Homeಮುಖಪುಟಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

- Advertisement -
- Advertisement -

ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ ಲೋಕಸಭೆ ಕ್ಷೇತ್ರದಲ್ಲಿ ಕೂಡ ಇಂತದ್ದೆ ಬೆಳವಣಿಗೆ ನಡೆದಿದೆ. ಅಲ್ಲಿನ ಮುಸ್ಲಿಂ ಮತದಾರರು ಹೆಚ್ಚಾಗಿ ನಮಗೆ ಮತದಾನಕ್ಕೆ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ, ಆದರೆ ಹಿಂದೂ ಸಮುದಾಯದ ಜನರಿಂದ ಇಂತಹ ಯಾವುದೇ ಆರೋಪಗಳು ಕೇಳಿ ಬಂದಿಲ್ಲ.

ದೇಶದ ಹಲವು ರಾಜ್ಯಗಳಲ್ಲಿ ಏಪ್ರಿಲ್ 26ರಂದು ಎರಡನೇ ಹಂತದ ಮತದಾನ ನಡೆದಿದೆ. ಮಥುರಾದ ಗಾಲಿ ಅಹಿರಾನ್‌ನಲ್ಲಿ 74 ವರ್ಷದ ಜಮರುಲ್ ನಿಶಾ ಅವರ ಕುಟುಂಬದ ಒಂಬತ್ತು ಮತದಾರರಲ್ಲಿ ಒಬ್ಬರಿಗೂ ವೋಟರ್ ಸ್ಲಿಪ್  ಸಿಕ್ಕಿಲ್ಲ. ಈ ರೀತಿಯಾಗಿರುವುದು ಇದೇ ಮೊದಲು ಎಂದು ಅವರ ಪತಿ ಮೊಹಮ್ಮದ್ ಸಬೀರ್ ಹೇಳಿದ್ದಾರೆ.

ವೋಟರ್ ಸ್ಲಿಪ್ ಎನ್ನುವುದು ಭಾರತದ ಚುನಾವಣಾ ಆಯೋಗದಿಂದ ಚುನಾವಣೆಯ ಮೊದಲು ನೋಂದಾಯಿತ ಮತದಾರರಿಗೆ ನೀಡುವ ದಾಖಲೆಯಾಗಿದೆ. ಇದು ಮತದಾರರ ನೋಂದಣಿಯ ದೃಢೀಕರಣವಾಗಿದೆ ಮತ್ತು ಎಲ್ಲಿ ಮತ್ತು ಯಾವಾಗ ಮತ ಚಲಾಯಿಸಬೇಕು ಎಂಬ ಮಾಹಿತಿಯನ್ನು ಒದಗಿಸುತ್ತದೆ.

ವೋಟರ್ ಸ್ಲಿಪ್ ಇಲ್ಲ ಎಂದು ಮಥುರಾ ಸಂಸದೀಯ ಕ್ಷೇತ್ರದ ಮತದಾರರಾದ ಜಮರುಲ್ ನಿಶಾ ಅವರು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಅವರು ಮತಗಟ್ಟೆಗೆ ಹೋಗಿದ್ದಾರೆ, ಪಟ್ಟಿಯಲ್ಲಿ ತನ್ನ ಹೆಸರನ್ನು ಪತ್ತೆ ಹಚ್ಚಿ ವೋಟರ್ ಸ್ಲಿಪ್ ಪಡೆದುಕೊಂಡಿದ್ದಾರೆ, ಆದರೆ ಅವರಿಗೆ ಮತ ಚಲಾಯಿಸುವ ಅವಕಾಶ ಸಿಕ್ಕಿಲ್ಲ. ಯಾಕೆಂದರೆ ಬೂತ್‌ನಲ್ಲಿದ್ದ ಪಟ್ಟಿಯಲ್ಲಿ ‘ಜಮರುಲ್’ ಎಂದು ಮಾತ್ರ ನಮೂದಿಸಲಾಗಿತ್ತು, ‘ಜಮರುಲ್ ನಿಶಾ’  ಎಂದು ಹೆಸರು ಇರಲಿಲ್ಲ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಮತದಾರರ ಪಟ್ಟಿಯಲ್ಲಿ ಜಮರುಲ್ ನಿಶಾ ಅವರ ಪೂರ್ಣ ಹೆಸರನ್ನು ಉಲ್ಲೇಖಿಸಲಾಗಿದೆ. ನಾನು ಅವರೊಂದಿಗೆ ಈ ಬಗ್ಗೆ ತರ್ಕಿಸಲು ಪ್ರಯತ್ನಿಸಿದೆ, ಆದರೆ ಅಲ್ಲಿದ್ದ ಪೋಲೀಸ್ ಅಧಿಕಾರಿಗಳು ನನ್ನನ್ನು ಗೇಲಿ ಮಾಡಿದರು, ಇಲ್ಲಿ ನಿಂತು ದಿನವಿಡೀ ಜಗಳವಾಡಲು ನಿಮಗೆ ತುಂಬಾ ವಯಸ್ಸಾಗಿಲ್ಲವೇ? ಎಂದು ಪ್ರಶ್ನಿಸಿದರು, ಆದ್ದರಿಂದ ನಾನು ವಾಪಾಸ್ಸು ಬಂದೆ ಎಂದು 74ರ ಹರೆಯದ ‘ಜಮರುಲ್ ನಿಶಾ’ ಹೇಳಿದ್ದಾರೆ.

ಮಥುರಾ ಸಂಸದೀಯ ಕ್ಷೇತ್ರವು ಎರಡು ದಶಕಗಳಲ್ಲಿ ಅತ್ಯಂತ ಕಡಿಮೆ 49.4% ಮತದಾನವನ್ನು ದಾಖಲಿಸಿದೆ    2019ರ ಲೋಕಸಭೆ ಚುನಾವಣೆಯಲ್ಲಿ 60.7% ಮತದಾನವಾಗಿತ್ತು. ಇದು ಉತ್ತರ ಪ್ರದೇಶದಲ್ಲಿ ಈವರೆಗೆ ನಡೆದ 16 ಕ್ಷೇತ್ರಗಳ ನಡೆದ ಮತದಾನಗಳಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವ ಕ್ಷೇತ್ರವಾಗಿದೆ. ಮತದಾರರ ಚೀಟಿಗಳ ವಿತರಣೆ ಮಾಡದಿರುವುದು, ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ಅಥವಾ ಮತದಾರರ ಪಟ್ಟಿಯಲ್ಲಿ ತಪ್ಪಾಗಿ ಹೆಸರು ಬರೆದಿರುವುದು ಮತ್ತು ಮತದಾರರ ಗುರುತಿನ ಚೀಟಿಗಳ ಪಡೆಯುವಲ್ಲಿ ಅಡಚಣೆ, ಈ ಎಲ್ಲಾ ಕಾರಣಗಳಿಂದಾಗಿ ಮುಸ್ಲಿಂ ಮತದಾರರು ಮತದಾನದಿಂದ ವಂಚಿತರಾಗಿದ್ದಾರೆ ಎಂಬ ಹೇಳಿಕೆಗಳ ಮಧ್ಯೆ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆ ಎನ್ನುವುದನ್ನು ಗಮನಿಸಬಹುದಾಗಿದೆ.

ಆದರೆ ಅಲ್ಲಿನ ಹಿಂದೂ ನಿವಾಸಿಗಳು ಅಂತಹ ಯಾವುದೇ ಸಮಸ್ಯೆಯ ಬಗ್ಗೆ ಹೇಳಿಲ್ಲ. ಗಾಲಿ ಅಹಿರಾನ್‌ನಲ್ಲಿರುವ ಸಬೀರ್ ಮತ್ತು ಜಮ್ರುಲ್ ಅವರ ಮನೆಯ ಪಕ್ಕದಲ್ಲೇ ವಾಸಿಸುವ 47 ವರ್ಷದ ಮೂಲಚಂದ್ ಅವರು ಚುನಾವಣೆಗೆ ಮುನ್ನ ಕುಟುಂಬದ ಎಲ್ಲಾ 6 ಸದಸ್ಯರಿಗೆ ವೋಟರ್ ಸ್ಲಿಪ್‌ಗಳನ್ನು ಸ್ವೀಕರಿಸಿದ್ದಾರೆ. ಆದರೆ ಪಕ್ಕದಲ್ಲೇ ವಾಸಿಸುತ್ತಿದ್ದ ಸಬೀರ್ ಮತ್ತು ಜಮ್ರುಲ್ ಕುಟುಂಬಕ್ಕೆ ಸ್ಲಿಪ್‌ ವಿತರಿಸಲಾಗಿಲ್ಲ.

ದೆಹಲಿಯಿಂದ 170ಕಿಮೀ ದೂರದಲ್ಲಿರುವ ‘ಮಥುರಾ’ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ. ಮಥುರಾ ಸಂಸದೀಯ ಕ್ಷೇತ್ರದಲ್ಲಿ 2014 ಮತ್ತು 2019ರಲ್ಲಿ ನಟಿ ಹೇಮಾ ಮಾಲಿನಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ವರ್ಷ ಕಾಂಗ್ರೆಸ್ ಅಭ್ಯರ್ಥಿ ಮುಖೇಶ್ ಧಂಗರ್ ಮತ್ತು ಬಹುಜನ ಸಮಾಜ ಪಕ್ಷದ ಸುರೇಶ್ ಸಿಂಗ್ ವಿರುದ್ಧ ಮಾಲಿನಿ ಈ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

2011ರ ಜನಗಣತಿಯ ಪ್ರಕಾರ ಮಥುರಾ ಜಿಲ್ಲೆಯ ಜನಸಂಖ್ಯೆಯಲ್ಲಿ ಮುಸ್ಲಿಮರು 8.5% ರಷ್ಟಿದ್ದಾರೆ. ಶಾಹಿ ಈದ್ಗಾ ಮಸೀದಿಯ ಎದುರುಗಡೆ ದೀಗ್ ಗೇಟ್ ಇದೆ, ಅಲ್ಲಿ ಮೊಹಮ್ಮದ್ ಸಾಬು(62) ಹಿತ್ತಾಳೆ ವಸ್ತುಗಳನ್ನು ಸಂಗ್ರಹಿಸಿ ಸ್ಥಳೀಯ ಉತ್ಪಾದನಾ ಸಂಸ್ಥೆಗಳಿಗೆ ಮಾರಾಟ ಮಾಡುವ ಅಂಗಡಿಯನ್ನು ನಡೆಸುತ್ತಿದ್ದಾರೆ. ಮಥುರಾದಲ್ಲಿ ನಡೆದ ಮತದಾನದ ಮರುದಿನ ಈ ಬಾರಿ ನನಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ ಎಂದು ಸಾಬು ಹೇಳಿದ್ದಾರೆ. ಮತಗಟ್ಟೆಯಲ್ಲಿನ ಮ್ಯಾನೇಜರ್ ನನ್ನ ಹೆಸರು ಪಟ್ಟಿಯಲ್ಲಿಲ್ಲ ಎಂದು ಹೇಳಿದರು. 30 ನಿಮಿಷಗಳ ಕಾಲ ಅವರು ಫೈಲ್‌ಗಳನ್ನು ಪರಿಶೀಲಿಸಿದರು ಆದರೆ ನನ್ನ ಹೆಸರನ್ನು ಕಂಡು ಹಿಡಿಯಲಾಗಲಿಲ್ಲ. ನಾನು ನನ್ನ ಜೀವನದಲ್ಲಿ ಬಹುಪಾಲು ಚುನಾವಣೆಗಳಲ್ಲಿ ಸ್ಥಳೀಯ ಜೈನ್ ಐಡಿಯಲ್ ಜೂನಿಯರ್ ಪ್ರೌಢಶಾಲೆಯಲ್ಲಿ ಮತ ಚಲಾಯಿಸಿದ್ದೇನೆ. ಈ ಹಿಂದೆ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಈ ರೀತಿ ಆಗಿಲ್ಲ. ನನ್ನ ಕುಟುಂಬದಲ್ಲಿ ಐವರು ಮತದಾರರಿದ್ದಾರೆ. ಆದರೆ ನಮ್ಮಲ್ಲಿ ಮೂವರು ಮಾತ್ರ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.

ಶಬ್ಬೀರ್ ಅಲಿ(65) ಸಾಬು ಅವರ ಅಂಗಡಿಯಿಂದ ಹಿತ್ತಾಳೆಯನ್ನು ತನ್ನ ಗ್ರಾಹಕರಿಗೆ ಸಾಗಿಸುತ್ತಾರೆ, ಮಥುರಾದ ಗೋವಿಂದಪುರದಲ್ಲಿರುವ ತಮ್ಮ ಮತದಾನ ಕೇಂದ್ರದಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ. ನಮ್ಮ ಕುಟುಂಬದಲ್ಲಿ 8 ಮತದಾರರಿದ್ದಾರೆ, ಆದರೆ ನನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳ ಹೆಸರು ಪಟ್ಟಿಯಲ್ಲಿರಲಿಲ್ಲ ಎಂದು ಹೇಳಿದ್ದಾರೆ.

ಮಥುರಾದ ಶಾಹಿ ಈದ್ಗಾ ಮಸೀದಿಯ ಸುತ್ತಮುತ್ತಲಿನ ನೆರೆಹೊರೆಗಳಲ್ಲಿ ಮುಸ್ಲಿಮರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅವರ ಮತಗಳು ಹೆಚ್ಚಾಗಿ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವೆ ಹಂಚಿಹೋಗಿವೆ. ಈ ವರ್ಷದ ಆರಂಭದಲ್ಲಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್‌ಗೆ ಸೇರ್ಪಡೆಗೊಂಡ ಆರ್‌ಎಲ್‌ಡಿ ಈ ಬಾರಿ ಮಥುರಾದಲ್ಲಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ ಇಲ್ಲಿನ ಮತದಾರರು ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ನಿವಾಸಿಗಳನ್ನು ಹೊಂದಿರುವ ಗಾಲಿ ಅಹಿರಾನ್‌ನಲ್ಲಿ ಈ ಬಾರಿ ಹಿಂದೂಗಳಿಗಿಂತ ಹೆಚ್ಚಾಗಿ ಮುಸ್ಲಿಂ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಆರೋಪವನ್ನು ಮಾಡಿದ್ದಾರೆ, ನಮಗೆ ನಮ್ಮ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವಾದ ಅಂಶಗಳ ಬಗ್ಗೆ ಚುನಾವಣಾ ಆಯೋಗ ಉತ್ತರಿಸಬೇಕಿದೆ.

ಇದನ್ನು ಓದಿ: ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು ಉಲ್ಲೇಖ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...