Homeಅಂತರಾಷ್ಟ್ರೀಯಜನಮತಗಣನೆಯಲ್ಲಿ ಚಿಲಿಯ ಹೊಸ ಸಂವಿಧಾನ ಸೋತದ್ದೇಕೆ? ಮಾಧ್ಯಮಗಳ ಪಾತ್ರವೇನು?

ಜನಮತಗಣನೆಯಲ್ಲಿ ಚಿಲಿಯ ಹೊಸ ಸಂವಿಧಾನ ಸೋತದ್ದೇಕೆ? ಮಾಧ್ಯಮಗಳ ಪಾತ್ರವೇನು?

- Advertisement -
- Advertisement -

ಸೆಪ್ಟೆಂಬರ್ 4, 2022ರಂದು ಚಿಲಿಯ ಪ್ರಸ್ತಾಪಿತ ಸಂವಿಧಾನದ ಮೇಲಿನ ಜನಮತಗಣನೆಯ (ರೆಫರಂಡಮ್) ಫಲಿತಾಂಶ ಪ್ರಕಟವಾಯಿತು. ಸಂವಿಧಾನವನ್ನು ತಿರಸ್ಕರಿಸಲಾಗಿದೆ. ಹೆಚ್ಚುಕಡಿಮೆ 62 ಶೇಕಡಾ ಮತದಾರರು ವಿರುದ್ಧವಾಗಿ ಮತ ಚಲಾಯಿಸಿದರೆ, ಕೇವಲ 38 ಶೇಕಡಾ ಮತದಾರರು ಪರವಾಗಿ ಮತ ಹಾಕಿದ್ದಾರೆ. ಈ ಜನಮತಗಣನೆಯನ್ನು ಕಡ್ಡಾಯ ಮತದಾನದ ಆಧಾರದಲ್ಲಿ ನಡೆಸಲಾಗಿದ್ದು, ಅದನ್ನು ಚಿಲಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಚುನಾವಣೆಯನ್ನಾಗಿಸಿತ್ತು.

ಈ ಹೊಸ ಸಂವಿಧಾನ ಏನು?

ಸುಮಾರು 15 ವರ್ಷಗಳಿಂದ ನಡೆಯುತ್ತಿರುವ ಚಳವಳಿಯ ಪರಿಣಾಮವಾಗಿ, ನಂತರ ಅದು 2019ರಲ್ಲಿ ರಾಷ್ಟ್ರವ್ಯಾಪಿ ಹಿಂಸಾತ್ಮಕ ಪ್ರತಿಭಟನೆಗಳಾಗಿ ಪರಿಣಮಿಸಿದ ಕಾರಣ ಈ ಹೊಸ ಸಂವಿಧಾನವನ್ನು ರಚಿಸಲಾಯಿತು. ಈ ಸಂವಿಧಾನವು ಸಮಾನ ಸಂಖ್ಯೆಯ ಪುರುಷ ಮತ್ತು ಮಹಿಳಾ ಪ್ರತಿನಿಧಿಗಳಿಂದ ರೂಪಿತವಾದ ಪ್ರಪಂಚದ ಮೊದಲ ಪ್ರಮುಖ ಸಂವಿಧಾನವಾಗಿದೆ. ಅದು ಮೂಲನಿವಾಸಿ ಜನರಿಗೆ ಸಮಾನ ಹಕ್ಕು, ಅಧಿಕಾರದ ವಿಕೇಂದ್ರೀಕರಣ ಮತ್ತು ಪರಿಸರ ಸಂರಕ್ಷಣೆಗೆ ಅವಕಾಶ ಒದಗಿಸಿತ್ತು. ಅದು ಹಿಂದಿನ ಸಂವಿಧಾನದ ಹಲವಾರು ನವ ಉದಾರವಾದಿ ಅಡೆತಡೆಗಳನ್ನು ಕೊನೆಗಾಣಿಸಿದ್ದು ಮಾತ್ರವಲ್ಲದೇ, ಇನ್ನಷ್ಟು ಮುಂದುವರಿದು, ಜನಕಲ್ಯಾಣದ ಜವಾಬ್ದಾರಿಯನ್ನು ಸರಕಾರವೇ ಹೊರುವಂತೆ ವಿಧಿಸಿತ್ತು. ಈ ಸಂವಿಧಾನವು ಸರಕಾರದ ಸಚಿವಾಲಯಗಳಲ್ಲಿ ಮಹಿಳೆಯರಿಗೆ ಕನಿಷ್ಟ 50 ಶೇಕಡಾ ಪ್ರಾತಿನಿಧ್ಯವನ್ನೂ ಖಾತರಿಪಡಿಸುತ್ತಲಿತ್ತು.

ಗಣಿಗಾರಿಕೆಯ ಮೇಲೆ ಹೊಸ ನಿಯಂತ್ರಣಗಳನ್ನು ಹೇರಿದ ಕಾರಣದಿಂದ ಯುಎಸ್‌ಎಯ ಉದ್ಯಮವಲಯಗಳ ಟೀಕೆಗೆ ಈ ಸಂವಿಧಾನ ಗುರಿಯಾಗಿತ್ತು. ಬ್ಯಾಟರಿಗಳಲ್ಲಿ ಅತೀ ಮುಖ್ಯ ಮೂಲವಸ್ತು ಆಗಿರುವ ಲಿಥಿಯಮ್‌ನ ಅನೇಕ ಗಣಿಗಳನ್ನು ಚಿಲಿ ಹೊಂದಿದೆ. ಈ ಜನಮತಗಣನೆಯು ’ತೀರಾ ಎಡಪಂಥೀಯ ನಿಲುವಿನ ಕಾರಣಕ್ಕಾದ ಸಂವಿಧಾನದ ತಿರಸ್ಕಾರ’ ಎಂದು ಹಲವಾರು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಬಣ್ಣಿಸಿವೆ. ಆದರೆ, ಈ ಅಭಿಪ್ರಾಯವು ಜನಮತಗಣನೆಯನ್ನು ಸರಿಯಾಗಿ ಪ್ರತಿನಿಧಿಸುವುದಿಲ್ಲ. ಯಾಕೆಂದರೆ, ಬೇರೆಬೇರೆ ಪ್ರತ್ಯೇಕ ವಿಷಯಗಳ ಕುರಿತ ಮತಗಣನೆಯನ್ನು ನೋಡಿದಲ್ಲಿ, ಹೆಚ್ಚಿನ ಚಿಲಿಯನರು ಹೊಸ ಸಂವಿಧಾನದಲ್ಲಿ ಪರಿಚಯಿಸಲಾಗಿರುವ ಬದಲಾವಣೆಗಳನ್ನು ಸಂತೋಷದಿಂದ ಸ್ವೀಕರಿಸಿದ್ದನ್ನು ಅದು ಸೂಚಿಸುತ್ತದೆ. ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಚಿಲಿಯ ಹೊಸ ಸಂವಿಧಾನದ ಕುರಿತು ಜನರಿಗೆ ತಪ್ಪು ತಿಳಿವಳಿಕೆ ನೀಡಿ, ಭಯದ ವಾತಾವರಣ ಉಂಟುಮಾಡುವ ಅಭಿಯಾನವನ್ನು ಬಲಪಂಥೀಯರು ಮತ್ತು ಶ್ರೀಮಂತ ಉದ್ದಿಮೆಗಳ ಮಾಲೀಕರು ಆಯೋಜಿಸಿದ್ದರು ಎಂದೂ ತಿಳಿಯುತ್ತದೆ.

ಹಳೆಯ ಸಂವಿಧಾನ ಬಂದದ್ದೆಲ್ಲಿಂದ?

ಚಿಲಿಯ ಸರ್ವಾಧಿಕಾರಿಯಾಗಿದ್ದ ಅಗಸ್ಟೋ ಪಿನೋಷೆ ದೇಶದ ಮುಖ್ಯಸ್ಥನಾಗಿ ತನ್ನ ಕೊನೆಯ ದಿನಗಳಲ್ಲಿ ಹೊಸ ಸಂವಿಧಾನವೊಂದನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದ. ಆ ಸಂವಿಧಾನವು ನವ ಉದಾರವಾದಿ ದೃಷ್ಟಿಕೋನ ಹೊಂದಿತ್ತು. ಅದು ಯಾವುದೇ ಜನಕಲ್ಯಾಣದ ಧೋರಣೆಗಳನ್ನು ಆಸಾಧ್ಯ ಮಾಡಿ ಸರಕಾರದ ಪಾತ್ರವನ್ನು ಕೇವಲ ವ್ಯಾಪಾರ ನಿರ್ವಹಣೆಗೆ ಸೀಮಿತಗೊಳಿಸಿತ್ತು. ಜನಪ್ರಿಯ ನಾಯಕ ಸೆಲ್ವೆಡಾರ್ ಅಯ್ಯೆಂಡೆ ಚಿಲಿಯ ಅಧ್ಯಕ್ಷರಾಗಿ ಗೆದ್ದ ಬಳಿಕ ಪಿನೋಷೆ ಮಿಲಿಟರಿ ದಂಗೆಯ ಮೂಲಕ ಅಧಿಕಾರ ಕಸಿದುಕೊಂಡಿದ್ದ. ಆಯ್ಯೆಂಡೆ, ಚಿಲಿಯಲ್ಲಿ ಸಂಸದೀಯ ಚುನಾವಣೆಗಳ ಹಾದಿಯ ಮೂಲಕ ಕಮ್ಯುನಿಸಂ ಆಡಳಿತವನ್ನು ತರುವ ಭರವಸೆ ನೀಡಿದ್ದರು. ಇದು ಅವರನ್ನು ಯುಎಸ್‌ಎಯ ಕೋಪಕ್ಕೆ ಗುರಿಯಾಗಿಸಿತ್ತು. ಅಯ್ಯೆಂಡೆಯವರನ್ನು ಕೊಲೆ ಮಾಡಲಾಯಿತು. ಪಿನೋಶೆಯ ಸೇನಾದಂಗೆಗೆ ಯುಎಸ್‌ಎ ಬೆಂಬಲ ನೀಡಿತ್ತು. ಪ್ರತಿಯಾಗಿ ದೇಶದ ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳಲುಬಯಸುವ ಅಮೆರಿಕದ ಉದ್ದಿಮೆಗಳ ಜೊತೆ ಭವಿಷ್ಯದಲ್ಲಿ ಚಿಲಿಯು ವ್ಯಾಪಾರಕ್ಕೆ ಮುಕ್ತವಾಗಿರುತ್ತದೆ ಎಂಬ ಭರವಸೆಯನ್ನು ನಿರೀಕ್ಷಿಸಿತ್ತು. ಆ ನಿಟ್ಟಿನಲ್ಲಿಯೇ ಈ ಹಳೆಯ ಸಂವಿಧಾನವನ್ನು ರೂಪಿಸಲಾಗಿತ್ತು.

ಹಳೆಯ ಸಂವಿಧಾನ ಜನಪ್ರಿಯವಾಗಿತ್ತೆ?

ಈಗ ನಡೆದಿರುವಂತೆಯೇ ಅಥವಾ ಅದಕ್ಕೆ ವ್ಯತಿರಿಕ್ತವಾಗಿ ಹಳೆಯ ಸಂವಿಧಾನವನ್ನು ಭಾರೀ ಪ್ರಮಾಣದ ಉದ್ಯಮಪರ ಪ್ರಚಾರಾಭಿಯಾನದೊಂದಿಗೆ ಅಂಗೀಕರಿಸಲಾಗಿತ್ತು. ಚಿಲಿಯ ಹಲವಾರು ರಾಜಕಾರಣಿಗಳು ಪಿನೋಶೆಯ ಸಂವಿಧಾನವನ್ನು ವಿರೋಧಿಸಲು ಪ್ರಯತ್ನಿಸಿದರಾದರೂ, ಕೊನೆಗೂ ಅವರು ಸೋಲಬೇಕಾಯಿತು. ಹೊಸ ಸಂವಿಧಾನ ಅನುಷ್ಠಾನಗೊಂಡ ಬಳಿಕ ಅದನ್ನು ವಿರೋಧಿಸುವ ಪಕ್ಷಗಳು ಮತ್ತು ಗುಂಪುಗಳು ಜೊತೆಗೂಡಿ “ಕೊನ್ಸರ್ಟೇಸಿಯೋನ್ ಪೊರ್ ಎಲ್ ನೋ” (Campaign for No – ನಮಗೆ ಬೇಡವೆನ್ನುವುದಕ್ಕೆ ಪ್ರಚಾರಾಭಿಯಾನ) ಎಂಬ ಕೂಟವನ್ನು ರಚಿಸಿದವು. ಕೊನೆಗೂ ಪಿನೋಶೆ ಅಧಿಕಾರದಿಂದ ಕೆಳಗಿಳಿದ ಮೇಲೆ ಈ ಕೂಟವು ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಯಶಸ್ವಿ ಕೂಟವಾಗಿ ಮುಂದುವರಿದಿತ್ತು. ತಾನು ಪಿನೋಶೆ ಸಂವಿಧಾನ ವಿರೋಧಿ ಎಂಬ ಸ್ಪಷ್ಟ ಘೋಷಣೆಯೊಂದಿಗೆಯೇ ಅದು ಚುನಾವಣೆಗಳನ್ನು ಗೆಲ್ಲುತ್ತಾ ಬರುತ್ತಿತ್ತು.

ಜನಪ್ರಿಯ ಚಳವಳಿಗಳು ಮತ್ತು ಸ್ಥಗಿತಗಳು

2005ರಿಂದೀಚಿನಿಂದ ಚಿಲಿ ದೇಶದ ನವ ಉದಾರವಾದಿ ಧೋರಣೆಗಳ ವಿರುದ್ಧ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳು ಹುಟ್ಟಿಕೊಂಡು ಬೆಳೆಯುತ್ತಲೇ ಇದ್ದವು. ಮೊದಲಿಗೆ ಅದು, ಹದಗೆಟ್ಟ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ವಿರುದ್ಧ ಆರಂಭವಾಗಿ, ನಂತರದಲ್ಲಿ ಮೂಲನಿವಾಸಿಗಳ ಹಕ್ಕು, ಶಿಕ್ಷಣ, ಪ್ರತಿಭಟನೆ ನಡೆಸುವ ಹಕ್ಕು ಇತ್ಯಾದಿಯಾಗಿ ಒಂದೊಂದೇ ವಿಷಯ ಅದಕ್ಕೆ ಸೇರಿಸಿಕೊಳ್ಳಲು ಆರಂಭಿಸಿತು. ಪ್ರತಿಭಟನಾಕಾರರ ಬೇಡಿಕೆಗಳು ಪಿನೋಶೆ ಸಂವಿಧಾನದ ಗೋಡೆಯ ಮೇಲೆ ನಿರಂತರ ಪ್ರಹಾರ ಮಾಡುತ್ತಲೇ ಹೋದವು.

2019ರಲ್ಲಿ ನಿರಾಕರಣಾ ಚಳವಳಿ ಆರಂಭವಾಯಿತು. ಮೊದಲಿಗೆ ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆಗೆ ಶುಲ್ಕ ನೀಡಲು ನಿರಾಕರಿಸುವುದರೊಂದಿಗೆ ಅದು ಆರಂಭವಾಯಿತು. ಆದರೆ, ತಿಂಗಳ ಒಳಗಾಗಿ ಪ್ರತಿಭಟನೆಗಳು ದೇಶವ್ಯಾಪಿಯಾಗಿ ಬೆಳೆದು, ಅದು ರಾಷ್ಟ್ರೀಯ ತುರ್ತುಪರಿಸ್ಥಿತಿಯ ಘೋಷಣೆಗೆ ಮತ್ತು ಕ್ರಮೇಣವಾಗಿ ಹೊಸ ಸಂವಿಧಾನ ರಚನೆಯ ಕುರಿತ ಜನಮತಗಣನೆಯನ್ನು ನಡೆಸುವುದಕ್ಕೆ ನೀಡಿದ ಒಪ್ಪಿಗೆಗೆ ಕಾರಣವಾಯಿತು. 2020ರಲ್ಲಿ ಕೋವಿಡ್ ಸಂಕಷ್ಟಗಳ ಹೊರತಾಗಿಯೂ ಚಿಲಿಯ ಜನರು ಸಂವಿಧಾನ ಬದಲಾವಣೆಯ ಪರ ಮತ ಚಲಾಯಿಸಿ, ಪಿನೋಶೆ ಸಂವಿಧಾನಕ್ಕೆ ಕೊನೆಹಾಡಿದರು.

ಪಾರದರ್ಶಕತೆ ಮತ್ತು ಪ್ರಜಾಸತ್ತೆಯ ಕುರಿತು ಭಯದ ಸೃಷ್ಟಿ

ಚಿಲಿಯ ಸಂದರ್ಭದಲ್ಲಿ ಮೇ 2022ರವರೆಗೆ ಹೊಸ ಸಂವಿಧಾನಕ್ಕೆ ಬೆಂಬಲ ಬಲವಾಗಿತ್ತೆಂದು ಸಮೀಕ್ಷೆಗಳು ತೋರಿಸಿವೆ. ಸಂವಿಧಾನ ರಚನಾ ಪ್ರಕ್ರಿಯೆಯು ಹಲವಾರು ವೇದಿಕೆಗಳಲ್ಲಿ ಎಲ್ಲರಿಗೂ ಲಭ್ಯವಿತ್ತು. ಚಿಲಿಯ ಜನರಿಗೆ ಆತಂಕವಿದ್ದ ಹಲವಾರು ವಿಷಯಗಳನ್ನು ಸಂವಿಧಾನದಲ್ಲಿ ಸರಿಪಡಿಸಲಾಗಿತ್ತು. ಹಾಗಾದರೆ, ಈ ಸಂವಿಧಾನವನ್ನು ಯಾಕೆ ತಿರಸ್ಕರಿಸಲಾಯಿತು?

ಚುನಾವಣೆಗಳನ್ನು ಹೆಚ್ಚಾಗಿ ಜನರಿಂದ ನೇರವಾಗಿ ಬಂದ ಆದೇಶ ಎಂಬಂತೆ ಕಾಣಲಾಗುತ್ತದೆ. ಆದರೆ, ಒಂದು ಚುನಾವಣೆಯನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ವಿಷಯಗಳು ಅಷ್ಟು ಸರಳವಾಗಿರುವುದು ಅಪರೂಪ ಎಂದು ಗೊತ್ತಾಗುತ್ತದೆ. ಚುನಾವಣೆಯೊಂದರ ವೇಳೆ ಮಾಧ್ಯಮ ಅಭಿಯಾನಗಳು ಮತ್ತು ಸ್ಥಳೀಯ ಮಟ್ಟದ ರಾಜಕೀಯ ಪಾತ್ರಧಾರಿಗಳು ಒಂದು ರಾಜಕೀಯ ಕಾರ್ಯಕ್ರಮವನ್ನು ಮುಂದುಮಾಡಿ ಜನರಲ್ಲಿ ಬಿತ್ತಲು ಸಾಧ್ಯವಿದೆ. ಹೆಚ್ಚೆಂದರೆ ಚುನಾವಣೆಗಳೆಂದರೆ, ಭವಿಷ್ಯದ ಮೇಲೆ ಪರಿಣಾಮ ಬೀರಬಲ್ಲ ದಿಢೀರ್ ಸಮೀಕ್ಷೆಗಳು ಅಷ್ಟೇ. ಚಿಲಿಯಲ್ಲಿ ಹಲವಾರು ಮಾಧ್ಯಮ ಸಂಸ್ಥೆಗಳು ಸೂಕ್ತವಾದ ಕಾಲಕ್ಕೆ ಸರಿಯಾಗಿ ಅಭಿಯಾನಗಳನ್ನು ಹುಟ್ಟುಹಾಕಿದವು.

ಚಿಲಿಯಲ್ಲಿ ಎರಡು ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆಗಳಿವೆ- ಎಲ್ ಮರ್ಕ್ಯೂರಿಯೋ ಮತ್ತು ಲಾ ಟರ್ಸೆರಾ. ಇವೆರಡನ್ನೂ ಶ್ರೀಮಂತ, ತೀರಾ ಉದ್ಯಮಪರ ಕುಟುಂಬಗಳು ನಡೆಸುತ್ತಿವೆ. ಇವೆರಡೂ ಕುಟುಂಬಗಳು ಪಿನೋಶೆ ಸರಕಾರದ ಬಹಿರಂಗ ಬೆಂಬಲಿಗರಾಗಿದ್ದವರು. ಚಿಲಿಯಲ್ಲಿ ಕಮ್ಯುನಿಸಂ ಮೇಲೆದ್ದುಬರದಂತೆ ತಡೆಯಲು ಎಲ್ ಮರ್ಕ್ಯೂರಿಯೋಗೆ ಯುಎಸ್‌ಎಯ ಗುಪ್ತಚರ ಸಂಸ್ಥೆ ಸಿಐಎ ಹಣಕಾಸು ವೆಂಬಲ ಒದಗಿಸಿತ್ತು. ಪಿನೋಶೆಯನ್ನು ಸರ್ವಾಧಿಕಾರಿಯಾಗಿ ಕೂರಿಸುವುದರಲ್ಲಿ ಈ ಮಾಧ್ಯಮಗಳ ಪಾತ್ರವನ್ನು ಪ್ರತಿಭಟನಾಕಾರರು ತಿಳಿದಿದ್ದರು. 2019ರ ಪ್ರತಿಭಟನೆಗಳ ವೇಳೆ ಎಲ್ ಮರ್ಕ್ಯೂರಿಯೋ ಕಚೇರಿಗಳ ಮೇಲೆ ಪ್ರತಿಭಟನಾಕಾರರು ದಾಳಿಗಳನ್ನು ನಡೆಸಿದ್ದರು. ನೀರೂ ಸೇರಿದಂತೆ ಚಿಲಿಯ ನೈಸರ್ಗಿಕ ಸಂಪನ್ಮೂಲಗಳ ರಾಷ್ಟ್ರೀಕರಣವು ತಮ್ಮ ಲಾಭಕ್ಕೆ ಕುತ್ತು ತರುವುದೆಂದು ಈ ಕಂಪೆನಿಗಳ ಮಾಲಕರು ಆತಂಕಿತರಾಗಿದ್ದರು.

ಕಳೆದ ವರ್ಷದಿಂದೀಚೆಗೆ ಎರಡೂ ಮಾಧ್ಯಮ ಸಂಸ್ಥೆಗಳು ಹೊಸ ಸಂವಿಧಾನದ ವಿರುದ್ಧ ತಪ್ಪು ಮಾಹಿತಿ ನೀಡುವ ಅಪಪ್ರಚಾರ ಅಭಿಯಾನಗಳನ್ನು ನಡೆಸುತ್ತಿವೆ. ಇದೀಗ ಸಂವಿಧಾನದ ವಿರುದ್ಧ ಮತ ಚಲಾಯಿಸಿದವರಲ್ಲಿ ಹೆಚ್ಚಿನ ಚಿಲಿಯನ್ನರು, ’ಅದು ಖಾಸಗಿ ಆಸ್ತಿಯನ್ನು ಇಲ್ಲವಾಗಿಸುತ್ತದೆ ಮತ್ತು ಸರಕಾರವು ಜನರ ಮನೆಗಳನ್ನು ವಶಕ್ಕೆ ಪಡೆಯುತ್ತದೆ’ ಎಂದು ನಂಬಿದ್ದರು. ಹೊಸ ಸಂವಿಧಾನವು ಚಿಲಿಯ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಬದಲಿಸುತ್ತದೆ ಎಂದೂ ಹಲವರು ಕೇಳಿದ್ದರು. ಹೊಸ ಸಂವಿಧಾನದ ಕುರಿತು ಜನರಲ್ಲಿ ಭಯವನ್ನು ಹುಟ್ಟಿಸುವ ಸಲುವಾಗಿ ಇಂತಹ ಸಂದೇಶಗಳನ್ನು ಮತ್ತೆಮತ್ತೆ ನೀಡಲಾಯಿತು.

ಪ್ರಗತಿಪರ ಬದಲಾವಣೆಗಳ ನಂತರ ಇಂಥಾ ಅಭಿಯಾನಗಳು ಅತೀ ಸಾಮಾನ್ಯ. ಇವು ತಮ್ಮ ಅಧಿಕಾರಕ್ಕೆ ಒಡ್ಡುವ ಸವಾಲುಗಳನ್ನು ಎದುರಿಸಲು ಪ್ರತಿಷ್ಠಿತ ಮತ್ತು ಪ್ರಬಲ ವರ್ಗಗಳು ಮಾಡಿದ ಯತ್ನಗಳಾಗಿವೆ. ಹೆಚ್ಚಿನ ಬಾರಿ ಅವರು ತಿರುಚಿವಿಕೆಯ ಅಥವಾ ಬಳಲಿಕೆಯ ಸಿದ್ಧಾಂತವನ್ನು (Theory of Back-swing or fatigue) ಜನಕ್ಕೆ ಮಾರುತ್ತಾರೆ. ಕೆಲವು ಬಾರಿ ಈ ಅಭಿಯಾನಗಳು ಯಶಸ್ವಿಯೂ ಆಗುತ್ತವೆ ಮತ್ತು ತಾತ್ಕಾಲಿಕವಾಗಿ ಮನವೊಲಿಕೆ ಮಾಡುವಂತವುಗಳೂ ಆಗಿರುತ್ತವೆ. ಆದರೆ, ಇತಿಹಾಸದ ದೀರ್ಘ ಯಾತ್ರೆಯಲ್ಲಿ ಅವು ನಿಜವಾಗಿಯೂ ಏನೆಂದು ಸ್ಪಷ್ಟವಾಗಿದೆ. ಹೇಗಿದ್ದರೂ, ಚಿಲಿಯ ಜನರು ಪಿನೋಶೆಯು ಬಿಟ್ಟುಹೋದುದಕ್ಕಿಂತ ಉತ್ತಮ ಸರಕಾರ ಹೊಂದಿದ್ದಾರೆ. ಆದರೆ, ಈ ಫಲಿತಾಂಶಕ್ಕೆ ಚಿಲಿಯ ಪ್ರಭುತ್ವ ಹೇಗೆ ಪ್ರತಿಸ್ಪಂದಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅದು ಈ ಕ್ರಾಂತಿಕಾರಕ ಸಂವಿಧಾನಕ್ಕೆ ಅಂಟಿಕೊಂಡು ಅದರ ಅನುಷ್ಠಾನಕ್ಕೆ ಹೇಗಾದರೂ ಪ್ರಯತ್ನಿಸುವುದೇ? ಅಥವಾ ಈ ಸೋಲಿನ ಹಿನ್ನೆಲೆಯಲ್ಲಿ ರಾಜಿ ಮಾಡಿಕೊಳ್ಳುವುದೆ?

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಇಂಟರ್ನ್ಯಾಷನಲ್ ಫೋಕಸ್: ಇರಾಕ್ ಬೀದಿಗಳಲ್ಲಿ ಸದ್ರ್‌ವಾದಿ ಚಳವಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...