ಮಠದ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘ ಶ್ರೀಗಳನ್ನು ಬಂಧಿಸುವಂತೆ ಆಗ್ರಹಿಸಿ ಹಲವು ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಮುಂದಾಗಿವೆ. ಇದೇ ಸೆ.2ರಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯಲಿದೆ.
ಸೆಪ್ಟೆಂಬರ್ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಮಾವೇಶ ನಡೆಯಲಿದೆ. ಅದೇ ಹೊತ್ತಿಗೆ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆಗಳು ನಡೆಯಲಿವೆ ಎಂದು ಸಂಘಟನೆಗಳು ತಿಳಿಸಿವೆ.
ದಲಿತ ಸಂಘಟನೆಗಳು, ವಿದ್ಯಾರ್ಥಿ ಯುವಜನ ಸಂಘಟನೆಗಳು, ಎಲ್ಲ ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಮತ್ತು ಕೃಷಿಕೂಲಿಕಾರರ ಸಂಘಟನೆಗಳು, ಅಲ್ಪಸಂಖ್ಯಾತರ ಸಂಘಟನೆಗಳು ನೌಕರರ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು ವಕೀಲರ ಸಂಘಟನೆಗಳು, ಲೈಂಗಿಕ ಅಲ್ಪಸಂಖ್ಯಾತರು, ವಿವಿಧ ಗುಂಪುಗಳು ಮತ್ತು ಜೀವಪರ ವ್ಯಕ್ತಿಗಳ ಜಂಟಿ ನೇತೃತ್ವದಲ್ಲಿ ಮರುಘಾ ಮಠಾಧೀಶರ ಬಂಧನಕ್ಕೆ ಆಗ್ರಹಿಸಲಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಬ್ಬರು ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದಲ್ಲಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಹಾಗೂ ಎಸ್.ಸಿ., ಎಸ್.ಟಿ. ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿಯರು ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗಿ ಮೂರು ದಿನ ಕಳೆದರೂ ಪೊಲೀಸ್ ಇಲಾಖೆ ಯಾವುದೇ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಶಿಷ್ಟ ರೀತಿಯಲ್ಲಿ ಕಾನೂನು ಪಾಲನೆ ಮಾಡುವುದು ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘಟನೆಗಳು ಹೇಳಿವೆ.
“ಪ್ರಕರಣ ದಾಖಲಾದ ತಕ್ಷಣ ಬಂಧಿಸಬೇಕೆಂದು ಯಾವುದೇ ಕಾಯ್ದೆಯಲ್ಲೂ ಇಲ್ಲ. ತನಿಖೆ ಮಾಡಿ, ಸಾಕ್ಷ್ಯಾಧಾರಗಳ ಆಧಾರದಲ್ಲಿ ಮುರುಘಾ ಶರಣರನ್ನು ಬಂಧಿಸುತ್ತೇವೆ” ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಹೇಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
“ಇಲ್ಲಿ ಸಾಮಾನ್ಯರಿಗೊಂದು ನ್ಯಾಯ, ಸ್ವಾಮೀಜಿಗೊಂದು ನ್ಯಾಯವಿದೆಯೇ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. “ಸಾಕ್ಷಿಗಳ ನಾಶಪಡಿಸಲು ಪೊಲೀಸರು ಅವಕಾಶ ನೀಡುತ್ತಿದ್ದಾರೆ” ಎಂಬ ಆರೋಪಗಳು ಬಂದಿವೆ. ಸ್ವಾಮೀಜಿಯನ್ನು ಯಾವಾಗ ಬಂಧಿಸುತ್ತಾರೆಂಬ ಯಾವುದೇ ಖಚಿತ ಮಾಹಿತಿ ಇಲ್ಲ.
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿಯ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳು, ಪ್ರಾಮಾಣಿಕ ತನಿಖಾಧಿಕಾರಿಗಳು, ಸಾಮಾಜಿಕ-ಸಂಸ್ಥೆಗಳನ್ನೊಳಗೊಂಡ ‘ಎಸ್ಐಟಿ’ ಕೂಡಲೇ ರಚಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಒಕ್ಕೂಟ ಆಗ್ರಹಿಸಿದೆ.
ಮಂಗಳವಾರ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಈಗಾಗಲೇ ಆರೋಪಿ ಸ್ವಾಮೀಜಿಯ ವಿರುದ್ಧ ಎಫ್ಐಆರ್ ದಾಖಲಾಗಿ ನಾಲ್ಕು ದಿನ ಕಳೆದಿವೆ. ಆದರೆ, ಚಿತ್ರದುರ್ಗದಲ್ಲಿಯೇ ಇರುವ ಆರೋಪಿ ಸ್ವಾಮೀಜಿಯನ್ನು ಬಂಧಿಸಲು ವಿಳಂಬ ಮಾಡುತ್ತಾ ಸಾಕ್ಷ್ಯಧಾರಗಳ ನಾಶಕ್ಕೆ ಅವಕಾಶ ಮಾಡಿಕೊಡುತ್ತಿವೆ. ಮೊದಲು ಆರೋಪಿ ಮುರುಘ ಶರಣ ಶಿವಮೂರ್ತಿ ಸ್ವಾಮೀಜಿಯನ್ನು ಬಂಧಿಸಿ ಎಂದು ಒತ್ತಾಯಿಸಿದರು.
ಇದನ್ನೂ ಓದಿರಿ: ಸಂತ್ರಸ್ತ ಮಕ್ಕಳನ್ನು ಹೆದರಿಸುವ ಪ್ರಯತ್ನ ನಡೆಯುತ್ತಿವೆ: ದಲಿತ ಹೋರಾಟಗಾರ ಪ್ರೊ.ಸಿ.ಕೆ.ಮಹೇಶ್ ಆತಂಕ
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಸರ್ಕಾರ ಸ್ವಾಮೀಜಿಯ ರಕ್ಷಣೆಗೆ ನಿಂತಿರುವ ಅನುಮಾನ ಕಾಡುತ್ತಿದೆ. ಗೃಹ ಸಚಿವ ಅರಗಜ್ಞಾನೇಂದ್ರ ರಾಜೀನಾಮೆ ಕೊಡಬೇಕು. ಅವರು ಇಂತಹ ಮೂರ್ನಾಲ್ಕು ಪ್ರಕರಣಗಳಲ್ಲಿ ತಮ್ಮ ಹೇಳಿಕೆಗಳ ಮೂಲಕ ತನಿಖೆ ದಿಕ್ಕು ತಪ್ಪಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ದಸಂದ ಮೈಸೂರು ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, “ಚಿತ್ರದುರ್ಗದ ಮುರುಘಾ ಮಠದ ಮೇಲೆ ನಮಗಿದ್ದ ಆಶಾ ಭಾವನೆಗೆ ಅಘಾತ ತಂದಿದೆ. ಕೂಡಲೇ ಆರೋಪಿಯಾಗಿರುವ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿಯನ್ನು ಮೊದಲು ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ಗ್ರಾಮೀಣ ಪ್ರದೇಶಗಳಿಂದಲೇ ಹೋರಾಟ ನಡೆಸಲಾಗುವುದು. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಮೊದಲು ಆರೋಪಿ ಸ್ವಾಮೀಜಿಯನ್ನು ಬಂಧಿಸಬೇಕು” ಎಂದರು.