಿದರು. ಕಿಡಿಗೇಡಿಗಳು ಮರೆಯಲ್ಲಿ ನಿಂತು ಸಗಣಿ, ಕಲ್ಲುಗಳನ್ನು ತೂರಿದರು. ಶಾಲೆಗೆ ಹೋಗುವಾಗಲೆಲ್ಲ ಮತ್ತೊಂದು ಸೀರೆಯನ್ನು ಕೊಂಡೊಯ್ಯುತ್ತಿದ್ದ ಸಾವಿತ್ರಿಬಾಯಿ, ಸಗಣಿ ಮೆತ್ತಿದ ಬಟ್ಟೆಯನ್ನು ಬದಲಿಸಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಿದ್ದರು.

ತಮ್ಮ ಗುರಿ, ದೂರದೃಷ್ಟಿಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿದ್ದ ಜೋತಿಬಾ ದಂಪತಿ ಒಂದರ ಹಿಂದೆ ಒಂದು ಶಾಲೆಗಳನ್ನು ತೆರೆದರು. ಹೆಣ್ಣುಮಕ್ಕಳಿಗಾಗಿ ‘ನೇಟಿವ್ ಫೀಮೇಲ್‌ ಸ್ಕೂಲ್‌- ಪುಣೆ’, ಅಸ್ಪೃಶ್ಯ ಸಮುದಾಯದ ಮಕ್ಕಳಿಗಾಗಿ ‘ಸೊಸೈಟಿ ಫಾರ್‌ ಪ್ರಮೋಟಿಂಗ್ ಎಜುಕೇಷನ್ ಆಫ್ ಮಹಾರ್ಸ್ ಅಂಡ್ ಮಾಂಗ್ಸ್‌’ ಆರಂಭಿಸಿದರು. ಕುಟುಂಬ ನಿರ್ವಹಣೆಗಾಗಿ ಜೋತಿಬಾ ಅವರು ಮಿಷನರಿ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ ದುಡಿದರೆ, ಸಾವಿತ್ರಮ್ಮನವರು ಜೋತಿಬಾ ಸ್ಥಾಪಿತ ಶಾಲೆಗಳಲ್ಲಿ ಉಚಿತವಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇವರ ಶಾಲೆಗಳಲ್ಲಿ ಕಲಿತ 237 ಹೆಣ್ಣುಮಕ್ಕಳು 1853ರಲ್ಲಿ ಪುಣೆಯಲ್ಲಿ ಪರೀಕ್ಷೆ ಬರೆಯಲು ಹೋದಾಗ ಸಾವಿರಾರು ಜನರು ಕುತೂಹಲಕ್ಕಾಗಿ ನೆರೆದಿದ್ದರಂತೆ. 1856ರ ಹೊತ್ತಿಗೆ ಅಸ್ಪೃಶ್ಯ ಸಮುದಾಯದ 258 ಮಕ್ಕಳು ಇವರ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರು.

ಫುಲೆಯವರ ಶಾಲೆಗಳಲ್ಲಿ ಕಲಿತ ಹೆಣ್ಣು ಮಕ್ಕಳು ಜೊಳ್ಳು ಶಿಕ್ಷಣವನ್ನೇನೂ ಪಡೆಯಲಿಲ್ಲ. ಈ ಸಮಾಜದಲ್ಲಿನ ಅಸಮಾನತೆಯನ್ನು ಪ್ರಶ್ನಿಸುವ ವಿದ್ವತ್ತನ್ನು ಗಳಿಸಿಕೊಂಡರು. ಇಲ್ಲಿ ಓದುತ್ತಿದ್ದ 14 ವರ್ಷದ ಮುಕ್ತಾಬಾಯಿ ಎಂಬ ಹೆಣ್ಣುಮಗಳು ಅಸ್ಪೃಶ್ಯರ ನೋವಿನ ಕುರಿತು ಬರೆಯುತ್ತಾ, “ವೇದಗಳು ಬರೀ ಬ್ರಾಹ್ಮಣರಿಗಾದರೆ ಅವು ನಮಗಲ್ಲ, ವೇದಗಳು ಬರೀ ಬ್ರಾಹ್ಮಣರಿಗಾದರೆ ನಮಗೆ ಪುಸ್ತಕಗಳಿಲ್ಲ. ಅವರು ಹೇಳುವಂತೆ ವೇದಗಳನ್ನು ನೋಡುವುದರಿಂದಲೇ ನಮಗೆ ಪಾಪ ಸುತ್ತಿಕೊಳ್ಳುತ್ತದೆಯಾದ್ದರಿಂದ ಬೈಬಲು, ಕುರಾನಿನಂತೆ ನಮಗೆ ಯಾವುದೇ ಧರ್ಮಗ್ರಂಥವಿಲ್ಲ. ಓ ದೇವರೇ ಹಾಗಾದರೆ ಹೇಳು, ಯಾವುದೇ ಪುಸ್ತಕಿಲ್ಲದ ನಮ್ಮದು ಯಾವ ಧರ್ಮ?” ಎಂದು ಪ್ರಶ್ನಿಸುತ್ತಾಳೆ. ಫುಲೆ ದಂಪತಿ ಕಲಿಸಿದ ವೈಚಾರಿಕತೆ ಎಂಥಹದ್ದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಜೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ

ಕವಯತ್ರಿಯೂ ಆಗಿದ್ದ ಸಾವಿತ್ರಮ್ಮ, ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕವಿತೆಗಳನ್ನು ಬರೆದರು. ತಮ್ಮ ಜೀವಿತಾವಧಿಯಲ್ಲಿ ಎರಡು ಕವನ ಸಂಕಲನಗಳನ್ನೂ ಪ್ರಕಟಿಸಿದರು. “ಶಿಕ್ಷಿತರಾಗಬೇಕು, ಇಂಗ್ಲಿಷ್‌ ಕಲಿಕೆಗೆ ಒತ್ತು ನೀಡಬೇಕು” ಎಂಬ ಆಶಯವನ್ನು ಇವರ ‘ಕಬ್ಯಾ ಫುಲೆ’ ಕವನ ಸಂಕಲದ ಕವಿತೆಗಳು ಢಾಳಾಗಿ ವ್ಯಕ್ತಪಡಿಸುತ್ತವೆ. ಜನಸಾಮಾನ್ಯರಿಗಾಗಿ ಬರೆದ ಈ ಜಾಗೃತಿ ಬರಹಗಳಲ್ಲಿ ಬಂಡಾಯದ ಗುಣವೇ ಪ್ರಧಾನ. ಮತ್ತೊಂದು ಕವನ ಸಂಕಲನವಾದ ‘ಬವನ್ ಕಾಶಿ ಸುಬೋಧ ರತ್ನಾಕರ್‌’ನಲ್ಲಿ ಜೋತಿಬಾರ ಜೀವನ ಚರಿತ್ರೆಯನ್ನು ಕವ್ಯಾತ್ಮಕವಾಗಿ ಪ್ರಕಟಿಸಿದ್ದಾರೆ ಸಾವಿತ್ರಮ್ಮ.

ಆ ಕಾಲಘಟ್ಟದಲ್ಲಿ ವಿಧವೆಯರ ಬದುಕು ದುರಂತಮಯವಾಗಿತ್ತು. ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಗಂಡಸರ ದೌರ್ಜನ್ಯ ಮತ್ತು ಆಮಿಷಗಳಿಗೆ ಒಳಗಾಗಿ ಗರ್ಭ ಧರಿಸುತ್ತಿದ್ದರು. ಅಂತಹ ಹೆಣ್ಣುಮಕ್ಕಳು ವಿಷಪೂರಿತ ಔಷಧಗಳನ್ನೆಲ್ಲ ಸೇವಿಸಿ, ಗರ್ಭಪಾತಕ್ಕೆ ಯತ್ನಿಸಿ ತೊಂದರೆಗೆ ಒಳಗಾಗುತ್ತಿದ್ದರು. ಗರ್ಭ ಧರಿಸಿದ ಬಾಲಕಿಯರಿಗೆ ತಲೆ ಬೋಳಿಸಿ, ಶಿಕ್ಷೆ ನೀಡುವ ಅಮಾನವೀಯ ವ್ಯವಸ್ಥೆ ಜಾರಿಯಲ್ಲಿತ್ತು. ಇದನ್ನು ಕಂಡು ನೊಂದ ಫುಲೆ ದಂಪತಿ, ‘ಬಾಲಹತ್ಯಾ ಪ್ರತಿಬಂಧಕ್ ಗೃಹಾ’ ತೆರೆದು ಗರ್ಭಿಣಿ ವಿಧವೆಯರಿಗೆ ಆಶ್ರಯ ನೀಡಿದರು.

ಸಾಮಾಜಿಕ ಬಿರುಗಾಳಿ ಮಹಾರಾಷ್ಟ್ರದ ನೆಲದಲ್ಲಿ ಬೀಸತೊಡಗಿತ್ತು. ದಲಿತಾದಿ ಶೂದ್ರರಿಗೆ ಜಾಗೃತಿ ಮೂಡಿಸುವ ಕೆಲಸ ಆರಂಭವಾಗಿದ್ದವು. ವೈದಿಕಶಾಹಿ ವ್ಯವಸ್ಥೆಯಿಂದ ನರಳುತ್ತಿರುವ ಸಮಾಜದಲ್ಲಿ ವಿವೇಚನೆಯನ್ನು ಮೂಡಿಸಲು 1873ರಲ್ಲಿ ಸತ್ಯಶೋಧಕ ಸಮಾಜ ಆರಂಭವಾಯಿತು. ಫುಲೆಯವರ ಕ್ರಾಂತಿಕಾರಕ ಆಶಯಗಳು ಈ ಸಂಸ್ಥೆಯಿಂದ ಹೊರಹೊಮ್ಮಿದವು. ಸರಳ ವಿವಾಹ ಸಂಹಿತೆಯನ್ನು ಜ್ಯೋತಿ ಬಾ ರೂಪಿಸಿದರು. ಸಮಾನತೆಯನ್ನು ಅಳವಡಿಸಿಕೊಂಡು, ಪುರೋಹಿತಶಾಹಿಗಳ ಮೌಢ್ಯದಿಂದ ಹೊರಬಂದು ಬದುಕಬೇಕೆಂದು ನವ ವಿವಾಹಿತರಿಗೆ ಬೋಧಿಸಿದರು.

ಜೋತಿಬಾ ಫುಲೆ ಅವರು 1887ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದಾಗ ಸಾವಿತ್ರಮ್ಮನವರು ಹಲವಾರು ಸವಾಲುಗಳನ್ನು ಎದುರಿಸಿದರು. ತಮ್ಮ ದಾರಿಯ ಕುರಿತು ಸ್ಪಷ್ಟನೆಯನ್ನು ಹೊಂದಿದ್ದ ಸಾವಿತ್ರಮ್ಮ, ಈ ಕಷ್ಟಕಾಲದಲ್ಲೂ ಎದೆಗುಂದದೆ ಶಾಲೆ, ಸತ್ಯಶೋಧಕ ಸಮಾಜ, ಮಕ್ಕಳ ಶಿಕ್ಷಣ ಎಲ್ಲವನ್ನೂ ನಿಭಾಯಿಸಿದ್ದರು. ಇದೆಲ್ಲದರ ನಡುವೆ 1890ರಲ್ಲಿ ಜೋತಿಬಾ ಇಹಲೋಕ ತ್ಯಜಿಸಿದರು.

ಜೋತಿಬಾ ದಂಪತಿಗೆ ಮಕ್ಕಳಿರಲಿಲ್ಲ. ತಮ್ಮ ಆಶ್ರಯದಲ್ಲಿದ್ದ ವಿಧವೆಯೊಬ್ಬರ ಮಗನನ್ನು ದತ್ತು ತೆಗೆದುಕೊಂಡು ಸಾಕಿದರು. ಅವರ ಒಡಲಲ್ಲಿ ಮಕ್ಕಳಾಗದಿದ್ದರೂ ಅವರ ಹೃದಯವಂತಿಕೆ, ವಿಶಾಲ ತಾಯ್ತತನದ ಫಲವಾಗಿ ಅಸಂಖ್ಯಾತ ದಲಿತ, ಅಸಹಾಯಕ ಹೆಣ್ಣುಮಕ್ಕಳು ಬದುಕಿನಲ್ಲಿ ಬೆಳಕು ಕಂಡರು. ನೊಂದ ಜನರಿಗೆ ಆಶ್ರಯದಾತರಾದರು. ಲಕ್ಷ್ಮಣ ಕರಡಿ ಜಾಯ ಎಂಬ ವಿದ್ಯಾರ್ಥಿ ಸಾವಿತ್ರಮ್ಮನವರ ಬಗ್ಗೆ ಬರೆದ ನೆನಪುಗಳಲ್ಲಿ, “ಅವರಷ್ಟು ಪ್ರೇಮಮಯಿಯೂ, ಕರುಣಾಮಯಿಯೂ ಆದ ಇನ್ನೊಬ್ಬ ಮಹಿಳೆಯನ್ನು ನಾನು ನೋಡಿಲ್ಲ. ನಮ್ಮ ತಾಯಿಗಿಂತ ಹೆಚ್ಚು ಅವರು ನಮ್ಮನ್ನು ಪ್ರೀತಿಸಿದರು” ಎಂದು ಉಲ್ಲೇಖಿಸುತ್ತಾರೆ. ಇಂತಹ ಮಹಾ ತಾಯಿ, ಪ್ಲೇಗ್ ರೋಗಿಗಳ ಆರೈಕೆ ಮಾಡುತ್ತಾ, ತಾನೂ ಪ್ಲೇಗ್ ರೋಗಕ್ಕೆ ತುತ್ತಾಗಿ ಮಾರ್ಚ್ 10, 1897ರಲ್ಲಿ ಕೊನೆಯುಸಿರೆಳೆದರು.

ಭಾರತದ ಮೊದಲ ಶಿಕ್ಷಕಿ ಎಂದೇ ಗುರುತಿಸಲಾಗಿರುವ ಈ ಮಹಾ ಚೇತನದ ಜನ್ಮದಿನವನ್ನು ಶಾಲೆಗಳಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಆದರೆ ತೋರಿಕೆಗೆ ಮಾತ್ರ ಆಚರಣೆ ಮಾಡುತ್ತಾ, ನಿಜದ ಆಶಯಗಳನ್ನು ಸರ್ಕಾರಗಳು ಮರೆತಿರುವುದು ದುರ್ದೈವ. ಶೋಷಿತರ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದುಡಿದ ಫುಲೆ ದಂಪತಿಯ ಆಶಯಗಳನ್ನು ಸರ್ಕಾರಗಳು ಈಡೇರಿಸುತ್ತಿಲ್ಲ. ಎಸ್‌ಸಿ, ಎಸ್‌ಟಿ ಮಕ್ಕಳ ಸ್ಕಾಲರ್‌ಶಿಪ್‌ ವಂಚಿಸುವ, ಎನ್‌ಇಪಿ ಜಾರಿಗೆ ತಂದು ಅಕ್ಷರವಂಚಿತ ಬಹುದೊಡ್ಡ ಸಮುದಾಯವನ್ನು ಶಾಶ್ವತವಾಗಿ ಶಿಕ್ಷಣದಿಂದ ಹೊರಗಿಡುವ ಕೆಲಸಗಳು ಈಗ ಹಿಡನ್‌ ಆಗಿ ಉಳಿದಿಲ್ಲ. ಹೆಣ್ಣುಮಕ್ಕಳನ್ನು ಮತ್ತೆ ಸಂಪ್ರದಾಯದ ಇಕ್ಕಟ್ಟಿಗೆ ಸಿಲುಕಿಸುವ, ಅಸಮಾನತೆಯನ್ನು ಬೋಧಿಸುವ ಕೃತಿಗಳೇ ಸನಾತನದ ಮುಖವೊತ್ತು ಪಠ್ಯಪುಸ್ತಕ ಸೇರುವ ವಿಚಿತ್ರ ಕಾಲಘಟ್ಟದಲ್ಲಿ ಇದ್ದೇವೆ. ಭಾಷಾ ಪಠ್ಯ ಇರುವುದು ಲಿಂಗಸಮಾನತೆ, ಸಾಮಾಜಿಕ ನ್ಯಾಯ ತುರುಕಲಿಕ್ಕಲ್ಲ ಎಂಬ ಅಹಂಕಾರವನ್ನು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ವ್ಯಕ್ತಿಗಳು ತೋರಿದ್ದಾರೆ. ಈ ಹಿಮ್ಮುಖ ಚಲನೆ ನೋಡುತ್ತಿದ್ದರೆ ಭವಿಷ್ಯದ ಕುರಿತು ಆತಂಕವಾಗುತ್ತದೆ. ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆಯವರಿಗೆ ಸಂಬಂಧಿಸಿದ ವಿವರಣೆಗಳನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕಿತ್ತು ಬಿಸಾಕಿದೆ. ಈ ದುರಿತ ಕಾಲದಲ್ಲಿ ಫುಲೆ ದಂಪತಿ ಕಣ್ಣಮುಂದೆ ಬಂದಾಗಲೆಲ್ಲ ಒಂದು ರೀತಿಯ ಮೌನ ಆವರಿಸುತ್ತದೆ.

(ಟಿಪ್ಪಣಿ: ಡಾ.ಎಚ್.ಎಸ್.ಅನುಪಮಾ ಅವರು ಬರೆದಿರುವ ‘ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ’ ಕೃತಿಯಲ್ಲಿನ ಅಂಶಗಳನ್ನು ಈ ಲೇಖನದಲ್ಲಿ ಒಳಗೊಳ್ಳಲಾಗಿದೆ. ಸದರಿ ಲೇಖನವು ಈ ಮೊದಲು ‘ಈದಿನ.ಕಾಂ’ನಲ್ಲಿ ಪ್ರಕಟಗೊಂಡಿದೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...