ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಇತರರು ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಆನಂದ್ ಸಿಂಗ್ ಹಾಗೂ ಇತರ ಮೂವರ ಮೇಲೆ ಎಸ್ಸಿ, ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಆನಂದ್ ಸಿಂಗ್ ಸೇರಿ 4 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಇತರೆ ಮೂವರ ವಿರುದ್ಧ ವಿಜಯನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಸಾಮಾಜಿಕ ಕಾರ್ಯಕರ್ತ ಡಿ. ಪೋಲಪ್ಪ ಎಂಬವರು ಕೊಟ್ಟ ದೂರಿನ ಮೇರೆಗೆ ಐ.ಪಿ.ಸಿ. ಸೆಕ್ಷೆನ್ 504, 506ರ ಅಡಿ ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಆನಂದ್ ಸಿಂಗ್, ಮರಿಯಪ್ಪ, ಹನುಮಂತಪ್ಪ ಹಾಗೂ ಹುಲುಗಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ.
‘ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆ’ ಎಂದು ಸಚಿವ ಆನಂದ್ ಸಿಂಗ್ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೋಲಪ್ಪ ಅವರು, ಅವರ ಕುಟುಂಬದ ಒಂಬತ್ತು ಜನ ಸದಸ್ಯರೊಂದಿಗೆ ಮಂಗಳವಾರ ಸಂಜೆ ನಗರದ ಎಸ್ಪಿ ಕಚೇರಿ ಎದುರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಅವರನ್ನು ತಡೆದು, ಆಸ್ಪತ್ರೆಗೆ ಕಳುಹಿಸಿದ್ದಾರೆ.
"ಪೆಟ್ರೋಲ್ ಸುರಿದು ನಿಮ್ಮನ್ನು ಸುಟ್ಟು ಹಾಕುತ್ತೇನೆ" ಎಂದು ಸಚಿವ ಆನಂದ್ ಸಿಂಗ್ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಡಿ. ಹಾಲಪ್ಪ ಕುಟುಂಬದ 9 ಮಂದಿ ಸದಸ್ಯರು ಮಂಗಳವಾರ ಎಸ್ಪಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಪ್ರತಿಭಟನೆ ನಡೆಸಿದರು.
@DalitTime @ambedkariteIND @TribalArmy pic.twitter.com/7a4qxp3Q1W— Mahesh Janekere (@MaheshJanekere) August 31, 2022
ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ 6ನೇ ವಾರ್ಡಿನಲ್ಲಿರುವ ಸುಣ್ಣದ ಬಟ್ಟೆ ಪ್ರದೇಶದಲ್ಲಿ ಪೊಲಯ್ಯ ಅವರ ಕುಟುಂಬ ಹಲವು ವರ್ಷಗಳಿಂದ ವಾಸವಿದೆ. ಆದರೆ ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ ಸಚಿವರು, ನೀವು ಕಟ್ಟಿರುವ ಮನೆ ಅಕ್ರಮವಾಗಿದೆ. ಇದು ಸರ್ಕಾರಿ ಜಾಗ. ಈ ಜಾಗವನ್ನು ನಗರಸಭೆ ವಶಕ್ಕೆ ಪಡೆಯುತ್ತಿದ್ದು, ಈ ಕೂಡಲೇ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಪೋಲಯ್ಯ, “ಈ ಜಾಗ ಸರ್ಕಾರದ್ದಲ್ಲ. ವಿರಕ್ತ ಮಠದ ಮಲ್ಲಿಕಾರ್ಜುನ ಸ್ವಾಮೀಜಿಯವರದ್ದು. ಸುಮಾರು ಎಂಬತ್ತು ವರ್ಷಗಳ ಕೆಳಗೆ ವಿಲ್ ಮೂಲಕ ನನ್ನ ಹೆಂಡತಿಯ ತಾತನಾದ ಗುರುನಾಥಪ್ಪ ಅವರಿಗೆ ಬರೆದುಕೊಟ್ಟಿದ್ದಾರೆ. ನಾಲ್ಕು ತಲೆಮಾರಿನಿಂದ ಈ ಆಸ್ತಿಯನ್ನು ನಿರ್ವವಣೆ ಮಾಡಲಾಗುತ್ತಿದೆ. ನೋಂದಣಿಯಾದ ವಿಲ್ ಪ್ರಕಾರ ನಮ್ಮ ಒಡೆತನದಲ್ಲಿ ಜಾಗವಿದೆ. ಸರ್ಕಾರಕ್ಕಾಗಲೀ, ಆನಂದ್ಸಿಂಗ್ಗಾಗಲೀ ಯಾವುದೇ ರೀತಿಯ ಸಂಬಂಧವಿಲ್ಲ” ಎಂದಿದ್ದಾರೆ.
ಆನಂದ್ ಸಿಂಗ್ ಅವರ ವೈಷಮ್ಯಕ್ಕೆ ಕಾರಣವನ್ನು ತಿಳಿಸಿದ ಅವರು, “ಆನಂದ್ ಸಿಂಗ್ ಅವರ ಮನೆ ಸರ್ಕಾರಿ ಜಾಗದಲ್ಲಿದೆ ಎಂದು ಆರು ತಿಂಗಳ ಹಿಂದೆ ನಾವು ಆರೋಪ ಮಾಡಿದ್ದೆವು. ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು, ದೂರುಗಳನ್ನು ಬಿಡುಗಡೆ ಮಾಡಿದ್ದೆವು. ದೂರು ನೀಡಿದ ಬಳಿಕ ನನ್ನ ಮೇಲೆ ದ್ವೇಷ ಸಾಧಿಸುತ್ತಿರುವ ಆನಂದ್ ಸಿಂಗ್ ನಿರಂತರ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ದೂರು ನೀಡಿದ ಎರಡು ದಿನಗಳ ಬಳಿಕ ಆನಂದ್ ಸಿಂಗ್ ಹಾಗೂ ಹನುಮಂತಪ್ಪ ಅನ್ನುವವರು ನಮ್ಮ ಮನೆಗೆ ಬಂದಿದ್ದರು. ನನ್ನ ವಿರುದ್ಧವೇ ದೂರು ನೀಡುವಷ್ಟು ದೊಡ್ಡವನಿದ್ದೀಯಾ? ವಾಪಸ್ ತೆಗೆದುಕೋ, ಇಲ್ಲವಾದರೆ ಪರಿಣಾಮ ಗಂಭೀರವಾಗಿರುತ್ತದೆ ಎಂದು ಆನಂದ್ ಸಿಂಗ್ ಬೆದರಿಕೆ ಹಾಕಿದರು” ಎಂದು ತಿಳಿಸಿದ್ದಾರೆ.
“ಇದರಲ್ಲಿ ಸ್ವಾರ್ಥವೇನೂ ಇಲ್ಲ. ಸರ್ಕಾರಿ ಆಸ್ತಿ ಕಬಳಿಸಿದ್ದೀರಿ. ಅದನ್ನು ಸರ್ಕಾರಕ್ಕೆ ಮರಳಿಸಿದರೆ ನಮ್ಮದೇನೂ ತಕರಾರು ಇರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದೆ. ಇಷ್ಟೆಲ್ಲ ಮಾತನಾಡುವಷ್ಟು ದೊಡ್ಡವನಾಗಿದ್ದೀಯ. ನಿನಗೆ ಮಾಡಬೇಕಾದದ್ದು ಬೇರೆಯೇ ಇದೆ ಎಂದರು. ಸಾಮಾಜಿಕ ಹೋರಾಟಗಾರರಿಗೆ ಇದೆಲ್ಲ ಸಾಮಾನ್ಯ ಎಂದು ಸುಮ್ಮನೇ ಇದ್ದೆ” ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿರಿ: ಮುರುಘಾ ಶರಣರ ಪರ ಮಾತನಾಡುವ ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬಹಿರಂಗ ಪತ್ರ
“ಮತ್ತೆ ಮೂರು ತಿಂಗಳ ಬಳಿಕ ಸಚಿವರು ಹಾಗೂ ಹನುಮಂತಪ್ಪ ನಮ್ಮ ಮನೆಗೆ ಬಂದರು. ದೂರು ವಾಪಸ್ ಪಡೆದು, ನಾನು ಮಾಡಿದ ಆರೋಪ ಸುಳ್ಳು ಎಂದು ಪ್ರೆಸ್ ಮೀಟ್ ಮಾಡು ಎಂದು ಸೂಚಿಸಿದರು. ನಾನು ಪಟ್ಟು ಬದಲಿಸಲಿಲ್ಲ. ನೀವು ಹಗರಣ ಮಾಡಿರುವುದು ನಿಜವಿದೆ. ಈ ಆಸ್ತಿ ನಿಮ್ಮದೇ ಅನ್ನಲು ದಾಖಲಾತಿ ಇದ್ದರೆ ಸರ್ಕಾರಕ್ಕೆ ಕೊಡಿ. ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಎಂದೆ. ನಿನಗೆ ಒಳ್ಳೆಯ ಮಾತಿನಲ್ಲಿ ಹೇಳಿದರೆ ಗೊತ್ತಾಗಲ್ಲ. ಮುಂದೆ ಐತೆ ಎಂದು ಬೆದರಿಕೆ ಹಾಕಿದರು” ಎಂದು ಪೋಲಯ್ಯ ಆರೋಪಿಸಿದ್ದಾರೆ.
“ನಿನ್ನೆ ಮಧ್ಯಾಹ್ನ ಸಚಿವ ಆನಂದ್ ಸಿಂಗ್ ಹಾಗೂ ಅವರ ಸಹಚರರು ಬಂದು ನಮ್ಮನ್ನು ಮನೆಯಿಂದ ಹೊರಗೆ ಕರೆದರು. ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು” ಎಂದು ಪೋಲಯ್ಯ ದೂರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆನಂದ್ ಸಿಂಗ್, “ಜಾತಿ ನಿಂದನೆ ಮಾಡಿಲ್ಲ. ಜಾಗದ ವಿಚಾರದಲ್ಲಿ ಮಡಿವಾಳ ಸಮಾಜ ಹಾಗೂ ಪೋಲಪ್ಪ ಕುಟುಂಬದ ಮಧ್ಯೆ ಕಾನೂನು ಹೋರಾಟ ನಡೆಯುತ್ತಿದ್ದು, ಮಡಿವಾಳ ಸಮಾಜದ ಎಲ್ಲ ಹಿರಿಯರು ಬಂದು ನನ್ನನ್ನು ಭೇಟಿ ಆಗಿದ್ದರು. ಮಡಿವಾಳ ಸಮಾಜ ನಮ್ಮ ಜಾಗ ಅಂತಿದ್ದಾರೆ. ಪೋಲಪ್ಪ ಅವರು ನಮ್ಮದು ಅಂತಿದ್ದಾರೆ. ಈ ವಿಚಾರವಾಗಿ ನಾಲ್ಕು ತಿಂಗಳ ಹಿಂದೆ ಕರೆದು ಸಂಧಾನ ಮಾಡಿದ್ದೆ” ಎದಿದ್ದಾರೆ.
ಜನಸಾಮಾನ್ಯರ ತೆರಿಗೆಯಿಂದ ಬದುಕುವ ಸಚಿವರುಗಳು ಪಾಪದ ಬಡಪಾಯಿಗಳ ಮೇಲೆ ಸವಾರಿ ಮಾಡುವುದು ಎಷ್ಟು ಸರಿ….? ಈ ಸರಕಾರದಲ್ಲಿ ದಲಿತರು ಹಿಂದುಳಿದ ವರ್ಗದವರಿಗೆ ರಕ್ಷಣೆಯೇ ಇಲ್ಲದಂತಾಗಿದೆಯಲ್ಲ…ಕೇಸು ದಾಖಲಾದರೂ ಈ ಕುಟುಂಬಗಳಿಗೆ ಭದ್ರತೆ ಇದೆನ್ನಲಾಗುವುದೇ….?