ಸುದ್ದಿ ವಾಹಿನಿಗಳು ಮತ್ತು ಮುದ್ರಣ ಮಾಧ್ಯಮಗಳು ತನ್ನ ವಿರುದ್ದ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ಮಾಜಿ ಉಪ ಮುಖ್ಯ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತಂದಿದ್ದಾರೆ.
ಕಾಂತೇಶ್ ಅವರಿಗೆ ಸಂಬಂಧಿಸಿದ ಯಾವುದೇ ಅಶ್ಲೀಲ ಫೋಟೋ, ವಿಡಿಯೋ, ಸ್ಕ್ರೀನ್ ಶಾಟ್ ಮತ್ತು ಆಡಿಯೋಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ಹೊರಡಿಸಿದೆ.
ಕಾಂತೇಶ್ ಸಲ್ಲಿಸಿದ್ದ ಅಸಲು ದಾವೆ ವಿಚಾರಣೆ ನಡೆಸಿದ ನ್ಯಾಯಾಲಯ ಏಪ್ರಿಲ್ 27ರಂದು ಆದೇಶ ಹೊರಡಿಸಿದೆ. ದಾವೆಯಲ್ಲಿ ಪ್ರತಿವಾದಿಗಳಾಗಿರುವ ವಿವಿಧ ಮಾಧ್ಯಮಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದು, ವಿಚಾರಣೆಯನ್ನು ಆಗಸ್ಟ್ 3, 2024ಕ್ಕೆ ಮುಂದೂಡಿದೆ.
“ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕೆಲ ಮಾಧ್ಯಮಗಳು ನನ್ನ ನಕಲು ಮಾಡಿದ ಅಶ್ಲೀಲ ಫೋಟೋ, ವಿಡಿಯೋ ಮತ್ತು ಆಡಿಯೋಗಳನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತಿವೆ. ಒಂದು ವೇಳೆ ಆಕ್ಷೇಪಾರ್ಹ ಫೋಟೋ, ವಿಡಿಯೋ ಮತ್ತು ಆಡಿಯೋಗಳು ಪ್ರಸಾರಗೊಂಡರೆ ನನ್ನ ಮಾನ ಹಾನಿಯಾಗುತ್ತದೆ. ಆದ್ದರಿಂದ ಮಾಧ್ಯಮಗಳ ವಿರುದ್ದ ಮಧ್ಯಂತರ ನಿರ್ಬಂಧಕಾಜ್ಞೆ ಆದೇಶ ನೀಡಬೇಕು” ಎಂದು ಕಾಂತೇಶ್ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾವೆಯಲ್ಲಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಹಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿರುವ ನಡುವೆ, ಹಿರಿಯ ರಾಜಕಾರಣಿ ಈಶ್ವರಪ್ಪ ಪುತ್ರ ನಿರ್ಬಂಧಕಾಜ್ಞೆ ತಂದಿರುವುದು ಚರ್ಚೆಗಳನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್ಗೆ ಎಸ್ಐಟಿ ನೋಟಿಸ್