2022ರ ಸೆಪ್ಟೆಂಬರ್ 5ಕ್ಕೆ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಐದು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಅಂದು ಬೆಂಗಳೂರಿನಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ‘ಗೌರಿ ನೆನಪು’ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆಪ್ಟೆಂಬರ್ 05 ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಗೌರಿ ಲಂಕೇಶ್ ಸಮಾಧಿ ಬಳಿ ನಮನ ಕಾರ್ಯಕ್ರಮ ನಡೆಯಲಿದೆ. ಆನಂತರ ಸಂಜೆ 5 ಗಂಟೆಗೆ ಅರಮನೆ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಪಕ್ಕದ ಸ್ಕೌಟ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಗೌರಿ ನೆನಪಿನ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗೌರಿ ನೆನಪು | Gauri Memorial
ಸೆಪ್ಟೆಂಬರ್ 5 | September 5
ಭಾಗವಹಿಸುವವರು,
ಅರುಂದತಿ ರಾಯ್ | ಪ್ರಕಾಶ್ ರಾಜ್ | ಮೊಹಮ್ಮದ್ ಝುಬೇರ್ | ನೀವುArundhati Roy | @prakashraaj | @zoo_bear | You pic.twitter.com/DReSPWCv4W
— Naanu Gauri (@naanugauri) August 30, 2022
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್, ಬಹುಭಾಷ ನಟ ಪ್ರಕಾಶ್ ರಾಜ್ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಪತ್ರಕರ್ತ ಮೊಹಮ್ಮದ್ ಝಬೇರ್ ಭಾಗವಹಿಸಲಿದ್ದಾರೆ. ಅಲ್ಲದೇ ಭಾಷಾತಜ್ಞರಾದ ಡಾ.ಜಿ.ಎನ್ ದೇವಿ, ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್, ಪೆಡೆಸ್ಟ್ರಿಯನ್ ಪಿಕ್ಚರ್ಸ್ ನ ದೀಪು, ಪ್ರೊ.ವಿ.ಎಸ್ ಶ್ರೀಧರರವರು ಉಪಸ್ಥಿತರಿರುತ್ತಾರೆ ಎಂದು ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ಅರುಂಧತಿ ರಾಯ್ ಕುರಿತು
‘ದ ಗಾಡ್ ಆಫ್ ಸ್ಮಾಲ್ ಥಿಂಕ್ಸ್’ ಕೃತಿಗೆ ಬೂಕರ್ ಪ್ರಶಸ್ತಿ ಪಡೆದಿರುವ ಖ್ಯಾತ ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾಗತೀಕರಣ ವಿರೋಧಿ ಹೋರಾಟದಲ್ಲಿ, ನರ್ಮದಾ ಉಳಿವು ಚಳವಳಿ ಸೇರಿದಂತೆ ಎಲ್ಲ ಪ್ರಗತಿಪರ ಧಾರೆಗಳಲ್ಲಿ ಗುರುತಿಸಿಕೊಂಡವರು ಅರುಂಧತಿ ರಾಯ್. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಕೃತಿಗೆ ರಾಯ್ ಅವರು ಬರೆದ ಪರಿಚಯ ಬರಹ ಚರ್ಚೆಗೆ ಗ್ರಾಸವಾಗಿತ್ತು.
ಪ್ರಕಾಶ್ ರಾಜ್
ಬಹುಭಾಷಾ ನಟರಾದ ಪ್ರಕಾಶ್ ರಾಜ್ ಕನ್ನಡ ಮಣ್ಣಿನ ಅಪ್ಪಟ ಪ್ರತಿಭೆ. ಪ್ರಭುತ್ವ ತಾಳುವ ತಾರತಮ್ಯ, ಜನಾಂಗೀಯ ನೀತಿಗಳ ವಿರುದ್ಧ ದಿಟ್ಟವಾಗಿ ಪ್ರಶ್ನಿಸುವ ನಟರಲ್ಲಿ ಪ್ರಕಾಶ್ ರಾಜ್ ಕೂಡ ಒಬ್ಬರು. ಗೌರಿ ಲಂಕೇಶ್ ಅವರ ಹತ್ಯೆಯ ಬಳಿಕ ನಿರಂತರವಾಗಿ ಜನವಿರೋಧಿ ನೀತಿಗಳನ್ನು ಖಂಡಿಸುತ್ತಿರುವ ಪ್ರಕಾಶ್ ರಾಜ್ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ಮೊಹಮ್ಮದ್ ಝುಬೇರ್
ಅಂತರಾಷ್ಟ್ರೀಯ ಖ್ಯಾತಿಯ ಪತ್ರಕರ್ತರಾದ ಮೊಹಮ್ಮದ್ ಝುಬೇರ್ ಅವರು ಭಾಗವಹಿಸುತ್ತಿದ್ದಾರೆ. ಗೌರಿಯವರ ಆಶಯಗಳನ್ನು ಉಸಿರಾಡುತ್ತಿರುವ ಅಸಂಖ್ಯಾತ ಪತ್ರಕರ್ತರಲ್ಲಿ ಜುಬೇರ್ ಅವರೂ ಒಬ್ಬರು. ಮೂಲತಃ ಕರ್ನಾಟಕದವರಾದ ಅವರು, ಫ್ಯಾಕ್ಟ್ಚೆಕ್ಗೆ ಹೆಸರಾದ ಆಲ್ಟ್ನ್ಯೂಸ್ ಜಾಲತಾಣದ ಸಹಸಂಸ್ಥಾಪಕರೂ ಹೌದು. ಕೋಮುದ್ವೇಷ ಪ್ರಕರಣಗಳನ್ನು ನಿರಂತರವಾಗಿ ಬಯಲಿಗೆಳೆಯುವಲ್ಲಿ ಸಕ್ರಿಯವಾಗಿರುವ ಜುಬೇರ್, ಇತ್ತೀಚೆಗೆ ಪ್ರಭುತ್ವದ ಕಿರುಕುಳವನ್ನು ಅನುಭವಿಸಿದವರು.
ಇದನ್ನೂ ಓದಿ: ಮರುಘಾ ಶರಣರ ಬಂಧನಕ್ಕೆ ಆಗ್ರಹಿಸಿ ಸೆ.2ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ