ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ.
ಪ್ರಜ್ವಲ್ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೇ ಹೆಚ್.ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೈಸೂರಿನ ಕೆ.ಆರ್ ನಗರ ಮೂಲದ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಆಕೆಯ ಪುತ್ರ ರಾಜು ಎಂಬವರು ಕೆ.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ವಿಚಾರವಾಗಿ ತನಿಖೆ ಕೈಗೊಂಡ ಎಸ್ಐಟಿ ತಂಡ ಮಹಿಳೆಯನ್ನು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಳೇನಹಳ್ಳಿ ಬಳಿಯಿರುವ ರೇವಣ್ಣ ಆಪ್ತರೊಬ್ಬರ ತೋಟದ ಮನೆಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದೆ.
ಹೆಚ್.ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯನ್ನು ಎಪ್ರಿಲ್ 29ರಂದು ರೇವಣ್ಣ ಅವರ ಸೂಚನೆಯಂತೆ ಅವರ ಸಂಬಂಧಿ ಸತೀಶ್ ಬಾಬು ಅಪಹರಿಸಿದ್ದಾರೆ. ಆಕೆಯ ಜೀವಕ್ಕೆ ಅಪಾಯವಿದೆ ಎಂದು ಸಂತ್ರಸ್ತ ಮಹಿಳೆಯ ಮಗ ಕೆ.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ರೇವಣ್ಣ ಅವರು ಮೊದಲ ಆರೋಪಿಯಾಗಿದ್ದು, ಸತೀಶ್ ಬಾಬು ಎರಡನೇ ಆರೋಪಿಯಾಗಿದ್ದಾರೆ. ಸತೀಶ್ ಬಾಬುವನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮೊದಲ ಆರೋಪಿ ಹೆಚ್.ಡಿ ರೇವಣ್ಣ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿನ್ನೆ (ಮೇ 3) ಅರ್ಜಿ ಸಲ್ಲಿಸಿದ್ದರು. ಮಧ್ಯಂತರ ಜಾಮೀನು ನೀಡುವಂತೆ ಕೋರಿದ್ದರು. ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದ ನ್ಯಾಯಾಲಯ, ಇಂದು ವಿಚಾರಣೆ ನಡೆಸಿ ಜಾಮೀನು ನೀಡಲು ನಿರಾಕರಿಸಿದೆ. ಈ ಬೆನ್ನಲ್ಲೇ ರೇವಣ್ಣ ಅವರನ್ನು ಎಸ್ಐಟಿ ತಂಡ ವಶಕ್ಕೆ ಪಡೆದಿದೆ.
ಇದನ್ನೂ ಓದಿ : ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್.ಡಿ ರೇವಣ್ಣ ಎಸ್ಐಟಿ ವಶಕ್ಕೆ