ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಬೊಮ್ಮಸಾಗರ ತಾಂಡದ ಆರೋಪಿಯಲ್ಲದ ಸಣ್ಣ ಹನುಮಂತಪ್ಪ ಎಂಬುವವರನ್ನು ಸಾಕ್ಷಿ ಹೇಳದಂತೆ ತಡೆಯಲು ಕನಕಗಿರಿ ಪೊಲೀಸರು ಕೈಕೊಳ ಹಾಕಿ ಠಾಣೆಯಲ್ಲಿ ಕೂಡಿಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಸಣ್ಣ ಹನುಮಂತಪ್ಪ ಗೃಹ ಸಚಿವರಾದ ಪರಮೇಶ್ವರ್ರವರಿಗೆ ಪತ್ರ ಬರೆದಿದ್ದು, “ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಸಾಕ್ಷಿ ಹೇಳದಂತೆ ಒತ್ತಡ ಹಾಕಲು ಪೊಲೀಸರು ನನ್ನನ್ನು ಕೂಡಿ ಹಾಕಿ, ದೌರ್ಜನ್ಯ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗದಿದ್ದರೂ ಕನಕರಿಗಿ ಪೊಲೀಸರು ಠಾಣೆಗೆ ಕರೆಸಿ, ಕೈಗೆ ಬೇಡಿ ಹಾಕಿ ಠಾಣೆಯ ಕಿಟಕಿಗೆ ಕಟ್ಟಿ, ದೈಹಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಸಣ್ಣ ಹನುಮಂತಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ನಾನು ಹೊಟ್ಟೆ ಪಾಡಿಗಾಗಿ ಮಹಾರಾಷ್ಟ್ರದ ಸಾಂಗ್ಲಿಗೆ ಕಬ್ಬು ಕಟಾವು ಕೆಲಸಕ್ಕೆ ಹೋಗಿದ್ದೆ. ಕನಕಗಿರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಬಸವರಾಜ ಮತ್ತು ರಮೇಶ್ ಚೌಡ್ಕಿ ಎನ್ನುವವರು ಹಲವು ತಿಂಗಳಿಂದ ಪೋನ್ ಮಾಡು ಬರುವಂತೆ ಒತ್ತಾಯಿಸಿತ್ತಿದ್ದರು. ಅಲ್ಲದೇ ಶೇಖರಪ್ಪ ಪರ ಸಾಕ್ಷಿ ಹೇಳುವಂತೆ ಪೊಲೀಸರು ಒತ್ತಡ ತಂದಿದ್ದರು. ಠಾಣೆಗೆ ಬಂದು ನಾನು ಅವರ ಪರವಾಗಿ ಸಾಕ್ಷಿ ನುಡಿಯುವುದಿಲ್ಲವೆಂದಾಗ ನನ್ನನ್ನು ಕಟ್ಟಿ ಹಾಕಿ ಹಿಂಸಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಶೇಖರಪ್ಪ ಪರ ಸಾಕ್ಷಿ ಹೇಳಬೇಕು ಎಂದು ಹೆದರಿಸಿದ್ದಾರೆ. ನಾನು ಸುಳ್ಳು ಸಾಕ್ಷಿ ನುಡಿಯುವುದಿಲ್ಲ, ಇರುವುದನ್ನು ಕೋರ್ಟ್ಗೆ ಹೇಳುತ್ತೇನೆ ಎಂದಾಗ ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಬೈಕ್ ಕಿತ್ತುಕೊಂಡಿದ್ದಾರೆ. ನಿನ್ನ ಮೇಲೆ ಕೇಸ್ ಆಗಿದೆ ಎಂದು ಕೈಗೆ ಕೋಳ ತೊಡಿಸಿ ಕೂಡಿಹಾಕಿದ್ದರು. ನನ್ನ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲದಿದ್ದರೂ ಈ ರೀತಿ ಅನ್ಯಾಯವೆಸಗಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು, ತನಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜನಾಂಗೀಯ ನಿಂದನೆ: ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು