ಸರ್ಕಾರಿ ಶಾಲೆಗಳ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಬಿಜೆಪಿ ಸರ್ಕಾರದ ಕ್ರಮಕ್ಕೆ ಸ್ವಪಕ್ಷೀಯರೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೊಂದು ಆತುರದ ನಿರ್ಧಾರವಾಗಿದ್ದು, ಶಾಲೆಗಳಿಗೆ ಕೇಸರಿ ಬಣ್ಣ ಅವಶ್ಯಕತೆ ಇರಲಿಲ್ಲ ಎಂದು ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರದ ಈ ಯೋಜನೆಗೆ ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೇಸರಿ ಬಣ್ಣವು ತ್ಯಾಗದ ಪ್ರತೀಕವಾಗಿದ್ದು ಅದನ್ನು ಎಲ್ಲರೂ ಗೌರವಿಸುತ್ತಾರೆ. ಹೀಗಿರುವಾಗ ಕೇಸರಿ ಬಣ್ಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ” ಎಂದಿದ್ದಾರೆ.
ವಿವೇಕ ಅಲ್ಲ ಇದು, ಅವಿವೇಕದ ಪರಮಾವಧಿ: ಪ್ರಿಯಾಂಕ್ ಖರ್ಗೆ
ಶಾಲೆಗಳಿಗೆ ವಿವೇಕ ಯೋಜನೆ ಹೆಸರಿನಲ್ಲಿ ಕೇಸರಿ ಬಣ್ಣ ಬಳಿಯುವುದು ಅವಿವೇಕದ ಪರಮಾವಧಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇವತ್ತು ಬಂದಿರೋದು ಬಣ್ಣದ ಪ್ರಶ್ನೆ ಅಲ್ಲ. ಸರ್ಕಾರಿ ಶಾಲೆಗಳಿಗೆ ಎಷ್ಟು ಮೂಲಸೌಕರ್ಯ ಒದಗಿಸಿದ್ದಾರೆ ಎಂಬುದನ್ನು ಹೇಳಬೇಕು. ಬಿಜೆಪಿ ಸರ್ಕಾರ ರಾಜಕೀಯದ ಬದಲು ಯಾಕೆ ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಆಸಕ್ತಿ ತೋರಿಸುತ್ತಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರದ ಆದ್ಯತೆ ನೋಡಿದರೆ ಮಕ್ಕಳ ಭವಿಷ್ಯ ನಿರ್ನಾಮ ಮಾಡಲು ಹೊರಟಂತಿದೆ. ಸ್ವಾಮಿ ವಿವೇಕಾನಂದರ ಯೋಚನಾ ದೃಷ್ಟಿ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ. ಕೇಸರಿಯೇ ಯಾಕೆ ಬೇಕು? ಬೇಕಿದ್ದರೆ ತ್ರಿವರ್ಣ ಬಣ್ಣ ಮಾಡಿ. ಇದು ಬಣ್ಣದ ಪ್ರಶ್ನೆ ಅಲ್ಲ, ಮಕ್ಕಳ ಭವಿಷ್ಯದ ಪ್ರಶ್ನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ 8000 ಶಾಲಾ ಕೊಠಡಿಗಳೀಗೆ ವಿವೇಕ ಎಂದು ಹೆಸರಿಡಲಾಗಿದ್ದು, ಆ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಹೊಸ ವಿವಾದ: ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದಕ್ಕೆ ವಿರೋಧ