ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು. ಪೊಲೀಸರ ವರ್ತನೆಯಿಂದ ನೊಂದಿರುವ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಕಣ್ಣೀರು ಹಾಕಿದ್ದಾರೆ.
ಮಹಾತ್ಮ ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದುಕೊಂಡು, ತಮ್ಮ ಉಳಿದ ಬೆಂಬಬಲಿಗರೊಂದಿಗೆ ಪ್ರತಿಭಟನಾ ಸ್ಥಳದಲ್ಲಿ ಕುಳಿತಿದ್ದ ದಿಪ್ಕೆ ಕಣ್ಣಿರು ಹಾಕಿದ್ದಾರೆ. ಅಳಲು ಪ್ರಾರಂಭಿಸಿದ ಅವರನ್ನು ಪ್ರತಿಭಟನಾಕಾರರು ಸಮಾಧಾನಪಡಿಸಲು ಪ್ರಯತ್ನಿಸಿದರು; ಕುಡಿಯಲು ನೀರು ಕೊಟ್ಟು ಸಂತೈಸಿದರು.
ದೆಹಲಿಯ ಜಂತರ್ ಮಂತರ್ನಲ್ಲಿ ಪೊಲೀಸರು ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ಕರೆದೊಯ್ದ ನಂತರ ದಿಪ್ಕೆ ಸ್ವತಃ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ದೀಪ್ಕೆ, ವಾಂಗ್ಚುಕ್ ಅವರು ಆಸ್ಪತ್ರೆಗೆ ಹೋಗುವುದಕ್ಕೆ ಇಷ್ಟವಿರಲಿಲ್ಲ ಎಂದು ವಿವರಿಸಿದರು.
“ಅವರಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಲು ಬಯಸಿದ್ದರು. ಆದರೆ ಈ ಪೊಲೀಸರು ಮಾಡಿದ್ದೇನು? ಅವರು ಅಪರಾಧಿ ಅಲ್ಲ; ಅವರನ್ನು ಪರದೆಯ ಕೆಳಗೆ ಮರೆಮಾಡಿ ಕರೆದೊಯ್ದ ರೀತಿ ಏಣು? ಅವರ ಆರೋಗ್ಯದ ಬಗ್ಗೆ ನಿಮಗೆ ಅಷ್ಟೊಂದು ಕಾಳಜಿ ಇದ್ದರೆ, ನೀವು ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕಿತ್ತು” ಎಂದು ಅವರು ಹೇಳಿದರು.
ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಏಕಾಏಕಿ ಬಂದು ಬಲವಂತವಾಗಿ ಕರೆದೊಯ್ದ ನಂತರ ಶನಿವಾರ ಬೆಳಿಗ್ಗೆ ಜಂತರ್ ಮಂತರ್ನಲ್ಲಿ ಸಿಜೆಪಿಯ ಪ್ರತಿಭಟನೆ ಗೊಂದಲದಲ್ಲಿ ಸಿಲುಕಿತು. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಿಂದಾಗಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ವಾಂಗ್ಚುಕ್ ಅವರನ್ನು ಕರೆದುಕೊಂಡು ಹೋಗುತ್ತಿದ್ದಾಗ, ಪೊಲೀಸರು ಅವರನ್ನು ಬಂಧಿಸಿ ಥಳಿಸಿದ್ದಾರೆ ಎಂದು ದೀಪ್ಕೆ ಹೇಳಿದರು. ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಅವರು ಆರೋಪಿಸಿದರು, ಆದರೆ ದೆಹಲಿ ಪೊಲೀಸರು ಈ ಹೇಳಿಕೆಯನ್ನು ತಿರಸ್ಕರಿಸಿದರು.
ಬಿಳಿ ಪರದೆ ಹಿಡಿದು ಬಂದ ಸಾಮಾನ್ಯ ಉಡುಪಿನ ಪೊಲೀಸರು
ಜಂತರ್ ಮಂತರ್ ನಿಂದ ವಾಂಗ್ಚುಕ್ ಅವರನ್ನು ಕರೆದೊಯ್ಯುವಾಗ ಪೊಲೀಸರು ಕ್ಯಾಮೆರಾಗಳನ್ನು ನಿರ್ಬಂಧಿಸಲು ಬಿಳಿ ಪರದೆಗಳನ್ನು ಬಳಸಿದರು. ಪೊಲೀಸರು ಸಾಮಾನ್ಯ ಉಡುಪಿನಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದು ತಮ್ಮನ್ನು ವೈದ್ಯಕೀಯ ತಂಡ ಎಂದು ಹೇಳಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ವಾಂಗ್ಚುಕ್ ಅವರನ್ನು ಸ್ಥಳಾಂತರಿಸುವ ಪೊಲೀಸರ ಯೋಜನೆಯಲ್ಲಿ ಮೊಬೈಲ್ ನೆಟ್ವರ್ಕ್ ಜಾಮರ್ಗಳನ್ನು ಹಾಕಲಾಗಿತ್ತು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ದೆಹಲಿ ಹೈಕೋರ್ಟ್ನ ನಿರ್ದೇಶನ ಮತ್ತು ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಸೇರಿಸಲು ಶಿಫಾರಸು ಮಾಡಿದ ವೈದ್ಯಕೀಯ ಸಲಹೆಯನ್ನು ಅನುಸರಿಸಿ ಪೂರ್ವ-ನಿರ್ಧರಿತ ಕಾರ್ಯಾಚರಣೆಯನ್ನು ರಾತ್ರಿಯಿಡೀ ಯೋಜಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ಹಿರಿಯ ಅಧಿಕಾರಿಗಳು ಬೆಳಿಗ್ಗೆ 1.30 ರ ಸುಮಾರಿಗೆ ವಾಂಗ್ಚುಕ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪೊಲೀಸ್ ಪ್ರಧಾನ ಕಚೇರಿಯಿಂದ ಸೂಚನೆಗಳನ್ನು ಪಡೆದರು. ಶೀಘ್ರದಲ್ಲೇ, ನವದೆಹಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಮಂದಿರ ಮಾರ್ಗ ಪೊಲೀಸ್ ಠಾಣೆಯಲ್ಲಿ ಕಾರ್ಯಾಚರಣೆ ರೂಪಿಸಲು ಸೇರಿದ್ದರು ಎನ್ನಲಾಗಿದೆ. ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ “ಘರ್ಷಣೆಯಿಲ್ಲದೆ” ವಾಂಗ್ಚುಕ್ ಅವರನ್ನು ಹೇಗೆ ಸ್ಥಳಾಂತರಿಸಬಹುದು ಎಂಬುದನ್ನು ನಿರ್ಣಯಿಸಲು ಭದ್ರತಾ ಕವಾಯತು ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಾಂಗ್ಚುಕ್ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಇದ್ದಾರೆ. ವಾಂಗ್ಚುಕ್ನನ್ನು ಆಸ್ಪತ್ರೆಗೆ ಕರೆದೊಯ್ಯಬಾರದಿತ್ತು, ತನ್ನನ್ನು, ಕುಟುಂಬವನ್ನು ಅಥವಾ ವೈಯಕ್ತಿಕ ವೈದ್ಯರನ್ನು ಸಂಪರ್ಕಿಸದೆ ಅವರಿಗೆ ಯಾವುದೇ ಔಷಧಿ ನೀಡಬಾರದು ಎಂದು ಅಧಿಕಾರಿಗಳನ್ನು ಕೇಳಿಕೊಂಡರು.


