Homeಮುಖಪುಟಮಾತು ಮರೆತ ಭಾರತ; ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮ

ಮಾತು ಮರೆತ ಭಾರತ; ಗುಪ್ತರ ’ಸವರ್ಣ ಯುಗ’ದಲ್ಲಿ ಅಸ್ಪೃಶ್ಯತೆಯ ಉಗಮ

- Advertisement -
- Advertisement -

ದಲಿತರು ಎಂದರೆ ಯಾರು? 1970ರ ದಶಕದಲ್ಲಿ ಹಿಂದೂ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧ ಪ್ರತಿರೋಧವಾಗಿ ದಲಿತ ಎಂಬ ಪದ ಭಾರತದ ಶೋಷಿತರೆಲ್ಲರನ್ನು ಒಂದೆಡೆ ತರುವಲ್ಲಿ ಯಶಸ್ವಿಯಾಗಿತ್ತು. ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್, ಕರ್ನಾಟಕದ ದಲಿತ ಸಂಘರ್ಷ ಸಮಿತಿ ಮತ್ತು ಆಂಧ್ರಪ್ರದೇಶದ ದಲಿತ ಮಹಾಸಭಾಗಳೇ ಇದಕ್ಕೆ ಸಾಕ್ಷಿ. ಈ ಮೂರೂ ಸಂಘಟನೆಗಳು ದಲಿತರೆಂದರೆ ಎಲ್ಲಾ ಜಾತಿಯ ಬಡವರೆಂದೇ ಹೇಳುತ್ತವೆ. ಅಷ್ಟರ ಮಟ್ಟಿಗೆ ಒಳಗೊಳ್ಳುವಿಕೆಯ ಹೋರಾಟಗಳು ಅವಾಗಿದ್ದವು. ಆದರೆ ಜಾತಿಪದ್ಧತಿ ಎಂಬುದು ಶೋಷಿತರನ್ನೂ ಒಟ್ಟುಗೂಡಲು ಬಿಡುವುದಿಲ್ಲವಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ’ಜಾತಿಯು ಕೇವಲ ಶ್ರಮದ ವಿಭಜನೆಯಲ್ಲ. ಅದು ಶ್ರಮಿಕರ ವಿಭಜನೆ’ ಎಂಬುದನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಇಂದಿಗೂ ಸಹ ದುಡಿಯುವ ಜನರು ಸಮಾನ ಶತ್ರುವಿನ ವಿರುದ್ಧ ಹೋರಾಡಲು ಸಂಘಟಿತರಾಗದಂತೆ ತಡೆಹಿಡಿದಿರುವುದು ಈ ಮೇಲು-ಕೀಳೆಂಬ ಜಾತಿಪದ್ಧತಿಯ ಕಾರಣಕ್ಕಾಗಿಯೇ. ಹಾಗಾಗಿ ಇಂದು ದಲಿತರೆಂದರೆ ಭಾರತದ ಅಸ್ಪೃಶ್ಯರೇ ಆಗಿದ್ದಾರೆ. ಭಾರತದ ಸಂವಿಧಾನ ವಿಧಿ 17ರಡಿಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಆದರೆ ಭಾರತದಲ್ಲಿ ಅಸ್ಪೃಶ್ಯತೆ ನಿಷೇಧವಾಗಿದೆ ಎಂದು ಹೇಳುವ ಧೈರ್ಯ ಈ ದೇಶದ ರಾಷ್ಟ್ರಪತಿಯವರಿಗೂ ಇಲ್ಲ. ಹಾಗಾಗಿ ದಲಿತ ಚಳವಳಿಗಳ ಕ್ಷಮೆಯಾಚಿಸುತ್ತಾ ದಲಿತ ಎಂಬ ಪದವನ್ನು ಅಸ್ಪೃಶ್ಯರಿಗೆ ಸಮಾನವಾಗಿ ಎಲ್ಲರಂತೆ ನಾನೂ ಸಹ ಬಳಸುತ್ತೇನೆ.

ನನ್ನ ಈ ಅಂಕಣದ ಉದ್ದೇಶ ಅಸ್ಪೃಶ್ಯರು ಯಾರು ಎಂದು ತಿಳಿಸುವುದಲ್ಲ. ಅಸ್ಪೃಶ್ಯತೆ ಧಾರ್ಮಿಕ ಆಚರಣೆಯಿಂದ ಹಿಂದೂ ಮೇಲ್ಜಾತಿಗಳು ಎಂದು ಕರೆಸಿಕೊಂಡವರು ಹೇಗೆ ದಲಿತರನ್ನು ಕಿತ್ತು ಕೊಂದಿದ್ದಾರೆ ಎಂಬುದನ್ನು ತಿಳಿಸುವುದಾಗಿದೆ. ಅದಾಗ್ಯೂ ಸಂಪೂರ್ಣ ವಿವರಗಳಿಗೆ ಹೋಗದೆ ಸಂಕ್ಷಿಪ್ತವಾಗಿ ಅಸ್ಪೃಶ್ಯತೆಯ ಬಗ್ಗೆ ತಿಳಿಸುತ್ತೇನೆ. ಹರಪ್ಪ ನಾಗರಿಕತೆ ಪತನವಾಗುತ್ತಿದ್ದ ಕಾಲಕ್ಕೆ ಪ್ರಾಚೀನ ಭಾರತಕ್ಕೆ ಮಧ್ಯ ಏಷಿಯಾದಿಂದ ಆರ್ಯರು ಬಂದರು. ನಂತರ ಇಲ್ಲಿನ ಉತ್ತರ ಭಾರತದಲ್ಲಿ ನೆಲೆಸಿದ್ದ ಭಾರತದ ಮೂಲನಿವಾಸಿಗಳ ಜೊತೆಗೆ ಸಮ್ಮಿಲನ ಮತ್ತು ಸಂಘರ್ಷದ ಮೂಲಕ ಬೆರೆತರು, ಅಲ್ಲದೆ ಪ್ರತ್ಯೇಕವಾಗಿಯೂ ಗುರುತಿಸಿಕೊಂಡರು. ವೇದಗಳು, ಧರ್ಮಸೂತ್ರಗಳ ಮೂಲಕ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳ ಸಮಾಜವನ್ನು ಸ್ಥಾಪಿಸಿದರು. (ನೆನಪಿರಲಿ ಈ ವರ್ಣಗಳು ಆರ್ಯವರ್ತ ಪ್ರದೇಶಗಳಾದ ಗಂಗಾ-ಯಮುನಾ ಬಯಲಿಗೆ ಸೀಮಿತವಾಗಿದ್ದವು. ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಮಧ್ಯ ಭಾರತದ ಬಗ್ಗೆ ಇತಿಹಾಸದ ಆರಂಭಿಕ ಹೆಜ್ಜೆಗುರುತುಗಳು ಇನ್ನೂ ಸ್ಪಷ್ಟವಾಗಿ ರಚಿಸಬೇಕಿದೆ.) ಮಗಧದಲ್ಲಿ ನಂದರ ನಂತರ ವಿಶಾಲವಾದ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾಯಿತು. ಈ ಭಾಗದಲ್ಲಿ ಆರ್ಯರು ಪ್ರಚಾರ ಮಾಡುತ್ತಿದ್ದ ಚಾತುರ್ವರ್ಣ ಧರ್ಮಕ್ಕೆ ವಿರೋಧವಾಗಿ ಹಲವು ಧರ್ಮಗಳು ಸ್ಥಾಪನೆಯಾದವು. ಅವುಗಳಲ್ಲಿ ಬೌದ್ಧ ಧರ್ಮ ಹಾಗೂ ಜೈನ ಧರ್ಮಗಳು ಪ್ರಸಿದ್ಧವಾದವು. ಹಾಗಾಗಿ ಚಂದ್ರಗುಪ್ತ ಮೌರ್ಯ ಕಡೆಯ ಕಾಲದಲ್ಲಿ ಜೈನನಾದರೆ ಸಾಮ್ರಾಟ್ ಅಶೋಕ ಕಳಿಂಗ ಯುದ್ಧದ ನಂತರ ಬೌದ್ಧನಾದನು.

ಸಾಮ್ರಾಟ್ ಅಶೋಕ

ಈ ಮೂಲಕ ಅಲ್ಲಿಯವರೆಗೂ ನೆಲೆಸಿದ್ದ ಚಾತುರ್ವರ್ಣ ಧರ್ಮದ ತಾರತಮ್ಯವನ್ನು ತೊರೆದು ಸರ್ವರೂ ಸಮವಾಗಿರಬೇಕೆಂಬ ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿದನು. ಯಜ್ಞ-ಯಾಗಗಳನ್ನು ನಿಷೇಧಿಸಿದನು. ಅಂಬೇಡ್ಕರರು ಹೇಳುವಂತೆ ಇದರಿಂದ ಚಾತುರ್ವರ್ಣ ಧರ್ಮದ ಪುರೋಹಿತ ಜನಾಂಗದ ಬ್ರಾಹ್ಮಣರು ದಕ್ಷಿಣೆಯನ್ನು ಕಳೆದುಕೊಂಡು ಬಡವರಾದರು ಜೊತೆಗೆ ಅಧಿಕಾರವನ್ನೂ ಕಳೆದುಕೊಂಡರು. ಹಾಗಾಗಿ ಮೌರ್ಯ ಸಾಮ್ರಾಜ್ಯವನ್ನು ಉರುಳಿಸುವುದೇ ಅವರ ಮೊದಲ ಕರ್ತವ್ಯವಾಯಿತು. ಸಾಮ್ರಾಟ್ ಅಶೋಕನ ಮೊಮ್ಮಗ ಬೃಹಧ್ರತ ಮೌರ್ಯನ ಸೇನಾಧಿಪತಿಯಾಗಿದ್ದ ಶುಂಗ ಬ್ರಾಹ್ಮಣ ಪುಶ್ಯಮಿತ್ರನು ಬೃಹದ್ರತನನ್ನು ಕೊಂದು ಸಿಂಹಾಸನವೇರಿದನು. ಇಲ್ಲಿಂದ ಮತ್ತೆ ಚಾತುರ್ವರ್ಣ ಧರ್ಮ ಮೇಲುಗೈ ಸಾಧಿಸಿತು. ಈ ಕಾಲದಲ್ಲಿಯೇ ಅಂದರೆ ಕ್ರಿ.ಪೂ 1ನೇ ಶತಮಾನದಲ್ಲಿ ಶೂದ್ರರನ್ನೂ ಮಹಿಳೆಯರನ್ನು ಹದ್ದುಬಸ್ತಿನಲ್ಲಿಟ್ಟು ಕೂಲಿಗಳನ್ನಾಗಿಸಿಕೊಳ್ಳುವ ಮನುಸ್ಮೃತಿ ರಚನೆಯಾಯಿತು. ದುಡಿಯುವ ಜನರನ್ನು ಶೂದ್ರರೆಂದು ಬಗೆದು ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಮನುಸ್ಮೃತಿಯು ಅಂತರ್ಜಾತಿ ವಿವಾಹ (ಕೆಳಜಾತಿಗಳು ಮೇಲ್ಜಾತಿಯವರನ್ನು ವಿವಾಹವಾಗುವುದನ್ನು) ಮತ್ತು ಅಂತರ್ ಭೋಜನವನ್ನು ನಿಷೇಧಿಸಿತು. ಇದರ ಪರಿಣಾಮವಾಗಿ ಜಾತಿಸಂಕರಗೊಂಡವರನ್ನು ಜಾತಿಭ್ರಷ್ಟರನ್ನಾಗಿಸಿ ಊರ ಹೊರಗೆ ಬಹಿಷ್ಕರಿಸಿದಾಗ ಅಸ್ಪೃಶ್ಯರು ಹುಟ್ಟಿದರೆಂದು ಮನುಸ್ಮೃತಿ ಸಮರ್ಥನೆ ನೀಡುತ್ತದೆ. ಆದರೆ ಅಂಬೇಡ್ಕರರಾಗಲೀ ಇತರೆ ಇತಿಹಾಸಕಾರರಾಗಲೀ ಈ ವಿವರಣೆಯನ್ನು ಒಪ್ಪುವುದಿಲ್ಲ. ಸುಮಾರು ಕ್ರಿ.ಶ 4ನೇ ಶತಮಾನದಷ್ಟೊತ್ತಿಗೆ ಅಸ್ಪೃಶ್ಯತೆ ಒಂದು ವ್ಯವಸ್ಥೆಯಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣಗಳು ಇಂತಿವೆ.

  1.  ಗೋಮಾಂಸ ಸೇವಿಸುತ್ತಿದ್ದ ಬಿಡಿ ಜನಾಂಗಗಳು ಅದನ್ನು ಮುಂದುವರೆಸಿದ್ದು.
  2.  ನೆಲೆನಿಂತ ಮತ್ತು ಬಿಡಿ ಜನಾಂಗಗಳ ನಡುವಿನ ಒಪ್ಪಂದ.
  3.  ಬೌದ್ಧ ಧರ್ಮೀಯರು ಚಾತುರ್ವರ್ಣ ಧರ್ಮವನ್ನು ನಿರಾಕರಿಸಿದ್ದು.
  4.  ಸ್ವಚ್ಛ ಮಾಡುವ ಕಾಯಕವನ್ನು ಕೆಳದರ್ಜೆಗೆ ಇಳಿಸಿದ್ದು.

ಈ ಕಾರಣಗಳಿಗಾಗಿ ಚಾತುರ್ವರ್ಣ ಧರ್ಮದಲ್ಲಿ ಆರಂಭವಾದ ಅಸ್ಪೃಶ್ಯತೆಯು ಅಸ್ಪೃಶ್ಯರನ್ನು ಹುಟ್ಟುಹಾಕಿತು. ಆಶ್ಚರ್ಯವೆಂದರೆ ಅವರನ್ನು ಚಾತುರ್ವರ್ಣದಿಂದ ಹೊರಗಿಟ್ಟಿತು. ಅಂಬೇಡ್ಕರರ ಮಾತಿನಲ್ಲಿ ಹೇಳುವುದಾದರೆ ’ಆ ಸಮುದಾಯ ಹುಟ್ಟುವುದೂ ಅಸ್ಪೃಶ್ಯರಾಗಿ, ಬದುಕುವುದು ಅಸ್ಪೃಶ್ಯರಾಗಿ, ಸಾಯುವುದು ಅಸ್ಪೃಶ್ಯರಾಗಿ. ಮತ್ತೆ ಹಡೆಯುವುದು ಅಸ್ಪೃಶ್ಯತೆ ಕಳಂಕ ಅಂಟಿದ ಮಕ್ಕಳನ್ನು, ಅದು ಶಾಶ್ವತ, ಆನುವಂಶಿಕ ಕಳಂಕ ಆಗಿರುವುದರಿಂದ ಅದನ್ನು ತೊಳೆಯುವುದು ಯಾವುದರಿಂದಲೂ ಆಗದು’.

ಕ್ರಿ.ಶ 4ರ ನಂತರ ಅಸ್ಪೃಶ್ಯರೆಂದು ಕರೆಯಲಾದ ಹಲವು ಜಾತಿಗಳು ಈ ಮೊದಲು ಶೂದ್ರರಾಗಿದ್ದವು. ಬೌದ್ಧ ಗ್ರಂಥಗಳು ಹೇಳುವ ಅನೇಕ ಸೇವಾ ಜಾತಿಗಳು ಬ್ರಾಹ್ಮಣ್ಯಗಳಲ್ಲಿ ಹೇಳಿದ ಅಸ್ಪೃಶ್ಯರಿಗೆ ಸಂವಾದಿ. ಚಂಡಾಲ, ನಿಷಾದ, ವೇಣ, ರಥಕಾರ, ಪುಕ್ಕುಸರನ್ನು ನೀಚಕುಲ, ಹೀನಜಾತಿಯವರೆಂದು ಭಾವಿಸಲಾಗಿತ್ತು. ಆದರೆ ಅವರ ಮೇಲೆ ಗುಪ್ತರ ಕಾಲದವರೆಗೂ ಅಸ್ಪೃಶ್ಯತೆಯನ್ನು ಹೇರಲಾಗಿರಲಿಲ್ಲ. ಅವರನ್ನು ಮುಟ್ಟಲು, ನೋಡಲು ನಿಷೇಧಿಸಲಾಗಿರಲಿಲ್ಲ. ಕ್ರಿ.ಶ 4ನೇ ಶತಮಾನದಲ್ಲಿ ಪತಂಜಲಿ ಸೂಚಿಸುವಂತೆ ಪಾಣಿನಿ ಕಾಲದಲ್ಲಿ ಚಂಡಾಲ, ಮೃತಪರು, ಅನಿರ್ವಸಿತರು (ಊರಾಚೆ ಇರುವ) ಶೂದ್ರರು ಎನಿಸಿಕೊಂಡಿದ್ದರು. ಅವರು ಮುಟ್ಟಿದ ಕಂಚು ಪಾತ್ರೆ ಶಾಶ್ವತವಾಗಿ ಮೈಲಿಗೆಯಾಗುತ್ತಿತ್ತು. ಆದರೆ ಅವರು ಮುಟ್ಟಿದ ಮನುಷ್ಯರು ಮೈಲಿಗೆಯಾಗುತ್ತಿರಲಿಲ್ಲ. ಅಂದರೆ
ಅವರಿಬ್ಬರ ನಡುವೆ ಸಂಪರ್ಕವಿತ್ತು. ಆದರೆ ನಂತರದ ದಿನಗಳಲ್ಲಿ ಅದು ಪ್ರಕ್ಷಿಪ್ತವಾಗಿ ಆಪಸ್ತಂಬ ಸೂತ್ರದಲ್ಲಿ ಚಂಡಾಲನನ್ನು ನೋಡುವುದು, ಮುಟ್ಟುವುದು ಸಹ ಪಾಪಕರ ಎಂದಾಯಿತು. ಗೌತಮಸೂತ್ರವು ಚಂಡಾಲ ಮುಟ್ಟಿದರೆ ಸಚೇಲ ಸ್ನಾನ ಮಾಡಬೇಕೆನ್ನುತ್ತದೆ. ಇದು ಮೌರ್ಯ ಪೂರ್ವ ಯುಗದ ಕೊನೆಗೆ ಆದ ಬೆಳವಣಿಗೆಯಾದರೂ ಒಂದಿಡೀ ಸಮುದಾಯಕ್ಕೆ ಅಸ್ಪೃಶ್ಯತೆ ಕಳಂಕ ಹಚ್ಚುವ ಪರಿಪಾಠವಿರಲಿಲ್ಲ. ಗುಪ್ತರ ಕಾಲದಷ್ಟೊತ್ತಿಗೆ ಅಸ್ಪೃಶ್ಯತೆ ಭರತ ಖಂಡದಲ್ಲಿ ನೆಲೆಯೂರಲು ಆರಂಭಸಿತ್ತು.

ಆರ್. ಎಸ್ ಶರ್ಮಾ ಮತ್ತು ಕೊಸಾಂಬಿಯವರ ಪ್ರಕಾರ ಬೌದ್ಧ ಜಾತಕಗಳಲ್ಲಿ ಅನೇಕ ಕಡೆ ಚಂಡಾಲನು ಪಾಪದ ಮೂರ್ತಿಯಾಗಿ, ಅಸ್ಪೃಶ್ಯನಾಗಿ ವರ್ಣಿತನಾಗಿದ್ದಾನೆ. ಕಾಶಿಯ ಶೆಟ್ಟಿಯ ಮಗಳು ಚಂಡಾಲನನ್ನು ನೋಡಿದ್ದಕ್ಕೆ ಕಣ್ಣು ತೊಳೆದುಕೊಳ್ಳುತ್ತಾಳೆ. ಚಂಡಾಲನೊಬ್ಬನು ತಿಂದು ಬಿಸುಟಿದ್ದ ಅನ್ನಕ್ಕೆ ತಗುಲಿದ್ದ ಆಹಾರವನ್ನು ತಿಂದು 16 ಸಾವಿರ ಬ್ರಾಹ್ಮಣರು ಜಾತಿಭ್ರಷ್ಟರಾದರೆಂದು ಮತ್ತೊಂದು ಜಾತಕ ಕತೆ ಹೇಳುತ್ತದೆ. ಒಬ್ಬ ಬ್ರಾಹ್ಮಣನು ಚಂಡಾಲನ ಎಂಜಲು ತಿಂದು ಆತ್ಮಹತ್ಯೆ ಮಾಡಿಕೊಂಡ. ಅದೂ ತನ್ನ ಜಾತಿಯವರಿಂದ ಅವಹೇಳನ ತಪ್ಪಿಸಿಕೊಳ್ಳಲು! ಉತ್ತರಾಧ್ಯಯನ ಸೂತ್ರದಲ್ಲಿ ಉಲ್ಲೇಖವಾಗಿರುವಂತೆ ಕಾಮನಹಬ್ಬದಲ್ಲಿ ಕುಣಿಯುತ್ತಾ ಬಂದ ಮಾತಂಗರನ್ನು ಮೇಲುಜಾತಿಯವರು ಥಳಿಸಿ ಊರಾಚೆ ಅಟ್ಟಿದ ಕತೆ ಇದೆ. ಬೌದ್ಧ, ಜೈನ ಮೂಲಗಳಿಂದ ತಿಳಿದುಬರುವಂತೆ ಚಂಡಾಲರನ್ನು ಅಸ್ಪೃಶ್ಯರೆಂದು ಮೇಲುವರ್ಣದವರು ಹೀಯಾಳಿಸುತ್ತಿದ್ದರು. ಬ್ರಾಹ್ಮಣರಿಗೆ ಅವರ ಮೇಲೆ ವಿಶೇಷ ದ್ವೇಷವಿತ್ತು. ಗುಪ್ತರ ಕಾಲದಲ್ಲಿ ಹಲವು ಸಂಸ್ಕೃತ ಸಾಹಿತ್ಯ ಮತ್ತು ಧರ್ಮಸೂತ್ರಗಳನ್ನು ಪ್ರಕ್ಷೇಪವಾಗಿಸಿ ಅಸ್ಪೃಶ್ಯರನ್ನು ಶೂದ್ರರಿಗಿಂತ ಪ್ರತ್ಯೇಕವಾಗಿ ನೋಡುವ ಪರಿಪಾಠ ಆರಂಭವಾಯಿತು. ಇದನ್ನು ಬೌದ್ಧ ಮತ್ತು ಜೈನ ಗ್ರಂಥಗಳು ಗುರುತಿಸಿದ್ದವು ಮತ್ತು ಉಲ್ಲೇಖಿಸಿದ್ದವು.

ಕಾಲಕ್ರಮೇಣ ಶೂದ್ರರೂ ನಿರಾಕರಿಸಿದ ಸೇವಾ ಕಾರ್ಯಗಳಿಗೆ ನಿಯೋಜಿಸಿದ ಜನಾಂಗವೇ ಮುಂದೆ ಅಸ್ಪೃಶ್ಯರಾದರು. ಇದಕ್ಕೆ ಸಾಕ್ಷಿಯಾಗಿ ಚಂಡಾಲರು ಚಿಂದಿಬಟ್ಟೆ ಉಟ್ಟು ತಿರುಬೋಕಿಗಳಾದ ಚಿತ್ರಣ ಜಾತಕ ಕತೆಗಳಲ್ಲಿ ಬರುತ್ತದೆ. ಒಂದು ಜಾತಕದಲ್ಲಿ ಸೂಚಿತವಾಗಿರುವಂತೆ ಅವರನ್ನು ಬೀದಿಯ ಕಸ ಗುಡಿಸಲು ನೇಮಿಸಿದ್ದರು. ಚಂಡಾಲರ ಜೀವನವು ದುರ್ಬರವಾಗಿತ್ತು. ಬೌದ್ಧ ಗ್ರಂಥ ಅಂಗುತ್ತರ ನಿಕಾಯದಲ್ಲಿ ಹೇಳಿರುವಂತೆ ಒಬ್ಬ ಚಂಡಾಲ ಹುಡುಗ ಅಥವಾ ಹುಡುಗಿ ಚಿಂದಿ ಬಟ್ಟೆ ತೊಟ್ಟು, ಭಿಕ್ಷೆಗೆ ಬೋಕಿಯೊಂದನ್ನು ಹಿಡಿದು, ಗ್ರಾಮವೊಂದಕ್ಕೆ ಹೋಗಬೇಕಾದರೆ ತಗ್ಗಿಬಗ್ಗಿ ನಡೆಯಬೇಕಿತ್ತು. ಬೇರೆಯವರಿಂದ ಬೇರ್ಪಡಿಸಿ ಗುರುತಿಸಲು ಸಾಧ್ಯವಾಗುವಂತೆ ಅವರು ಬಣ್ಣದ ಬಟ್ಟೆ ತೊಟ್ಟು, ಸೊಂಟಕ್ಕೆ ಒಂದು ಹಗ್ಗ (ಉಡುದಾರ) ಸುತ್ತಿಕೊಂಡು ಓಡಾಡಬೇಕಿತ್ತು. ಈ ಜಾತಕಗಳೆಲ್ಲವೂ ಮೌರ್ಯ ಪೂರ್ವ ಕಾಲದ ಅಂತಿಮಘಟ್ಟಕ್ಕೆ ಸೇರಿದವು. ಗುಪ್ತರ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಆಚರಣೆ ಸಾಂಸ್ಥಿಕ ರೂಪ ತಳೆಯಿತೆಂದು ಹೇಳಬಹುದು. ಹಾಗಾಗಿ ಗುಪ್ತರ ಯುಗ ಸವರ್ಣರಿಗೆ ಸುವರ್ಣ ಯುಗ. ಅವರ್ಣರಿಗೆ ನರಕ ಯುಗ.

ದಾಸ ಮತ್ತು ಕರ್ಮಕಾರರಾಗಿದ್ದ ಶೂದ್ರರ ಜೀವನಕ್ಕಿಂತಲೂ ಹೆಚ್ಚಿನ ಕಾರ್ಮಣ್ಯ ಅಸ್ಪೃಶ್ಯರದ್ದು. ಶೂದ್ರರಿಗೆ ಸ್ವಲ್ಪಮಟ್ಟಿನ ಜೀವನ ಭದ್ರತೆ ಇದೆ. ಇವರಿಗೆ ಅದೂ ಇಲ್ಲ ಮತ್ತು ಚಾತುರ್ವರ್ಣ ಸಮಾಜವು ನಿಕೃಷ್ಟತೆಯನ್ನು ಇವರ ಮೇಲೆ ಸದಾ ಹೇರುತ್ತಿರುತ್ತದೆ. ಅಸ್ಪೃಶ್ಯರು ಬಗ್ಗೆ ಬೃಹಸ್ಪತಿ ವಿಶೇಷವಾಗಿ ಕಠಿಣ ಧೋರಣೆ ತಾಳುತ್ತಾನೆ. ಬ್ರಾಹ್ಮಣರಿಗೆ ಅಪಚಾರ ಮಾಡಿದರೆ ಇವರಿಗೆ ಎಂದಿಗೂ ದಂಡ ಹಾಕಬಾರದು, ಹೊಡೆತ ಕೊಡಬೇಕು. ಶ್ವಪಚ, ಮೇದ, ಚಾಂಡಾಲ, ಮಾವುತ, ದಾಸ ಮುಂತಾದವರ ಬಗ್ಗೆ ಇಂತದೇ ಕಟ್ಟಳೆಯನ್ನು ನಾರದ ವಿಧಿಸುತ್ತಾನೆ. ಚೀನಾ ಯಾತ್ರಿಕ ಫಾಹಿಯಾನನು ಚಂಡಾಲರು ಊರ ಹೊರಗೆ ವಾಸ ಮಾಡುತ್ತಿದ್ದರೆಂದೂ, ಮಾಂಸದ ವ್ಯಾಪಾರ ಮಾಡುತ್ತಿದ್ದರೆಂದೂ ತಿಳಿಸಿದ್ದಾನೆ. ಅವರು ಊರಿನೊಳಕ್ಕೆ ಬಂದಾಗ ಮೇಲ್ಜಾತಿಯವರು ದೂರವೇ ಇರುತ್ತಿದ್ದರು. ರಸ್ತೆಯೇ ಅವರಿಂದ ಮೈಲಿಗೆಯಾಯಿತು ಎಂದು ಪರಿಗಣಿಸುತ್ತಿದ್ದರು. ಒಟ್ಟಾರೆ ಅಂಬೇಡ್ಕರರು ಹೇಳುವಂತೆ ’ಬೌದ್ಧರು ಮತ್ತು ಬ್ರಾಹ್ಮಣರ ನಡುವೆ ಪಾರಮ್ಯಕ್ಕಾಗಿ ನಡೆದ ಹೋರಾಟದ ಮದ್ಯೆ ಅಸ್ಪೃಶ್ಯತೆಯ ಜನನವಾಯಿತು’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: VHP, ಬಜರಂಗದಳ ಪಕ್ಷವೊಂದರ ಬಾಲಂಗೋಚಿಗಳು; ಕರ್ನಾಟಕ ಅವರ ಜಹಗೀರಲ್ಲ: ಕುಮಾರಸ್ವಾಮಿ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ ಆರ್ಯರು ಹರಪ್ಪ ಸಾಮ್ರಾಜ್ಯವನ್ನು ನಾಶಮಾಡಿ ಆರ್ಯವರ್ತ ಸಾಮ್ರಾಜ್ಯವನ್ನು ಸ್ಥಾಪಿಸಿದಾಗಿನಿಂದಲು ಜಾರಿಯಲ್ಲಿದೆ. ಅಂದಾಜು ೪೫೦೦ ವರ್ಷಗಳಿಂದ.

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...