ರಾಜ್ಯದ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಯೋಜನೆಗೆ ವಿರೋಧ ವ್ಯಕ್ತವಾದಾಗ ಬಡ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಪರವಾಗಿ ಪ್ರತಿಭಟನೆಯೊಂದರಲ್ಲಿ ಆಕ್ರೋಶಭರಿತವಾಗಿ ಮಾತಾಡಿದ್ದ ವಿದ್ಯಾರ್ಥಿನಿ ಅಂಜಲಿ ಅವರನ್ನು ಗಂಗಾವತಿಯಲ್ಲಿ ನಡೆಯುತ್ತಿರುವ ಸಿಪಿಐ(ಎಂ) ರಾಜ್ಯ ಸಮ್ಮೇಳನದ ವೇದಿಕೆಯಲ್ಲಿ ಪಕ್ಷದ ಪಾಲಿಟ್ಬ್ಯೂರೋ ಸದಸ್ಯ ಪ್ರಕಾಶ್ ಕಾರಟ್ ಅಭಿನಂದಿಸಿ ಗೌರವಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜನವರಿ 2 ರಿಂದ 4ರವರೆಗೆ ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ನಡೆಯುತ್ತಿದೆ. ಗಂಗಾವತಿಯ ಎಂಎನ್ಎಂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅಂಜಲಿ ಮೊಟ್ಟೆ ವಿರೋಧಿಸುವ ಮಠಾಧೀಶರ ವಿರುದ್ಧ ಇತ್ತೀಚೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ್ದರು. ಈ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯ ಮಾತಿಗೆ ಜನರು ಮೆಚ್ಚುಗೆ ಸೂಚಿಸಿದ್ದರು.
ಇದನ್ನೂ ಓದಿ:ಸಮಾನ ವೇತನ ಕಾನೂನು ಮಾಡಿ ಅಂದರೆ ಮೊಟ್ಟೆ, ಮಾಂಸ ತಿನ್ನಬೇಡಿ ಅಂತ ಕಾನೂನು ಮಾಡ್ತಾರೆ: ಬಾಲನ್
ವಿದ್ಯಾರ್ಥಿನಿ ಅಂಜಲಿಯನ್ನು ಸಮ್ಮೇಳನದ ವೇದಿಕೆಯಲ್ಲಿ ಸನ್ಮಾನಿಸಿದ ಪ್ರಕಾಶ್ ಕಾರಟ್, ಸಮ್ಮೇಳನದ ಪ್ರತಿನಿಧಿಗಳ ಪರವಾಗಿ ಸ್ಮರಣಿಕೆ ಹಾಗೂ ಸಾವಿತ್ರಿ ಭಾಯಿ ಫುಲೆ ಪುಸ್ತಕ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್ಎಫ್ಐ)ದ ನೇತೃತ್ವದಲ್ಲಿ ಡಿಸೆಂಬರ್ 11 ರ ಶನಿವಾರದಂದು ಗಂಗಾವತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಅಂಜಲಿ, ಶಾಲೆಗಳಲ್ಲಿ ಮೊಟ್ಟೆ ವಿತರಿಸುವುದನ್ನು ಮಠಾಧೀಶರು ವಿರೋಧಿಸುವುದು ಮುಂದುವರಿಸಿದಲ್ಲಿ, ನಾವು ಮಕ್ಕಳೆಲ್ಲ ಸೇರಿ ಮಠದಲ್ಲೇ ಮೊಟ್ಟೆ ಮತ್ತು ಬಾಳೆಹಣ್ಣು ಸೇವಿಸುತ್ತೇವೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಮಕ್ಕಳಿಗೆ ಮಕ್ಕಳಿಗೆ ಮೊಟ್ಟೆ ನೀಡಬೇಕೆಂಬುದು ಸಾಂವಿಧಾನಿಕ ಆಶಯ: ಟಿ.ಕುಮಾರಸ್ವಾಮಿ
“ಬಡತನ ಇರುವುದರಿಂದ ನಾವು ಸರ್ಕಾರಿ ಶಾಲೆಗೆ ಬರುತ್ತೇವೆ. ನಾವು ಮೊಟ್ಟೆ ತಿಂದದೆ ಬದುಕುತ್ತೇವೆ. ಇಲ್ಲದಿದ್ದರೆ, ಸತ್ತು ಹೋಗುತ್ತೇವೆ. ನಾವು ಮೊಟ್ಟೆ ಸೇವಿಸುವುದು ಬೇಕಾ ಇಲ್ಲವೇ, ಮೊಟ್ಟೆ ವಿತರಣೆ ಮಾಡದಿರುವುದು ಬೇಕಾ?” ಎಂದು ಅವರು ಪ್ರಶ್ನಿಸಿದ್ದರು.
“ನಮ್ಮ ಬೆನ್ನಿಗೆ ಯಾರೂ ಇಲ್ಲ ಎಂದು ತಿಳಿದಿದ್ದೀರಾ?. ಶಾಲೆ, ಪೋಷಕರು, ಶಿಕ್ಷಕರು, ಎಸ್ಎಫ್ಐ ಸಂಘಟನೆಯವರು ಇದ್ದಾರೆ. ಮೊಟ್ಟೆ ವಿತರಿಸಲು ಮಠಾಧೀಶರು ವಿರೋಧ ವ್ಯಕ್ತಪಡಿಸಿದರೆ, ಮಕ್ಕಳೆಲ್ಲ ಸೇರಿ ಮಠದಲ್ಲೇ ಮೊಟ್ಟೆ, ಬಾಳೆ ಹಣ್ಣು ಸೇವಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದರು.
ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕದ ಸರಕಾರಿ, ಅನುದಾನಿತ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಆದರೆ ಮಠಗಳ ಸ್ವಾಮಿಗಳು ಮತ್ತು ಬಿಜೆಪಿ ಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಇದನ್ನೂ ಓದಿ:ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?