ಚರಂಡಿ ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಗಾಳಿ ಸೇವಿಸಿ ಇಬ್ಬರು ದಿನಗೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ನಡೆದಿದೆ. ಸತ್ಯಪ್ಪ (45) ಹಾಗೂ ಮೈಲಪ್ಪ (42) ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ.
ಯುಗಾದಿ ಹಬ್ಬದ ನಿಮಿತ್ತ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು. ಪಿಡಿಒ ಮತ್ತು ಅಧ್ಯಕ್ಷರ ಸೂಚನೆ ಮೇರೆಗೆ ಚರಂಡಿಗಳ ಸ್ವಚ್ಛತೆಗೆ ಬಸವನಕೋಟೆ ಗ್ರಾಮ ಪಂಚಾಯಿತಿ ಓರ್ವ ಪೌರ ಕಾರ್ಮಿಕ ಹಾಗೂ ಮೂವರು ದಿನಗೂಲಿ ಕಾರ್ಮಿಕರನ್ನು ಸ್ವಚ್ಛತಾ ಕಾರ್ಯಕ್ಕೆ ನಿಯೋಜನೆ ಮಾಡಿತ್ತು.
ಚರಂಡಿಯಲ್ಲಿ ತ್ಯಾಜ್ಯ ಕಟ್ಟಿಕೊಂಡಿದೆ ಎಂದು ಸ್ವಚ್ಛತೆಗೆ ಇಳಿದಿದ್ದ ಈ ಇಬ್ಬರೂ ದಿನಗೂಲಿ ಕಾರ್ಮಿಕರು ವಿಷಗಾಳಿ ಸೇವಿಸಿ ಅಸ್ವಸ್ಥರಾಗಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಮೃತಪಟ್ಟಿದ್ದಾರೆ.
”ಯಾವುದೇ ಮುಂಜಾಗ್ರತ ಕ್ರಮ ವಹಿಸದೆ ಏಕಾಏಕಿ ಚರಂಡಿ ಸ್ವಚ್ಛಗೊಳಿಸಲು ಇಳಿಸಿದ್ದೇ ಈ ಕಾರ್ಮಿಕರ ಸಾವಿಗೆ ಕಾರಣ. ಇದಕ್ಕೆ ಪಿಡಿಓ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗುಜರಾತ್: ಕಳ್ಳರೆಂದು ಶಂಕಿಸಿ ಇಬ್ಬರು ವಲಸೆ ಕಾರ್ಮಿಕರ ಕೊಲೆ
ಈ ಘಟನೆ ಬಗ್ಗೆ ದಲಿತ ಸಂಘಟನೆ ಮುಖಂಡ ಮಂಜುನಾಥ್ ಮಾತನಾಡಿ, ”ಈ ಇಬ್ಬರು ದಿನಗೂಲಿ ಕಾರ್ಮಿಕರಿಗೆ ಸರಿಯಾದ ಊಟ ನೀಡದೆ, ಅವರಿಗೆ ಮದ್ಯಪಾನ ನೀಡಲಾಗಿದೆ. ನಂತರ ಚರಂಡಿಯ ವಿಷಗಾಳಿ ಸೇವನೆಯಿಂದ ಈ ದುರಂತ ನಡೆದಿದೆ. ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ. ಕಾರ್ಮಿಕರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಎರಡು ಕುಟುಂಬದ ಒಬ್ಬೊಬ್ಬರಿಗೆ ಸರ್ಕಾರಿ ಕೆಲಸ ಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಬಸವನಕೋಟೆ ಗ್ರಾಪಂ ಅಧ್ಯಕ್ಷ ಭೀಮಪ್ಪ ಮಾತನಾಡಿ, ”ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ಒಬ್ಬರು ಮಾತ್ರ ಖಾಯಂ ಪೌರ ಕಾರ್ಮಿಕರಿರುವುದರಿಂದ ಮೂವರು ದಿನಗೂಲಿ ಕಾರ್ಮಿಕರನ್ನು ಕರೆಸಿಕೊಂಡು ಸ್ವಚ್ಛತೆ ಕೆಲಸ ಮಾಡಿಸುತ್ತಿದ್ದೇವೆ. ಅವರಿಗೆ ಚರಂಡಿ ಸ್ವಚ್ಛಗೊಳಿಸುವ ವೇಳೆ ಯಾರೋ ಮದ್ಯವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮದ್ಯ ಸೇವಿಸಿದ ಇಬ್ಬರು ಕಾರ್ಮಿಕರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈಗ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಬೇಡಿಕೆ ಬಂದಿದೆ. ಪರಿಹಾರ ನೀಡಲು ಗ್ರಾಮ ಪಂಚಾಯಿತಿ ಒಪ್ಪಿಕೊಂಡಿದೆ ಮತ್ತು ಗ್ರಾ. ಪಂ ಯಲ್ಲಿ ಖಾಲಿ ಇರುವ ಇಬ್ಬರು ಪೌರ ಕಾರ್ಮಿಕರ ಹುದ್ದೆಯನ್ನು ಅವರ ಕುಟುಂಬಕ್ಕೆ ನೀಡಲು ತೀರ್ಮಾನ ಮಾಡುತ್ತೇವೆ ಎಂದರು. ಆದರೆ ಕಾರ್ಮಿಕರ ಸಾವಿಗೆ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ತಿಳಿದುಬರುತ್ತದೆ” ಎಂದು ಅವರು ಹೇಳಿದ್ದಾರೆ.