Homeಅಂಕಣಗಳುಸ್ವಾತಂತ್ರ್ಯದ ಅಮೃತ ಮಹೋತ್ಸವ; ಲಾಂಛನಗಳು ಕೇವಲ ಸಾಂಕೇತಿಕವಾಗದೆ ನಡೆನುಡಿಯನ್ನೂ ಪ್ರಭಾವಿಸಲಿ

ಸ್ವಾತಂತ್ರ್ಯದ ಅಮೃತ ಮಹೋತ್ಸವ; ಲಾಂಛನಗಳು ಕೇವಲ ಸಾಂಕೇತಿಕವಾಗದೆ ನಡೆನುಡಿಯನ್ನೂ ಪ್ರಭಾವಿಸಲಿ

- Advertisement -
- Advertisement -

ದೇಶವನ್ನು-ರಾಜ್ಯವನ್ನು ಪ್ರತಿನಿಧಿಸುವ ಸಂಕೇತಗಳು ಅದರಲ್ಲಿಯೂ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ನಾಡ ಧ್ವಜ, ನಾಡ ಗೀತೆ ಇವುಗಳು ಭಾವನಾತ್ಮಕ ನೆಲೆಯಲ್ಲಿ ಜನಸಾಮಾನ್ಯರನ್ನು ರಾಜಕೀಯ ವಾಸ್ತವಗಳತ್ತ ಸೆಳೆಯುವ ಜನಪ್ರಿಯ ಸಾಧನಗಳು. ಈ ಸಂಕೇತಗಳು ವಿಶಾಲ ಅರ್ಥದಲ್ಲಿ ಜನರನ್ನು, ಸಮುದಾಯಗಳನ್ನು ಬೆಸೆಯುವ, ಎಲ್ಲರ ಒಳಿತಿಗಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಗ್ಗೂಡಿಸುವ, ಅವಕಾಶವಂಚಿತ-ತುಳಿತಕ್ಕೊಳಗಾದ ಜನಸಾಮಾನ್ಯರ ಮತ್ತು ಸಮುದಾಯಗಳ ಏಳಿಗೆಗಾಗಿ- ಅದಕ್ಕಾಗಿ ಸಮಾನತೆಯನ್ನು ಸಾಧಿಸಲು ಎಲ್ಲ ನಾಗರಿಕರೂ ಕೈಜೋಡಿಸಬೇಕೆಂಬ ಸಂದೇಶವನ್ನು ಜನರ ಮನಸ್ಸಿನಲ್ಲಿ ನಾಟುವ ಉದ್ದೇಶ ಮತ್ತು ಶಕ್ತಿಯನ್ನು ಹೊಂದಿವೆ. ’ಭಾರತ ದೇಶಕ್ಕೆ ಜಯವಾಗಲಿ’, ’ಜೈ ಜವಾನ್ (ಸೈನಿಕ)-ಜೈ ಕಿಸಾನ್ (ರೈತ)’ ಮುಂತಾದ ಘೋಷಣೆಗಳಲ್ಲೂ ವೈವಿಧ್ಯ ಸಮುದಾಯಗಳ ಜನರನ್ನು ಬೆಸೆಯುವ ಅಂತಹ ಶಕ್ತಿ ಇತ್ತು. ಸ್ವಾತಂತ್ರ್ಯದ ನಂತರ ಭಾರತ ಬಹುತ್ವವನ್ನು ಮೈಗೂಡಿಸಿಕೊಂಡು, ಎಲ್ಲ ನಾಗರಿಕರು ಕಲೆತು ಪ್ರಗತಿಯತ್ತ ದೇಶವನ್ನು ಮುನ್ನಡೆಸಬೇಕೆಂಬ ಇರಾದೆಯಿಂದ ಈ ರಾಷ್ಟ್ರೀಯ ಸಂಕೇತಗಳನ್ನು ಎಚ್ಚರಿಕೆಯಿಂದ ರೂಪಿಸಿಕೊಳ್ಳಲಾಗಿತ್ತು. ರಾಷ್ಟ್ರ ಧ್ವಜವೂ ಸೇರಿದಂತೆ ರಾಷ್ಟ್ರೀಯ ಚಿಹ್ನೆಗಳನ್ನು ಗೌರವಿಸುವುದೆಂದರೆ ಈ ದೇಶದ ಸಂವಿಧಾನದ ಪ್ರಕಾರ, ಈ ದೇಶದ ಪೂರ್ವಸೂರಿಗಳು ಹಾಕಿಕೊಟ್ಟ ನ್ಯಾಯದ, ಬಹುತ್ವದ, ಋಜತ್ವದ ಮಾರ್ಗದಲ್ಲಿ ನಡೆನುಡಿಗಳನ್ನು ರೂಪಿಸಿಕೊಳ್ಳುವುದೂ ಆಗಿದೆ. ಕೇವಲ ಸಂಕೇತಗಳನ್ನು ಡಿಪಿಗಳಲ್ಲಿ ಹಾಕಿಕೊಂಡು ವಿಜೃಂಭಿಸುವುದು ಮಾತ್ರವಲ್ಲ.

ಚಕ್ರತೀರ್ಥ ಸಮಿತಿ ಕೈಬಿಟ್ಟ ಮುಹಮದ್ ಸಾದುಲ್ಲಾ ರಾಷ್ಟ್ರಧ್ವಜದ ಬಗ್ಗೆ ನೀಡಿದ ವ್ಯಾಖ್ಯಾನ ಗೊತ್ತೇ?

ಭಾರತದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಬಗ್ಗೆ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಮಾತನಾಡುತ್ತಿದೆ. ಒಂದು ಕಾಲಕ್ಕೆ ರಾಷ್ಟ್ರಧ್ವಜವನ್ನು ಅವಮಾನಿಸಿದ ಆರ್‌ಎಸ್‌ಎಸ್ ಬೆಂಬಲಿತ ಸರ್ಕಾರ ಇಂದು ರಾಜ್ಯ ಮತ್ತು ಒಕ್ಕೂಟಗಳಲ್ಲಿ ಆಡಳಿತ ನಡೆಸುತ್ತಿದೆ. ಈ ಸರ್ಕಾರಗಳ ರಾಷ್ಟ್ರಧ್ವಜದ ಬಗೆಗಿನ ಪ್ರೀತಿ ಕೇವಲ ’ರಂಗುರಂಗಿನ’ ತೋರಿಕೆಯ ಕಲ್ಪನೆ ಮಾತ್ರವಾಗಿದ್ದು, ನಮ್ಮ ಧ್ವಜ ಪ್ರತಿನಿಧಿಸುವ, ಅದರ ಬಣ್ಣಗಳು ಪ್ರತೀಕವಾಗಿರುವ ಭಾವನೆಯನ್ನು ಮೈಗೂಡಿಸಿಕೊಂಡಿಲ್ಲ ಎಂಬುದಕ್ಕೆ ಹೇರಳ ಉದಾಹರಣೆಗಳಿವೆ. ಬಹುತ್ವವನ್ನು ನಾಶಪಡಿಸುವ ಎಷ್ಟೋ ಕೆಲಸಗಳಲ್ಲಿ ಸಂಘ ಪರಿವಾರದ ಮುಖಂಡರು ಭಾಗಿಯಾಗಿರುವುದು ಪದೇಪದೇ ಸಾಬೀತಾಗುತ್ತಿದೆ. ಅದರಲ್ಲಿ ಇತ್ತೀಚಿನ ಉದಾಹರಣೆ ಕರ್ನಾಟಕದಲ್ಲಿ ಅಸಂವಿಧಾನಿಕವಾಗಿ ನಡೆದ ಪಠ್ಯ ಪುನರ್‌ಪರಿಷ್ಕರಣೆಯ ಪ್ರಹಸನ. ಒಂದು ಕಡೆಗೆ ತ್ರಿವರ್ಣ ಧ್ವಜದ ಬಗ್ಗೆ ಅಗೌರವ ತೋರಿಸಿದ್ದ ಆರ್‌ಎಸ್‌ಎಸ್‌ನ ಹೆಡ್ಗೇವಾರ್‌ರ ಪಾಠವನ್ನು ಸೇರಿಸುವುದಲ್ಲದೆ, ಡಾ. ಅಂಬೇಡ್ಕರ್ ಅವರ ಹೆಸರಿನ ಜೊತೆಗಿದ್ದ ’ಸಂವಿಧಾನ ಶಿಲ್ಪಿ’ ಸಂಬೋಧನೆಯನ್ನು ಕೈಬಿಡುತ್ತಾರೆ. (ಈಗ ಸಂವಿಧಾನ ಶಿಲ್ಪಿ ಮತ್ತೆ ಸೇರಿಸುವುದಾಗಿ ಸರ್ಕಾರ ಹೇಳಿದೆ, ಅದು ಬೇರೆ ಮಾತು).

ಅಷ್ಟೇ ಅಲ್ಲದೆ ಅದೇ ಪಠ್ಯದಲ್ಲಿ ಸಂವಿಧಾನ ಕರಡು ಸಮಿತಿಯಲ್ಲಿನ ಸದಸ್ಯರ ಪಟ್ಟಿಯಿಂದ ಮಹಮದ್ ಸಾದುಲ್ಲಾ ಅವರ ಹೆಸರನ್ನು ಈ ಸಮಿತಿ ಡಿಲೀಟ್ ಮಾಡಿ ’ಪರಿಷ್ಕರಣೆ’ ನಡೆಸುತ್ತದೆ. ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸದಾ ವಿಷ ಕಾರುವ ಸಂಘ ಪರಿವಾರದ ಪ್ರತಿಪಾದಕರು ಈ ಹೆಸರು ಕೈಬಿಡುವ ಹುನ್ನಾರ ನಡೆಸುತ್ತಾರೆ ಆದರೆ ರಾಷ್ಟ್ರಧ್ವಜದ ಬಗ್ಗೆ ತಮ್ಮ ಹುಸಿ ಪ್ರೇಮವನ್ನು ಎಗ್ಗಿಲ್ಲದೆ ಪ್ರದರ್ಶಿಸುತ್ತಾರೆ.

ಸಯ್ಯದ್ ಮುಹಮದ್ ಸಾದುಲ್ಲಾ ಮುಸ್ಲಿಂ ಲೀಗ್ ಸದಸ್ಯರಾಗಿದ್ದವರು. ಸಂವಿಧಾನ ನಡಾವಳಿ ಸಭೆಗಳನ್ನು ಮುಸ್ಲಿಂ ಲೀಗ್ ಬಹಿಷ್ಕರಿಸಿದ್ದರೂ, ಅದನ್ನು ಧಿಕ್ಕರಿಸಿ ಸಂವಿಧಾನ ಕರಡು ಸಮಿತಿ ಸದಸ್ಯರಾಗಿ ಚರ್ಚೆಗಳಲ್ಲಿ ಪಾಲ್ಗೊಂಡವರು. ಸಂವಿಧಾನ ರಚನಾ ಸಭೆಯಲ್ಲಿ ಅವರು ನಮ್ಮ ರಾಷ್ಟ್ರಧ್ವಜದ ಬಗ್ಗೆ ಮಾಡಿದ ಭಾಷಣ ಸ್ವತಂತ್ರ ಭಾರತದಲ್ಲಿ ಧ್ವಜದ ಬಣ್ಣಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ದಿಕ್ಸೂಚಿ ಭಾಷಣವೆಂದೇ ಪರಿಗಣಿತವಾಗಿದೆ. ಅವರ ಮಾತುಗಳನ್ನು ಇಲ್ಲಿ ಸಂಗ್ರಹಿಸಬಹುದಾದರೆ..

“ನನ್ನ ಅನಿಸಿಕೆಯ ಪ್ರಕಾರ ಧ್ವಜ, ನಮ್ಮ ಆಕಾಂಕ್ಷೆಗಳು ಹೇಗೆ ವಿಕಸನಗೊಂಡವು, ನಮ್ಮ ಹೋರಾಟ ಹೇಗೆ ಸಾಕಾರಗೊಂಡಿತು ಎಂಬುದರ ಜೊತೆಗೆ ನಮ್ಮೆಲ್ಲರ ತ್ಯಾಗಗಳ ಅಂತಿಮ ಫಲದ ಪ್ರತೀಕವಾಗಿದೆ. ಪ್ರಕೃತಿಯಿಂದ ಹೋಲಿಕೆಯನ್ನು ಮಾಡಬಹುದಾದರೆ, ಭಾರತದಲ್ಲಿ ಉರಿಯುವ ಸೂರ್ಯನ ಶಾಖದಿಂದ ಏರ್ಪಟ್ಟ ಭೂಮಿಯ ಮೇಲಿನ ಸುಡುವ ನೆಲದ ಪರಿಸ್ಥಿತಿಯನ್ನು ಕೇಸರಿ ಬಣ್ಣ ಪ್ರತಿನಿಧಿಸುತ್ತದೆ. ಸ್ಫಟಿಕದಂತಹ ಮಳೆಹನಿಗಳು ಮತ್ತು ಹಿಮ ಪರ್ವತ ಹಾಗೂ ನದಿಗಳಿಂದ ನೀರು ಹರಿದುಬಂದಾಗ, ನಮ್ಮ ಒಣ ಭೂಪ್ರದೇಶ ನಗುವ ಹಸಿರು ಹೊಲಗಳಾಗಿ ಕಂಗೊಳಿಸುತ್ತದೆ. ಆ ಹಸಿರು ಬೆಳೆಗಳು ನಮ್ಮನ್ನು ಕಾಪಾಡುತ್ತವೆ ಮತ್ತು ಜನರ ಬೆಳವಣಿಗೆಗೆ ಕಾರಣವಾಗುತ್ತವೆ. ಇದೇ ರೀತಿ ನಮ್ಮ ರಾಜಕೀಯ ಹೋರಾಟದಲ್ಲಿ ಸುಡುತ್ತಿದ್ದ ಭೂಮಿಯ ದಿನಗಳಿದ್ದವು ಆದರೆ ನಂತರ ಭರವಸೆಯ ದಿನಗಳು ಬಂದವು ಮತ್ತು ಇಂದು ಸದನದಲ್ಲಿ ಬಿಚ್ಚಿಟ್ಟಿರುವ ಈ ಧ್ವಜ ನಮ್ಮ ಹಿಂದಿನ ಹೋರಾಟದ ಅಂತಿಮ ಗುರಿಯನ್ನು ನಮ್ಮತ್ತ ಹೊತ್ತುತಂದಿದೆ…”

“ಭಾರತ ತನ್ನ ಆಧ್ಯಾತ್ಮಿಕ ಉನ್ನತಿಗೆ ಚಿರಪರಿಚಿತವೇ. ಜಗತ್ತಿನ ವಿವಿಧ ದೇಶಗಳಿಗೆ ಅತ್ಯುನ್ನತ ಆಧ್ಯಾತ್ಮಿಕ ಸಂದೇಶವನ್ನು ಕಳುಹಿಸುವ ಛಾತಿಯನ್ನು ಭಾರತ ಹೊಂದಿದೆ ಎಂದು ಎಲ್ಲೆಲ್ಲೂ ನಂಬಲಾಗಿದೆ. ಎಲ್ಲರಿಗೂ ತಿಳಿದಿರುವಂತೆಯೇ, ಕೇಸರಿ ಅಂತಹ ಆಧ್ಯಾತ್ಮಿಕ ಜೀವನವನ್ನು ಬದುಕಿದವರ ಸಂಕೇತ; ಅದು ಹಿಂದೂಗಳಿಗೆ ಮಾತ್ರವಲ್ಲದೆ ಮುಸಲ್ಮಾನರಿಗೂ. ಆದುದರಿಂದ ನಮ್ಮ ಸಾಧುಸಂತರು, ಪೀರ್‌ಗಳ ಮತ್ತು ಪಂಡಿತರ ಕಾರ್ಯಕ್ಷೇತ್ರವಾದ ಆತ್ಮಸಮರ್ಪಣೆಯ ತ್ಯಾಗದ ಅತ್ಯುನ್ನತ ತಳಹದಿಯನ್ನು ಕೇಸರಿ ನಮಗೆ ಸದಾ ನೆನಪಿಸಬೇಕು. ಆದುದರಿಂದ ಧ್ವಜದಲ್ಲಿ ಈ ಬಣ್ಣದ ಸೇರ್ಪಡೆಯನ್ನು ನಾನು ಸ್ವಾಗತಿಸುತ್ತೇನೆ…”

ಹೀಗೆ ಮುಂದುವೆರಿದು ಬಿಳಿ ಬಣ್ಣ, ನಮ್ಮ ಜೀವನದ ಧ್ಯೇಯ ವೈಯಕ್ತಿಕವಾಗಿ ಹಾಗೂ ಪ್ರಭುತ್ವದ ಜೊತೆಗಿನ ಸಂಬಂಧದಲ್ಲಿ ಶುದ್ಧವಾಗಿರಬೇಕು ಎಂದು ಸೂಚಿಸುತ್ತದೆ ಎನ್ನುತ್ತಾರೆ. ಹಸಿರು ಬಣ್ಣ ಭಾರತದ ಸ್ವಾತಂತ್ರ್ಯ ಹೋರಾಟದ ಬಂಡಾಯವನ್ನು ಸೂಚಿಸುವುದರ ಬಗ್ಗೆ ವಿವರಿಸಿ ಅಶೋಕ ಚಕ್ರದ ಕಡೆಗೆ ಗಮನ ಸೆಳೆಯುತ್ತಾರೆ.

“ಅಶೋಕನ ಧರ್ಮಚಕ್ರ ಬೌದ್ಧ ದೊರೆಯ ಭಾರತದ ಕಾಲದ ಜನರ ಪರಿಸ್ಥಿತಿಯನ್ನು ನಮಗೆ ನೆನಪಿಸುತ್ತದೆ. ಅವನು ತನ್ನ ವೈಯಕ್ತಿಕ ಆಕ್ರಮಣಕಾರಿ ಭವ್ಯತೆಗಾಗಿ ಆಳಲಿಲ್ಲ ಬದಲಾಗಿ ಅವನ ಆಡಳಿತದಲ್ಲಿದ್ದ ಜನರ ಸಂತೋಷ, ಶಾಂತಿ ಮತ್ತು ಅಭ್ಯುದಯಕ್ಕಾಗಿ ರಾಜ್ಯಭಾರ ನಡೆಸಿದ್ದು. ಈಗ ನಮ್ಮ ರಾಷ್ಟ್ರ ಧ್ವಜದಲ್ಲಿ ರಾರಾಜಿಸುತ್ತಿರುವ ಈ ಲಾಂಛನ, ನಾವು ನಮ್ಮ ಭೂತಕಾಲವನ್ನು ಮರೆತು ಬೌದ್ಧ ರಾಜನ ಪರಂಪರೆಯನ್ನು ಭವಿಷ್ಯದತ್ತ ಕೊಂಡೊಯ್ಯಬೇಕೆಂದು ಈ ಒಕ್ಕೂಟದ ಪ್ರತಿ ಆಡಳಿತಗಾರ ಮತ್ತು ಪ್ರತಿ ಪ್ರಜೆಯನ್ನು ನೆನಪಿಸುತ್ತದೆ” ಎಂದು ನಮ್ಮ ರಾಷ್ಟ್ರ ಧ್ವಜವನ್ನು ವಿಶಾಲ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸುತ್ತಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲೇ ನಡೆದ ಈ ಪಠ್ಯಪರಿಷ್ಕರಣೆಯ ಪ್ರಹಸನ ರಾಷ್ಟ್ರಧ್ವಜದ ಬಗ್ಗೆ ವೈಶಾಲ್ಯತೆ ಮೆರೆದ ವ್ಯಕ್ತಿಯನ್ನು, ಹಿಂದಿನ ಪಠ್ಯದಲ್ಲಿದ್ದ ಸಂವಿಧಾನ ಕರಡು ರಚನಾ ಸಮಿತಿ ಸದಸ್ಯರ ಪಟ್ಟಿಯಿಂದ ಕೈಬಿಡುವ ಮೂಲಕ ಸಂಕುಚಿತತೆಯನ್ನು ಮೆರೆಯಿತು. ಇಂದು ಈ ಸಂಕುಚಿತತೆ ಇಡೀ ರಾಷ್ಟ್ರದಾದ್ಯಂತ ಹೆಮ್ಮರವಾಗಿ ಬೆಳೆದು ಆಳುವ ಪಕ್ಷದ ಧೋರಣೆಗೆ ಸಾಂಕೇತಿಕವಾಗಿದೆ. ಭಾರತ ಸ್ವತಂತ್ರ ಪಡೆದು 75 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಪ್ರಭುತ್ವ ಒಂದು ಕಡೆಗೆ ಸಾರನಾಥದ ಸೌಮ್ಯ ಹಾಗೂ ಗಂಭೀರ ಮುದ್ರೆಯ ಸಿಂಹಗಳನ್ನು ಎದೆಯುಬ್ಬಿಸಿ ಘರ್ಜಿಸುವಂತೆ ತಿರುಚಿ ರೂಪಿಸುವ ಕೆಲಸ ಮಾಡುತ್ತಾ ಮತ್ತೊಂದು ಕಡೆ ಕೇವಲ ತೋರ್ಪಡಿಕೆಗಾಗಿ ರಾಷ್ಟ್ರ ಲಾಂಛನಗಳನ್ನು ಗೌರವಿಸುವ ಮಾತನಾಡುತ್ತಿದೆ. ಆದರೆ ತನ್ನ ಆಚರಣೆ, ನಡೆ-ನುಡಿಗಳಲ್ಲಿ ಈ ಲಾಂಛನಗಳು ಪ್ರತಿನಿಧಿಸುವ ತತ್ವಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಈ ಅಮೃತ ಮಹೋತ್ಸವದ ಸಮಯದಲ್ಲಿ ಕೇಸರಿ-ಬಿಳಿ-ಹಸಿರು ಮತ್ತು ನೀಲಿ ಬಣ್ಣದ ಅಶೋಕ ಚಕ್ರ ಯಾವುದನ್ನು ಪ್ರತಿನಿಧಿಸುತ್ತದೆ ಎಂಬುದು ಪ್ರಭುತ್ವದ ಅಂತರಂಗಕ್ಕೆ ಇಳಿಯುವುದೇ? ಸಂಘ ಪರಿವಾರದ ರಾಜಕೀಯಕ್ಕೆ ಜ್ಞಾನೋದಯ ಸಾಧ್ಯವೇ?

ಎಲ್ಲರಿಗೂ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಸ್ವಾತಂತ್ರ್ಯದ ಕನಸನ್ನು ಉಳಿಸಿಕೊಳ್ಳಲು ನಾವು ಎಚ್ಚರವಾಗಿರೋಣ!


ಇದನ್ನೂ ಓದಿ: ಎಸಿಬಿ ರದ್ದು ಮಾಡಿದ ಹೈಕೋರ್ಟ್: ಏನಂತಾರೆ ರಾಜಕಾರಣಿಗಳು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...