Homeಮುಖಪುಟಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು - ದೇವನೂರು ಮಹಾದೇವ

ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ

ಇಂದು ಮನುಷ್ಯರು ಧರ್ಮ-ದೇವರಿಗೆ ತಮ್ಮ ರೋಗ ಅಂಟಿಸುತ್ತಿದ್ದಾರೆ. ಇದಕ್ಕೆ ಧರ್ಮಜಾಢ್ಯ ಅಂತಾರೆ. ವಿದ್ಯಾರ್ಥಿಗಳು ಇನ್ನೂ ಎಳೆಯರು, ಇನ್ನೂ ಯಾವ ರಾಗ-ದ್ವೇಷ ಇಲ್ಲದವರು. ಅವರು ಈ ಧರ್ಮಜಾಢ್ಯದಿಂದ ಬಿಡುಗಡೆ ಪಡೆಯಲಿ.

- Advertisement -
- Advertisement -

(ಹಿಜಾಬ್ ಮತ್ತು ಕೇಸರಿ ಶಾಲಿನ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತಲೆದೋರಿರುವ ವಿವಾದ ಕುರಿತಂತೆ ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಅತ್ಯಂತ ಕಳಕಳಿಯಿಂದ ತಮ್ಮ ಅಭಿಪ್ರಾಯಗಳನ್ನು ಟಿವಿ-9 ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಸಹಜ ಹಾಗೂ ಚಿಂತನಾ ಅಭಿಪ್ರಾಯಗಳನ್ನು ನಮ್ಮ ಓದುಗರಿಗೆ ನೀಡುತ್ತಿದ್ದೇವೆ. – ಸಂಪಾದಕ)

ಈ ಬೆಳವಣಿಗೆ ತುಂಬಾ, ಅಂದರೆ ತುಂಬಾನೇ ದುಃಖವಾಗುತ್ತದೆ. ಈ ಹಿಂದೆ ಏನಾಗುತ್ತಿತ್ತು? ಹಿಜಾಬ್ ಅನ್ನು ಅಲ್ಲೊಬ್ಬರು ಇಲ್ಲೊಬ್ಬರು ಧರಿಸುತ್ತಿದ್ದರು. ಅದು ಸಹಜವಾಗಿ ನಡೆದುಕೊಂಡು ಹೋಗುತ್ತಿತ್ತು. ಎದ್ದು ಕಾಣಿಸುತ್ತಿರಲಿಲ್ಲ. ಯಾವಾಗ ಹಾಕಿಕೊಂಡು ಬರಬಾರದೆಂದು ನಿಷೇಧ ಹೇರಲಾಯಿತೋ ಆಗ ಪ್ರತಿರೋಧ ಆರಂಭವಾಯಿತು. ಜೊತೆಗೆ ಹಿಜಾಬ್ ಧರಿಸುವುದು ಹೆಚ್ಚೇ ಆಯಿತು.

ಈ ಹೆಚ್ಚಾಗುವುದರ ಹಿಂದೆ ಅಲ್ಪಸ್ವಲ್ಪ ಪಟ್ಟಭದ್ರರ ಹಿತಾಸಕ್ತಿ ಇದ್ದೇ ಇದೆ ಎನ್ನಿಸುತ್ತೆ. ಆದರೆ ಯಾವಾಗ ಕೇಸರಿ ಬಣ್ಣವು ಹಿಜಾಬ್ ವಿರುದ್ಧ ಪ್ರತಿಕ್ರಿಯೆಯಾಗಿ ಬಂತೋ, ಆ ಕೇಸರಿ ಬಣ್ಣದ ಅದ್ಧೂರಿತನ ನೋಡಿದರೆ, ಆ ಕೇಸರಿ ಪೇಟ ನೋಡಿದರೆ, ಅದರ ವ್ಯಾಪಕತೆ ನೋಡಿದರೆ, ಇದೆಲ್ಲಾ ವಿದ್ಯಾರ್ಥಿಗಳದ್ದಲ್ಲಾ ಎಂದು ಹೆಚ್ಚು ಸ್ಪಷ್ಟವಾಗುತ್ತೆ. ಹಣ ಉಳ್ಳವರು, ಪಟ್ಟಭದ್ರ ಹಿತಾಸಕ್ತಿಗಳು ಚೆಲ್ಲಾಟ ನಡೆಸುತ್ತಿದ್ದಾರೆ ಎನ್ನಿಸುತ್ತದೆ.

ಇದರ ಜೊತೆಗೆ ರಾಜಕಾರಣಿಗಳದ್ದೂ ಕೈವಾಡ ಇದೆ. ಏಕೆಂದರೆ ಈ ಗಲಾಟೆ ಉಲ್ಬಣ ಮಾಡಿಕೊಂಡು ತಮ್ಮ ಸೋಲು-ಗೆಲುವನ್ನು ಇದರಲ್ಲಿ ನಿರ್ಧರಿಸಿಕೊಳ್ಳಬೇಕು. ಚಾನ್ಸ್ ಇದು. ಬಳಸಿಕೊಳ್ಳಬೇಕೆನ್ನುವ ದುರಾಸೆ ಅಥವಾ ಕೆಟ್ಟ ದುಷ್ಟತನ ಇದರಲ್ಲಿ ಕಂಡು ಬರುತ್ತಿದೆ. ಒಟ್ಟಿನಲ್ಲಿ ಇದರಲ್ಲಿ ಬಡಿದಾಡುತ್ತಿರುವವರು ಯಾರು ಎಂದು ನೋಡಿದರೆ, ಎರಡೂ ಕಡೆಯ ವಿದ್ಯಾರ್ಥಿಗಳೇ. ಅವರೇ ಬಲಿಪಶುಗಳು.

ಇದೇ ರೀತಿಯಾದರೆ, ಇದು ಎಲ್ಲಿಗೆ ಕರೆದೊಯ್ಯುತ್ತದೆ ಎಂದರೆ, ನಾಳೆ ಮಹಿಳೆಯರು ಪಿಂಕ್ ಗುಲಾಬಿ ಬಣ್ಣದ ವಸ್ತ್ರ ಧರಿಸಿ ಬರಬಹುದು. ಹಾಗೆಯೇ ದಲಿತರು ನೀಲಿ, ರೈತರು ಹಸಿರು ಟವೆಲ್, ಮತ್ತೆ ದುಡಿಯುವ ವರ್ಗ ಕೆಂಪು, ದ್ರಾವಿಡರು ಕಪ್ಪು, ಹಿಂದುಳಿದ ವರ್ಗ ಹಳದಿ, ಆಮೇಲೆ ಅದರೊಳಗಡೆನೇ ಮದಕರಿ ಬಣ್ಣವಾಗಿ ಮೆರೂನ್… ಹೀಗೆ ಬಣ್ಣ ಬಣ್ಣಗಳಲ್ಲಿ ಬರಲು ಈ ಗಲಾಟೆ ಉಲ್ಬಣಗೊಂಡರೆ ಪ್ರೇರಣೆಯಾಗಲಿದೆ.
ಸುಸ್ತು ಆದ ಮೇಲೆ ಶಾಂತಿ ಬೇಕೆನ್ನುವ ಬಿಳಿಬಣ್ಣ ಕೂಡ ಬರುತ್ತೆ.

ಈಗ ನಾವು ಯೋಚಿಸಬೇಕಿರುವುದು ಇದೆಲ್ಲಾ ನಮಗೆ ಬೇಕಿತ್ತಾ? ಎನ್ನುವುದಾಗಿದೆ. ಈಗ ತಾಯಂದಿರು, ಎಲ್ಲಾ ಜಾತಿ-ಧರ್ಮದ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ತಮ್ಮ ಮಕ್ಕಳು ಪಟ್ಟಭದ್ರ ಹಿತಾಸಕ್ತಿಗೆ ಮತ್ತು ರಾಜಕಾರಣಿಗಳ ಚೆಲ್ಲಾಟಕ್ಕೆ ಈ ತರ ದಾಳವಾಗುತ್ತಿದ್ದಾರೆ ಎಂದರೆ, ಅವರ ಆತಂಕ ಹೆಚ್ಚಾಗುವುದಿಲ್ಲವೇ? ಇದು ಬಹುಸಂಖ್ಯಾತ ಮಹಿಳೆಯರು, ತಾಯಂದಿರಲ್ಲಿ ಆತಂಕ ಹೆಚ್ಚು ಮಾಡಿದೆ ಎಂದು ನನಗೆ ಅನ್ನಿಸುತ್ತೆ. ಇದೇ ರೀತಿ ಉಲ್ಬಣವಾದರೆ ಒಂದಲ್ಲಾ ಒಂದು ದಿನ ಈ ತಾಯಂದಿರ ಆತಂಕವು ಆಕ್ರೋಶ ಆಗಬಹುದು. ಅದು ಸಹಜ. ನೆನಪಿರಲಿ.

ನಾನು ವಿದ್ಯಾರ್ಥಿಗಳಲ್ಲಿ ಗಮನಕ್ಕೆ ತರುವುದು ಒಂದೇ ವಿಚಾರ. ಈ ರೀತಿಯ ಭಾವನಾತ್ಮಕ ವಿಚಾರಗಳನ್ನು ಉಂಡು, ತಿಂದು, ಕುಣಿದು ಕುಪ್ಪಳಿಸುತ್ತ ಗದ್ದಲ ಮಾಡುತ್ತಿದ್ದೀರಲ್ಲಾ ನೀವು, ನಿಮಗೆ ನನ್ನ ಪ್ರಶ್ನೆ ಇಷ್ಟು: ನಾಳೆ ಬದುಕಿ ಬಾಳಬೇಕಾದ ನಿಮಗೆ ಈ ಭಾವನಾತ್ಮಕ ವಿಷಯಗಳು, ಈ ಭ್ರಮೆಗಳು ನಿಮ್ಮ ಭವಿಷ್ಯವನ್ನು ಮತ್ತು ನಾಳಿನ ಜೀವನವನ್ನು ರೂಪಿಸುತ್ತಾ? ಈ ಪ್ರಶ್ನೆಯನ್ನು ಎಲ್ಲಾ ವಿದ್ಯಾರ್ಥಿಗಳು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕಾಗಿದೆ ಈಗ.

ಈಗ ಎಲ್ಲರಿಗೂ ಗೊತ್ತು ನಿರುದ್ಯೋಗ ಹೆಚ್ಚುತ್ತಿದೆ. ಕಳೆದ 50 ವರ್ಷಗಳಲ್ಲೆ ಈಗ ಉದ್ಯೋಗ ಕಡಿಮೆ ಆಗಿದೆ. ಶಿಕ್ಷಣಕ್ಕೆ ಬಜೆಟ್‌ನಲ್ಲಿ ಕಮ್ಮಿ ಹಣ ನಿಗದಿ ಮಾಡಿದರು. ಶಿಕ್ಷಣ ಉಳಿಯುತ್ತದಾ? ಇದರ ಉದ್ದೇಶವೇನು? ಶಿಕ್ಷಣ ಕೊಡಬೇಕು ಅಂತಾನೋ? ನಿಧಾನವಾಗಿ ನಿಲ್ಲಿಸಬೇಕು ಅಂತಾನೋ? ಮತ್ತು ಪ್ರಾಥಮಿಕ ಆರೋಗ್ಯಕ್ಕೆ ಬಜೆಟ್‌ನಲ್ಲಿ ಅನುದಾನ ಕಡಿಮೆ ಮಾಡಿದ್ದಾರೆ. ಇದನ್ನೆಲ್ಲಾ ವಿದ್ಯಾರ್ಥಿಗಳು ಪ್ರಶ್ನೆ ಮಾಡಬೇಕಿತ್ತು. ಏಕೆಂದರೆ ಶಿಕ್ಷಣ, ಉದ್ಯೋಗ ನಿಮ್ಮದೇ ಸಮಸ್ಯೆಯಲ್ಲವೆ? ನಾಳೆ ಬದುಕಿ ಉಳಿಯಬೇಕಾದ ವಿದ್ಯಾರ್ಥಿ ಯುವಜನರಿಗೆ ಈ ಪ್ರಶ್ನೆ ಕೇಳುತ್ತಿದ್ದೇನೆ.

ಇಂದು ಪೆಟ್ರೋಲ್, ಗ್ಯಾಸ್ ಬೆಲೆ ಜಾಸ್ತಿಯಾಗುತ್ತಿದೆ. ಈ ಬೆಲೆ ಏರಿಕೆ ಸಿಕ್ಕಾಪಟ್ಟೆ ಕಂಟ್ರೋಲ್ ತಪ್ಪಿ ಹೆಚ್ಚುತ್ತಿದೆ. ಇದನ್ನು ಪ್ರಶ್ನೆ ಮಾಡಬೇಕಾದವರು ವಿದ್ಯಾರ್ಥಿಗಳಲ್ಲವೇ? ಈ ಎಚ್ಚರ ಎಲ್ಲಾ ಜಾತಿಯ, ಎಲ್ಲಾ ಧರ್ಮೀಯರ ವಿದ್ಯಾರ್ಥಿಗಳಲ್ಲೂ ಇರಬೇಕಾಗಿದೆ. ಇದನ್ನೂ ವಿದ್ಯಾರ್ಥಿಗಳು ಯೋಚನೆ ಮಾಡಬೇಕು.

ಈ ನೋಟ್ ಬ್ಯಾನ್ ಆವಾಂತರ, ಜಿಎಸ್‌ಟಿ ಅವಿವೇಕಿತನವು ದೇಶವನ್ನು ದಿಕ್ಕೆಡಿಸಿದೆ. ಗಮನಿಸಿ, ಇವತ್ತು ಮಧ್ಯಮ ವರ್ಗವು ಬಡತನದ ಕಡೆಗೆ ಹೋಗುತ್ತಿದೆ. ಮತ್ತು ಬಡವರು ಹಸಿವಿನ ಕಡೆಗೆ ಹೋಗುತ್ತಿದ್ದಾರೆ. ಈ ಸಮಸ್ಯೆಯನ್ನು ವಿದ್ಯಾರ್ಥಿಗಳಲ್ಲವೇ ಕೈಗೆ ತೆಗೆದುಕೊಳ್ಳಬೇಕಾದ್ದು. ಕೆಲವೇ ಜನ ಕಾರ್ಪೊರೇಟ್ ಕಂಪನಿ ಮಾಲೀಕರು, ಅವರ ಸಂಪತ್ತು ದೇಶದ ಸಂಪತ್ತಿನಲ್ಲಿ ಅರ್ಧ ಭಾಗವಿದೆ. ಅಂದರೆ ಕೆಲವೇ ಜನ ಕಾರ್ಪೋರೇಟ್ ಕುಟುಂಬಗಳ ಕೈಯಲ್ಲಿ ದೇಶದ ಅರ್ಧ ಭಾಗದ ಸಂಪತ್ತಿದೆ. ಕೊರೊನಾ, ಜಿಎಸ್‌ಟಿ, ನೋಟ್ ಬ್ಯಾನ್ ಆಗಿ ಜನರು ತತ್ತರಿಸುವಾಗ ಕಾರ್ಪೋರೇಟ್ ಕಂಪನಿಗಳ ಆದಾಯ ಹೆಚ್ಚಾಗಿದೆ. ಇದಕ್ಕೆ ಕಾರಣವೇನು? ಲೂಟಿ ಎಲ್ಲಿ ಆಗುತ್ತಿದೆ. ಇದನ್ನು ಎಚ್ಚೆತ್ತ ವಿದ್ಯಾರ್ಥಿಗಳು ಸಮಾಜಕ್ಕೆ ಹೇಳಬೇಕು. ಆ ಜವಾಬ್ದಾರಿ ಯುವ ಜನಾಂಗದ ಮೇಲಿದೆ.

ಆರ್ಥಿಕ ತಜ್ಞರು, ತಿಳಿದವರು ಹೇಳುತ್ತಿದ್ದಾರೆ. ಅದೇನೆಂದರೆ, ಕಾರ್ಪೊರೇಟ್ ಕಂಪನಿಗಳ ಸಂಪತ್ತಿನ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಿದರೆ, ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗುತ್ತದೆ, ಪ್ರಾಥಮಿಕ ಆರೋಗ್ಯ ಸುಧಾರಣೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಕೇಂದ್ರ ಸರ್ಕಾರ ಶೇ.2ರಷ್ಟು ತೆರಿಗೆಯನ್ನು ಅವರಿಗೆ ವಿಧಿಸಲಿಲ್ಲ. ಬದಲಾಗಿ ಅವರಿಗೆ ತೆರಿಗೆ ಕಮ್ಮಿ ಮಾಡಿತು. ಉಳ್ಳವರಿಗೆ ಎಲ್ಲವನ್ನೂ ನೀಡುತ್ತದೆ. ಆದರೆ ರೈತರು, ದುಡಿಯುವ ವರ್ಗಕ್ಕೆ ಕೇಳಿದರೂ ಇಲ್ಲ. ಅವರಿಗೆ (ಉಳ್ಳವರು/ಕಾರ್ಪೊರೇಟ್ ಕಂಪನಿಗಳು) ಭೂಮಿ, ನೀರು, ವಿದ್ಯುತ್ ರಿಯಾಯಿತಿ. ಇಲ್ಲದವರಿಗೆ ಇಲ್ಲ. ಇದು ಯಾವ ನೀತಿ ಅಂತ ಸರ್ಕಾರವನ್ನು ಪ್ರಶ್ನಿಸಬೇಕಾದ ಹೊಣೆ ಹೊತ್ತುಕೊಳ್ಳಲು ವಿದ್ಯಾರ್ಥಿಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ.

ಇಂದು ಮನುಷ್ಯರು ಧರ್ಮ-ದೇವರಿಗೆ ತಮ್ಮ ರೋಗ ಅಂಟಿಸುತ್ತಿದ್ದಾರೆ. ಇದಕ್ಕೆ ಧರ್ಮಜಾಢ್ಯ ಅಂತಾರೆ. ವಿದ್ಯಾರ್ಥಿಗಳು ಇನ್ನೂ ಎಳೆಯರು, ಇನ್ನೂ ಯಾವ ರಾಗ-ದ್ವೇಷ ಇಲ್ಲದವರು. ಅವರು ಈ ಧರ್ಮಜಾಢ್ಯದಿಂದ ಬಿಡುಗಡೆ ಪಡೆಯಿರಿ ಎಂದು ವಿದ್ಯಾರ್ಥಿ ಯುವಜನರಲ್ಲಿ ಕೇಳಿಕೊಳ್ಳುತ್ತೇನೆ.

ಆಯ್ತು, ಸಮವಸ್ತ್ರದ ಜೊತೆಗೆ ಹಿಜಾಬ್ ಹಾಕಿಕೊಂಡರೆ ಏನು ತೊಂದರೆ? ಬೇಕಾದರೆ ನಿಮಗೆ ಇಷ್ಟವಾದರೆ ನಿಮ್ಮಗಿಷ್ಟವಾದ ಬಣ್ಣದ ಹಿಜಾಬ್ ಅನ್ನು ನೀವೂ ಹಾಕಿಕೊಳ್ಳಿರಿ. ಇಂದು ಕುಂಕುಮ, ಬಳೆಗಳನ್ನು ಎಲ್ಲರೂ ಹಾಕಿಕೊಳ್ಳುವುದಿಲ್ಲವೇ? ಇಂತವೆಲ್ಲವೂ ದಿನಕಳೆದಂತೆ ಅಲಂಕಾರವೇ ಆಗಿ ಬಿಡಬಹುದು. ಆದ್ದರಿಂದ ಇದನ್ನೊಂದು ವಿವಾದ ಮಾಡಿಕೊಳ್ಳಬೇಕಾಗಿರಲಿಲ್ಲ. ಆದರೆ ಇಲ್ಲಿ ಅಹಂಕಾರ ಅವಿತುಕುಳಿತಿದೆ. ದ್ವೇಷ ಬಚ್ಚಿಟ್ಟುಕೊಂಡಿದೆ. ರಾಜಕಾರಣವೂ ಇದ್ದೇಇದೆ. ಪಟ್ಟಭದ್ರ ಹಿತಾಸಕ್ತಿಗಳೂ ಗುಡುರು ಹಾಕುತ್ತಿವೆ. ಹಾಗಾಗಿ ಸಹಜವಾಗಿ ನಡೆದುಕೊಂಡು ಹೋಗುತ್ತಿದ್ದುದು ಇಂದು ವಿವಾದವಾಗಿ ಉಲ್ಬಣಿಸಿದೆ. ನನ್ನ ವಿನಂತಿ ಹಿಜಾಬ್ ಇರಲಿ ಬಿಡಿ, ಅದನ್ನು ಏಕೆ ದೊಡ್ಡದು ಮಾಡುತ್ತೀರಿ? ಅದು ತನ್ನಷ್ಟಕ್ಕೆ ತಾನೇ ಕಮ್ಮಿ ಆಗುತ್ತಾ ಹೋಗಲೂ ಬಹುದು. ನಿಷೇಧ ಮಾಡಿದರೆ ಇದು ಹೆಚ್ಚುತ್ತಾ ಪ್ರತಿಭಟನೆಯ ಜೊತೆಗೆ ಬೇರೆಯವರೂ ಬಳಸಿಕೊಳ್ಳುವುದೂ ಹೆಚ್ಚಬಹುದು. ಈ ಎಚ್ಚರ ನಮಗಿರಲಿ.

ಈಗ ಈ ವಿವಾದ ನ್ಯಾಯಾಲಯದ ಮುಂದಿದೆ. ಅವರು ತಕ್ಷಣ ಇದಕ್ಕೆ ಪರಿಹಾರ ನೀಡಬೇಕು. ಅಲ್ಲಿಯವರೆಗೂ ತೂಗುಗತ್ತಿ ಆಡುತ್ತಲೇ ಇರುತ್ತದೆ. ಇಲ್ಲಿ ಒಂದು ತುಂಬಾ ನೋವಿನ ಸಂಗತಿಯೆಂದರೆ, ಹಿಜಾಬ್ ವಿವಾದ ಎಲ್ಲಿ ಹುಟ್ಟಿತೊ, ಆ ಒಂದೆರಡು ಶಾಲೆಗಳಲ್ಲೇ ಆಯಾಯ ಜನಾಂಗಗಳ ವಿವೇಕಿ ನಾಯಕರ ಸಮ್ಮುಖದಲ್ಲಿ ಶಾಂತಿ ಸಮಾಧಾನ ಮಾಡಿದ್ದರೆ, ಈ ವಿವಾದ ಬೆಳೆಯುತ್ತಿರಲಿಲ್ಲವೇನೋ. ಯಾವಾಗ ಈ ವಿವಾದವನ್ನು ಬಗೆಹರಿಸುವ ನೆಪದಲ್ಲಿ ಶಿಕ್ಷಣ ಸಚಿವರು ಸುತ್ತೋಲೆ ಹೊರಡಿಸಿದರೋ ಆವಾಗ ಇದು ರಾಜ್ಯವ್ಯಾಪ್ತಿ ಹಬ್ಬಿತು. ಇದಾಗಬಾರದಿತ್ತು. ಇಲ್ಲಿ ವಿವೇಕ, ವಿವೇಚನೆ ಅಗತ್ಯವಿತ್ತು. ಇದನ್ನು ನೆನಸಿಕೊಂಡರೆ ನೋವುಂಟಾಗುತ್ತದೆ.

ದೇವನೂರು ಮಹಾದೇವ

(ಹಿರಿಯ ಸಾಹಿತಿಗಳು ಮತ್ತು ಚಿಂತಕರು, ಮೈಸೂರು)


ಇದನ್ನೂ ಓದಿ: ಅಧ್ಯಾಪನದ ಧರ್ಮ: ನಮ್ಮ ವಿವೇಕದ ಮೇಲೆ, ಧರ್ಮದ ಮರ್ಮದ ಮೇಲೆ ನಡೀತಿರೋ ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...