Homeಮುಖಪುಟಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

- Advertisement -
- Advertisement -

ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ಗುಜರಾತ್‌ನ ಗಾಂಧಿನಗರ ಸಂಸದೀಯ ಕ್ಷೇತ್ರದಿಂದ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಅಮಿತ್ ಶಾ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎಂದು ಸ್ವತಂತ್ರವಾಗಿ ಸ್ಪರ್ಧೆಯಲ್ಲಿದ್ದ ಅಭ್ಯರ್ಥಿ ಜಿತೇಂದ್ರ ಚೌಹಾಣ್(39) ವಿಡಿಯೋವೊಂದರಲ್ಲಿ ಆರೋಪಿಸಿದ್ದಾರೆ. ನಾನು ಕೊಲ್ಲಲ್ಪಡುವ ಸಾಧ್ಯತೆಯಿದೆ, ನಾನು ನನ್ನ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ, ಈ ರಾಷ್ಟ್ರವನ್ನು ಉಳಿಸಿ, ಇದು ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಇದಾದ ಮರುದಿನ ಚೌಹಾಣ್ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ನನ್ನ ಮೇಲೆ ಒತ್ತಡವಿದ್ದ ಕಾರಣ ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಚೌಹಾಣ್ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಗಾಂಧಿನಗರ ಬಿಜೆಪಿಯ ಭದ್ರ ಕೋಟೆ, ಇಲ್ಲಿ ಬಿಜೆಪಿ ಪಕ್ಷವು 1989ರಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದೆ. 2019ರಲ್ಲಿ ಅಮಿತ್‌ ಶಾ ಅವರ ಗೆಲುವಿನ ಅಂತರವು 5.5 ಲಕ್ಷಕ್ಕೂ ಹೆಚ್ಚು ಮತಗಳಾಗಿತ್ತು.

ಚೌಹಾಣ್ ಸೇರಿದಂತೆ ಗಾಂಧಿನಗರದ ಮೂವರು ಅಭ್ಯರ್ಥಿಗಳು ರೇಸ್‌ನಿಂದ ಹೊರಬರಲು ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ಸ್ಕ್ರಾಲ್‌ಗೆ ತಿಳಿಸಿದ್ದಾರೆ. ನಮಗೆ ಸ್ಥಳೀಯ ಬಿಜೆಪಿ ನಾಯಕರು ಬೆದರಿಕೆ ಹಾಕುತ್ತಿದ್ದಾರೆ. ಗುಜರಾತ್ ಪೊಲೀಸರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಈ ಆರೋಪಗಳನ್ನು ಅಲ್ಲಗಳೆದಿದೆ, ಗುಜರಾತ್‌ನ ಪೊಲೀಸ್ ಮಹಾನಿರ್ದೇಶಕ ವಿಕಾಸ್ ಸಹಾಯ್ ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಇದುವರೆಗೆ ಗಾಂಧಿನಗರದ 16 ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಿಂದ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಅವರಲ್ಲಿ ಚೌಹಾಣ್ ಸೇರಿದಂತೆ 12 ಮಂದಿ ಸ್ವತಂತ್ರರು ಅಭ್ಯರ್ಥಿಗಳಾಗಿದ್ದರು. ನಾಲ್ವರು ಸಣ್ಣ ರಾಜಕೀಯ ಪಕ್ಷಗಳಿಗೆ ಸೇರಿದವರಾಗಿದ್ದರು.

ನಾಮಪತ್ರ ಹಿಂಪಡೆಯಲು ಎಷ್ಟು ಹಣ ಬೇಕು ಎಂದು ಕೇಳಲಾಯ್ತು, ನನಗೆ ಹಣ ಬೇಕಾಗಿಲ್ಲ. ಆದರೆ ನಾನು ನಾಮಪತ್ರ ಹಿಂತೆಗೆದುಕೊಳ್ಳಲು ಕಾರಣಗಳಿವೆ. ನನಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಬೇಕು. ನನಗೆ ಏನಾದರೂ ಸಂಭವಿಸಿದರೆ, ಅವರು ಹೇಗೆ ಬದುಕುತ್ತಾರೆ? ಏಪ್ರಿಲ್ 21ರಂದು ಕ್ರೈಂ ಬ್ರಾಂಚ್‌ನ ನಾಲ್ವರು ಅಹಮದಾಬಾದ್‌ನ ಎಲ್ಲೆಡೆ ತಮ್ಮನ್ನು ಹಿಂಬಾಲಿಸಿದ್ದಾರೆ. ಅವರು ನನ್ನ 10 ಬೆಂಬಲಿಗರಲ್ಲಿ ನಾಲ್ವರಿಗೆ ಕಿರುಕುಳ ನೀಡಿದ್ದಾರೆ ಎಂದು ಚೌಹಾನ್‌ ಹೇಳಿದ್ದಾರೆ.

ಅದೇ ರೀತಿ ಇತರ ನಾಮಪತ್ರ ಹಿಂಪಡೆದ ಅಭ್ಯರ್ಥಿಗಳು ವಿವಿಧ ಕಾರಣಗಳನ್ನು ನೀಡಿದ್ದಾರೆ, ಹಣದ ಕೊರತೆ, ಬಿಜೆಪಿಗೆ ಸೇರ್ಪಡೆ ಸೇರಿದಂತೆ ವಿವಿಧ ಕಾರಣಗಳಿಗೆ ಅವರು ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.

ಚೌಹಾಣ್ ತನ್ನ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವ ಒಂದು ದಿನದ ಮೊದಲು, ಒಂದು ಡಜನ್‌ಗಿಂತಲೂ ಹೆಚ್ಚು ಜನರ ಗುಂಪು ಅಹಮದಾಬಾದ್‌ನ ಚಂದ್ಖೇಡಾ ನಿವಾಸಿ, ಗಾಂಧಿನಗರದ ಪ್ರಜಾತಂತ್ರ ಆಧಾರ್ ಪಕ್ಷದ ಅಭ್ಯರ್ಥಿ ‘ಸುಮಿತ್ರಾ ಮೌರ್ಯ’ ಅವರ ಮನೆಗೆ ಪ್ರವೇಶಿಸಿದ್ದಾರೆ. ಅವರು ಸುಮಿತ್ರಾ ಮೌರ್ಯ ಅವರಿಗೆ ನಾಮಪತ್ರ ಹಿಂಪಡೆಯುವಂತೆ ಬೆದರಿಸಿದ್ದರು ಎಂದು ಆರೋಪಿಸಲಾಗಿದೆ.

ಆ ದಿನ ತನಗೆ ಮತ್ತು ತನ್ನ ಪತಿಗೆ ಸರಣಿ ದೂರವಾಣಿ ಕರೆಗಳು ಬಂದವು, ತಮ್ಮ ಬಾಸ್ ಜೊತೆ ಮಾತನಾಡುವಂತೆ ಅವರು ನನಗೆ ಸೂಚಿಸಿದರು, ಬಾಸ್‌ ಯಾರೆಂದು ಅವರು ನನಗೆ ಹೇಳಿಲ್ಲ. ನಾನು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ನನ್ನಲ್ಲಿ ಕೇಳಿದ್ದಾರೆ ಮತ್ತು ನಾನು ಸ್ಪರ್ಧಿಸಬಾರದು ಎಂದು ಹೇಳಿದ್ದಾರೆ ಎಂದು ಸುಮಿತ್ರಾ ಮೌರ್ಯ ಆರೋಪಿಸಿದ್ದಾರೆ. ಗಾಂಧಿನಗರದಿಂದ ಸ್ಪರ್ಧೆಯಿಂದ ಸುಮಿತ್ರಾ ಮೌರ್ಯ ಹಿಂದೆ ಸರಿದಿಲ್ಲ. ಆದರೆ ವಿಡಿಯೋ ಮಾಡಿದ್ದ ಚೌಹಾಣ್ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ್ದ ರಾಥೋಡ್ ಅವರು 2019ರಲ್ಲಿ ಬಹುಜನ ಸಮಾಜ ಪಕ್ಷದ ಟಿಕೆಟ್‌ನಲ್ಲಿ ಗಾಂಧಿನಗರದಿಂದ ಸ್ಪರ್ಧಿಸಿದ್ದರು. ಅವರು 6,500 ಮತಗಳನ್ನು ಪಡೆದಿದ್ದರು. ಅವರು ಈ ಬಾರಿ 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸರ್ಕಾರಿ ನೌಕರಿಯಲ್ಲಿರುವ ನನ್ನ ಚಿಕ್ಕಪ್ಪನೊಂದಿಗೆ ಶಾಸಕರ ಜನರು ನನ್ನಲ್ಲಿ ಸ್ಪರ್ಧಿಸದಂತೆ ಸೂಚಿಸಿದ್ದಾರೆ. 2019ರಲ್ಲೂ ನನ್ನ ಮೇಲೆ ಒತ್ತಡವಿತ್ತು. ಆದರೆ ಆಗ ನಾನು ಹಿಂದೆ ಸರಿಯಲಿಲ್ಲ. ಈ ಬಾರಿ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಥೋಡ್ ಅವರನ್ನು ಬಿಜೆಪಿಗೆ ಸೇರುವಂತೆ ಆಗ್ರಹಿಸಲಾಗಿದೆ ಆದರೆ ಅವರು ನಿರಾಕರಿಸಿದ್ದಾರೆ. ಗಾಂಧಿನಗರದ ಕಣದಲ್ಲಿರುವ ಇನ್ನಿಬ್ಬರು ಸ್ವತಂತ್ರ ಅಭ್ಯರ್ಥಿಗಳಾದ ಸುರೇಂದ್ರ ಶಾ ಮತ್ತು ನರೇಶ್ ಪ್ರಿಯದರ್ಶಿ ಅವರಲ್ಲಿ ತಮ್ಮಂತೆಯೇ ಹಿಂದೆ ಸರಿಯುವಂತೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇತರ ನಾಲ್ವರು ಸ್ವತಂತ್ರ ಅಭ್ಯರ್ಥಿಗಳಾದ ಕಿಶೋರ್ ಗೋಯಲ್, ರಜನಿಕಾಂತ್ ಪಟೇಲ್, ಮಖನ್‌ಭಾಯ್ ಕಾಲಿಯಾ ಮತ್ತು ಮೆಹಬೂಬ್ ರಂಗ್ರೇಜ್ ಸಹ ಕಣದಿಂದ ಹಿಂದೆ ಸರಿದಿದ್ದರು ಆದರೆ ಅವರು ತಮಗೆ ಒತ್ತಡ ಹಾಕಲಾಗಿದೆ ಎಂಬುವುದನ್ನು ಬಹಿರಂಗಪಡಿಸಿಲ್ಲ.

ಚೌಹಾಣ್‌ ಅವರು ಅಮಿತ್‌ ಶಾ ವಿರುದ್ಧ ಕಣಕ್ಕಿಳಿದಿರುವಾಗ ಬಿಜೆಪಿಯಷ್ಟು ಬಲಿಷ್ಠವಾಗಿರುವ ಪಕ್ಷ ಅವರ ಉಮೇದುವಾರಿಕೆ ಬಗ್ಗೆ ಏಕೆ ಚಿಂತಿಸುತ್ತದೆ ಎಂದು ಕೇಳಿದಾಗ, ದೇಶದ ಗೃಹ ಸಚಿವರ ವಿರುದ್ಧ ಸಣ್ಣ ವ್ಯಕ್ತಿಯೊಬ್ಬ ಚುನಾವಣೆಯಲ್ಲಿ ನಿಂತಾಗ ಸಚಿವರ ಆತ್ಮಗೌರವಕ್ಕೆ ಕುತ್ತು ಬರುತ್ತದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಗೊಂಡಿದೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...