Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು...

ಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು…

- Advertisement -
- Advertisement -

ಕೋವಿಡ್-19 ಸೋಂಕಿಗೆ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು. ಜೊತೆಗೆ, ಆಡಳಿತದಲ್ಲಿದ್ದವರ ಯಡವಟ್ಟುಗಳ ಕಾರಣ ಉದ್ಯೋಗ ಕಳೆದುಕೊಂಡವರೆಷ್ಟೋ? ಪಕ್ಕಾ ಲೆಕ್ಕ ಇನ್ನೂ ಸಿಕ್ಕಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕಷ್ಟಗಳನ್ನು ಎದುರಿಸಿ ಬದುಕುಳಿದ ಜನರಲ್ಲಿ ಬರೆಯದೇ ಉಳಿದ ಸಾವಿರಾರು ಕತೆಗಳಿವೆ. ಅಂತಹ ಒಂದು ಕತೆಯನ್ನು ಹೇಳುವ ಕೃತಿ ’ಎಡಿಟರ್‍ಸ್ ಮಿಸ್ಸಿಂಗ್’. ಇದು ಕೇವಲ ವ್ಯಕ್ತಿಯ ಕತೆಯಲ್ಲ, ಪತ್ರಿಕೋದ್ಯಮದ ಇಂದಿನ ವ್ಯಥೆ.

’ಔಟ್‌ಲುಕ್’ ಎಂಬ ಇಂಗ್ಲಿಷ್ ವಾರಪತ್ರಿಕೆಯ ಸಂಪಾದಕರಾಗಿದ್ದ ರೂಬೆನ್ ಬ್ಯಾನರ್ಜಿ ತಮ್ಮ ಪುಸ್ತಕ ಶೀರ್ಷಿಕೆಯಲ್ಲಿ ’ಮಿಸ್ಸಿಂಗ್’ ಪದ ಸೇರಿಸಿರುವುದಕ್ಕೆ ಎರಡು ಕಾರಣಗಳಿವೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡದೊಡ್ಡ ಉದ್ಯಮಿಗಳು ನಡೆಸುವ ಪತ್ರಿಕೆ, ಮಾಧ್ಯಮಗಳಿಗೆ ವೃತ್ತಿನಿಷ್ಠ ಸಂಪಾದಕರು ಬೇಕಾಗಿಲ್ಲ. ಅವರ ವ್ಯವಹಾರಗಳಿಗೆ ಯಾವುದೇ ಧಕ್ಕೆ ಆಗದಂತೆ ಮಾಧ್ಯಮ ಸಂಸ್ಥೆ ಮುನ್ನಡೆಸುವ ಮ್ಯಾನೇಜರುಗಳು ಬೇಕಾಗಿದ್ದಾರೆ. ಹಾಗಾಗಿ ಈಗಿನ ಕಾಲದಲ್ಲಿ – ಸಂಪಾದಕರು ’ಮಿಸ್ಸಿಂಗ್’ (ಕಾಣೆಯಾಗಿದ್ದಾರೆ).

ರೂಬೆನ್ ಬ್ಯಾನೆರ್ಜಿ ಔಟ್‌ಲುಕ್ ಸಂಪಾದಕರಾಗಿ 2021ರ ಮೇ ತಿಂಗಳಲ್ಲಿ ’ಮಿಸ್ಸಿಂಗ್’ ಎಂಬ ತಲೆಬರಹದ ಮುಖಪುಟ ಲೇಖನದೊಂದಿಗೆ ಸಂಚಿಕೆ ಹೊರತಂದಿದ್ದರು. ಮುಖಪುಟದಲ್ಲಿ ’ಮಿಸ್ಸಿಂಗ್’ ಎಂದು ಕೆಂಪು ಅಕ್ಷರಗಳಲ್ಲಿ ದೊಡ್ಡದಾಗಿ ಬರೆಯಲಾಗಿತ್ತು. ಕಾಣೆಯಾದವರ “ಹೆಸರು: ಭಾರತ ಸರಕಾರ, ವಯಸ್ಸು: ಏಳು ಹಾಗೂ ಇಂತಹವರು ಸಿಕ್ಕರೆ ತಕ್ಷಣ ಭಾರತದ ಪ್ರಜೆಗಳಿಗೆ ತಿಳಿಸಿ” ಎಂದು ಬರೆಯಲಾಗಿತ್ತು.

ರೂಬೆನ್ ಬ್ಯಾನರ್ಜಿ

ಕೋವಿಡ್‌ನಿಂದ ಜನರು ತತ್ತರಿಸಿ ಹೋಗಿರುವಾಗ, ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಉಸಿರುಕಟ್ಟಿ ಸಾಯುತ್ತಿರುವಾಗ ಅವರ ನೆರವಿಗೆ ಬರಬೇಕಿದ್ದ ಸರಕಾರ ಕಾಣೆಯಾಗಿತ್ತು ಎಂಬುದನ್ನು ಆ ಕವರ್ ಪೇಜ್ ಸಂಕೇತಿಸುತ್ತಿತ್ತು. ಆಡಳಿತದಲ್ಲಿರುವ ಸರಕಾರದ ವಿರುದ್ಧದ ದನಿ ಆ ಮುಖಪುಟದ ಅಕ್ಷರಗಳಲ್ಲಿ ಗಟ್ಟಿಯಾಗಿತ್ತು.
ಅಲ್ಲಿಂದ ಆರಂಭವಾದ ಬೆಳವಣಿಗೆಗಳ ಕಾರಣ ರೂಬೆನ್ ಬ್ಯಾನರ್ಜಿಯವರು ಕೆಲಸ ಕಳೆದುಕೊಳ್ಳಬೇಕಾಯ್ತು. ಆ ಕಾರಣಕ್ಕಾಗಿ ಕೃತಿಯ ಶೀರ್ಷಿಕೆಯಲ್ಲಿರುವ ’ಮಿಸ್ಸಿಂಗ್’ ಪದಕ್ಕೆ ಹೆಚ್ಚಿನ ಮಹತ್ವ ಇದೆ. ಆ ಕವರ್ ಪೇಜ್ ಹೊತ್ತ ಔಟ್‌ಲುಕ್ ಸಂಚಿಕೆ ಮಾರುಕಟ್ಟೆಗೆ ಬರುವ ತನಕ ಮೂರು ವರ್ಷಗಳ ಕಾಲ ತನ್ನ ಹುದ್ದೆಗೆ ಯಾವುದೇ ತೊಂದರೆ ಇರಲಿಲ್ಲ ಹಾಗೂ ಯಾವುದೇ ಒತ್ತಡ ಇಲ್ಲದೆ ಸ್ವತಂತ್ರವಾಗಿ ಸಂಪಾದಕನಾಗಿ ಕೆಲಸ ಮಾಡಲು ಅವಕಾಶ ಇತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕೃತಿ ಒಂದರ್ಥದಲ್ಲಿ ರೂಬೆನ್ ಬ್ಯಾನರ್ಜಿಯವರು ಆತ್ಮಕತೆಯೂ ಹೌದು. ವೃತ್ತಿ ಜೀವನಕ್ಕೆ ಸೀಮಿತವಾದ ಆತ್ಮಕತೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ಹೈದರಾಬಾದ್‌ನಲ್ಲಿ ಅಪರಾಧ ಸುದ್ದಿ ವರದಿಗಾರನಾಗಿ ಪತ್ರಕರ್ತನ ಕೆಲಸ ಆರಂಭಿಸುತ್ತಾರೆ. ಅವರ ಜೀವನಗಾಥೆಯ ನಿರೂಪಣೆಯಲ್ಲಿ ಓದುಗರು ಯಾವುದೇ ವಿಶೇಷ ಪ್ರಯತ್ನವಿಲ್ಲದೆ ಗುರುತಿಸಬಹುದಾದ ಒಂದು ಗುಣ ಪ್ರಾಮಾಣಿಕತೆ. ಅವರನ್ನು ತೀವ್ರ ಮುಜುಗರಕ್ಕೆ ಒಳಪಡಿಸಿದ ಸನ್ನಿವೇಶಗಳನ್ನು ಸಹಜವಾಗಿ ನಿರೂಪಿಸಿದ್ದಾರೆ. ಆತ್ಮಕತೆಗಳಲ್ಲಿ ಸಾಮಾನ್ಯವಾಗಿ ಸ್ವಪ್ರಶಂಸೆ ಹೆಚ್ಚಾಗಿರುತ್ತದೆ. ಆದರೆ ಇವರಲ್ಲಿ ಅದಿಲ್ಲ.

ವಿನೋದ್ ಮೆಹ್ತಾ ಅಂತಹವರು ನಿರ್ವಹಿಸಿದ ಔಟ್‌ಲುಕ್ ಸಂಪಾದಕರ ಸ್ಥಾನಕ್ಕೆ ತಾನು ’ಸೂಕ್ತ ವ್ಯಕ್ತಿಯೇ’ ಎಂದು ಹಲವು ಬಾರಿ ಅವರು ತಮ್ಮನ್ನು ಪ್ರಶ್ನಿಸಿಕೊಂಡಿದ್ದಾರೆ. ದೆಹಲಿಯ ಜನಪ್ರಿಯ ಪತ್ರಕರ್ತರ ಜೊತೆ ಅವರೇನು ಆತ್ಮೀಯ ಗೆಳೆತನ ಹೊಂದಿದ್ದವರಲ್ಲ. ಏಕೆಂದರೆ ಅವರು ಬಹಳ ಕಾಲ ಬೇರೆ ಊರುಗಳಲ್ಲಿ, ವಿದೇಶದಲ್ಲಿ ಕೆಲಸ ಮಾಡಿದ್ದವರು. ಹಾಗಾಗಿ ಔಟ್‌ಲುಕ್ ಸಂಪಾದಕರಾದ ಮೇಲೆ ಒಂದು ಕಾರ್ಯಕ್ರಮದಲ್ಲಿ ಇತರೆ ’ಜನಪ್ರಿಯ ಪತ್ರಕರ್ತರನ್ನು’ ಮಾತನಾಡಿಸಿ ಪರಿಚಯ ಮಾಡಿಕೊಳ್ಳಲು ಹೋದಾಗ, ಅಲ್ಲಿದ್ದವರು ಇವರ ಕಡೆ ಅಷ್ಟಾಗಿ ಗಮನವನ್ನೂ ಕೊಡುವುದಿಲ್ಲ. ಇವರು ತೀವ್ರ ಮುಜುಗರ ಎದುರಿಸುತ್ತಾರೆ. ಅದನ್ನು ನೈಜವಾಗಿ ನಿರೂಪಿಸಿದ್ದಾರೆ.

ಈ ಮೊದಲು ಕೆಲಸ ಕೇಳಲು ಹೋದ ಕಡೆಯಲ್ಲೆಲ್ಲಾ ಅವಮಾನ ಅನುಭವಿಸಿದ್ದನ್ನೂ ಪ್ರಾಮಾಣಿಕತೆಯಿಂದ ಬರೆದಿದ್ದಾರೆ. ಯಾವುದೋ ಒಂದು ಸನ್ನಿವೇಶದಲ್ಲಿ ಅರುಣ್ ಶೌರಿಯವರು ’ಅಕ್ಷರಶಃ ಅಟ್ಟಾಡಿಸಿಕೊಂಡು ಬಂದು ಹೊರ ಕಳುಹಿಸಿದರು’ ಎಂದು ಬರೆಯುತ್ತಾರೆ. ಇನ್ನೊಂದು ಕಡೆ ಇವರ ಸೀನಿಯರ್ “ನಿಮ್ಮನ್ನು ಈ ಪ್ರಮುಖ ಸ್ಥಾನಕ್ಕೆ ನೇಮಿಸಿಕೊಂಡು ತಪ್ಪು ಮಾಡಿದೆ..” ಎಂದು ಛೀಮಾರಿ ಹಾಕಿದ್ದನ್ನು ದಾಖಲಿಸುತ್ತಾರೆ.

ವೃತ್ತಿಜೀವನದ ಆರಂಭದಲ್ಲಿ ಅವರು ವರದಿಗಾರರಾಗಿ ಒಂದು ದಿನ ಸ್ನೇಹಿತರ ಒತ್ತಾಯಕ್ಕೆ ರಾತ್ರಿ ಪಾಳೆಯದಲ್ಲಿ ಸಿನಿಮಾಕ್ಕೆ ಹೋಗಿರುತ್ತಾರೆ. ಅಂದು ಕಚೇರಿಯಲ್ಲೇ ಇದ್ದು ಅಪರಾಧ ಘಟನೆಗಳ ಮಾಹಿತಿ ಕಲೆಹಾಕಬೇಕಿತ್ತು. ಆದರೆ ಆ ಕೆಲಸ ಮಾಡದ ಕಾರಣ, ಅಂದು ಹೈದರಾಬಾದ್ ಪಟ್ಟಣದಲ್ಲಿ ಕೋಮುಗಲಭೆ ನಡೆದು ಒಬ್ಬ ಶಾಸಕ ಕೂಡ ಹತ್ಯೆಯಾಗಿದ್ದನ್ನು ವರದಿ ಮಾಡಿರಲಿಲ್ಲ. ಅದು ನಡೆದದ್ದು 1980ರ ದಶಕದ ಕೊನೆ ಭಾಗದಲ್ಲಿ. ಈಗಿನಂತೆ ಮೊಬೈಲ್ ಫೋನ್ ಇರಲಿಲ್ಲ. ಮಾರನೇ ದಿನ ಬೆಳಗ್ಗೆ ಬೇರೆ ಪತ್ರಿಕೆಗಳನ್ನು ನೋಡಿದಾಗ ಆಗಿರುವ ಅನಾಹುತ ಗೊತ್ತಾಗುತ್ತದೆ. ಬೇರೆಲ್ಲಾ ಪತ್ರಿಕೆಗಳ ಸಿಟಿ ಎಡಿಷನ್‌ನಲ್ಲಿ ಲೀಡ್ ಆಗಿರುವ ಸುದ್ದಿ, ಇವರ ಪತ್ರಿಕೆಯಲ್ಲಿ ಇಲ್ಲವೇ ಇಲ್ಲ. ವರದಿಗಾರ ಸಿನಿಮಾ ನೋಡಲು ಹೋಗಿದ್ದ ಕಾರಣ ಸುದ್ದಿ ಬರಲಿಲ್ಲ. ಈ ಘಟನೆಯಿಂದ ತೀವ್ರ ಬೇಸರ ಪಟ್ಟು ಕಚೇರಿ ಕಡೆ ಮುಖ ಮಾಡುವುದಿಲ್ಲ. ಅಲ್ಲಿಗೆ ತನ್ನ ಪತ್ರಿಕೋದ್ಯಮ ಜೀವನ ಮುಗಿಯಿತೇನೋ ಎನಿಸಿದ್ದೂ ಉಂಟು. ಆದರೆ ಹಿರಿಯ ಸಹೋದ್ಯೋಗಿಗಳು ಮತ್ತೆ ಬಾ ಎಂದು ಕರೆದಾಗ ಕಚೇರಿಗೆ ಹೋದ ಕಾರಣ ಈ ಕ್ಷೇತ್ರದಲ್ಲಿ ಉಳಿಯುತ್ತಾರೆ. ಈ ಘಟನೆಯವನ್ನು ಅವರು ಇಲ್ಲಿ ಹೇಳಿಕೊಳ್ಳದಿದ್ದರೆ, ಯಾಕೆ ಹೇಳಲಿಲ್ಲ ಎಂದು ಯಾರೂ ಕೇಳುತ್ತಿರಲಿಲ್ಲ.

ಹಾಗೆಯೇ ಇನ್ನೊಂದು ಸಂದರ್ಭ ಔಟಲುಕ್‌ನ ಜಾಹಿರಾತು ಒಂದರಲ್ಲಿ ಕೇಂದ್ರ ಮಂತ್ರಿ ಸ್ಮೃತಿ ಇರಾನಿ ಹೆಸರು ಶ್ರೀಮತಿ ಈಡಿಯಟ್ ಎಂದೇನೋ ತಪ್ಪಾಗಿ ಅಚ್ಚಾಗಿರುತ್ತದೆ. ಕಚೇರಿಯಲ್ಲಿ ಇದ್ದ ಸಿಬ್ಬಂದಿ ಒಬ್ಬರು ಸಹೋದ್ಯೋಗಿ ಜೊತೆ ಕುಚೋದ್ಯ ಮಾಡಲು ಹೋಗಿ ಆಗಿದ್ದ ಪ್ರಮಾದ ಅದು. ಆ ಸಂಚಿಕೆ ಪ್ರಿಂಟ್ ಆಗಿ ಬಂದ ನಂತರವೇ ತಪ್ಪು ಗೊತ್ತಾಗುತ್ತದೆ. ತಕ್ಷಣ ಎಲ್ಲಾ ಸಂಚಿಕೆಗಳನ್ನು ವಾಪಸ್ಸು ತರಿಸಿ, ಇಡೀ ಸಂಚಿಕೆಯನ್ನು ಮತ್ತೆ ಮುದ್ರಿಸುತ್ತಾರೆ. ಈ ಘಟನೆಯೂ ಇಲ್ಲಿದೆ.

ಬ್ಯಾನರ್ಜಿ ಇಂಡಿಯಾ ಟುಡೆ ಪತ್ರಿಕೆಯ ವರದಿಗಾರರಾಗಿ ಹಲವು ಪ್ರಮುಖ ಸುದ್ದಿಗಳನ್ನು ಪ್ರಕಟಿಸುತ್ತಾರೆ. ನೆರೆ ಬಂದು ರಾಜ್ಯ ತತ್ತರಿಸಿದಾಗಲ್ಲೆಲ್ಲಾ ಅದರ ಬಗ್ಗೆ ಇವರು ಮಾಡಿದ ವರದಿಗಳು ಕವರ್ ಸ್ಟೋರಿಗಳಾಗಿ ಅಚ್ಚಾಗಿವೆ. ಕ್ರಿಶ್ಚಿಯನ್ ಮಿಷಿನರಿಯ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ದಾರಾ ಸಿಂಗ್ ಮತ್ತು ಅವನ ಸಹಚರರು ಸುಟ್ಟು ಹಾಕಿದ್ದನ್ನು ಇಂಡಿಯಾ ಟುಡೆಗೆ ವರದಿ ಮಾಡಿದ್ದು ಇವರೇ. ಬಿಜು ಪಟ್ನಾಯಕ್ ಹಾಗೂ ನವೀನ್ ಪಟ್ನಾಯಕ್ ಅವರ ಜೊತೆ ಆತ್ಮೀಯ ಸಂಪರ್ಕ ಸಾಧಿಸಿದ್ದರು. ಆ ಕಾರಣಕ್ಕೆ ಮುಂದೆ ದೀರ್ಘ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿದಿರುವ ನವೀನ್ ಪಟ್ನಾಯಕ್ ಜೀವನಗಾಥೆಯನ್ನು ಪುಸ್ತಕವಾಗಿ ಹೊರತಂದಿದ್ದಾರೆ. ಆಲ್‌ಜಜೀರಾದ ವೆಬ್ ಎಡಿಷನ್‌ಗಾಗಿ ಹನ್ನೆರಡು ವರ್ಷ ದೋಹಾದಲ್ಲಿ ಕೆಲಸ ಮಾಡಿದ್ದಾರೆ.

ಔಟಲುಕ್‌ನಲ್ಲಿ ಸಂಪಾದಕರಾಗಿ ಅವರು ತಳೆದಿದ್ದ ನಿಲುವು ’ಎರಡೂ ಕಡೆಯ ಅಭಿಪ್ರಾಯಗಳಿಗೆ ಸಮಾನ ಮನ್ನಣೆ’ ಕೊಡಬೇಕು ಎನ್ನುವುದು. ಬಹುಶಃ ಆ ಕಾರಣಕ್ಕೆ ಔಟಲುಕ್‌ನ ಹಲವು ಸಾಂಪ್ರದಾಯಿಕ ಓದುಗರು ಅವರು ಜವಾಬ್ದಾರಿ ಹೊತ್ತ ನಂತರ ಪತ್ರಿಕೆಯಿಂದ ದೂರವಾದರು. ರೂಬೆನ್ ಬ್ಯಾನರ್ಜಿ ತಮ್ಮ ಈ ಧೋರಣೆಯನ್ನು ಈ ಕೃತಿಯಲ್ಲೂ ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆ ನಿಲುವಿಗೆ ಕಟ್ಟುಬಿದ್ದು ಅವರು ತೀರಾ ಒಪ್ಪಲಾಗದ, ಲಾಜಿಕ್ಕೇ ಇಲ್ಲದ ಹಲವು ಅಭಿಪ್ರಾಯಗಳನ್ನು ಪ್ರಕಟಿಸಬೇಕಾಯಿತು. ಒಮ್ಮೆ ಅವರ ಕಿರಿಯ ಸಹೋದ್ಯೋಗಿಯೊಬ್ಬ, ಸಂಪಾದಕರ ಈ ನಿಲುವಿನ ಬಗ್ಗೆ ತನ್ನ ತಕರಾರು ತೆಗೆದ. ಆದರೆ ಅದರಿಂದ ಬ್ಯಾನರ್ಜಿಯವರು ಬೇಸರ ಮಾಡಿಕೊಳ್ಳಲಿಲ್ಲ. “ನಿನ್ನ ನಿಲುವನ್ನು ತಾನು ಗೌರವಿಸುತ್ತೇನೆ” ಎಂದು ಹೇಳಿ, ಆತನಿಂದಲೇ ಸಂಪಾದಕರ ಅಭಿಪ್ರಾಯದ ವಿರುದ್ಧ ಒಂದು ಬರಹ ಬರೆಯಿಸಿ ಅದನ್ನು ಯಥಾವತ್ತಾಗಿ ಪ್ರಕಟಿಸಿದರು. ಹೀಗೆ ಭಿನ್ನ ಅಭಿಪ್ರಾಯಗಳಿಗೆ ಸಮಾನ ಮಣೆಹಾಕುವುದರಿಂದ ಅಧಿಕಾರಸ್ಥರ ಕೆಂಗಣ್ಣಿಗೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ಸಂಪಾದಕರಿಗೆ ಇದ್ದಿರಬಹುದು. ಜೊತೆಗೆ ತನ್ನ ಪತ್ರಿಕೋದ್ಯಮದಿಂದ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೇರುಬಿಟ್ಟಿರುವ ಮಾಲೀಕರಿಗೆ
ತೊಂದರೆ ಆಗಬಾರದು ಎಂಬ ಕಾಳಜಿಯೂ ಇರಬಹುದು.

ಆದರೆ ಇಂತಹ ಸರ್ಕಸ್ ಮಾಡಿದ ನಂತರವೂ ಅವರೇನು ತಮ್ಮ ಸ್ಥಾನದಲ್ಲಿ ಬಹಳ ಕಾಲ ಉಳಿಯಲಿಲ್ಲ. ಅತ್ತ ಮಾಲೀಕರ ಬೆಂಬಲವೂ ದೀರ್ಘಕಾಲ ಇರಲಿಲ್ಲ. ಕಂಪನಿಯ ಸಿಇಒ ಇವರ ಕೆಲಸದಲ್ಲಿ ಮಧ್ಯಪ್ರವೇಶ ಮಾಡಿ ಸಂಪಾದಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೊನೆಗೆ ಬೇಸತ್ತು ಕೆಲಕಾಲ ರಜೆ ಮೇಲೆ ಹೋಗುತ್ತಾರೆ. ಆದರೆ ಹಿಂತಿರುಗಿ ಬರುವ ದಿನ ಅವರನ್ನು ಕೆಲಸದಿಂದ ಏಕಾಏಕಿ ತೆಗೆದುಹಾಕಲಾಗಿರುತ್ತದೆ. ಈ ಘಟನೆಗಳ ಪೂರ್ಣ ವಿವರಗಳು ಕೃತಿಯಲ್ಲಿವೆ.

ತಮ್ಮ ಕತೆಯ ಜೊತೆಗೆ ಬ್ಯಾನರ್ಜಿಯವರು ತಮ್ಮ ಕಾಲದ ಪತ್ರಿಕೋದ್ಯಮದ ಕತೆ ಹೇಳುತ್ತಾರೆ. ಸಂಪಾದಕರು ಕಾಣೆಯಾಗಿ ಸಿಇಒಗಳು ಪತ್ರಿಕೋದ್ಯಮ ನಡೆಸುತ್ತಿರುವ ವ್ಯವಸ್ಥೆ ಬಗ್ಗೆ ಬರೆಯುತ್ತಾರೆ. ಈ ವಾಸ್ತವ ಚಿತ್ರಣವನ್ನು ಈ ಕೃತಿ ಅಚ್ಚುಕಟ್ಟಾಗಿ ನಿರೂಪಿಸಿದೆ.

ಈಗೀಗ ಸಂಪಾದಕರು ಬಿಡಿ, ವರದಿಗಾರರೂ ಕಾಣೆಯಾಗಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವರದಿಗಾರರು ಈಗ ಜಾಹಿರಾತು ವ್ಯವಸ್ಥಾಪಕರೂ ಹೌದು, ಪತ್ರಿಕೆಗಳ ಉಸ್ತುವಾರಿಯೂ ಅವರದೇ. ಈ ಜವಾಬ್ದಾರಿಗಳ ಜೊತೆಗೆ ಆಗಾಗ ಜನಪ್ರತಿನಿಧಿಗಳನ್ನು ಕರೆದು ದೊಡ್ಡ ಕಾರ್ಯಕ್ರಮಗಳನ್ನು ಮಾಡಬೇಕು. ಆ ಕಾರ್ಯಕ್ರಮದ ನೆಪದಲ್ಲಿ ಸಂಸ್ಥೆಗೆ ಜಾಹಿರಾತು ತರಬೇಕು. ಆ ಬಗ್ಗೆ ತಿಂಗಳಿಗೆ ಇಷ್ಟು ಎಂಬಂತೆ ಟಾರ್ಗೆಟ್ ಕೂಡಾ ನಿಗದಿಯಾಗಿದೆ. ಯಾರು ಟಾರ್ಗೆಟ್ ರೀಚ್ ಮಾಡುವುದಿಲ್ಲವೋ ಅವರು ಕೆಲಸ ಕಳೆದುಕೊಳ್ಳುವ ಸಂಭವ ಇದೆ. ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ.

ಪತ್ರಿಕೋದ್ಯಮ ಒಂದು ಉದ್ದಿಮೆಯಾಗಿ ಬದಲಾದ ವಿದ್ಯಮಾನ ಸಮಾಜಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿಯಾದದ್ದು. ಪತ್ರಿಕಾ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯಾವಾಗ ಎಂಬಿಎ ಓದಿ ಬಂದ ವ್ಯಕ್ತಿಗಳು ವಹಿಸಲು ಬಂದರೋ ಆಗಿನಿಂದ ಅಹಿತಕರ ಬದಲಾವಣೆಗಳು ಆರಂಭವಾದವು. ಪತ್ರಿಕೆ ಹೇಗಿರಬೇಕು, ಯಾರ ಪರ ಇದ್ದರಷ್ಟೇ ಜಾಹಿರಾತು ಬರುತ್ತವೆ ಎಂಬಿತ್ಯಾದಿಯನ್ನು ಅವರೇ ನಿರ್ಧರಿಸುವಂತಾಯಿತು.

ವಿನೋದ್ ಮೆಹ್ತಾ

ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಒಂದು ಘಟನೆ ನೆನಪು ಮಾಡಿಕೊಂಡರು. ಅವರು ಈ ಹಿಂದೆ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವಾಗ ನಡೆದ ಸನ್ನಿವೇಶ ಅದು. ಎಂಬಿಎ ಓದಿಕೊಂಡು ಕಾರು ಮಾರಾಟದ ಕಂಪನಿಯಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರು ಪತ್ರಿಕಾ ಸಂಸ್ಥೆ ಮಾರುಕಟ್ಟೆ ವಿಭಾಗಕ್ಕೆ ನೇಮಕವಾದರು. ಮೀಟಿಂಗ್‌ನಲ್ಲಿ ಒಮ್ಮೆ ಪತ್ರಿಕೆಯ ಸಂಪಾದಕೀಯ ಧೋರಣೆ ಬಗ್ಗೆ ಆ ಮಹಾಶಯ ಚಕಾರ ಎತ್ತಿ, ’ಇದು ಬದಲಾಗಬೇಕು, ಆಗ ಮಾತ್ರ ಸೇಲ್ಸ್ ಜಾಸ್ತಿ ಆಗುತ್ತೆ’ ಎಂದರಂತೆ. ಅವರ ಮಾತಿಗೆ ಪ್ರತಿಕ್ರಿಯಿಸುತ್ತಾ ಸುಗತ ಹೇಳಿದ್ದು, “ನೀವು ಈ ಹಿಂದೆ ಕೆಲಸ ಮಾಡುತ್ತಿದ್ದ ಕಾರು ಕಂಪನಿಯಲ್ಲಿ ಏನು ಮಾಡುತ್ತಿದ್ರಿ? ಕಂಪನಿ ಸಿದ್ಧಪಡಿಸುತ್ತಿದ್ದ ಕಾರನ್ನು ಮಾರಾಟ ಮಾಡುತ್ತಿದ್ರಿ ತಾನೆ? ಅದರ ಬದಲು ಅದರ ಹೆಡ್ ಲೈಟ್, ಸೀಟ್ಸ್, ಅಥವಾ ಟೈರ್‍ಸ್ ಬದಲಾಗಬೇಕು ಆಗ ಮಾತ್ರ ಮಾರಾಟ ಆಗುತ್ತೆ ಎಂದು ಯಾವಾಗಲಾದರೂ ಹೇಳಿದ್ರಾ? ಇಲ್ಲಾ ತಾನೆ. ಪತ್ರಿಕೆ ಹೇಗಿರಬೇಕು, ಅದರ ಧೋರಣೆ, ನಿಲುವು ಏನು ಎಂಬುದನ್ನು ಸಂಪಾದಕೀಯ ವಿಭಾಗ ನಿರ್ಧರಿಸುತ್ತದೆ. ಇರುವ ಪ್ರಾಡಕ್ಟ್ ಇರುವ ಹಾಗೆಯೇ ಮಾರ್ಕೆಟ್ ಮಾಡಬೇಕಾಗಿರುವುದು ನಿಮ್ಮ ಜವಾಬ್ದಾರಿ” ಎಂದರಂತೆ. ಇದು ತಕ್ಕ ಉತ್ತರ. ಆದರೆ ಆ ಉತ್ತರ ಹೇಳಿ ಅದನ್ನೇ ಸರಿ ಎಂದು ಸಾಧಿಸಿ ಈ ಬಿಗುವಿನ ಪೈಪೋಟಿ ಇರುವ ಜಗತ್ತಿನಲ್ಲಿ ಗೆಲ್ಲುವುದು ಕಷ್ಟದ ಮಾತು.

ಇಂದು ಅನೇಕ ಪತ್ರಿಕೆ, ಮಾಧ್ಯಮ ಸಂಸ್ಥೆಗಳು ನಡೆಯುತ್ತಿರುವುದು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಓದಿ ಬಂದವರಿಂದ. ಸಂಪಾದಕೀಯ ಹಾಗೂ ಜಾಹೀರಾತು ಮಧ್ಯದ ಗೋಡೆ ಕಾಣೆಯಾಗಿರುವುದಷ್ಟೇ ಅಲ್ಲ, ಎಲ್ಲೆಲ್ಲೂ ಜಾಹೀರಾತು ವಿಭಾಗವೇ ತನ್ನ ಛಾಪು ಮೂಡಿಸಿದೆ. ರೂಬೆನ್ ಬ್ಯಾನರ್ಜಿಯವರ ಕೃತಿ ಈ ಬಗ್ಗೆ ಓದುಗರನ್ನು ಒಂದಿಷ್ಟು ಚಿಂತನೆಗೆ ಹಚ್ಚುತ್ತದೆ.

ಸಿ ಟಿ ಜಿತೇಶ್, ಪತ್ರಕರ್ತರು


ಇದನ್ನೂ ಓದಿ: ಪುರಾಣದ ಯಾವುದೋ ಕಲ್ಪಿತ ಜಗತ್ತನ್ನು ಹಂಬಲಿಸುತ್ತಾ ಹಿಮ್ಮುಖ ಚಲಿಸದ ಕಥಾ ಪಾತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...