Homeಕರ್ನಾಟಕಮುರುಘಾ ಶರಣರ ಪರ ಮಾತನಾಡುವ ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬಹಿರಂಗ ಪತ್ರ

ಮುರುಘಾ ಶರಣರ ಪರ ಮಾತನಾಡುವ ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬಹಿರಂಗ ಪತ್ರ

“ಸ್ವಾಮೀಜಿ, ಮಾದಿಗ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳು ಸಂತ್ರಸ್ತೆಯಾಗಿರುವುದನ್ನು ಮರೆತುಬಿಟ್ಟಿರೇಕೆ?”

- Advertisement -
- Advertisement -

ಪೋಕ್ಸೋ ಹಾಗೂ ಎಸ್‌.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರ ಪರವಾಗಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡುತ್ತಿದ್ದಾರೆಂಬ ಆರೋಪಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ನಿಕಟ ಪೂರ್ವ ಸದಸ್ಯರಾದ ಎನ್.ರವಿಕುಮಾರ್ ಅವರು ಬರೆದಿರುವ ಬಹಿರಂಗ ಪತ್ರ ಇಲ್ಲಿದೆ.

ಬಹಿರಂಗ ಪತ್ರ

ಶ್ರೀ ಮಾದಾರ ಚೆನ್ನಯ್ಯ ಶರಣರಿಗೆ.

ಶರಣರೇ..,

ಮುರುಘಾಬೃಹನ್ಮಠದ ಮುರುಘಾಶರಣರು ಮುನ್ನಡೆಸಿಕೊಂಡು ಬಂದಿದ್ದ ಪ್ರಗತಿಪರ, ಬಸವಾದಿಶರಣರ ಆಶಯಗಳ ಅನುಷ್ಠಾನದ ಪರಂಪರೆ ಬಗ್ಗೆ ನಾಡಿಗೆ ಗೊತ್ತಿದೆ. ಆದರೆ ಇಂತಹ ಮುರುಘಾಶರಣರು ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಪ್ರಕರಣ ಅವರ ಮೇಲೆ ದಾಖಲಾಗಿದೆ. ಇದಕ್ಕಷ್ಟೆ ಸೀಮಿತವಾಗಿ ಹೇಳುವುದಾದರೆ ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ. ಈ ನಾಗರಿಕ ಸಮಾಜ ಕೂಡ ಇದನ್ನೇ ಆಗ್ರಹಿಸಬೇಕು, ತನಿಖಾ ಸಂಸ್ಥೆಗಳು ಇದೇ ಹಾದಿಯಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕೂ ಕೂಡ. ಇದೊಂದು ’ನ್ಯಾಯಪ್ರಜ್ಞೆ’. ಆದರೆ ಈ ಸಮಾಜದೊಳಗೆ ಇರುವ ನೀವು ಸೇರಿದಂತೆ ಇತರೆ ಮಠಾಧೀಶರುಗಳು ಇಂತಹ ನ್ಯಾಯಪ್ರಜ್ಞೆಯನ್ನು ವ್ಯಕ್ತಪಡಿಸದೆ ಆರೋಪಿ ಸ್ಥಾನದಲ್ಲಿರುವ ಮುರುಘಾಶರಣರನ್ನು ಬೆಂಬಲಿಸ ಹೊರಟಿರುವುದು ದೌಭಾರ್ಗ್ಯದ ಸಂಗತಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುರುಘಾಶರಣರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿರುವ ಇಬ್ಬರು ಬಾಲಕಿಯರು ಹಿಂದುಳಿದ ಮತ್ತು ಮಾದಿಗ ಸಮುದಾಯಕ್ಕೆ ಸೇರಿದವರೆನ್ನಲಾಗಿದೆ. ಇಲ್ಲಿ ಜಾತಿ ಅಪ್ರಸ್ತುತ ನಿಜ, ಹೆಣ್ಣು ಜಾತ್ಯತೀತ ಮತ್ತು ಧರ್ಮಾತೀತವಾಗಿ ಸದಾ ಶೋಷಣೆಗೆ ಒಳಗಾಗುತ್ತಲೇ ಇರುತ್ತಾಳೆ. ಈ ಪ್ರಕರಣದಲ್ಲಿ ಈ ಇಬ್ಬರೂ ಹೆಣ್ಣುಮಕ್ಕಳು ಸಮಾನ ಸಂತ್ರಸ್ತರೇ ಆಗಿರುತ್ತಾರೆ. ಈ ಇಬ್ಬರಲ್ಲೂ ಜಾತಿ ಬಗೆದು ನೋಡಬೇಕಾಗಿಲ್ಲ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಾದಿಗ ಸಮುದಾಯದ ಹೆಣ್ಣುಮಗಳೊಬ್ಬಳ ಮಾನ, ಪ್ರಾಣ, ಆತ್ಮಗೌರವ, ಸಾಮಾಜಿಕ ಗೌರವ ರಕ್ಷಣೆ ಕುರಿತು ನೀವು ’ಉತ್ತರದಾಯಿ’ಗಳು ಎಂಬುದನ್ನು ಸ್ಪಷ್ಟವಾಗಿ ಆಗ್ರಹಿಸುತ್ತೇನೆ.

ನೀವು, ಈ ನಾಡಿನ ಸಮಸ್ತ ಮಾದಿಗ ಸಮುದಾಯದ ಪ್ರಾತಿನಿಧಿಕ ಧಾರ್ಮಿಕ ನಂಬುಗೆಯ ಶ್ರದ್ಧಾಕೇಂದ್ರವಾದ ಮಾದರಾ ಚನ್ನಯ್ಯಗುರುಪೀಠದ ಪೀಠಾಧ್ಯಕ್ಷರಾಗಿ ಇದೇ ಮುರುಘಾಶರಣರಿಂದ ’ಸದ್ಯೋನ್ಮುಕ್ತ’ ದೀಕ್ಷೆಯನ್ನು ಪಡೆದಿದ್ದೀರ. ಈ ಸಮಾಜದ ಕಟ್ಟಕಡೆಯ ದುರ್ಬಲ ಸಮುದಾಯವಾಗಿರುವ ಮಾದಿಗ ಸಮುದಾಯದ ಗುರುವಾಗಿ ಈ ಸಮುದಾಯವನ್ನು ಸಾಮಾಜಿಕ ಗೌರವ, ಶೈಕ್ಷಣಿಕ ಅಭ್ಯುದಯ, ವೈಚಾರಿಕ ಅರಿವಿನಡೆಗೆ ಕೊಂಡೊಯ್ಯುವ ಗುರಿ ನಿಮ್ಮದಾಗಬೇಕಿತ್ತು. ದುರಾದೃಷ್ಟವೆಂದರೆ ಮಾದಾರಚನ್ನಯ್ಯ ಗುರುಮಠ ಮನೋಲಯ ದೀಕ್ಷೆಯನ್ನೆ ಧಿಕ್ಕರಿಸಿದ ಲೌಕಿಕ ಭೋಗಗಳಲ್ಲೊಂದಾದ ರಾಜಕೀಯ ಮೋಹ ತುಂಬಿದ, ವಚನಸಂಹಿತೆ ಭ್ರಷ್ಟತೆಯ ಮೈದಾನವಾಗಿದೆ. “ನಡೆ ನುಡಿ ಶುದ್ದವಿಲ್ಲದಿದ್ದರೆ ಚಂದೇಶ್ವರಲಿಂಗವಾದರೂ ತಪ್ಪನೊಳಕೊಳ್ಳೆ” ಎಂಬ ಅರಿವನ್ನು ಮರೆತುಬಿಟ್ಟಂತಿದೆ. ಬಸವಣ್ಣ ಯಾವ ವೈದಿಕ ವಿಚಾರಧಾರೆಗಳ ವಿರುದ್ದ ಬಂಡೆದ್ದು ಹೋರಾಡಿದರೂ ಅಂತಹ ವಿಚಾರಧಾರೆಯ ಅನುಯಾಯಿಗಳಿಗಿಂತಲೂ ಮಿಗಿಲಾದ ನಿಮ್ಮ ಸಡಗರ ಬಸವಣ್ಣರಿಗೆ ಬಗೆಯುತ್ತಿರುವ ದ್ರೋಹವೆಂದೆ ಭಾವಿಸಬೇಕಾದ ನಿಷ್ಠುರಕ್ಕೆ ಮಾದಿಗ ಸಮುದಾಯವನ್ನು ದೂಡಿದ್ದೀರ.

ಬಸವಾದಿಶರಣರ ವಚನ ಸಂಹಿತೆಗಳಿಂದ ಮಾದಿಗ ಸಮುದಾಯದ ಹೊಸ ತಲೆಮಾರುಗಳನ್ನು ವೈಚಾರಿಕವಾಗಿ, ಜ್ಞಾನಪೂರ್ಣವಾಗಿ, ಶರಣಸಂಪನ್ನರನ್ನಾಗಿ ಸದೃಢಗೊಳಿಸಬೇಕಿದ್ದ ನಿಮ್ಮಲ್ಲಿ ಸಿದ್ದಾಂತ ವ್ಯತಿರಿಕ್ತವಾದ ವೈದ್ದಿಕತೆ, ಸನಾತನ ವಿಚಾರಧಾರೆಗಳ ಸಂಸ್ಥೆ ಮತ್ತು ರಾಜಕೀಯಪಕ್ಷಗಳ ಪರಿಚಾರಕರತನ ಎದ್ದು ಕಾಣುತ್ತಿದೆ. ಮಾದಿಗ ಸಮುದಾಯದ ಕಲ್ಯಾಣವೆಂದರೆ ತದ್ವಿರುದ್ದ ವಿಚಾರಧಾರೆಯ ಸಂಘಟನೆಗಳ ಮುಂದೆ ನಿಸ್ಸ್ವಾಭಿಮಾನಿಯಾಗಿ ಮಂಡಿಯೂರಿ ಸರ್ಕಾರದಿಂದ ದುಡ್ಡು, ಸೈಟು ಪಡೆದು ಕಟ್ಟಡಗಳನ್ನು ಕಟ್ಟುವುದು, ಇದಕ್ಕೆ ಋಣಸಮರ್ಪಣೆಯಂತೆ ಚುನಾವಣೆಗಳಲ್ಲಿ ಮಾದಿಗ ಸಮುದಾಯವನ್ನು ಒಂದು ರಾಜಕೀಯ ಪಕ್ಷಕ್ಕೆ ಪಕ್ಕಾಗಿಸುವುದು ಎಂದರ್ಥವೇ? “ಗುರುವಿಡಿದು ಕುರುಹ ಕಾಣಬೇಕು. ಗುರುವಿಡಿದು ಅರುಹ ಕಾಣಬೇಕು. ಗುರುವಿಡಿದು ಆಚಾರವ ಕಾಣಬೇಕು” ಎನ್ನುವಾಗ ಮಾದಿಗ ಸಮುದಾಯ ಶರಣಗುರು ದೀಕ್ಷೆಯ ವಿಮುಖರಂತೆ ಕಾಣುತ್ತಿರುವ ನಿಮ್ಮನ್ನು (ಗುರು)ಹಿಡಿದು ಏನು ಕಾಣಬೇಕು ಎಂಬ ಪ್ರಶ್ನೆ ನನ್ನ ಅಸಂಘಟಿತ ಮಾದಿಗ ಸಮುದಾಯದ ಮುಂದೆ ಇದೆ.

ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರನ್ನು ಬೆಂಬಲಿಸುವ ಬಹಿರಂಗ ಹೇಳಿಕೆ ನೀಡುವ ನೀವು ತಮ್ಮದೆ ಆದ ಮಾದಿಗ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳು ಸಂತ್ರಸ್ತೆಯಾಗಿರುವುದನ್ನು ಮರೆತುಬಿಟ್ಟಿರೇಕೆ? ಆ ಹೆಣ್ಣು ಮಗು , ಮತ್ತವರ ಕುಟುಂಬ ಆರೋಪಿಯ ಬಲಿಷ್ಠ ಪ್ರಭಾವದ ಕಾವಿನಲ್ಲಿ ಹೇಗೆಲ್ಲಾ ನರಳಿ ನಲುಗುತ್ತಿರಬಹುದು ಎಂಬುದನ್ನು ನಿಸ್ಸಂಸಾರಿಯಾದ ನೀವು ಅರ್ಥಮಾಡಿಕೊಳ್ಳಲು ಸಾಧ್ಯವೆ?!

ಈ ಸಮಾಜದಲ್ಲಿ ಬಲಿಷ್ಠ ಜಾತಿಗಳು ಭ್ರಷ್ಟಾಚಾರ, ಅತ್ಯಾಚಾರ ಏನೆಲ್ಲಾ ಮಾಡಿಯೂ ದಕ್ಕಿಸಿಕೊಂಡು ಬಿಡಬಲ್ಲವೂ, ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಆ ಸಮುದಾಯದ ಕಳಂಕಿತರು ಗಣ್ಯರಾಗಿ, ಮಾನ್ಯರಾಗಿ ಮೆರೆಯಬಲ್ಲವರು. ಅವರ ಬದುಕು ಒಂದು ಆದರ್ಶವೂ ಆಗಿಬಿಡಬಲ್ಲದು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಆದರೆ ತಲೆಗೆ ಬಟ್ಟೆ ಇಲ್ಲದ ಜಾತಿಗಳಿಗೆ ಇಂತಹ ಶಕ್ತಿ -ಯುಕ್ತಿ ಇಲ್ಲ. ಹಾಗೊಮ್ಮೆ ಇಂತಹುದ್ದೇ ಆರೋಪ ಈ ತಬ್ಬಲಿ ಜಾತಿಗಳ ಮಠಾಧಿಪತಿಗಳ ಮೇಲೆ ಬಂದಿದ್ದರೆ ಇಷ್ಟೊತ್ತಿಗೆ ಏನೆಲ್ಲಾ ಪರಿಣಾಮ ಆಗಿರುತ್ತಿತ್ತು ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇನೆ.

ಸತ್ಯ ಮತ್ತು ನ್ಯಾಯದ ಪ್ರಶ್ನೆ ಬಂದಾಗ ಬಿಜ್ಜಳನ ಭಂಡಾರ ಪದವಿಯನ್ನೆ ಧಿಕ್ಕರಿಸಿ ಬಂದ ಬಸವಣ್ಣ, ತನ್ನ ಸಮುದಾಯದ ಸ್ವಾಭಿಮಾನಕ್ಕಾಗಿ ಬದುಕನ್ನೆ ತ್ಯಾಗ ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ ನಿಮಗೆ ಎಲ್ಲಾ ಕಾಲಕ್ಕೂ ಆದರ್ಶರು ಎನಿಸುವುದಿಲ್ಲವೆ? ಪ್ರಕರಣ ತನಿಖೆಯ ಆರಂಭಿಕ ಹಂತದಲ್ಲಿರುವಾಗ ಯಾರೇ ಆದರೋ ಪ್ರಭಾವಿ ಆರೋಪಿಗೆ ಬೆಂಬಲ ನೀಡುವುದು ಸತ್ಯದ ಮೇಲೆ, ಸಹಜ ನ್ಯಾಯದ ಮೇಲೆ ದುಷ್ಪರಿಣಾಮ ಬೀರುವ ಅಥವಾ ಸಂತ್ರಸ್ತೆಯನ್ನು ಅಸಹಾಯಕಳನ್ನಾಗಿ ಮಾಡುವ ಬೆದರಿಕೆಯೂ ಆಗಿರುತ್ತದೆ.

ಇದನ್ನೂ ಓದಿರಿ: ಮರುಘಾ ಶರಣರ ಬಂಧನಕ್ಕೆ ಆಗ್ರಹಿಸಿ ಸೆ.2ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

ಮುರುಘಾಮಠಕ್ಕೆ ’ಲಿಂಗಾಯಿತ ಪರಂಪರೆ’ (ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಷ್ಠವಾದ) ಇದೆ. ಅದು ತೀರ‍್ಮಾನ ಕೈಗೊಳ್ಳುತ್ತದೆ ಎಂದು ಹೆಮ್ಮೆಯಿಂದ ಹೇಳುವ ನೀವು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ದುರ್ಬಲವಾಗಿರುವ ಮಾದಿಗ ಸಮುದಾಯದ ಅಪ್ರಾಪ್ತ ಹೆಣ್ಣುಮಗಳೊಬ್ಬಳ ಮತ್ತು ಆಕೆಯ ಕುಟುಂಬದ ಆತ್ಮಗೌರವ, ಚಾರಿತ್ರ್ಯವನ್ನು ಕಾಪಾಡುವುದು, ದಿಟ್ಟದನಿಯಲ್ಲಿ ನ್ಯಾಯ ಕೇಳುವುದು ಮತ್ತು ತನ್ನ ದುರ್ಬಲ ಸಮುದಾಯದ ಜೊತೆ ನಿಲ್ಲುವುದು ಧರ್ಮ, ನ್ಯಾಯ ಮತ್ತು ಆತ್ಮಸಾಕ್ಷಿಯ ನಡೆಯಾಗುತ್ತದೆ.

ಇದಕ್ಕೆ ಭಿನ್ನ ಹಾದಿ ನಿಮ್ಮದಾದರೆ ನಿಮಗೆ ಮಾದಿಗ ಸಮುದಾಯವನ್ನು ಪ್ರತಿನಿಧಿಸುವ ಯಾವ ನೈತಿಕ ಹಕ್ಕಿಲ್ಲ. ನಿಮ್ಮನ್ನು ಗುರುವೆಂದು ಮಾದಿಗ ಸಮುದಾಯ ಭಾವಿಸಬೇಕಾಗಿಲ್ಲ ಎಂದೆನಿಸುತ್ತದೆ.

  • ಎನ್.ರವಿಕುಮಾರ್ ,
    ಪತ್ರಕರ್ತ, ಲೇಖಕ
    30/8/2022
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ಸ್ವಾಮಿಗಳು ಅನೈತಿಕತೆಗೆ ಸಪೋರ್ಟ್ ಮಾಡಿದ್ರೆ ಅವುಗಳನ್ನು ಸ್ವಾಮಿಗಳು ಅನ್ನೋಕೆ ನಾಚಿಕೆ ಯಾಗುತ್ತೆ ಅವರು ಹೇಸಿಗೆಗಿಂತ ಕಡೆಯಾಗುತ್ತಾರೆ ದೇವರ ಮೇಲೆ ಭಕ್ತಿ ಇಲ್ಲದ ಈ ಕಾಲದಲ್ಲಿ ಸ್ವಾಮಿ ಗಳಿಗೆ ಇನ್ಯಾವ ಮರ್ಯಾದೆ ಕೊಡಬೇಕು ಹೇಳಿ. ಅದರಲ್ಲೂ ಇಂಥ ನೀಚ ಕೆಲಸ ಮಾಡಿರುವ ಸ್ವಾಮಿಗಳಿಗೆ

  2. What is the contribution of Madara Channaiah Swamy to his community people. Has he helped any one from his community. Instead he is making fortune using name of community.oppressed communities can’t expect to good from such psudo swamies. Lower class swamies act as Chelas to powerful Mutts.

  3. ಇವರು ಮತ್ತು ಇಂತವರು ತಮ್ಮನ್ನು ತಾವೇ “ಮಾರಾಟ ಮಾಡಿಕೊಂಡ” ಸ್ವಾಮೀಜಿಗಳು. ಇವರು ಜನಾಂಗಕ್ಕೆ ದಾರಿ ದೀಪ ಎಂಬುದು ಬ್ರಮೆ.

  4. ಮಂಗಮೂತಿ ಕಾಯಿ ಹುಟ್ಟಿ ವನವೆಲ್ಲ ನಾಶವಾಯಿತು ಎಂಬ ಗಾದೆ ಗ್ರಾಮೀಣರಲ್ಲಿದೆ. ಹಾಗೆಯೇ ಇಂಥವರು ಮಂಗಮೂತಿ ಕಾಯಿ ಆಗುವರೇ ಹೊರತು ನೊಂದ ಸಮುದಾಯಗಳಿಗೆ ಫಲ ಆಗಲಾರರು.

  5. ಸಮಾಜದ ಜನರನ್ನ ರಕ್ಷಣೆ ಮಾಡದ ಅನ್ಯಾಯವನ್ನು ಪ್ರತಿಭಟಿಸಿದ ಇಂತಹ ಸ್ವಾಮಿ ನಮಗೆ ಏತಕ್ಕೆ ಬೇಕು ?ಇವರ ವರ್ತನೆ ನೋಡಿದರೆ ತಾವೊಬ್ಬ ಮುಂದುವರೆದ ಸಮಾಜದ ಸ್ವಾಮಿಯ ರೀತಿಯಲ್ಲಿ ಇದೆ.
    ಸಮಾಜದ ಹೆಣ್ಣು ಮಗಳ ಪರವಾಗಿದ್ದರೆ ಸರಿ ಇಲ್ಲದಿದ್ದರೆ ಸ್ವಾಮಿಗಳನ್ನು ಸ್ಥಾನಪಲ್ಲಟ ಮಾಡುವುದೇ ಒಳ್ಳೆಯದು

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....