ಬೆಂಗಳೂರಿನ ಶಿವಾಜಿನಗರದ ಬಸ್ ನಿಲ್ದಾಣದ ಬಳಿ ನಾಲ್ಕು ಅಂತಸ್ತಿನ ಮೇಲಿದ್ದ ವಾಟರ್ ಟ್ಯಾಂಕ್ ಕುಸಿದು ಬಿದ್ದು ಮೂವರು ಸಾವನಪ್ಪಿರುವ ದುರ್ಘಟನೆ ಜರುಗಿದೆ.
ಪಾದಾಚಾರಿ ಮಾರ್ಗದಲ್ಲಿ ಎಗ್ ರೈಸ್ ಮಾರಾಟ ಮಾಡುತ್ತಿದ್ದ ಹಾಗೂ ತಿನ್ನಲು ಬಂದಿದ್ದ ವ್ಯಕ್ತಿಯ ಮೇಲೆ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಅವರು ಸಹ ಮೃತಪಟ್ಟಿದ್ದಾರೆ.
ನೀರು ತುಂಬಿದ್ದ ಸಿಂಟ್ಯಾಕ್ಸ್ನಿಂದ ನೀರು ಲೀಕ್ ಆಗಿ ಗೋಡೆ ಬಿರುಕು ಬಿಟ್ಟಿದ್ದು, ಗೋಡೆ ಹಾಗೂ ಟ್ಯಾಂಕ್ ಎರಡೂ ಕುಸಿದು ಬಿದ್ದಿವೆ. ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿಪಿ ಭೀಮಾಶಂಕರ್ ಗುಳೇದ್ “ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬಳಿಯಿರುವ ಓಕ್ ಫರ್ನಿಚರ್ ಮಳಿಗೆಯ ಮೇಲಿದ್ದ ವಾಟರ್ ಟ್ಯಾಂಕ್ ಕುಸಿದು ಬಿದ್ದು ಎಗ್ರೈಸ್ ಅಂಗಡಿ ಮಾಲೀಕ ಹಾಗೂ ಎಗ್ರೈಸ್ ತಿನ್ನುತ್ತಿದ್ದ ಗ್ರಾಹಕ ಸಾವನ್ನಪ್ಪಿದ್ದು, ಮೃತರಲ್ಲಿ ಎಗ್ರೈಸ್ ಅಂಗಡಿ ಮಾಲೀಕ ಅರುಳ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೋಟಾ ನಾಗೇಶ್ವರ್ ರಾವ್ ಎಂಬುವವರು ಜೀವ ಕಳೆದುಕೊಂಡಿದ್ದಾರೆ. ಮೃತಪಟ್ಟ ಮತ್ತೊಬ್ಬರ ಹೆಸರು ಗುರುತು ಪತ್ತೆಯಾಗಿಲ್ಲ” ಎಂದಿದ್ದಾರೆ.
ಇದನ್ನೂ ಓದಿ; ಸಾಕ್ಷಿ ಹೇಳದಂತೆ ತಡೆಯಲು ಕೈಕೊಳ ಹಾಕಿ ಠಾಣೆಯಲ್ಲಿ ಕೂಡಿಹಾಕಿದ ಕನಕಗಿರಿ ಪೊಲೀಸರು: ಆರೋಪ