| ಸರೋವರ್ ಬೆಂಕೀಕೆರೆ |
ಜೂನ್ 30 ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಕೇಸರಿ ಬಣ್ಣದ ಹೊಸ ಉಡುಪನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (BCCI) ಶುಕ್ರವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದೀಗ ಸಮವಸ್ತ್ರ ಬದಲಾಗಿದ್ದು ಯಾಕೆ ಮತ್ತು ಕೇಸರಿ ಬಣ್ಣವೇ ಏಕೆ ಎಂದು ದೇಶದಾದ್ಯಂತ ಚರ್ಚೆ ಆಗುತ್ತಿದೆ. ಅಲ್ಲದೆ ಇದು Indian oil ಪೆಟ್ರೋಲ್ ಬಂಕ್ ನ ಸಮವಸ್ತ್ರದಂತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಕೂಡ ಆಗುತ್ತಿದೆ.
ಒಂದೇ ಬಣ್ಣದ ಜರ್ಸಿ ಅನ್ನು ಹೊಂದಿರುವ ತಂಡಗಳು ಪಂದ್ಯವನ್ನು ಆಡುವಾಗ ಬಣ್ಣದ ಮಧ್ಯೆ ಗೊಂದಲಗಳು ಉಂಟಾದರೆ ಆ ನಿರ್ಧಿಷ್ಟ ಪಂದ್ಯಕ್ಕೆ ಒಂದು ತಂಡ ತನ್ನ ಜರ್ಸಿಯ ಬಣ್ಣವನ್ನು ಬದಲಾಯಿಸಬಹುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿಳಿಸಿದೆ. ಈ ಟೂರ್ನಿಯಲ್ಲಿ ಸಧ್ಯ ಭಾರತ, ಶ್ರೀಲಂಕ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ನೀಲಿ ಬಣ್ಣದ ಜರ್ಸಿಯನ್ನು ಹೊಂದಿದೆ ಮತ್ತು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಹಸಿರು ಬಣ್ಣದ ಜರ್ಸಿಯನ್ನು ಹೊಂದಿದೆ. ಈ ತಂಡಗಳ ಮಧ್ಯೆ ಪಂದ್ಯಗಳು ನಡೆದಾಗ ಬೇರೆ ಬಣ್ಣದ ಜರ್ಸಿಯನ್ನು ಬದಲಾಯಿಸಬಹುದಾಗಿದೆ. ICC ಬಣ್ಣದ ಆಯ್ಕೆಯ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ BCCI ಗೆ ನೀಡಿದೆ.
ಕೇಸರಿ ಬಣ್ಣವೇ ಯಾಕೆ?
ICC ನಿಯಾಮವಳಿ ಪ್ರಕಾರ ಒಂದೇ ಬಣ್ಣದ ಸಮವಸ್ತ್ರ ಇರುವ ತಂಡಗಳ ನಡುವೆ ಪಂದ್ಯ ನಡೆದಾಗ ತಂಡದ ಅಭಿಮಾನಿಗಳ ಇಚ್ಛೆಯನ್ನೂ ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಪಂದ್ಯಕ್ಲೆ ಜರ್ಸಿಯ ಬಣ್ಣವನ್ನು ಬದಲಾಯಿಸಿಬಹುದಾಗಿದೆ. ಆದರೆ ಇದೀಗ ಕೇಸರಿ ಬಣ್ಣವೇ ಯಾಕೆ ಎನ್ನುವ ಪ್ರಶ್ನೆ ದೇಶದಾದ್ಯಂತ ಬಿಸಿ ಚರ್ಚೆ ಆಗುತ್ತಿದೆ ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎನ್ನುವ ಆಪಾದನೆಯೂ ಕೇಳಿ ಬರುತ್ತಿದೆ.
ಈ ಹಿಂದೆ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತನ್ನ ಸಮವಸ್ತ್ರದ ಬಣ್ಣವನ್ನು ಬದಲಾವಣೆ ಮಾಡಿಕೊಂಡಿತ್ತು. ಹಾಗೂ ಬಾಂಗ್ಲಾದೇಶ ಮತ್ತು ಆಫ್ರಿಕಾ ತಂಡದ ನಡುವೆ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಹಸಿರು ಬಣ್ಣದ ಅಂಗಿಯ ಬದಲಾಗಿ ಹಳದಿ ಬಣ್ಣದ ಅಂಗಿ ಧರಿಸಿತ್ತು. ಆಫ್ರಿಕಾ ತಂಡ ನಿತ್ಯ ಬಳಸುತ್ತಿದ್ದ ಅಂಗಿಯಲ್ಲಿ ಹಳದಿಯೂ ಇತ್ತಾದ್ದರಿಂದ ಅದರದ್ದೇ ವಿರುದ್ಧ ಬಣ್ಣದ ಅಂಗಿಯನ್ನು ವಿನ್ಯಾಸ ಮಾಡಿಕೊಂಡಿತ್ತು. ಅಂದರೆ ಹಳದಿ ಬಣ್ಣ ಎದ್ದುಕಾಣುವಂತೆ. ಭಾರತ ತಂಡದ T-20 ವಿಶ್ವಕಪ್ ಪಂದ್ಯಕ್ಕೆ ನೀಲಿ ಬಣ್ಣದ ಅಂಗಿಗೆ ಕೇಸರಿ ಗೆರೆಗಳನ್ನು ಹೊಂದಿರುವ ಜರ್ಸಿಯನ್ನು ವಿನ್ಯಾಸಗೊಳಿಸಲಾಗಿತ್ತು. ಈಗಿನ ಪಂದ್ಯಕ್ಕೆ ಅದೇ ಎಳೆಯನ್ನು ಇಟ್ಟುಕೊಂಡು ಕೇಸರಿ ಎದ್ದು ಕಾಣುವಂತೆ ವಿನ್ಯಾಸ ಮಾಡಿದೆ ಹಾಗೂ ಮೂಲ ಬಣ್ಣವಾದ ನೀಲಿಯನ್ನು ಇಟ್ಟುಕೊಂಡಿದೆ ಹಾಗೂ ಹಿಂದಿನ ಕೇಸರಿ ಪಟ್ಟಿಯ ಅಂಗಿಯನ್ನು T-20 ಪಂದ್ಯಕ್ಕೆ ವಿನ್ಯಾಸ ಮಾಡಿದ್ದು ಅಮೇರಿಕಾದ ವಿನ್ಯಾಸಕಾರರು ಎಂದು ICC ನ ಮೂಲಗಳಯ ತಿಳಿಸಿವೆ.
ಒಟ್ಟಾರೆ ಹೊಸ ಉಡುಪಿನ ಬಣ್ಣವನ್ನು ಅಭಿಮಾನಿಗಳು ಅಷ್ಟಾಗಿ ಮೆಚ್ಚಿಕೊಂಡಿಲ್ಲ ಎಂಬುದನ್ನು ಸಮಾಜಿಕ ಜಾಲತಾಣದ ಪ್ರತಿಕ್ರಿಯೆಗಳು ತಿಳಿಸುತ್ತಿವೆ. ಅಲ್ಲದೆ ವಿರಾಟ್ ಕೋಹ್ಲಿ ಸಹ ನೀಲಿ ಜರ್ಸಿಯೇ ಚೆನ್ನಾಗಿ ಕಾಣುತ್ತಿತ್ತು ಎಂದು ಹೇಳಿದ್ದಾರೆ ಎಂದು ಸುದ್ಧಿಯಾಗಿದೆ. ಅಲ್ಲದೆ ಬಣ್ಣದ ಬದಲಾವಣೆಯಿಂದ ಸೋಲು ಗೆಲುವಿನ ಲೆಕ್ಕಾಚಾರವೂ ಶುರುವಾಗಿದೆ. ಏನೇ ಆದರೂ ಪಂದ್ಯದಲ್ಲಿ ಆಟಗಾರರ ಕಾರ್ಯಕ್ಷಮತೆ ಮುಖ್ಯವೇ ಹೊರತು ಬಣ್ಣವಲ್ಲ ಅನ್ನುವುದು ವಾಸ್ತವ.