Homeಕರ್ನಾಟಕಉತ್ತರ ಕನ್ನಡ "ಲೋಕ" ಲಡಾಯಿ; ಕೇಸರಿಪಡೆಯ ಕಲಹ ಕಾಂಗ್ರೆಸ್‌ಗೆ ವರವಾದೀತೆ?

ಉತ್ತರ ಕನ್ನಡ “ಲೋಕ” ಲಡಾಯಿ; ಕೇಸರಿಪಡೆಯ ಕಲಹ ಕಾಂಗ್ರೆಸ್‌ಗೆ ವರವಾದೀತೆ?

- Advertisement -
- Advertisement -

ಉತ್ತರ ಕನ್ನಡದ ಅಷ್ಟೂ ಎಂಟು ವಿಧಾನಸಭಾ ಕ್ಷೇತ್ರಗಳ ಜತೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸೇರಿಸಿ ರಚಿಸಲಾಗಿರುವ “ಉತ್ತರ ಕನ್ನಡ ಲೋಕಸಭಾ ಕ್ಷೇತ್ರ” ವಿಭಿನ್ನತೆ, ವೈವಿಧ್ಯತೆಗಳ ವಿಶಿಷ್ಟ ಸೀಮೆ. ಭೋರ್ಗರೆವ ಅರಬ್ಬೀ ಕಡಲ ತಡಿಗೆ ಚಾಚಿಕೊಂಡಿರುವ ಕರಾವಳಿ, ಅದಕ್ಕೆ ಸಮಾನಾಂತರವಾಗಿ ಹಬ್ಬಿರುವ ಪಡುವಣ ಘಟ್ಟ ಸಾಲು, ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆಗಳ ವಿಭಿನ್ನ ಬೌಗೋಳಿಕ ಪರಿಸರದ ಈ ಸಂಸದೀಯ ಕ್ಷೇತ್ರದಲ್ಲಿ ತರಹೇವಾರಿ ಭಾಷೆ, ಬೆಳೆ, ಸಂಸ್ಕೃತಿ, ಜನಜೀವನ ನೆಲೆಯಾಗಿದೆ. ಕರಾವಳಿ, ಮಲೆನಾಡು, ಬಯಲು ಸೀಮೆಯ ಸಂಸ್ಕೃತಿ ಜತೆ ಮಹಾರಾಷ್ಟ್ರದ ಸಂಪ್ರದಾಯದ ಪ್ರದೇಶಗಳೂ ಇಲ್ಲವೆ. ಬಹುಶಃ ಇಲ್ಲಿರುವಷ್ಟು ಜಾತಿ-ಜನಾಂಗ-ಬುಡಕಟ್ಟು-ಭಾಷೆ ದೇಶದ ಇನ್ನೆಲ್ಲಿಯೂ ಕಾಣಿಸದು; ಸ್ವಾತಂತ್ರ್ಯ ಚಳವಳಿಯಿಂದ ಪರಿಸರ, ಅರಣ್ಯ ಸಾಗುವಳಿ ಹಕ್ಕಿನ ಹೋರಾಟದವರೆಗೆ ಇಲ್ಲಾಗಿರುವಷ್ಟು ಪ್ರತಿಭಟನೆ ಭಾರತದ ಬೇರೆಲ್ಲೂ ನಡೆದಿಲ್ಲ ಎನ್ನಬಹುದೇನೋ! ಆದರೆ ಇವತ್ತಿಗೂ ಈ ತೀರಾ ಹಿಂದುಳಿದಿರುವ ನತದೃಷ್ಟ ಪ್ರದೇಶದ ಅಳಲು ಮಾತ್ರ ಸುಮಾರು 400 ಕಿ.ಮೀ.ದೂರದಲ್ಲಿರುವ ಆಡಳಿತ ಶಕ್ತಿ ಕೇಂದ್ರ ಬೆಂಗಳೂರಿನ ವಿಧಾನಸೌಧಕ್ಕೆ ಕೇಳಿಸುತ್ತಿಲ್ಲ. ದೆಹಲಿಗಂತೂ ಮುಟ್ಟುವುದೇ ಇಲ್ಲ!

ಉತ್ತರ ಕನ್ನಡದ ದುರಂತಕ್ಕೆ ಮೂಲ ಕಾರಣ- ಇಲ್ಲಿಂದ ಗೆದ್ದು ಸಂಸದರಾದವರ ಅಸಾಮರ್ಥ್ಯ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಕ್ಷೇತ್ರದ ನಾಡಿಮಿಡಿತ ಅರಿವಾಗದ ಅಯೋಗ್ಯತೆಯೆಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಕವಿ-ಕರ್ಮಯೋಗಿ ದಿನಕರ ದೇಸಾಯಿ ಮಾತ್ರ ಅಪವಾದ. 1967ರಲ್ಲಿ ಸಂಸದರಾಗಿದ್ದ “ಜನಸೇವಕ” ದಿನಕರ ದೇಸಾಯಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿರಲಿಲ್ಲ. ಕ್ಷೇತ್ರದ ಕಾಳಜಿ-ಕಳಕಳಿಯೇನೋ ದೇಸಾಯಿಯವರಲ್ಲಿತ್ತು. ಆದರೆ ಅವರು ಇಂದಿರಾ ಗಾಂಧಿ ಸರಕಾರದ ಕಟು ಟೀಕಾಕಾರ ಸಂಸದರಾಗಿದ್ದರಿಂದ, ಅಭಿವೃದ್ಧಿಯ ಕನಸು ಸಾಕಾರಕ್ಕೆ ಹಲವು ಅಡ್ಡಿ-ಆತಂಕಗಳಿದ್ದವು. ಭೌಗೋಳಿಕವಾಗಿ ಕಾಡು-ಮೇಡುಗಳಿಂದ ಆವೃತ್ತವಾದ ವಿಶಾಲ ದುರ್ಗಮ ಉತ್ತರ ಕನ್ನಡದ ಸಮಸ್ಯೆ-ಸಂಕಟ ಪರಿಹಾರ ಅಂದಿನ ಕಾಲದಲ್ಲಿ ಅಷ್ಟು ಸುಲಭವೂ ಆಗಿರಲಿಲ್ಲ. ಜನಪರ ಯೋಜನೆ-ಯೋಚನೆ ಹಾಕಿಕೊಂಡು ಕಾರ್ಯಪ್ರವೃತ್ತರಾಗಿದ್ದ ದೇಸಾಯರಿಗೆ ಎರಡನೇ ಬಾರಿ ಪುನರಾಯ್ಕೆ ಸಾಧ್ಯವಾಗಲಿಲ್ಲ. ದೇಸಾಯರನ್ನು ಬಿಟ್ಟರೆ ಉಳಿದೆಲ್ಲ ಸಂಸದರು ಕೆಲಸಕ್ಕೆ ಬಾರದ ನಿಷ್ಪ್ರಯೋಜಕರೂ, ಅಭಿವೃದ್ಧಿ ಚಿಂತನೆಗಳಿಲ್ಲದ ಜನದ್ರೋಹಿಗಳೂ ಆಗಿದ್ದರೆಂಬ ಆಕ್ರೋಶ ಜಿಲ್ಲೆಯಲ್ಲಿದೆ.

ದೀವರು-ಹೈಗರ ಮೇಲಾಟದ ಅಂಕಣ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ರಾಜಕೀಯ ನಕ್ಷೆಯಲ್ಲಿ “ಕೆನರಾ” ಎಂದೇ ಚಿರಪರಿಚಿತ. ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದ ಉತ್ತರ ಕನ್ನಡ ಜಿಲ್ಲೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕನ್ನು ಸೇರಿಸಿ ಕೆನರಾ ಕ್ಷೇತ್ರ ರಚಿಸಲಾಗಿತ್ತು. 1973ರಲ್ಲಿ ನಡೆದ ಸಂಸದೀಯ ಕ್ಷೇತ್ರಗಳ ಭೌಗೋಳಿಕ ಪರಿಧಿಯ ಡಿಲಿಮಿಟೇಶನ್‌ನಲ್ಲಿ ಸಾಗರವನ್ನು ಬಿಟ್ಟು ಬೆಳಗಾವಿ ಕ್ಷೇತ್ರದಲ್ಲಿದ್ದ ಖಾನಾಪುರ ಮತ್ತು ಕಿತ್ತೂರನ್ನು ಕೆನರಾಕ್ಕೆ ಜೋಡಿಸಲಾಯಿತು. 2007ರ ಲೋಕಸಭಾ ಕ್ಷೇತ್ರಗಳ ಪುನರ್ ರಚನಾ ಪ್ರಕ್ರಿಯೆಯಲ್ಲಿ ಕೆನರಾದ ಆಯ-ಆಕಾರದಲ್ಲಿ ವ್ಯತ್ಯಾಸವೇನಾಗಲಿಲ್ಲ. ಹೆಸರು ಮಾತ್ರ “ಉತ್ತರ ಕನ್ನಡ ಲೋಕಸಭಾ ಕ್ಷೇತ್ರ”ವೆಂದು ಬದಲಾಯಿತು. ಒಂದು ತುದಿಯಿಂದ ಮತ್ತೊಂದು ತುದಿಗೆ ಒಂದು ದಿನದಲ್ಲಿ ಕ್ರಮಿಸಲಾಗದಷ್ಟು ಉದ್ದದ ದುರ್ಗಮ ಕ್ಷೇತ್ರವಿದು!

ದಿನಕರ ದೇಸಾಯಿ

1952ರಿಂದ 2019ರ ತನಕ ನಡೆದ ಒಟ್ಟೂ 17 ಚುನಾವಣೆಗಳಲ್ಲಿ ಹೈಗರ (ಹವ್ಯಕ ಬ್ರಾಹ್ಮಣ) ಜಾತಿಯ ಅನಂತ್ ಕುಮಾರ್ ಹೆಗಡೆ ಆರು ಬಾರಿ ಮತ್ತು ದೀವರ(ಈಡಿಗ) ಸಮುದಾಯದ ದೇವರಾಯ ನಾಯ್ಕ್ ನಾಲ್ಕು ಸಲ ಕೆನರಾದ ಸಂಸದರಾಗಿದ್ದಾರೆ. ಉಡುಪಿ ಮೂಲದ ಕ್ಯಾಥೋಲಿಕ್ ಕ್ರಿಶ್ಚಿಯನ್ ಪಂಗಡದ ಜೋಕಿಮ್ ಆಳ್ವ ಮೂರು ಬಾರಿ ಮತ್ತವರ ಸೊಸೆ ಮಾರ್ಗರೆಟ್ ಆಳ್ವ ಒಮ್ಮೆ ಲೋಕಸಭೆಯಲ್ಲಿ ಕೆನರಾವನ್ನು ಪ್ರತಿನಿಧಿಸಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಜಾತಿಯ ದಿನಕರ ದೇಸಾಯಿ, ನಾಡವ ಸಮುದಾಯದ ಬಿ.ವಿ.ನಾಯಕ್ ಮತ್ತು ಕೊಂಕಣ ಮರಾಠ ವರ್ಗದ ಬಿ.ಪಿ.ಕದಮ್ ಒಂದೊಂದು ಸಲ ಕೆನರಾದ ಎಂಪಿಯಾಗಿದ್ದರು. ಕೆನರಾ ಅಖಾಡಕ್ಕೆ ಜಾತಿ ರಾಜಕಾರಣದ ರಂಗೇರಿದ್ದು 1977ರ ಚುನಾವಣೆ ಸಂದರ್ಭದಲ್ಲಿ; ಆಗ ಜಿಲ್ಲೆಯ ಎರಡು ಬಹುಸಂಖ್ಯಾತ, ಪ್ರಬಲ ಹಾಗು ರಾಜಕೀಯ “ಪ್ರಜ್ಞೆ”ಯ ಕೋಮುಗಳಾದ ಹೈಗರು ಮತ್ತು ದೀವರ ನಡುವೆ ಶುರುವಿಟ್ಟುಕೊಂಡ ಪ್ರತಿಷ್ಠೆಯ ಮೇಲಾಟ ಇವತ್ತಿಗೂ ಮುಂದುವರಿದಿದೆ ಎಂದು ರಾಜಕೀಯ ಆಸಕ್ತರು ತರ್ಕಿಸುತ್ತಾರೆ.

ಆ ಸಂದರ್ಭದಲ್ಲಿ ಸಿದ್ದಾಪುರದ ಪ್ರತಿಷ್ಠಿತ ’ದೊಡ್ಮನೆ’ ಬ್ರಾಹ್ಮಣ ಖಾನ್‌ದಾನ್‌ನ ರಾಮಕೃಷ್ಣ ಹೆಗಡೆ ಇಡೀ ಜಿಲ್ಲೆಯನ್ನು ಪ್ರಭಾವಿಸುವ ಪ್ರಮುಖ ರಾಜಕಾರಣಿಯಾಗಿದ್ದರು. ರಾಜ್ಯದ ಹಣಕಾಸು ಮಂತ್ರಿಯಾಗಿ, ಇಂದಿರಾ ಗಾಂಧಿ ವಿರೋಧಿ ಸಂಸ್ಥಾ ಕಾಂಗ್ರೆಸ್‌ನ ಮುಂಚೂಣಿ ಮುಖಂಡ, ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ಸುದ್ದಿಯಲ್ಲಿದ್ದ ಹೆಗಡೆ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ತಳ್ಳಲ್ಪಟ್ಟಿದ್ದರು. ಆ ವೇಳೆಗೆ ಪಕ್ಕದ ಸೊರಬದ ಶಾಸಕ-ದೀವರ ಸುದಾಯದ ವರ್ಚಸ್ವೀ ನಾಯಕ ಸಾರೆಕೊಪ್ಪ ಬಂಗಾರಪ್ಪ ಉತ್ತರ ಕನ್ನಡದಲ್ಲಿ ಹಿಂದುಳಿದವರ ಚಾಂಪಿಯನ್ ಆಗಿ ಅವತರಿಸಿದ್ದರು. ಉತ್ತರ ಕನ್ನಡ(ಶಿರಸಿ)ದ ಅಳಿಯನೂ ಆಗಿದ್ದ ಬಂಗಾರಪ್ಪ ಮತ್ತು ಹೆಗಡೆ ನಡುವೆ ಪ್ರಚ್ಛನ್ನ ಕಾಳಗ ಶುರುವಿಟ್ಟುಕೊಂಡಿತ್ತು.

1977ರ ಲೋಕ ಸಮರದಲ್ಲಿ ಹೆಗಡೆ ಜನತಾ ಪರಿವಾರದ ಹುರಿಯಾಳಾದರೆ, ಬಂಗಾರಪ್ಪ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು. ಆ ಚುನಾವಣೆಯಲ್ಲಿ ಹೆಗಡೆ ಸೋತು ಕಾಂಗ್ರೆಸ್‌ನ ಬಿ.ಪಿ.ಕದಮ್ ಜಯಶೀಲರಾದರು. 1980ರ ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಬಂಗಾರಪ್ಪ ಪಟ್ಟು ಹಿಡಿದು ಸ್ವಜಾತಿಯ ದೇವರಾಯ ನಾಯ್ಕ್‌ಗೆ ಕೈ ಕ್ಯಾಂಡಿಡೇಟ್ ಮಾಡಿ ಗೆಲ್ಲಿಸಿಕೊಂಡರು. 1980ರ ಚುನಾವಣೆಯಲ್ಲಿ ದೀವರ-ಹೈಗರ ಜಿದ್ದಾಜಿದ್ದಿಯ ಕಾಳಗವಾಗಿತ್ತೆಂದು ಹಳೆ ತಲೆಮಾರಿನ ರಾಜಕಾರಣಿಗಳು ನೆನಪಿಸುತ್ತಾರೆ. ಆ ಬಳಿಕ ಕೆನರಾದ ದೀವರು-ಹೈಗರು ಜಾತಿ ಲೆಕ್ಕಾಚಾರದ ಸೂತ್ರ-ಸಮೀಕರಣಕ್ಕೆ ರಣ ರೋಚಕತೆ ಬಂದುಬಿಟ್ಟಿತು. ಕ್ಷೇತ್ರಕ್ಕೆ ಹೊರೆಯಾಗಿದ್ದರೂ ದೇವರಾಯ ನಾಯ್ಕ್ ಜಾತಿ ಕೆಮಿಸ್ಟ್ರಿಯಿಂದ ನಿರಂತರ ಎರಡು ದಶಕಗಳ ಕಾಲ ಸಂಸದ ಸ್ಥಾನದ ಸುಖ-ಸಂತೋಷ ಅನುಭವಿಸಲು ಸಾಧ್ಯವಾಯಿತೆಂಬ ಚರ್ಚೆ ಇವತ್ತಿಗೂ ಜಿಲ್ಲೆಯ ರಾಜಕೀಯ ಕಟ್ಟೆಯಲ್ಲಿದೆ.

ಜೋಕಿಮ್ ಆಳ್ವ

ಈ ಕೆಚ್ಚು-ರೊಚ್ಚು 1991ರ ಇಲೆಕ್ಷನ್ ತನಕ ಮುಂದುವರಿದಿತ್ತು. 1996ರ ಚುನಾವಣಾ ಸಂದರ್ಭದಲ್ಲಿ ಸಂಘ ಪರಿವಾರದ ವಿಪ್ರೋತ್ತಮರು ಹೆಣೆದಿದ್ದ ಧರ್ಮಕಾರಣದ ತಂತ್ರಗಾರಿಕೆಗೆ ಸಿಲುಕಿದ ದೀವರ ಯುವಪೀಳಿಗೆಗೆ ಜಾತಿ ಅಭಿಮಾನಕ್ಕಿಂತ ಹುಸಿ ಹಿಂದುತ್ವದ “ಹೆಮ್ಮೆ”ಯೇ ಹೆಚ್ಚಾಯಿತು. ದೀವರ ತರುಣರು ಸಂಘೀ ಬ್ರಾಹ್ಮಣ-ಕೊಂಕಣಿ ರಿಂಗ್‌ಮಾಸ್ಟರ್‌ಗಳ ಗುರಾಣಿಗಳಾಗಿ ಹೋದರು. ತತ್ಪರಿಣಾಮವಾಗಿ ಎಂಪಿಯಾಗುವ ಯಾವ ಅರ್ಹತೆಯೂ ಇಲ್ಲದ ಹೊಡಿ-ಬಡಿ-ಕಡಿ ಸಂಸ್ಕೃತಿಯ ಅನಂತ್ ಕುಮಾರ್ ಹೆಗಡೆ ಮತ್ತೆಮತ್ತೆ ಗೆಲ್ಲಲು ಅವಕಾಶವಾಯಿತು; ಅನಂತ್ ಕುಮಾರ್ ಸ್ವಜಾತಿ ಹೈಗರ ಓಟಿಗಿಂತ ದೀವರ ಮತ ಬ್ಯಾಂಕ್ ಗುರಿಯಾಗಿಸಿಕೊಂಡೇ ಹಿಂದುತ್ವ ರಾಜಕಾರಣ ನಡೆಸಿದ್ದರೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಖ್ಯಾತನಾಮರೇ ಸೋತ ಕ್ಷೇತ್ರ!!

ಕ್ಷೇತ್ರ ಮಹಿಮೆಯ ಪುಟಗಳನ್ನು ಹಾಗೇ ಸುಮ್ಮನೆ ತಿರುವಿಹಾಕುತ್ತ ಹೋದರೆ ಪರಿಚಿತರು, ಪ್ರಸಿದ್ಧರು, ಅವಜ್ಞೆಗೀಡಾಗಿರುವ ಅಪರಿಚಿತರು, ಅನರ್ಹರು ಆಯ್ಕೆಯಾಗಿರುವ ಸ್ವಾರಸ್ಯಕರ ಸಂಗತಿಗಳು ಕಾಣಿಸುತ್ತವೆ. ಸಾಮಾಜಿಕ, ರಾಜಕೀಯ, ಸಿನೆಮಾ, ಸಾಹಿತ್ಯ ವಲಯದ ದಿಗ್ಗಜರನ್ನು ಮಕಾಡೆ ಮಲಗಿಸಿರುವ ಕೆನರಾ ಮತದಾರ ಕರ್ಮಗೇಡಿ, ನಿದ್ದೆಬಡುಕ, ಅವಾಂತರಕಾರಿ ಮತ್ತು ಅನಾಹುತಕಾರಿಗಳನ್ನು ಕಣ್ಣುಮುಚ್ಚಿಕೊಂಡು ಮತ್ತೆ-ಮತ್ತೆ ಗೆಲ್ಲಿಸಿದ್ದಾನೆ! ಸುಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಮನೋಹರ ಮಾಲಗಾಂವ್ಕರ್, ಭೂಮಾಲಿಕರ ಶೋಷಣೆ ವಿರುದ್ಧ ಕೆಚ್ಚೆದೆಯ ಹೋರಾಟ ಕಟ್ಟಿದ್ದ ಶಿಕ್ಷಣ ತಜ್ಞ ದಿನಕರ ದೇಸಾಯಿ, ವಿಚಾರ ಸಾಹಿತಿ ಗೌರೀಶ್ ಕಾಯ್ಕಿಣಿ, ಚತುರ ರಾಜಕಾರಣಿ ರಾಮಕೃಷ್ಣ ಹೆಗಡೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತ, ನಟ ಅನಂತ್ ನಾಗ್ ಕೆನರಾದಲ್ಲಿ ಸೋತು ಸುಣ್ಣವಾಗಿದ್ದಾರೆ; ಅಸಂಬದ್ಧ, ಅಸಹ್ಯ ಮಾತುಗಾರಿಕೆಯ ಅನಂತ್‌ಕುಮಾರ್ ಹೆಗಡೆಯಂಥ ಮತೀಯ ಆತಂಕವಾದಿಗಳು ಸತತವಾಗಿ ಗೆದ್ದು ಗಬ್ಬೆಬ್ಬಿಸಿದ್ದಾರೆ. ಜಿಲ್ಲೆಯ ಒಳಗಿನ ಬೇಕು-ಬೇಡ, ಸಮಸ್ಯೆ-ಸಂಕಟಗಳಿಗಿಂತ ಜಾತಿ ಪ್ರತಿಷ್ಠೆ, ಧರ್ಮೋನ್ಮಾದ, ಇಂದಿರಾ, ಮೋದಿ ಹವಾದಂಥ ಹೊರಗಿನ ಅಂಶಗಳೇ ಜಿಲ್ಲೆಯ ಮತದಾರರ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ಸಜ್ಜನರು ಸೋಲಲು ಕಾರಣವಾಗಿತ್ತು.

ಉಡುಪಿಯ ವಕೀಲ, ಪತ್ರಕರ್ತ ಜೋಕಿಮ್ ಆಳ್ವ ಮೊದಲ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಅಲೆಯೇರಿ ಕೆನರಾದ ಎಂಪಿಯಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಪ್ರಮುಖ ಕ್ರಿಶ್ಚಿಯನ್ ಮುಂದಾಳಾಗಿದ್ದ ಆಳ್ವರಿಗೆ ಎಲ್ಲಿಂದಾದರೂ ಸಂಸದನಾಗಿಸುವ ದರ್ದು ಕಾಂಗ್ರೆಸ್ ನಾಯಕರಿಗಿತ್ತು. ಜೋಕಿಮ್ ಆಳ್ವ ಮತ್ತು ವೈಲೆಟ್ ಆಳ್ವ (ರಾಜ್ಯಸಭೆಯ ಮಾಜಿ ಉಪಾಧ್ಯಕ್ಷೆ) ದಂಪತಿಗೆ ನೆಹರು ಕುಟುಂಬದ ನಿಕಟ ಒಡನಾಟವೂ ಇತ್ತು. ಶ್ರೀನಿವಾಸ ಮಲ್ಯ ಮತ್ತು ರಂಗನಾಥ ಶೆಣೈಗೆ ಮಂಗಳೂರು ಮತ್ತು ಉಡುಪಿಯಲ್ಲಿ ಸ್ಥಾನ ಕಲ್ಪಿಸಿದ್ದರಿಂದ ಆಳ್ವರನ್ನು ಕೆನರಾಕ್ಕೆ ಸಾಗಹಾಕಲಾಗಿತ್ತು. 1952ರ ಮೊದಲ ಮಹಾಚುನಾವಣೆಯಲ್ಲಿ ಅಪರಿಚಿತ ಆಳ್ವ ಕಾಂಗ್ರೆಸ್ ನಾಮಬಲದಲ್ಲಿ ನಿರಾಯಾಸವಾಗಿ ಚುನಾಯಿತರಾದರು.

1957ರಲ್ಲಿ ಆಳ್ವರಿಗೆ ವಿರೋಧ ವ್ಯಕ್ತವಾಯಿತು. ವಿಪಕ್ಷಗಳೆಲ್ಲ ಒಂದಾಗಿ ಪ್ರಸಿದ್ಧ ಲೆಕ್ಕಪರಿಶೋಧಕರಾಗಿದ್ದ ಸೋಷಲಿಸ್ಟ್ ಸಿದ್ಧಾಂತದ ದಿವೇಕರ್‌ರನ್ನು ಅಖಾಡಕ್ಕೆ ಇಳಿಸಿದ್ದರು. ಕಾಂಗ್ರೆಸ್ ಗಾಳಿಯಲ್ಲಿ ದಿವೇಕರ್‌ಗೆ ಗೆಲ್ಲಲಾಗಲಿಲ್ಲ. 1962ರ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಸಮಸ್ಯೆ-ಸಂಕಷ್ಟಕ್ಕೆ ಸ್ಪಂದಿಸದೆ ಮಂಗಳೂರು-ದಿಲ್ಲಿಯಲ್ಲಿ ಇರುತ್ತಿದ್ದ ಆಳ್ವ ಬಗೆಗಿನ ಬೇಸರ ಕೆನರಾದಲ್ಲಿ ಹೆಚ್ಚಾಗಿತ್ತು. ಆ ವೇಳೆ ಖ್ಯಾತ ಇಂಗ್ಲಿಷ್ ಸಾಹಿತಿ, ನಿವೃತ್ತ ಸೈನ್ಯಾಧಿಕಾರಿ ಜೊಯಿಡಾದ ಜಗಲಬೇಟ್‌ನ ಮನೋಹರ ಮಾಲಗಾಂವ್ಕರ್ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಳ್ವರಿಗೆ ಸೆಡ್ಡು ಹೊಡೆದಿದ್ದರು. 19,869 ಮತಗಳ ಸಣ್ಣ ಅಂತರದಿಂದ ಮಾಲಗಾಂವ್ಕರ್ ಸೋಲುವಂತಾಯಿತು.

ಮಾರ್ಗರೆಟ್ ಆಳ್ವ

1967ರಲ್ಲಿ ಆಳ್ವರಿಗೆ ಮತ್ತೆ ಟಿಕೆಟ್ ಕೊಡಕೂಡದೆಂಬ ಕೂಗು ಕಾಂಗ್ರೆಸ್‌ನಲ್ಲಿ ಎದ್ದಿತ್ತು. ಸೋಲುವ ಭೀತಿಯಲ್ಲಿ ಆಳ್ವರೂ ಹಿಂದೆ ಸರಿದರು. ಶಿರಸಿಯ ಕೊಂಕಣಿ ಸಮುದಾಯದ ಜಿ.ವಿ.ನಾಡಿಗ ಕಾಂಗ್ರೆಸ್ ಹುರಿಯಾಳಾದರು. ಟಿಕೆಟ್ ಭಿನ್ನಮತದ ಬೆಂಕಿ ಕಾಂಗ್ರೆಸ್‌ಅನ್ನು ಆವರಿಸಿತ್ತು. ಅದೇ ಹೊತ್ತಿಗೆ ರೈತ-ಕೂಲಿಕಾರ ಸಂಘಟಿಸಿ ಊಳಿಗಮಾನ್ಯದ ವಿರುದ್ಧ ಹೋರಾಡುತ್ತ, ಹಳ್ಳಿಗಳಲ್ಲಿ ಶಾಲೆ-ಹೈಸ್ಕೂಲುಗಳನ್ನು ಸ್ಥಾಪಿಸಿ ಜನಾನುರಾಗಿಯಾಗಿದ್ದ ಚುಟುಕು ಸಾಹಿತಿ-ಶಿಕ್ಷಣ ತಜ್ಞ ದಿನಕರ ದೇಸಾಯಿ ಪಕ್ಷೇತರರಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದರು; ದೇಸಾಯರ ಬೆನ್ನಿಗೆ ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದ ಸಮಾಜವಾದಿ ಪಾರ್ಟಿ ನಿಂತಿತ್ತು. 1,43,287 ಮತ ಪಡೆದ ದೇಸಾಯಿ ಕಾಂಗ್ರೆಸ್‌ನ ನಾಡಿಗರನ್ನು ಸುಲಭವಾಗಿ ಮಣಿಸಿ ಲೋಕಸಭೆ ಪ್ರವೇಶಿಸಿದ್ದರು.

ಆದರೆ ಅವಧಿಗೂ ಮೊದಲೆ ಎದುರಾದ 1971ರ ಚುನಾವಣೆಯಲ್ಲಿ ದೇಸಾಯರಿಗೆ ಮತ್ತೆ ಗೆಲ್ಲಲು ಆಗಲಿಲ್ಲ. ಇಂದಿರಾ ಯುಗದಲ್ಲಿ ಸಹಕಾರಿ ಇಲಾಖೆ ಉನ್ನತ ಅಧಿಕಾರಿಯಾಗಿದ್ದ ಗೋಕರ್ಣ ಸೀಮೆಯ ಬಾಳಾಸಾಹೇಬ್ ಯಾನೆ ಬಿ.ವಿ.ನಾಯಕ್ ಅಂದಿನ ಸಿಎಂ ದೇವರಾಜ ಅರಸರ ಮೂಲಕ ಕಾಂಗ್ರೆಸ್ ಟಿಕಟ್ ಗಿಟ್ಟಿಸಿದ್ದರು. ಸಮಾಜವಾದಿ ಪಾರ್ಟಿ, ಮತ್ತಿತರ ವಿರೋಧ ಪಕ್ಷಗಳ ಬೆಂಬಲದ ದೇಸಾಯಿ(64,617) ಅವರನ್ನು ದೊಡ್ಡ ಅಂತರ(96,779)ದಲ್ಲಿ ಪರಾಭವಗೊಳಿಸಿದ ಕಾಂಗ್ರೆಸ್‌ನ ನಾಯಕ್ ಪಾರ್ಲಿಮೆಂಟ್ ಮೆಂಬರ್ ಆದರು. ಮೇಧಾವಿ ನಾಯಕ್ ಅಂತಾರಾಷ್ಟ್ರೀಯ ವಿಷಯಗಳಲ್ಲಿ ಮಾತಾಡಿ ಮೊದಲ ಸಂಸತ್ ಪ್ರವೇಶದಲ್ಲೇ ದೇಶದ ಗಮನ ಸೆಳೆದಿದ್ದರು. ತುರ್ತು ಪರಿಸ್ಥಿತಿ ಧಿಕ್ಕರಿಸಿ “ಲಾಂಗ್ ಲಾಂಗ್ ವೇ ಟು ಗೋ” ಎಂಬ ಪುಸ್ತಕ ಬರೆದು ಇಂದಿರಾ ಕೆಂಗಣ್ಣಿಗೆ ಗುರಿಯಾಗಿದ್ದರು; ಮಾದನಗೇರಿ ರೈತ ಪರ ಹೋರಾಟ ನಡೆಸಿ ಅಂದಿನ ಸಿಎಂ ದೇವರಾಜ ಅರಸು ಎದುರು ಹಾಕಿಕೊಂಡಿದ್ದರು; ರೈತರ ದಿರಿಸು (ಬರಿಮೈ-ಲಂಗೋಟಿ) ತೊಟ್ಟುಕೊಂಡು ಪಾರ್ಲಿಮೆಂಟಿಗೆ ಹೋಗಿ ರೈತರಿಗೆ ನ್ಯಾಯ ಕೇಳಿದ್ದರು! ರೆಬೆಲ್ ಬಾಳಾಸಾಹೇಬ ನಾಯಕರಿಗೆ 1977ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಯಿತು.

ಬಂಗಾರಪ್ಪ-ಹೆಗಡೆ ಹಣಾಹಣಿ!

ವಿಧಾನಸಭೆಯ ಉಪ-ಸಭಾಧ್ಯಕ್ಷರಾಗಿದ್ದ ಕಾರವಾರದ ಬಿ.ಪಿ.ಕದಮ್ 1977ರ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದರು. ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ರಾಮಕೃಷ್ಣ ಹೆಗಡೆ ಮುಖಾಮುಖಿಯಾದರು. ಉತ್ತರ ಕನ್ನಡದಲ್ಲಿ ಕದಮ್‌ರಿಗಿಂತ ಜಾಸ್ತಿ ಮತ ಗಿಟ್ಟಿಸಿದ್ದ ಹೆಗಡೆ(1,61,80) ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರಲ್ಲಿ ಹಿನ್ನಡೆ ಅನುಭವಿಸಿದರು. ಅಂತೂ ಕಾಂಗ್ರೆಸ್‌ನ ಕದಮ್ 34,394 ಮತಗಳ ಸಣ್ಣ ಅಂತರದಲ್ಲಿ ಬಚಾವಾಗಿದ್ದರು. 1980ರಿಂದ ಮುಂದಿನ ಸುಮಾರು ಒಂದೂವರೆ ದಶಕ ಕಾಲ ಎದುರಾಳಿಗಳಾದ ಬಂಗಾರಪ್ಪ ಮತ್ತು ರಾಮಕೃಷ್ಣ ಹೆಗಡೆ ಉತ್ತರ ಕನ್ನಡದ ಚುನಾವಣಾ ರಾಜಕಾರಣದ ದಿಕ್ಕು ಬದಲಿಸಬಲ್ಲ ನಿರ್ಣಾಯಕ ಶಕ್ತಿಯಾಗಿದ್ದರು. ಹಾಗೆ ನೋಡಿದರೆ ಒಬಿಸಿಗಳ ಆಕರ್ಷಕ ನಾಯಕರಾಗಿದ್ದ ಬಂಗಾರಪ್ಪ ಹೆಗಡೆಗಿಂತ ಒಂದು ಗುಲಗಂಜಿ ಹೆಚ್ಚೇ ತೂಗುತ್ತಿದ್ದರು. ದೇವರಾಜ ಅರಸು ನಿರ್ಗಮನದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಭಾವಿ ಹಿಂದುಳಿದ ವರ್ಗದ ನಾಯಕಾಗ್ರೇಸರಾಗಿ ರೂಪುಗೊಂಡಿದ್ದ ಬಂಗಾರಪ್ಪ ಸ್ವಜಾತಿಯ ದೇವರಾಯ ನಾಯ್ಕ್‌ರನ್ನು 1980ರ ಲೋಕ ಸಮರದ ಕಾಂಗ್ರೆಸ್ ಜಟ್ಟಿಯನ್ನಾಗಿ ಮಾಡಿದ್ದರು. ಜಿಲ್ಲೆಯ ಹಿಂದುಳಿದ ವರ್ಗದ ಬಹುಸಂಖ್ಯಾತ ದೀವರ ಸಮುದಾಯದ ದೇವರಾಯನಾಯ್ಕ್ ಎದುರು ಜನತಾ ಪಕ್ಷದ ಹುರಿಯಾಳಾಗಿ ತಮ್ಮ ಶಿಷ್ಯ ಹಳಿಯಾಳದ ವಕೀಲ ಆರ್.ವಿ.ದೇಶಪಾಂಡೆಯನ್ನು ರಾಮಕೃಷ್ಣ ಹೆಗಡೆ ಅಖಾಡಕ್ಕಿಳಿಸಿದ್ದರು. ಇದು ದೀವರ-ಹೈಗರ ಪ್ರತಿಷ್ಠೆಯ ರಣರೋಚಕ ಕಾಳಗವಾಗಿತ್ತು. ಬಂಗಾರಪ್ಪ ಕ್ಯಾಂಡಿಡೇಟ್ ದೇವರಾಯ ನಾಯ್ಕ್(2,40,431) ಹೆಗಡೆ ಹುರಿಯಾಳು ದೇಶಪಾಂಡೆ(1,23,731)ಯನ್ನು ಭರ್ಜರಿ ಅಂತರ(1,16,700)ದಲ್ಲಿ ಹಿಮ್ಮೆಟ್ಟಿಸಿದರು.

ಇಂದಿರಾ ಗಾಂಧಿ ಹತ್ಯೆಯ ನಂತರದ 1984ರ ಲೋಕ ಚುನಾವಣೆಯಲ್ಲಿ ಕೆನರಾ ಮತ್ತೊಮ್ಮೆ ಬಂಗಾರಪ್ಪ-ಹೆಗಡೆ ಮೇಲಾಟದ ರಣರಂಗವಾಗಿತ್ತು. ಬಂಗಾರಪ್ಪ ಬಲದ ದೇವರಾಯ ನಾಯ್ಕ್ (ಕಾಂಗ್ರೆಸ್) ಮತ್ತು ಹೆಗಡೆ ಕೃಪಾಶೀರ್ವಾದದ ಜಿ.ಎಸ್.ಹೆಗಡೆ ಅಜ್ಜೀಬಳ (ಜನತಾ ಪಕ್ಷ) ಎದುರಾಳಿಗಳಾಗಿದ್ದರು. ತಾನು ಕಾಂಗ್ರೆಸ್ ಬಿಟ್ಟು ಕ್ರಾಂತಿರಂಗ ಸೇರಿದಾಗ ಹಿಂಬಾಲಿಸಲಿಲ್ಲವೆಂಬ ಅಸಮಾಧಾನ ದೇವರಾಯ ನಾಯ್ಕ್ ಮೇಲೆ ಬಂಗಾರಪ್ಪನವರಿಗಿತ್ತಾದರೂ ಹೆಗಡೆ ಮೇಲಿನ ಸಿಟ್ಟಿಂದ ಸಹಿಸಿಕೊಂಡಿದ್ದರು. 1983ರಲ್ಲಿ ಜನತಾ ರಂಗ ಅಧಿಕಾರಕ್ಕೆ ತರಲು ಬೆವರಿಳಿಸಿದ್ದ ಬಂಗಾರಪ್ಪ ತನ್ನನ್ನು ಸಿಎಂ ಮಾಡಲಿಲ್ಲ ಎಂಬ ಬೇಸರಕ್ಕಿಂತ ಜನತಾರಂಗದ ಗೆಲುವಿಗೆ ಹೆಚ್ಚೇನೂ ಶ್ರಮಿಸದ ತನ್ನ ಶತ್ರು ಹೆಗಡೆಯನ್ನು ಮುಖ್ಯ ಮಂತ್ರಿ ಪೀಠಕ್ಕೇರಿಸಿದ್ದಕ್ಕೆ ನಿಗಿನಿಗಿ ಕೆಂಡವಾಗಿದ್ದರು. ಹಾಗಾಗಿ ಕಾಂಗ್ರೆಸ್ ಬಿಟ್ಟು ಹೋದಷ್ಟೇ ವೇಗವಾಗಿ ಮರಳಿದ್ದರು. ಈ ಹಿನ್ನೆಲೆಯಲ್ಲಿ ನಡೆದ 1984ರ ಕೆನರಾ ಲೋಕ ಚುನಾವಣೆ ಹೈಗರು ವರ್ಸಸ್ ದೀವರ ಮ್ಯಾಚ್‌ನಂತಾಗಿತ್ತು. ಈ ಪಂದ್ಯದಲ್ಲಿ ದೀವರ ದೇವರಾಯ ನಾಯ್ಕ್ (2,37,064) ಹೈಗರ ಅಜ್ಜೀಬಳ ಹೆಗಡೆ(1,87,866)ಯವರನ್ನು ಸೋಲಿಸಿ ಎರಡನೇ ಬಾರಿ ಲೋಕಸಭೆ ಸದಸ್ಯರಾದರು.

ರಾಮಕೃಷ್ಣ ಹೆಗಡೆ

1989ರ ಚುನಾವಣೆ ಎದುರಾದಾಗ ಬಂಗಾರಪ್ಪ ಮತ್ತು ದೇವರಾಯ ನಾಯ್ಕ್ ಸಂಬಂಧ ಹಳಸಿತ್ತು. ಆದರೆ ಟಿಕೆಟ್ ತಪ್ಪಿಸುವ ಅಥವಾ ಸೋಲಿಸುವ ಹಠದ ಹಂತಕ್ಕೇನೂ ಮುಟ್ಟಿರಲಿಲ್ಲ. ಆ ಲೋಕ ಸಮರದಲ್ಲಿ ದೇವರಾಯ ನಾಯ್ಕ್ ಮೂರನೇ ಬಾರಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದರು. “ಹೆಗಡೆ ಹೇಳಿದರೆ ಹಾಳುಬಾವಿಗೆ ಹಾರಲಿಕ್ಕೂ ಸಿದ್ಧ” ಎನ್ನುತ್ತಿದ್ದ ಹೆಸರಾಂತ ಸಿನೆಮಾ ನಟ ಅನಂತ್ ನಾಗ್ ಜನತಾ ದಳದ ಹುರಿಯಾಳಾಗಿದ್ದರು. ಹೊನ್ನಾವರ(ಮಲ್ಲಾಪುರ) ಮೂಲದ-ಸಾರಸ್ವತ ಬ್ರಾಹ್ಮಣ ಸಮುದಾಯದ ಅನಂತ್ ನಾಗ್ 2,09,003 ಮತ ಗಳಿಸಿ ಪ್ರಬಲ ಪೈಪೋಟಿ ನೀಡಿದರೂ ಗೆಲುವಿನ ಗೆರೆ ದಾಟಲಾಗಲಿಲ್ಲ. 2,40,571 ಮತ ಪಡೆದಿದ್ದ ಕಾಂಗ್ರೆಸ್‌ನ ದೇವರಾಯ ನಾಯ್ಕ್ ಆಯ್ಕೆಯಾದರು.

ಈ ಚುನಾವಣೆಯ ವಿಶೇಷವೆಂದರೆ, ಮೇರು ಸಾಹಿತಿ ಕೋಟ ಶಿವರಾಮ ಕಾರಂತ್ ಪಕ್ಷೇತರನಾಗಿ ಸ್ಪರ್ಧಿಸಿದ್ದರು. ಆಗ ಜೋರಾಗಿ ನಡೆಯುತ್ತಿದ್ದ ಕೈಗಾ ಅಣು ಸ್ಥಾವರ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಕಾರಂತರು ಉತ್ತರ ಕನ್ನಡದಲ್ಲಿ ಓಡಾಡುತ್ತಿದ್ದರು. ಪರಿಸರವಾದಿಗಳ ಒತ್ತಾಯಕ್ಕೆ ಕಟ್ಟುಬಿದ್ದು ನಾಮಪತ್ರ ಸಲ್ಲಿಸಿದ್ದ ಕಾರಂತರು ಒಂದು ದಿನವೂ ಪ್ರಚಾರಮಾಡದೆ ವಿದೇಶಕ್ಕೆ ಹೋಗಿಬಿಟ್ಟರು. ಚುನಾವಣೆ ಮುಗಿಯುವವರೆಗೂ ಬರಲಿಲ್ಲ. ಪರಿಸರವಾದಿಗಳೇ ಚುನಾವಣಾ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಹಾಕದೆ ಕಾರಂತರಿಗೆ ಬೆಂಬಲ ಘೋಷಿಸಿತ್ತು. 58,902 ಮತವಷ್ಟೇ ಕಾರಂತರಿಗೆ ಬಂತು. ಅವರಿಗಿಂತ ಹೆಚ್ಚು ಮತ(80,560)ಗಳನ್ನು ರೈತ ಸಂಘದ ಬಸಣ್ಣ ಪಟ್ಟೇಗಾರ್ ಪಡೆದಿದ್ದರು.

1991ರಲ್ಲಿ ಜೋಕಿಮ್ ಆಳ್ವರ ಸೊಸೆ(ಮಗನ ಮಡದಿ) ಅಂದಿನ ಕೇಂದ್ರ ಸಚಿವೆ-ಮಾರ್ಗರೆಟ್ ಆಳ್ವ ಕ್ಷೇತ್ರದ ಜತೆ ಯಾವ ನಂಟಿಲ್ಲದಿದ್ದರೂ ತಾನು ಕೆನರಾದ ಸೊಸೆ ಎನ್ನುತ್ತ ಕಾಂಗ್ರೆಸ್ ಅಭ್ಯರ್ಥಿಯಾಗುವ ಪ್ರಯತ್ನ ಹೈಕಮಾಂಡ್ ಮಟ್ಟದಲ್ಲಿ ನಡೆಸಿದ್ದರು. ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಸ್ವಜಾತಿಬಂಧು ದೇವರಾಯ ನಾಯ್ಕ್ ಪರ ವಕಾಲತ್ತು ನಡೆಸಿದ್ದರು. ದೇವರಾಯ ನಾಯ್ಕ್ ಮತ್ತು ಮಾಜಿ ಶಾಸಕ ಬಿಜೆಪಿಯ ಡಾ.ಎಂ.ಪಿ.ಕರ್ಕಿ ನಡುವೆ ನೇರ ಕಾಳಗ ನಡೆಯಿತು. ನಿಕಟ ಸ್ಪರ್ಧೆಯಲ್ಲಿ ದೇವರಾಯ ನಾಯ್ಕ್(1,71,436) ತೀರಾ ಸಣ್ಣ ಅಂತರ(29,964)ದಲ್ಲಿ ಆಯ್ಕೆಯಾಗಿ ನಿಟ್ಟುಸಿರು ಬಿಟ್ಟಿದ್ದರು. ಜನತಾ ದಳದ ದೇಶಪಾಂಡೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ಧರ್ಮಕಾರಣದ ಅನಂತಾನಂತ ಆರ್ಭಟ!!

ಮುಸ್ಲಿಮ್ ಬಾಹುಳ್ಯದ ಭಟ್ಕಳ ನಗರ ಮತ್ತದರ ಸುತ್ತಲಿನ ಹಳ್ಳಿಗಳು 1994ರ ಅಸೆಂಬ್ಲಿ ಚುನಾವಣೆಗೂ ಮೊದಲು ಒಂದಿಡೀ ವರ್ಷ ಕೋಮುದಳ್ಳುರಿಯಲ್ಲಿ ಬೆಂದುಹೋಗಿದ್ದವು. ಅಯೋಧ್ಯೋತ್ತರ ಹಿಂದುತ್ವದ ಧರ್ಮಕಾರಣವನ್ನು ಸಂಘ ಪರಿವಾರ ಭಟ್ಕಳದಲ್ಲಿ ವ್ಯವಸ್ಥಿತವಾಗಿ ಶುರುಮಾಡಿತ್ತು. ಅಂದು ಭಟ್ಕಳದ ಕೋಮು ಮಾರಣಹೋಮದ ಪುರೋಹಿತನಾಗಿದ್ದು, ಇಂದು ಕೇಸರಿ ಪರಿವಾರಕ್ಕೆ ಬೇಡದ ಪೀಡೆಯಾಗಿರುವ ವ್ಯಕ್ತಿ ಸಂಸದ ಅನಂತ್ ಕುಮಾರ್ ಹೆಗಡೆ! ಅನಂತ್ ಭಟ್ಕಳದ ಹಳ್ಳಿ-ಹಳ್ಳಿ ತಿರುಗಾಡಿ ನಾಜೂಕಾಗಿ ಹಿಂದುತ್ವ “ಪ್ರಸಾರ” ಮಾಡಿದರು. ಇಸ್ಲಮೋಫೋಬಿಯಾ ಹಬ್ಬಿಸಿದರು; ಭಟ್ಕಳದಲ್ಲಿದ್ದ ವರ್ಗ ಸಂಘರ್ಷವನ್ನು ಕೋಮು ಗಲಭೆಯಾಗಿ ಪರಿವರ್ತಿಸಿದರು. ಹಲವು ವರ್ಷ ಭಟ್ಕಳ ಯಾವ ಘಳಿಗೆಯಲ್ಲಿ ಎಂಥ ಅನಾಹುತವಾಗುವುದೋ ಎಂಬ ಆತಂಕದಿಂದ ಕಂಗಾಲಾಗಿ ಕೂತಿತ್ತು. ಹಿಂದುಳಿದ ವರ್ಗದ ಹುಡುಗರ ಮತ್ತು ಮುಸ್ಲಿಮರ ಕೊಲೆ, ರಕ್ತಪಾತ, ಸುಲಿಗೆ ನಡೆಯಿತು. ಅನಂತ್ ಹೆಗಡೆಯ ಗುರಿ ತನ್ನ ಗುರು ಡಾ.ಚಿತ್ತರಂಜನ್‌ರನ್ನು ಎಮ್‌ಎಲ್‌ಎ ಮಾಡುವುದಾಗಿತ್ತು. ಬಹುಸಂಖ್ಯಾತ ನಾಮಧಾರಿ ಮತ್ತು ಮೊಗೇರ(ಮೀನುಗಾರ) ಸಮುದಾಯದ ಅಮಾಯಕ ಯುವಕರನ್ನು ಬಳಸಿಕೊಂಡು ಅನಂತ್ ಧರ್ಮತಂತ್ರ ಹೆಣೆದರು. ಅಸೆಂಬ್ಲಿ ಚುನಾವಣೆಗೆ ಪದೇಪದೇ ನಿಂತು ಸೋಲುತ್ತಿದ್ದ ಸಂಘೀ ಶ್ರೇಷ್ಠ ಚಿತ್ತರಂಜನ್ ಪಟ್ಟ ಶಿಷ್ಯ ಭಟ್ಕಳ ಕ್ಷೇತ್ರದಲ್ಲಿ ಸೃಷ್ಟಿಸಿದ್ದ ಮತೋನ್ಮತ್ತ ವಾತಾವರಣದಿಂದ 1994ರಲ್ಲಿ ಶಾಸಕನಾದರು! ಅಘೋಷಿತ ನಾಮಧಾರಿ ಮೀಸಲು ಕ್ಷೇತ್ರದಂತಿರುವ ಭಟ್ಕಳದಲ್ಲಿ ಬ್ರಾಹ್ಮಣ ಜಾತಿಯ ಚಿತ್ತರಂಜನ್ ಶಾಸಕನಾಗಿದ್ದು ವಿಭಜಕ ಹಿಂದುತ್ವದ “ಪವಾಡ”ವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಸಂಘ ಪರಿವಾರದಲ್ಲಿ ಪ್ರಭಾವಿಯಾಗಿದ್ದ ಚಿತ್ತರಂಜನ್ ತನ್ನನ್ನು ಶಾಸಕನಾಗಿ ಮಾಡಿದ್ದ ಶಿಷ್ಯ ಅನಂತ್‌ಗೆ 1996ರ ಲೋಕಸಭಾ ಚುನಾವಣೆಯ ಕೇಸರಿ ಟಿಕೆಟ್ ಇನಾಮಾಗಿ ಕೊಡಿಸಿದರು! 26ರ ಹರೆಯದ ಹುಡುಗ ಅನಂತ್ ಭಟ್ಕಳ್ ಹೀರೋ, ಹುಬ್ಬಳ್ಳಿ ಈದ್ಗಾದಲ್ಲಿ ದ್ವಜ ಹಾರಿಸಿದ ಧೀರ ಎಂಬೆಲ್ಲ “ಖ್ಯಾತಿ” ಸಂಘ ಪರಿವಾರದಲ್ಲಿ ಹಬ್ಬಿಸಿದ ಚಿತ್ತರಂಜನ್, ಜನಸಂಘ ಕಾಲದ ಗೆಳೆಯ ಡಾ.ಎಂ.ಪಿ.ಕರ್ಕಿಯಂತ ಹಿರಿಯರನ್ನೇ ಬದಿಗೆ ಸರಿಸಲು ಯಶಸ್ವಿಯಾದರು. ಮತದಾನಕ್ಕೆ ಒಂದು ವಾರವಿರುವಾಗ ಡಾ.ಚಿತ್ತರಂಜನ್ ತನ್ನ ಮನೆಯೊಳಗೆ ತೂರಿಬಂದ ಗುಂಡಿಗೆ ನಿಗೂಢವಾಗಿ ಹತರಾದರು. ಡಾ.ಚಿತ್ತರಂಜನ್ “ಬಲಿದಾನ” ಅನಂತ್ ಕುಮಾರ್ ಹೆಗಡೆಯನ್ನು ಸಂಸದನಾಗಿ ಮಾಡಿತು ಎಂಬುದು ಇತಿಹಾಸ. ಆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಶಿಷ್ಯ ಜನತಾ ದಳದ ಹುರಿಯಾಳು ಪ್ರಮೋದ್ ಹೆಗಡೆ ಗೆಲ್ಲುವ ಸಂಕೇತಗಳನ್ನು ರಾಜಕೀಯ ವಿಶ್ಲೇಷಕರು ಗುರುತ್ತಿಸಿದ್ದರು. ಆದರೆ ಆರೆಸ್ಸೆಸ್ ನಾಯಕ ಚಿತ್ತರಂಜನ್‌ರ ಚೆಲ್ಲಿದ ರಕ್ತ ರಣಕಣದ ಚಿತ್ರಣವನ್ನೇ ಬದಲಿಸಿಬಿಟ್ಟಿತೆಂಬ ಮಾತು ಈಗಲೂ ಜಿಲ್ಲೆಯ ರಾಜಕೀಯ ಕಟ್ಟೆಯಲ್ಲಿದೆ. ಆ ಚುನಾವಣೆಯಲ್ಲಿ 80 ಸಾವಿರ ಚಿಲ್ಲರೆ ಮತಗಳಿಸಿದ್ದ ಕಾಂಗ್ರೆಸ್‌ನ ಆರ್.ಎನ್.ನಾಯ್ಕ್ ಹೀನಾಯವಾಗಿ ಮೂರನೇ ಸ್ಥಾನಕ್ಕೆ ಇಳಿದಿದ್ದರು.

ಚಿತ್ತರಂಜನ್

ಎರಡೇ ವರ್ಷದಲ್ಲಿ (1998) ಎದುರಾದ ಮಧ್ಯಂತರ ಚುನಾವಣೆ ಹೊತ್ತಿಲ್ಲಿನ್ನೂ ಡಾ.ಚಿತ್ತರಂಜನ್ ಹತ್ಯೆಯ ಅನುಕಂಪ ಮತ್ತು ಧರ್ಮತಂತ್ರದ “ಕಾವು” ಹಾಗೇ ಇತ್ತು. ಅನಂತ್ ಕುಮಾರ್ ಹೆಗಡೆಯ ಜೀವ ವಿರೋಧಿ ಹಿಂದುತ್ವಕ್ಕೆ ಎಂಪಿಗಿರಿ ಅಧಿಕಾರದ ಖದರ್ ಬಂದಿತ್ತು. ಆ ಚುನಾವಣೆಯಲ್ಲಿ ಕೆನರಾದ ಕಾಂಗ್ರೆಸ್ ಅಭ್ಯರ್ಥಿಯಾಗಬೇಕೆಂಬ ಮಾರ್ಗರೆಟ್ ಆಳ್ವರ ಬಹುದಿನದ ಕನಸು ಕೈಗೂಡಿತ್ತು. ಆದರೆ ಸಂಸದೆ ಆಗಲಾಗಲಿಲ್ಲ. ಮಾರ್ಗರೆಟ್ ಆಳ್ವ(2,76,004)ರನ್ನು ಅನಂತ್ ಹೆಗಡೆ(3,63,051) ಸುಲಭವಾಗಿ ಹಿಮ್ಮೆಟ್ಟಿಸಿದರು. ಸಂಸದನಾಗಿ ಒಂದೂವರೆ ವರ್ಷ ಕಳೆಯುವಷ್ಟರಲ್ಲೇ ಕೆನರಾದ ಮಂದಿಗೆ ಅನಂತ್ “ಅಸಲಿಯತ್ತು” ಅರ್ಥವಾಗಿತ್ತು. ಈ ಎಂಪಿಯಿಂದ ಜಿಲ್ಲೆಯ ಅಭಿವೃದ್ಧಿ ಮತ್ತು ಮನುಷ್ಯರಿಗೆ ನೆಮ್ಮದಿ ಎರಡೂ ಸಾಧ್ಯವಿಲ್ಲವೆಂಬುದು ಖಾತ್ರಿಯಾಗಿತ್ತು. ಆ ಸಂದರ್ಭದಲ್ಲಿ ದೇಶಪಾಂಡೆ ಜನತಾ ಪರಿವಾರಕ್ಕೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರಿದ್ದರು. ಅನಂತ್ ಮೇಲಿನ ಜನರ ಅಪನಂಬಿಕೆ ಮತ್ತು ದೇಶಪಾಂಡೆ ಸಹಕಾರದಿಂದ ಮಾರ್ಗರೆಟ್ ಆಳ್ವಗೆ ಅನುಕೂಲವಾಯಿತು. 1999ರ ಚುನಾವಣೆಯಲ್ಲಿ ಅನಂತ್ ಹೆಗಡೆ(3,45,655) ಕಾಂಗ್ರೆಸ್‌ನ ಮಾರ್ಗರೆಟ್ ಆಳ್ವ(3,56,246)ರಿಗೆ ಮಣಿಯಬೇಕಾಯಿತು.

ಹಿಂದುತ್ವ ಸಿದ್ಧಾಂತಿಗಳ ಅಚ್ಚುಮೆಚ್ಚಿನ ಬೆಂಕಿಚೆಂಡು ಅನಂತ್ ಹೆಗಡೆ 2004ರ ಚುನಾವಣೆಯಲ್ಲಿ ಮತ್ತೆ ಗೆಲುವು ಕಂಡರು. ಆ ಸಮರದಲ್ಲಿ ಅನಂತ್ ಹೆಗಡೆ(4,33,174) ಕಾಂಗ್ರೆಸ್‌ನ ಮಾರ್ಗರೆಟ್ ಆಳ್ವರನ್ನು ಭರ್ಜರಿ ಮತದಂತರ(1,72,226)ದಿಂದ ಹಿಮ್ಮೆಟ್ಟಿಸಿದರು. ಆನಂತರದ ಮೂರು ಕಾಳಗದಲ್ಲೂ ಅನಂತ್ ಹೆಗಡೆಯ ಕೈಯೇ ಮೇಲಾಯಿತು. ಆದರೆ 2009ರಲ್ಲಿ ಅನಂತ್ ಹೆಗಡೆ(3,39,300) ಕಾಂಗ್ರೆಸ್‌ನ ಸಾಂಪ್ರದಾಯಿಕ ಎದುರಾಳಿ ಮಾರ್ಗರೆಟ್ ಆಳ್ವ ಎದುರು ತಿಣುಕಾಡುವ ಪರಿಸ್ಥಿತಿ ಬಂದಿತ್ತು. ಕೇವಲ 22,769 ಮತದಿಂದ ಪಾರಾಗಿದ್ದರು! ಅನಂತ್ ಹೆಗಡೆ 2014ರಲ್ಲಿ ಹಳೆ ಹುಲಿ ದೇಶಪಾಂಡೆ ಸುಪುತ್ರ ಪ್ರಶಾಂತ್ ದೇಶಪಾಂಡೆ(4,06,239)ಯನ್ನು 1,40,700 ಮತದಿಂದ ಸೋಲಿಸಿದರು. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಮಂತ್ರಿ ಆನಂದ್ ಅಸ್ನೋಟಿಕರ್‌ಗೂ ಅನಂತ್ ಹೆಗಡೆಯನ್ನು ಮಾಜಿ ಮಾಡಲು ಆಗಲಿಲ್ಲ; 3,06,393 ಮತ ಪಡೆದ ಆನಂದ್ ಅಸ್ನೋಟಿಕರ್ 4,79,649 ಅಗಾಧ ಅಂತರದಲ್ಲಿ ನೆಲ ಕಚ್ಚಿದ್ದರು!!

ಈ ನಾಲ್ಕು ಚುನಾವಣೆಗಳ ಪೈಕಿ ಒಂದರಲ್ಲೂ ಅನಂತ್ ಹೆಗಡೆ ಸ್ವಂತ ಸಾಮರ್ಥ್ಯದಿಂದ ಜಯ ಸಾಧಿಸಿದ್ದಿಲ್ಲ; ಕ್ಷೇತ್ರದ ರೈತ, ತೋಟಿಗ ಮತ್ತು ಮೀನುಗಾರರ ಬವಣೆ ಬಗೆಹರಿಸುವ ಭರವಸೆ ಅಥವಾ ಅಭಿವೃದ್ಧಿ ವಿಷಯ ಮುಂದಿಟ್ಟು ಅನಂತ್ ಹೆಗಡೆ ಯಾವ ಚುನಾವಣೆಯನ್ನೂ ಎದುರಿಸಿದ್ದಿಲ್ಲ. ಮುಸ್ಲಿಮರನ್ನು ಮೂದಲಿಸಿ ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸುವ ಕುತಂತ್ರ ಹೆಣೆದರೂ ಅದರಿಂದ ಅನಂತ್ ಹೆಗಡೆಗೆ ದೊಡ್ಡ ಮಟ್ಟದ ಲಾಭ (ದಕ್ಷಿಣ ಕನ್ನಡದಲ್ಲಾಗುವಂತೆ) ಏನಾಗಿಲ್ಲ. ಅನಂತ್ ಹೆಗಡೆಯ ರಾಜಕೀಯ “ಗತಿ” ಗ್ರಾಫು ಸೂಕ್ಷ್ಮವಾಗಿ ಗಮನಿಸಿದರೆ ಪ್ರಚೋದನಾತ್ಮಕ ಹಿಂದುತ್ವ ಕ್ಷೇತ್ರದ ಜನರಿಗೆ ಹಿಡಿಸಿಲ್ಲವೆಂಬುದು ಖಾತ್ರಿಯಾಗುತ್ತದೆ. ಅನಂತ್ ಹೆಗಡೆ 2004 ಮತ್ತು 2009ರಲ್ಲಿ ಸಂಸದನಾಗಿದ್ದು ಕಾಂಗ್ರೆಸ್‌ನ ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವ ವೈರಿ ಬಣಗಳ ಮನೆಮುರುಕು ಕಿತ್ತಾಟದಿಂದ ಎಂಬುದನ್ನು ಚುನಾವಣಾ ಅಂಕಿ-ಅಂಶಗಳು ಹೇಳುತ್ತವೆ.

ಇದನ್ನೂ ಓದಿ: ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20,000 ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

2004ರಲ್ಲಿ ದೇಶಪಾಂಡೆ ತನ್ನ ಏಕಚಕ್ರಾಧಿಪತ್ಯಕ್ಕೆ ಸವಾಲಾಗಿರುವ ಮಾರ್ಗರೆಟ್ ಆಳ್ವರನ್ನು ಸೋಲಿಸಿ ಜಿಲ್ಲೆಯಿಂದ ಹೊರಹಾಕುವ ಹಠಕ್ಕೆ ಬಿದ್ದಿದ್ದರು. 2009ರಲ್ಲಂತೂ ಮಾರ್ಗರೆಟ್ ಆಳ್ವಗೆ ಸ್ವಪಕ್ಷದ ದೇಶಪಾಂಡೆ ಬಳಗದ ಪ್ರತಿರೋಧದ ಜತೆ ನೈಜ ದಲಿತರಿಗೆ ಅನ್ಯಾಯವಾಗುವ ಸ್ಪೃಶ್ಯ ಮೊಗೇರ(ಮೀನುಗಾರ) ಸಮುದಾಯಕ್ಕೆ ಎಸ್ಸಿ ಮೀಸಲಾತಿ ಕೊಡಿಸಲು ಪ್ರಯತ್ನಿಸಿದ್ದು ದುಬಾರಿಯಾಯಿತು. ದಲಿತರು ತಿರುಗಿಬಿದ್ದಿದ್ದು ಗೆಲುವಿನ ಹೊಸ್ತಿಲಿಗೆ ಬಂದಿದ್ದ ಮಾರ್ಗರೆಟ್ ಆಳ್ವ ಬರೀ 22,769 ಮತಗಳ ಹಿನ್ನಡೆಯಿಂದ ಎಡವಿದರು. ಆಂಟಿ ಇನ್ಕಂಬೆನ್ಸಿಯಲ್ಲಿ ಹೈರಾಣಾಗಿದ್ದ ಅನಂತ್ ಹೆಗಡೆ 2014ರಲ್ಲಿ ಮೋದಿ ಮೇನಿಯಾ ಅಲೆಯಲ್ಲಿ ಸಲೀಸಾಗಿ ದಿಲ್ಲಿಗೆ ತೇಲಿದ್ದರು. 2009ರಲ್ಲಿ ಕಾಂಗ್ರೆಸ್-ಜೆಡಿಎಸ್ ಅಸಹಜ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ದೌರ್ಬಲ್ಯ ಮತ್ತು ಮೋದಿಯ ಪುಲ್ವಾಮಾ ಇವೆಂಟ್ ಮ್ಯಾನೇಜ್ಮೆಂಟ್ ಷಡ್ಯಂತ್ರದ ದೊಡ್ಡ ಫಲಾನುಭವಿ ಅನಂತ್ ಹೆಗಡೆಯಾಗಿದ್ದರು ಎಂಬ ವಿಶ್ಲೇಷಣೆಗಳು ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ.

ಅಂಜಲಿ ನಿಂಬಾಳ್ಕರ್ ವರ್ಸಸ್ ಕಾಗೇರಿ ಹೆಗಡೆ

ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ ಕ್ಯಾಂಡಿಡೇಟೆಂದು ಘೋಷಣೆಯಾದ ಎಂಟ್ಹತ್ತು ದಿನದ ನಂತರ ಹಲವು ಸಲ ಅಳೆದು, ತೂಗಿ ಅಂತೂ ಶಿರಸಿಯ ಮಾಜಿ ಎಮ್ಮೆಲ್ಲೆ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಬಿಜೆಪಿ ತನ್ನ ಬ್ಲಾಕ್‌ಹಾರ್ಸ್ ಎಂದು ಅಖಾಡಕ್ಕೆ ಕಳಿಸಿದೆ. ಬಾಯಿಗೆ ಬಂದಂತೆ ಅಬ್ಬರಿಸಿ ಬೊಬ್ಬಿರಿವ ಸಂಸದ ಅನಂತ್ ಹೆಗಡೆಗೆ 2024ರ ಲೋಕ ಅಭ್ಯರ್ಥಿ ಮಾಡಬಾರದೆಂಬ ದೃಢ ನಿರ್ಧಾರಕ್ಕೆ ಆರೆಸ್ಸೆಸ್‌ನ ನಂಬರ್ ಟೂ ಯಜಮಾನ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ಟಿಕೆಟ್ ಕಮಿಟಿಯ ಆಯಕಟ್ಟಿನಲ್ಲಿರುವ ಬಿ.ಎಲ್.ಸಂತೋಷ್ ಮತ್ತು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿಯೇ ಮುಂತಾದ ಕೇಸರಿ ಪರಿವಾರದ ಪ್ರಮುಖ ವಿಪ್ರೋತ್ತಮರು 2023ರ ಅಸೆಂಬ್ಲಿ ಚುನಾವಣೆ ಹೊತ್ತಲ್ಲೇ ಬಂದಿದ್ದರೆನ್ನಲಾಗಿದೆ. ತಾನು ಹೇಳಿದವರಿಗೆ ಅಸೆಂಬ್ಲಿ ಟಿಕೆಟ್ ಕೊಡಲಿಲ್ಲವೆಂದು ಅನಂತ್ ಹೆಗಡೆ ಬಿಜೆಪಿಯ ಪ್ರಶ್ನಾತೀತ ಘಟಾನುಘಟಿಗಳಿಗೇ ತಿರುಗಿಬಿದ್ದಿದ್ದರು. ಚುನಾವಣಾ ಪ್ರಚಾರಕ್ಕೆಂದು ಉತ್ತರ ಕನ್ನಡದ ಅಂಕೋಲೆಗೆ ಪಿಎಂ ಮೋದಿ ಬಂದಾಗ ಬಹಿಷ್ಕಾರ ಹಾಕಿದ್ದರು. ಸ್ವಪಕ್ಷದ ಚುನಾವಣಾ ಪ್ರಚಾರಕ್ಕೆ ಹೋಗುವುದಿರಲಿ ಕಾರವಾರ, ಭಟ್ಕಳ್, ಶಿರಸಿಯ ಕೇಸರಿ ಕ್ಯಾಂಡಿಡೇಟ್‌ಗಳನ್ನು ಸೋಲಿಸಲು ಅರ್ಥಾತ್ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಒಳ ಒಡಂಬಡಿಕೆ ಮಾಡಿಕೊಂಡಿದ್ದರು. ಈ ವಿದ್ರೋಹದ ಪುರಾಣ ಹೈಕಮಾಂಡ್ ಕಿವಿಗೂ ತಲುಪಿ ಅನಂತ್ ಹೆಗಡೆಯನ್ನು ಅಂದೇ ಬ್ಲಾಕ್ ಲಿಸ್ಟ್‌ಗೆ ಹಾಕಲಾಗಿತ್ತು ಎನ್ನಲಾಗುತ್ತಿದೆ.

ಅನಂತ್ ಕುಮಾರ್ ಹೆಗಡೆ

ಹಿಂದುತ್ವದ ರಾಜಕಾರಣ ಕಲಬೆರಕೆಯಾಗಿದೆ; ಬಿಜೆಪಿ ವಿದ್ಯಮಾನಗಳು ರೇಜಿಗೆ ಮೂಡಿಸುತ್ತಿವೆ. ತನಗೆ ರಾಜಕಾರಣ ಸಾಕಾಗಿದೆ; ಚುನಾವಣೆಗೆ ಮತ್ತೆ ನಿಲ್ಲುವ ಮನಸ್ಸಿಲ್ಲ; ಆರೋಗ್ಯ ಸರಿಯಿಲ್ಲ ಎಂಬೆಲ್ಲ ವೈರಾಗ್ಯದ “ಸಂದೇಶ”ಗಳನ್ನು ಒಂದು ವರ್ಷದಿಂದ ಅನಂತ್ ಹೆಗಡೆ ಕಳಿಸುತ್ತಲೇ ಇದ್ದರು. ಇದು ಅನಂತ್ ಹೆಗಡೆಯ ಅಧಿಕೃತ ನಿರಾಸಕ್ತಿಯೆಂದು ಭಾವಿಸಿ ಡಜನ್‌ಗಟ್ಟಲೆ ಎಂಪಿ ಉಮೇದುವಾರರು ಬಿಜೆಪಿಯಲ್ಲಿ ಹುಟ್ಟಿಕೊಂಡಿದ್ದರು. ಯಾವಾಗ ಮಾಜಿ ಸ್ಪೀಕರ್ ಕಾಗೇರಿ, ಹಿಂದುತ್ವದ ಹೆಂಗ್ ಪುಂಗ್ ಲೀ ಚಕ್ರವರ್ತಿ ಸೂಲಿಬೆಲೆ, ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಕೇಸರಿ ಟಿಕೆಟ್‌ಗೆ ಗಂಭೀರ ಪ್ರಯತ್ನ ಶುರುಹಚ್ಚಿಕೊಂಡರೋ ಆಗ ಅನಂತ್ ಹೆಗಡೆ ಗಾಬರಿಬಿದ್ದರು. ತನ್ನನ್ನು ಸಕ್ರಿಯ ರಾಜಕಾರಣಕ್ಕೆ ಬರುವಂತೆ ಒತ್ತಾಯಿಸುವ ನಿಯೋಗ ತರುವಂತೆ ಸಿದ್ಧಾಪುರ, ಹೊನ್ನಾವರದ ಹಿಂಬಾಲಕರಿಗೆ ಹೇಳಿದರು. ಅನಂತ್ ಕುಮಾರ್ ಹೆಗಡೆಯದೇ ಪ್ರಾಯೋಜಕತ್ವದ ಟೀಮುಗಳು ಮತ್ತೆ ಲೋಕಸಭೆಗೆ ಸ್ಪರ್ಧಿಸುವಂತೆ ದುಂಬಾಲು ಬೀಳುವ ಪ್ರಹಸನಗಳೂ ನಡೆದವು. ಮರುದಿನವೇ ಅನಂತ್ ಹೆಗಡೆ ಸಿಎಂ ಸಿದ್ದರಾಮಯ್ಯರನ್ನು ಏಕವಚನದಲ್ಲಿ ಬೈಯ್ಯುತ್ತ, ಸಂವಿಧಾನ ಬದಲಿಸುವ ಮಾತಾಡುತ್ತ, ಯಾವ್ಯಾವುದೋ ಮಸೀದಿಯಲ್ಲಿ ಲಿಂಗ, ದೇವರ ಮೂರ್ತಿಗಳನ್ನು ಸಂಶೋಧಿಸುತ್ತ ಜಿಲ್ಲಾ ಪ್ರವಾಸ ಹೊರಟುಬಿಟ್ಟರು.

ಕೇಸರಿ ಹೈಕಮಾಂಡಿಗೆ ತಾನು ಅನಿವಾರ್ಯ ಅಭ್ಯರ್ಥಿ ಆಗುವಂತೆ ಮಾಡಲು ಪ್ರಯತ್ನಿಸಿದರು. ಅದೆಷ್ಟೇ ಕಸರತ್ತು ಮಾಡಿದರೂ ಟಿಕೆಟ್ ಸಿಗುವ ಭರವಸೆ ಮೂಡಲಿಲ್ಲ. ಒಂದು ಹಂತದಲ್ಲಿ ತನಗೆ ಟಿಕೆಟ್ ಕೊಡುವುದಿಲ್ಲವೆಂದಾದರೆ ರಾಮಕೃಷ್ಣ ಹೆಗಡೆ ಮೊಮ್ಮನಿಗೆ ಅಭ್ಯರ್ಥಿ ಮಾಡಿಯೆಂದು ಅನಂತ್ ಹೆಗಡೆ ಹೇಳುತ್ತಿದ್ದಾರೆಂಬ ಸುಳ್ಳು ಸುದ್ದಿಗಳು ಹಬ್ಬಿತ್ತು. ಅಂತಿಮವಾಗಿ ಅನಂತ್ ಸಂವಿಧಾನ ಬದಲಿಸುವ ಭಾಷಣ ಬಿಗಿದು ಬಿಜೆಪಿಗೇ ಡ್ಯಾಮೇಜ್ ಮಾಡುವ ಪ್ಲಾನು ಹಾಕಿದರೆನ್ನಲಾಗಿದೆ. ಅತಿರೇಕದ ಮತಾಂಧ ಮಾತುಗಾರಿಕೆ ಮತ್ತು ಸಂವಿಧಾನ ವಿರೋಧಿ ಹೇಳಿಕೆಗಳೇ ಅನಂತ್ ಹೆಗಡೆಗೆ ಕೇಸರಿ ಟಿಕೆಟ್ ತಪ್ಪಲು ಕಾರಣವೆಂದು ಸುದ್ದಿ ಚಾನಲ್‌ಗಳು, ಪತ್ರಕರ್ತ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಆದರೆ ಟಿಕೆಟ್ ಕೈಗೆಟುಕದ ಹತಾಶೆಯಿಂದ ಬಿಜೆಪಿಯ ದೊಡ್ಡವರನ್ನು ಸಂದಿಗ್ಧಕ್ಕೆ ಸಿಲುಕಿಸಲೆಂದೇ “ಸಂವಿಧಾನ ವಿವಾದ” ಭುಗಿಲೇಳುವಂತೆ ಮಾಡಿದರೆಂದು ಅನಂತ್ ಹೆಗಡೆಯ ಅಂತರಂಗ ಬಲ್ಲವರು ತರ್ಕಿಸುತ್ತಾರೆ.

ಅನಂತ್ ಹೆಗಡೆಗೆ ಕೇಸರಿ ಟಿಕೆಟ್ ತಪ್ಪಿರುವುದಕ್ಕೆ ಕೆಲವೇ ಕೆಲವು ಹಿಂಬಾಲಕರನ್ನು ಬಿಟ್ಟರೆ ಬಿಜೆಪಿಯಲ್ಲಿ ಮತ್ಯಾರಿಗೂ ಬೇಸರವಾಗಿಲ್ಲ; ಸಾರ್ವಜನಿಕ ವಲಯದಲ್ಲಂತೂ “ಪೀಡೆ ತೊಲಗಿತು” ಎಂಬ ಉದ್ಗಾರ ಕೇಳಿಬರುತ್ತಿದೆ. ದೇಶ ಭಕ್ತಿ, ಧರ್ಮ ನಿಷ್ಠೆಯ ಉದ್ದುದ್ದ ವ್ಯಾಖ್ಯಾನ ಹೇಳುತ್ತಲೇ ಕೋಟಿಗಳ ಲೆಕ್ಕದಲ್ಲಿ ಬಂಗಲೆ, ಆಸ್ತಿ, ತೋಟ ಮಾಡಿಕೊಂಡಿರುವ ಅನಂತ್ ಬಗ್ಗೆ ಸಂಘ ಪರಿವಾರದಲ್ಲೂ ಸದಭಿಪ್ರಾಯವಿರಲಿಲ್ಲ; ಅನಂತ್ ಹೆಗಡೆ ಎಂಪಿ ನಿಧಿ ಬಳಸಿರುವ ನಿಗೂಢ ರೀತಿ ಅನೇಕ ಅನುಮಾನ ಹುಟ್ಟುಹಾಕಿದೆ. ಕ್ಷೇತ್ರದ ದಶದಿಕ್ಕಲ್ಲಿ ಆರು ಬಾರಿ ಗೆಲ್ಲಿಸಿದರೂ ಮೂರು ಬಿಲ್ಲಿ ಕೆಲಸ ಮಾಡದ ಕರ್ಮಗೇಡಿ ಎಂದು ಜನರು ತಿರಸ್ಕಾರದಿಂದ ಮಾತಾಡುವುದು ಸಾಮಾನ್ಯವಾಗಿತ್ತು. ಬಿಜೆಪಿ-ಸಂಘ ಪರಿವಾರ ಮಾಡಿಸಿದ್ದ ಸರ್ವೆಗಳಲ್ಲೂ ಅನಂತ್ ಈ ಬಾರಿ ಗೆಲ್ಲುವುದು ಕಷ್ಟವೆಂಬ ಫಲಿತಾಂಶವೇ ಬಂದಿತ್ತೆನ್ನಲಾಗಿದೆ. ಅನಂತ್ ಹೆಗಡೆ ಕೇಸರಿ ಟಿಕೆಟ್‌ಗಾಗಿ ವಿಫಲ ಯತ್ನ ನಡೆಸಿರುವಾಗಲೇ ಹರಿಪ್ರಕಾಶ್ ಕೋಣೆಮನೆ ಮತ್ತು ಚಕ್ರವರ್ತಿ ಸೂಲಿಬೆಲೆ ತಂತಮ್ಮ ಗಾಡ್ ಫಾದರ್‌ಗಳ ಮೂಲಕ ಬಿಜೆಪಿ ಹುರಿಯಾಳಾಗಲು ಶತಾಯಗತಾಯ ಹೋರಾಡಿದ್ದರು. ಆದರೆ ಎಬಿವಿಪಿ ದಿನಗಳಿಂದಲೂ ಗೆಳೆಯನಾಗಿರುವ ಪ್ರಭಾವಿ ಆರೆಸ್ಸೆಸ್ ನಾಯಕ ದತ್ತಾತ್ರೇಯ ಹೊಸಬಾಳೆ, ಬಿಎಲ್ ಸಂತೋಷ್ ಮತ್ತು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿಗಳ ಒತ್ತಾಸೆಯಿಂದ ಕಾಗೇರಿ ಕೇಸರಿ ಕ್ಯಾಂಡಿಡೇಟಾಗಿದ್ದಾರೆಂಬ ಸುದ್ದಿಗಳು ಬಿಜೆಪಿ ಬಿಡಾರದಿಂದ ಹೊರಬರುತ್ತಿದೆ.

ಬಿಜೆಪಿಯಲ್ಲಿದ್ದ ಟಿಕೆಟ್ ತುರುಸಿನ ಕಾಲು ಭಾಗದಷ್ಟೂ ಕಾಂಗ್ರೆಸ್‌ನಲ್ಲಿ ಉತ್ಸಾಹವಿರಲಿಲ್ಲ. ಆರಂಭದಿಂದಲೂ ಖಾನಾಪುರದ ಮಾಜಿ ಶಾಸಕಿ-ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿ ಎಸ್.ಬಿ.ಚವ್ಹಾಣ್ ಮೊಮ್ಮಗಳು-ಪ್ರಭಾವಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮಡದಿ ಅಂಜಲಿ ನಿಂಬಾಳ್ಕರ್ ಒಬ್ಬರು ಮಾತ್ರ ಕೈ ಕ್ಯಾಂಡಿಡೇಟಾಗುವ ಗಂಭೀರ ಪ್ರಯತ್ನ ಮಾಡಿದ್ದರು. ಒಂದು ಹಂತದಲ್ಲಿ ಸುದೀರ್ಘ ಕಾಲ ಜಿಲ್ಲಾ ಮಂತ್ರಿಯಾಗಿದ್ದ ದೇಶಪಾಂಡೆ, ಅವರ ಪುತ್ರ ಪ್ರಶಾಂತ್ ದೇಶಪಾಂಡೆ, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಅರಣ್ಯ ಸಾಗುವಳಿದಾರರ ಸಂಘದ ಮುಂದಾಳು ರವೀಂದ್ರ ನಾಯ್ಕ್ ಹೆಸರು ಕೇಳಿಬಂದಿತ್ತು. ನಂಬಿದವರೆ ಮೋಸ ಮಾಡಿದ್ದರಿಂದ 2014ರಲ್ಲಿ ಮಗ ಪ್ರಶಾಂತ್ ಹೀನಾಯವಾಗಿ ಸೋತಿದ್ದಿನ್ನೂ ದೇಶಪಾಂಡೆಗೆ ಅರಗಿಸಿಕೊಳ್ಳಲಾಗಿಲ್ಲ. ಪ್ರಶಾಂತ್ ಕೂಡ ಧೈರ್ಯ ತೋರಿಸಲಿಲ್ಲ; ದೇಶಪಾಂಡೆಗೇ ಸ್ಫರ್ಧಿಸುವಂತೆ ಡಿಕೆಶಿ ಹೇಳಿದ್ದರು; ಈ ಇಳಿ ವಯಸ್ಸಿನಲ್ಲಿ ತಾನೊಲ್ಲೆ ಎಂದು ದೇಶಪಾಂಡೆ ತಪ್ಪಿಸಿಕೊಂಡರೆನ್ನಲಾಗಿದೆ.

ಬಂಗಾರಪ್ಪ

ಕಾಂಗ್ರೆಸ್ ಮಾಡಿಸಿದ ಸಮೀಕ್ಷೆಗಳಲ್ಲೂ ಬಹುಸಂಖ್ಯಾತ ಮರಾಠ ಸಮುದಾಯದ ಅಂಜಲಿ ನಿಂಬಾಳ್ಕರ್ ಫೇವರಿಟ್ ಆಗಿದ್ದರು. ಸುಮಾರು ಎರಡೂವರೆ ಲಕ್ಷದಷ್ಟಿರುವ ಮುಸಲ್ಮಾನ ಮತ ಗಳಿಸುವ ಕಾಂಗ್ರೆಸ್, ಪ್ರಬಲ ಮರಾಠ ಪಂಗಡದ ಅಂಜಲಿ ನಿಂಬಾಳ್ಕರ್‌ಗೆ ಕಣಕ್ಕಿಳಿಸಿ ಉತ್ತರ ಕನ್ನಡದ ಒಬಿಸಿ ಮತಗಳ ಮೇಲೆ ಗಮನ ಕೇಂದ್ರೀಕರಿಸಿದರೆ ಗೆಲುವು ಕಷ್ಟವೇನಲ್ಲ ಎಂದು ಕೈ ಸರ್ವೆಗಳು ಹೇಳಿವೆಯೆಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಅಸೆಂಬ್ಲಿ ಸೆಗ್ಮೆಂಟ್‌ಗಳಲ್ಲಿ ಏಳರಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣವಿದ್ದರೂ ಕುಮಟ-ಹೊನ್ನಾವರದಲ್ಲಿ ಮಾತ್ರ ಗಂಡಾಂತರಕಾರಿ ಸ್ಥಿತಿಯಿದೆ. ಇಲ್ಲಾಗುವ ಹಿನ್ನಡೆ ಉಳಿದೆಡೆಯ ಮುನ್ನಡೆ ಅಳಿಸಿಹಾಕುವಷ್ಟು ಪ್ರಬಲವಾಗುವ ಸಾಧ್ಯತೆಯಿದೆ; ಇಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವ ನಿವೇದಿತ್ ಆಳ್ವ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಬೆಂಗಳೂರು-ದಿಲ್ಲಿಯಲ್ಲಿ ಬಿಸ್ನೆಸ್ ಮಾಡುತ್ತಿರುವ ಆಳ್ವ ಕ್ಷೇತ್ರದಲ್ಲಿ ಕಾಣಿಸುವುದು ಅಪರೂಪ; ಕಾರ್ಯಕರ್ತರ ಸಂಪರ್ಕ ಆಳ್ವರಿಗಿಲ್ಲ. ಕುಮಟಾ ಕಾಂಗ್ರೆಸ್‌ನಲ್ಲಿ ಅರಾಜಕತೆಯಿದೆ .ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದ ಸಿಟ್ಟಲ್ಲಿ ನಿಷ್ಕ್ರಿಯರಾಗಿರುವ ಮಾಜಿ ಶಾಸಕಿ ಶಾರದಾಶೆಟ್ಟಿಯನ್ನು ಸಕ್ರಿಯಗೊಳಿಸುವುದೊಂದೇ ಪರಿಹಾರೋಪಾಯವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಹೇಳುತ್ತಾರೆ.

ಕ್ಷೇತ್ರ ಹೇಗೆ ಹದವಾಗಿದೆ?

ಉತ್ತರ ಕನ್ನಡ ಲೋಕ ಅಖಾಡದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ನೇರ ಹಣಾಹಣಿಯಿದೆ. ಅಳಿದುಳಿದ ಜೆಡಿಎಸ್‌ಗೆ ಹೋಗುತ್ತಿದ್ದ ಓಟುಗಳು ಈ ಸಲ ಕಾಂಗ್ರೆಸ್‌ಗೆ ಹೆಚ್ಚು ದಕ್ಕುವ ಸೂಚನೆ ಗೋಚರಿಸುತ್ತಿದೆ. ಅಧಿಕಾರ ರಾಜಕಾರಣದ ಜಾತಿ ಸೂತ್ರ-ಸಮೀಕರಣದ “ಫಾಯದೆ” ರುಚಿ ಗೊತ್ತಿರುವ ಪ್ರಬಲ ಹವ್ಯಕ ಬ್ರಾಹ್ಮಣರು ಮತ್ತು ದೀವರು-ನಾಮಧಾರಿ ಸಮುದಾಯದ ಸಂಖ್ಯೆ ದೊಡ್ಡದಿದ್ದರೂ ಖಾನಾಪುರ, ಹಳಿಯಾಳ, ದಾಂಡೇಲಿ, ಜೊಯಿಡಾ ಮತ್ತು ಯಲ್ಲಾಪುರದಲ್ಲಿ ಹಬ್ಬಿರುವ ಮರಾಠರು, ಮುಸ್ಲಿಮ್-ಕ್ರಿಶ್ಚಿಯನ್ ವರ್ಗದ ಅಲ್ಪಸಂಖ್ಯಾತರು, ಹಾಲಕ್ಕಿ ಬುಡಕಟ್ಟು ಮತ್ತು ಮೊಗೇರ, ಹರಿತಂತ್ರ, ಖಾರ್ವಿ, ಅಂಬಿಗರೇ ಮುಂತಾದ ಮೀನುಗಾರಿಕಾ ಕುಲಕಸುಬಿನ ಬೆಸ್ತರು ನಿರ್ಣಾಯಕರು. ಹಾಲಕ್ಕಿ ಒಕ್ಕಲಿಗರು, ಮರಾಠ ಮತ್ತು ಮುಸ್ಲಿಮ್ ನಡುವೆ ಸಮನ್ವಯ ಸಾಧಿಸಿದರೆ ಬಿಜೆಪಿ ಸಿದ್ಧ ಸಿದ್ಧಾಂತ ಸುಳ್ಳಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.

ಕ್ಷೇತ್ರದಲ್ಲಿ ಹವ್ಯಕ ಬ್ರಾಹ್ಮಣರು ಮತ್ತು ದೀವರು ಹೆಚ್ಚುಕಮ್ಮಿ ಸಮ ಬಲದಲ್ಲಿದ್ದಾರೆ. ಹೈಗರ ಮೊದಲ ಪ್ರಾಶಸ್ತ್ಯವೇನಿದ್ದರೂ ಸ್ವಜಾತಿ ಹುರಿಯಾಳಿಗೆ. ಯಾವ ಪಕ್ಷ ತಮ್ಮವರಿಗೆ ಮಣೆ ಹಾಕುತ್ತದೋ ಅತ್ತ ಬ್ರಾಹ್ಮಣರು ಒಲಿಯುತ್ತಾರೆ. ಪ್ರಮುಖ ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸ್ವಜಾತಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆಗ ಬ್ರಾಹ್ಮಣರು ವೈದಿಕ ಆದರ್ಶದ ಬಿಜೆಪಿ ಬೆನ್ನಿಗಿರುತ್ತಾರೆ. ಹೈಗರ ಶೇ.99ರಷ್ಟು ಮತ ಒಂದೇ ಅಭ್ಯರ್ಥಿಗೆ ಬೀಳುತ್ತದೆ. ಇಂಥ “ತಿಳಿವಳಿಕೆ” ದೀವರಲ್ಲಿಲ್ಲ. ಬಂಗಾರಪ್ಪ ಯುಗದಲ್ಲಿ ದೀವರಲ್ಲಿ ಒಗ್ಗಟ್ಟಿತ್ತು. ಧರ್ಮಕಾರಣ ದೀವರನ್ನು ಒಡೆದುಹಾಕಿದೆ. ಒಡೆದಾಳುವ ತಂತ್ರಗಾರಿಕೆಯಿಂದ ಮೂರು ದಶಕದಿಂದ ಬಿಜೆಪಿ ಬ್ರಾಹ್ಮಣ ಮುಂದಾಳುಗಳು ಉತ್ತರ ಕನ್ನಡದ ರಾಜಕಾರಣ ಕಬ್ಜಾ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿ ದೀವರು-ನಾಮಧಾರಿಗಳು-ಹಳೆಪೈಕರು(ಈಡಿಗರು) ಕಾಂಗ್ರೆಸ್‌ನ ಬೆನ್ನೆಲುಬಾಗಿದ್ದರು. ಈ ಓಟ್ ಬ್ಯಾಂಕ್ ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವ ಮೇಲಿನ ಸಿಟ್ಟಿನಿಂದ ಕಳೆದ ಎರಡು ದಶಕದಿಂದ ಬಿಜೆಪಿ ಕಡೆ ವಾಲಿತ್ತು. ಬಿಜೆಪಿಯಲ್ಲಿನ ಬ್ರಾಹ್ಮಣ ಪ್ರಾಬಲ್ಯ-ಪ್ರಾಶಸ್ತ್ಯದಿಂದ ಅಲ್ಲೂ ಕಡೆಗಣಿಸಲ್ಪಟ್ಟರು. ಹಾಗಾಗಿ ಈಡಿಗರು ಕಳೆದ 2023ರ ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಈಡಿಗರ ಯುವಪೀಳಿಗೆಯ ಒಂದು ವರ್ಗ ಅನಂತ್ ಹೆಗಡೆಯ ಅಬ್ಬರದಿಂದ ಕೆರಳಿಸುವ ಹಿಂದುತ್ವಕ್ಕೆ ಮರುಳಾಗಿತ್ತು. ಈ ಹುಡುಗರು ಅನಂತ್‌ಗೆ ಟಿಕೆಟ್ ಸಿಗದ ಬೇಸರದಲ್ಲಿ ಬಿಜೆಪಿಗೆ ಕೈಕೊಡುವ ಸಾಧ್ಯತೆಯಿದೆ. ಅಂಥದೊಂದು ರಹಸ್ಯ “ಫರ್ಮಾನು” ಅನಂತ್ ಹೆಗಡೆ ತನ್ನ ಅನುಯಾಯಿಗಳಿಗೆ ಹೊರಡಿಸುವ ಸಾಧ್ಯತೆಯಿದೆ ಎಂದು ಬಿಜೆಪಿಗರೇ ಹೇಳುತ್ತಾರೆ. ಶಿರಸಿಯಲ್ಲಿ ಕಾಗೇರಿ 2023ರ ಚುನಾವಣೆಯಲ್ಲಿ “ದೀವರ ವಿರೋಧಿ”ಎಂದು ಬ್ರಾಂಡ್ ಆದದ್ದೇ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆ ಹಣೆಪಟ್ಟಿ ಇನ್ನೂ ಕಾಗೇರಿಗೆ ಕಳಚಿಕೊಳ್ಳಲಾಗಿಲ್ಲ. ಶಿರಸಿಯ ಕಾಂಗ್ರೆಸ್ ಎಮ್ಮೆಲ್ಲೆ ಭೀಮಣ್ಣ ನಾಯ್ಕ್ ಮತ್ತವರ ಸೋದರಳಿಯ-ಸಚಿವ ಮಧು ಬಂಗಾರಪ್ಪರಿಗೆ ಸೋದರ ಸ್ಥಳೀಯ ದೀವರು ಸಮುದಾಯದ ಮೇಲೆ ಹಿಡಿತವಿದೆ. ಬಂಗಾರಪ್ಪರ ಸಂಗಡ ಬಿಜೆಪಿಗೆ ಹೋಗಿದ್ದ ದೀವರು ಬಂಗಾರಪ್ಪ ಅಲ್ಲಿಂದ ಹೊರಬಂದರೂ ಅಲ್ಲೇ ಇದ್ದರು. ಈಗವರಿಗೆ ಬಿಜೆಪಿ ಸಹವಾಸ ಸಾಕಾಗಿದೆ. ಇದೆಲ್ಲ ಕಾಂಗ್ರೆಸ್‌ಗೆ ಪ್ಲಸ್; ಬಿಜೆಪಿ ನಿಕ್ಕಿ ಮೈನಸ್ ಎಂಬ ಲೆಕ್ಕಾಚಾರ ನಡೆದಿದೆ. ಕಾಗೇರಿ ಮೂರು ದಶಕ ಶಾಸಕ, ಸಚಿವ, ವಿಧಾಸಭಾಧ್ಯಕ್ಷನಂಥ ತೂಕದ ಸ್ಥಾನದಲ್ಲಿ ಮೆರೆದರೂ ಇಡೀ ಜಿಲ್ಲೆಯನ್ನು ಪ್ರಭಾವಿಸುವ ನಾಯಕತ್ವ ಬೆಳೆಸಿಕೊಂಡಿಲ್ಲ ಎಂದು ಬಿಜೆಪಿಗರೇ ಹೇಳುತ್ತಾರೆ.

ಆರ್.ವಿ ದೇಶಪಾಂಡೆ

ಕಳೆದೆರಡು ದಶಕದಿಂದ ಧರ್ಮಾಧಾರಿ ಆಖಾಡವಾಗಿದ್ದ ಉತ್ತರ ಕನ್ನಡ ಈ ಬಾರಿ ಜಾತಿ ಕೆಮಿಸ್ಟ್ರಿಯ ಯದ್ಧಭೂಮಿಯಾಗಲಿದೆ; ಬ್ರಾಹ್ಮಣ-ದೀವರು ಮೇಲಾಟಕ್ಕೆ ಬಂಗಾರಪ್ಪ-ರಾಮಕೃಷ್ಣ ಹೆಗಡೆ ಕಾಲದ ರಂಗೇರಲಿದೆ ಎಂದು ರಾಜಕೀಯ ಆಸಕ್ತರು ಮಾತಾಡಿಕೊಳ್ಳುತ್ತಿದ್ದಾರೆ. ಒಟ್ಟು 16,07,600 ಮತಗಳಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ 2.20 ಲಕ್ಷ ಮರಾಠ, 2ಲಕ್ಷ ದೀವರು-ನಾಮಧಾರಿ,1.40 ಬ್ರಾಹ್ಮಣ, 3ಲಕ್ಷ ಮುಸ್ಲಿಮ್+ಕ್ರಿಶ್ಚಿಯನ್, 1 ಲಕ್ಷ ಲಿಂಗಾಯತ, 2 ಲಕ್ಷ ಎಸ್ಸಿ/ಎಸ್ಟಿ, 1 ಲಕ್ಷ ಮೀನುಗಾರರು, 1.25 ಹಾಲಕ್ಕಿ ಒಕ್ಕಲು ಮತ್ತು ಸುಮಾರು 2 ಲಕ್ಷ ಗೌಳಿ, ಸಿದ್ದಿ, ಕುಣಬಿ ಮುಂತಾದ ಬುಡಕಟ್ಟು ಜನಾಂಗ ಮತ್ತು ಮಡಿವಾಳ, ಕೋಮಾರ ಪಂಥ, ಭಂಡಾರಿ ಮತ್ತು ದೈವಜ್ಞ ಬ್ರಾಹ್ಮಣರಂಥ ಇತರ ಸಣ್ಣಪುಟ್ಟ ಜಾತಿಯ ಓಟುಗಳಿರುವ ಅಂದಾಜಿದೆ. ಜಿಲ್ಲಾ ಮಂತ್ರಿ ಉಸ್ತುವಾರಿ ಮಂತ್ರಿಯಾದ ನಂತರ ಮಂಕಾಳು ವೈದ್ಯ ಸ್ವಸಮುದಾಯದ ಮೀನುಗಾರರ ನಡುವೆ ಪ್ರಭಾವಳಿ ಸೃಷ್ಟಿಸಿಕೊಂಡಿದ್ದಾರೆ. ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಒಮ್ಮೆಯೂ ತಮ್ಮ ಕಡೆಯವರಿಗೆ ಅಭ್ಯರ್ಥಿ ಮಾಡದ ಅಸಮಾಧಾನದಲ್ಲಿದ್ದ ಖಾನಾಪುರ, ಕಿತ್ತೂರಿಗರು ಈ ಸಲ ಕಾಂಗ್ರೆಸ್ ಬೆನ್ನಿಗೆ ನಿಲ್ಲುವ ನಿರ್ಧಾರ ಮಾಡಿದಂತಿದೆ. ಖಾನಾಪುರದ ಮರಾಠಿ-ಮರಾಠ ಸಮುದಾಯದ ಅಂಜಲಿ ನಿಂಬಾಳ್ಕರ್‌ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರುವುದರಿಂದ ಸಹಜವಾಗೇ ಅತ್ತ ಆಕರ್ಷಿತರಾಗಿದ್ದಾರೆ.

ರಣ ಕಣಕಣದಲ್ಲಿ ಒಂದು ಸುತ್ತುಹಾಕಿದರೆ ಒಳಜಗಳದಿಂದ ಕಮಲ ಕಮರುತ್ತಿರುವುದು ಕಾಣಿಸುತ್ತದೆ; ತತ್ಪರಿಣಾಮವಾಗಿ ಕಾಂಗ್ರೆಸ್ ಬಲವಾಗುತ್ತಿರುವಂತೆ ಅನ್ನಿಸುತ್ತದೆ. 2023ರ ಅಸೆಂಬ್ಲಿ ಚುನಾವಣೆಯಲ್ಲಿ ಸೋತು ಕಂಗೆಟ್ಟಿರುವ ಜಿಲ್ಲಾ ಬಿಜೆಪಿ ಕಾರ್ಯಕರ್ತರಲ್ಲಿ ಮೊದಲಿನ ಜೋಶ್ ಉಳಿದಿಲ್ಲ. ಖಾನಾಪುರ, ಯಲ್ಲಾಪುರ ಮತ್ತು ಕುಮಟಾದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ; ಕಾರವಾರ, ಭಟ್ಕಳ, ಶಿರಸಿ, ಹಳಿಯಾಳ ಮತ್ತು ಕಿತ್ತೂರು ಕಾಂಗ್ರೆಸ್ ಕೈಲಿದೆ. ಸಂಘ ಪರಿವಾದ ಪಾಲಿಗೆ “ಮುಟ್ಟಿಸಿಕೊಳ್ಳದವ”ನಾಗಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಲ್ಲಿ ಇದ್ದೂಇಲ್ಲದಂತಿದ್ದಾರೆ. ಹೆಬ್ಬಾರ್‌ರ ರಾಜಕೀಯ ಮತ್ತು ಎಮ್ಮೆಲ್ಲೆ ಅಧಿಕಾರದ ಮ್ಯಾನೇಜರ್ ಆಗಿರುವ ಅವರ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರುವ ತರಾತುರಿಯಲ್ಲಿದ್ದಾರೆ. ಕಾಂಗ್ರೆಸ್ ಸೇರಲು ಅಡ್ಡಿಯಾದರೆ ಆ ಪಕ್ಷದ ಅಭ್ಯರ್ಥಿಗೆ ಅಪ್ಪ-ಮಗ ಬೆಂಬಲಿಸುವುದಂತೂ ಖಾತ್ರಿಯೆನ್ನಲಾಗುತ್ತಿದೆ. ಕುಮಟಾದ ಶಾಸಕ ದಿನಕರ ಶೆಟ್ಟಿ ಗೊಂದಲದಲ್ಲಿದ್ದಾರೆ; ದಿನಕರ ಶೆಟ್ಟಿಗೆ ಮೊದಲಿನ ತಾಕತ್ತು ಉಳಿದಿಲ್ಲ. ಅನಂತ್ ಕುಮಾರ್ ಹೆಗಡೆ ಹಿಂಬಾಲಕರಾಗಿರುವ ಶೆಟ್ಟಿ “ತ್ರಿಕರಣ” ಶುದ್ಧಿಯಿಂದ ಕಾಗೇರಿ ಪರ ದುಡಿಯುವುದು ಅನುಮಾನವೆನ್ನಲಾಗುತ್ತಿದೆ.

ಕೇಸರಿ ಟಿಕೆಟ್ ನಿರಾಕರಣೆಯಿಂದ ಬುಸುಗುಡುತ್ತಿರುವ ಅನಂತ್ ಹೆಗಡೆ ಬಿಜೆಪಿಗೆ ಮಗ್ಗಲು ಮುಳ್ಳಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ, ಶಿರಸಿ, ಭಟ್ಕಳದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್‌ಗಳಿಗೆ ಗುಪ್ತವಾಗಿ ನೆರವಾಗಿದ್ದ ಅನಂತ್ ಈ ಬಾರಿ ಕಾಗೇರಿ ಸೋಲಿಗೆ ಶ್ರಮಿಸದೇ ಇರುತ್ತಾರಾ ಎಂದು ಅವರ ಆಪ್ತ ಶಿಷ್ಯರೇ ತರ್ಕ ಮಾಡುತ್ತಾರೆ. ಅನಂತ್ ಹೆಗಡೆ ಬಿಜೆಪಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೂ ಸಹಿಸಿಕೊಳ್ಳಬಹುದು; ಆಜನ್ಮ ವೈರಿ ಕಾಗೇರಿಯನ್ನು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಜಿಲ್ಲೆಯ ಕೇಸರಿ ರಾಜಕಾರಣದಲ್ಲಿ ಮೂರು ದಶಕದಿಂದ ಕಾಗೇರಿ ಹಾವು-ಮುಂಗುಸಿ. ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಿಗೆ ಅನಂತ್ ಮನೆಗೆ ಕಾಗೇರಿ ಹೋಗಿದ್ದರು. ಆದರೆ ಅನಂತ್ ಗೇಟಿನ ಬಾಗಿಲೇ ತೆರೆಯಲಿಲ್ಲ. ಸಾಹೇಬರು ಸಿಟ್ಟಲ್ಲಿದ್ದಾರೆ; ಒಳಗೆ ಬಿಡದಂತೆ ಹೇಳಿದ್ದಾರೆ ಎಂದು ಅನಂತ್ ಶಿಷ್ಯರು ಕಾಗೇರಿಯನ್ನು ವಾಪಸ್ ಕಳಿಸಿದ್ದಾರೆ; ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಮಾಜಿ ಮಂತ್ರಿ ಹರತಾಳು ಹಾಲಪ್ಪ ಮನೆಗೆ ಬಂದಾಗ ಅತಿಥಿಯೆಂಬ ಸೌಜನ್ಯವೂ ತೋರದೆ ಅವಮಾನಿಸಿದ ಅನಂತ್ ಹೆಗಡೆ ಫೋಟೋ ಕ್ಲಿಕ್ಕಿಸಿದ ಹಾಲಪ್ಪರ ಸಹಾಯಕನಿಗೆ ಕಪಾಳ ಮೋಕ್ಷ ಮಾಡಿ ಹೊರಗಟ್ಟಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಒಳೇಟಿನ ಆತಂಕದಿಂದ ಕಾಗೇರಿ ಕಂಗಾಲಾಗಿದ್ದರೆ, ಕಾಂಗ್ರೆಸ್‌ನಲ್ಲಿ ಅಪರೂಪದ ಒಗ್ಗಟ್ಟು ಮೂಡಿದೆ! ಹಿಂದೆ ಕಾಂಗ್ರೆಸ್‌ಅನ್ನು ಕೆಡವುತ್ತಿದ್ದ ದ್ವೇಷಾಸೂಯೆಯ ಒಳಜಗಳ ಈಗ ಬಿಜೆಪಿಗೆ ಶಿಫ್ಟಾಗಿದೆ ಎಂಬ ರೋಚಕ ಚರ್ಚೆಗಳು ಜಿಲ್ಲೆಯ ರಾಜಕೀಯ ಕಟ್ಟೆಯಲ್ಲಾಗುತ್ತಿದೆ.

ಉತ್ತರ ಕನ್ನಡ ಸಮರಾಂಗಣದ ಪಟ್ಟು-ಪ್ರತಿಪಟ್ಟುಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕತ್ತುಕತ್ತಿನ ಹಣಾಹಣಿ ಏರ್ಪಡುವ ಸಾಧ್ಯತೆಯನ್ನು ತೋರಿಸುತ್ತಿವೆ. ಮಾಜಿಯಾಗುವ ದಿನ ಗಣನೆಯಲ್ಲಿರುವ ಅನಂತ್ ಹೆಗಡೆಯ ಅದುಮಿಟ್ಟ ಆಕ್ರೋಶ,ಕಾಗೇರಿ ಸನ್ಮಿತ್ರ ಕಾಂಗ್ರೆಸ್ ಹಳೆ ಹುಲಿ ದೇಶಪಾಂಡೆ ಪಕ್ಷ ನಿಷ್ಠೆ ಬಗೆಗಿನ ಅನುಮಾನ, ಮರಾಠ ಅಸ್ಮಿತೆ, ಬ್ರಾಹ್ಮಣ ಪ್ರತಿಷ್ಠೆ ನಡುವೆ ದೀವರ ತೀರ್ಮಾನ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ಮತ್ತು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿಯ ಸೋಲು-ಗೆಲುವು ನಿರ್ಧರಿಸಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read