ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಪಾತ್ರವಿದೆ ಎಂಬ ಆರೋಪಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್, “ಚುನಾವಣೆಯಲ್ಲಿ ಸ್ಪರ್ಧಿಸಲು ಸಂತೋಷ್ ಅವರಿಗೆ ಭಯವೇಕೆ?” ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟು ಬಿಜೆಪಿಯಲ್ಲಿನ ಲಿಂಗಾಯತ ಮತ್ತು ಹಿಂದುಳಿದ ನಾಯಕತ್ವವನ್ನು ಮುಗಿಸಿದ ಬಿ.ಎಲ್.ಸಂತೋಷ್ ಅವರಿಗೆ ಚುನಾವಣೆ ಎದುರಿಸಲು ಭಯವೇಕೆ? ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಜನಬೆಂಬಲ ಪಡೆದು ಬರಲಿ” ಎಂದು ಸವಾಲು ಹಾಕಿದೆ.
“ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಿಂದುತ್ವದ ಮುಖಂಡರಾದ ಪ್ರಮೋದ್ ಮುತಾಲಿಕ್, ಸತ್ಯಜಿತ್ ಸೂರತ್ಕಲ್ ಅವರುಗಳ ಭದ್ರತೆಯನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ. ಹೆಣ ರಾಜಕೀಯಕ್ಕೆ ಹೆಸರುವಾಸಿಯಾದ ಕರ್ನಾಟಕ ಬಿಜೆಪಿ ಇನ್ಯಾರ ಶವಕ್ಕಾಗಿ ಕಾದು ಕುಳಿತಿದೆ? ಭದ್ರತೆ ವಾಪಸ್ ಪಡೆದಿರುವುದರ ಹಿಂದೆ ಯಾವ ಷಡ್ಯಂತ್ರ ಅಡಗಿದೆ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಅನೇಕರು ಬಂಡಾಯವೆದ್ದು ಬೇರೆ ಪಕ್ಷಗಳು ಸೇರಿದ್ದಾರೆ. ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಂತೂ ನೇರವಾಗಿ ಬಿ.ಎಲ್.ಸಂತೋಷ್ ಅವರ ಮೇಲೆ ಆರೋಪಗಳನ್ನು ಮಾಡಿದ್ದಾರೆ.
“ಪಕ್ಷದಲ್ಲಿ ಹಿರಿತನವನ್ನು ಕಡೆಗಣಿಸಲಾಯಿತು. ಇದೆಲ್ಲದರ ಹಿಂದೆ ಬಿ.ಎಲ್.ಸಂತೋಷ್ ಇದ್ದಾರೆ” ಎಂದು ಶೆಟ್ಟರ್ ದೂರಿದ್ದಾರೆ.
ತೆರೆಮರೆಯಲ್ಲಿ ರಾಜಕಾರಣ ಮಾಡುತ್ತಿದ್ದ ಬಿ.ಎಲ್.ಸಂತೋಷ್ ಹೆಸರು ಈಗ ರಾಜ್ಯ ರಾಜಕಾರಣದಲ್ಲಿ ಚರ್ಚೆಯಲ್ಲಿದೆ. “ಸಿಕ್ಕಪಟ್ಟೆ ಲೀಡರ್ ಗಳಾಗಿದ್ದಾರೆ, ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ” ಎಂದು ಸಂತೋಷ್ ಹೇಳಿಕೆ ನೀಡಿದ್ದಾರೆ.
ತಮ್ಮ ಕುರಿತು ಎದ್ದಿರುವ ಸುದ್ದಿಗಳಿಗೆ ಮಾಧ್ಯಮಗಳಿಗೆ ಸ್ಪಷ್ಟೀಕರಣ ಕೊಡಲು ನಿರಾಕರಿಸಿದ ಬಿ.ಎಲ್. ಸಂತೋಷ್, ““ಮಾಧ್ಯಮದವರು ನನ್ನನ್ನು 100 ಬಾರಿ ಮಾತಾಡಿಸಲು ಯತ್ನಿಸಿದ್ದಾರೆ. ನಾನು ಮಾತಾಡಿಲ್ಲ. ನಮ್ಮಲ್ಲಿ ಮಾತಾಡಲು ಪ್ರತಾಪ್ ಸಿಂಹ ಥರದವರು ಇದ್ದಾರೆ. ಅವರೆ ಮಾತಾಡಲಿ. ನಾನು ಮಾತನಾಡಿ ಯಾರಿಗೆ ಯಾಕೆ ಪ್ರತಿ ಸ್ಪರ್ಧಿಯಾಗಲಿ?” ಎಂದು ಕೇಳಿದ್ದಾರೆ.
ಸತ್ಯಪಾಲ್ಗೆ ಸಿಬಿಐ ನೋಟಿಸ್; ಕಾಂಗ್ರೆಸ್ ಪ್ರತಿಕ್ರಿಯೆ
ಪುಲ್ವಾಮ ದುರಂತದ ಕುರಿತು ಇತ್ತೀಚೆಗೆ ಮಾತನಾಡಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ ಸಿಬಿಐ ನೋಟಿಸ್ ಕಳುಹಿಸಿರುವ ಕುರಿತು ರಾಜ್ಯ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
“ಬಿಜೆಪಿ ಆಡಳಿತದಲ್ಲಿ ಸಿಬಿಐ ಅಂದರೆ ಸತ್ಯ ಹೇಳುವವರ ಬಾಯಿ ಮುಚ್ಚಿಸುವ ಸಂಸ್ಥೆ ಎಂದಾಗಿದೆ. ಪುಲ್ವಾಮದಲ್ಲಿ 40 ಯೋಧರ ಸರ್ಕಾರಿ ಕೊಲೆಯ ನಗ್ನಸತ್ಯವನ್ನು ಹೇಳಿದ ಸತ್ಯಪಾಲ್ ಮಲಿಕ್ ಅವರ ವಿರುದ್ಧ ಸತ್ಯ ನುಡಿದ ಎರಡೇ ದಿನದಲ್ಲಿ ಕಾರ್ಯಾಚರಣೆಗೆ ಇಳಿದಿದೆ ಸಿಬಿಐ. ಪುಲ್ವಾಮ ದಾಳಿಯ ತನಿಖೆ ಮಾತ್ರ ಇನ್ನೂ ಮುಗಿದಿಲ್ಲ, ಸತ್ಯ ಹೊರಬರಲೇ ಇಲ್ಲ” ಎಂದು ಟೀಕಿಸಿದೆ.
ಇದನ್ನೂ ಓದಿರಿ: ಸಚಿವ ನಿರಾಣಿ ಫ್ಯಾಕ್ಟರಿ ಮೇಲೆ ಚುನಾವಣಾ ಆಯೋಗ ರೈಡ್; ಬೆಳ್ಳಿ ದೀಪಗಳು ವಶಕ್ಕೆ