Homeಕರ್ನಾಟಕಅಂಬೇಡ್ಕರ್‌ ಹಾದಿಯಲ್ಲಿ ದಲಿತರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮನುಸ್ಮೃತಿ ದಹನ

ಅಂಬೇಡ್ಕರ್‌ ಹಾದಿಯಲ್ಲಿ ದಲಿತರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮನುಸ್ಮೃತಿ ದಹನ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮನುಸ್ಮೃತಿಯನ್ನು ದಹಿಸಲಾಗಿದ್ದು, ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ

- Advertisement -
- Advertisement -

ಅಸಮಾನತೆಯನ್ನು ಬೋಧಿಸುವ ಮನುಸ್ಮೃತಿಯನ್ನು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ನೇತೃತ್ವದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಹಿಸಲಾಗಿದೆ. ಜೊತೆಗೆ ಭಾರತ ಸಂವಿಧಾನದ ಆಶಯಗಳನ್ನು ಜನರಲ್ಲಿ ಬಿತ್ತುವ ಪ್ರಯತ್ನವನ್ನು ಮಾಡಲಾಗಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಮನುಸ್ಮೃತಿಯನ್ನು ಸುಟ್ಟ ದಿನದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಲಿತರು ಮನುಸ್ಮೃತಿಯನ್ನು ದಹಿಸಿ, ಸಂವಿಧಾನದ ಸಂದೇಶವನ್ನು ಪಸರಿಸಿದ್ದಾರೆ. ಜಾತಿ ವ್ಯವಸ್ಥೆ, ಲಿಂಗ ತಾರತಮ್ಯಯನ್ನು ಪ್ರತಿಪಾದಿಸುವ ಅನ್ಯಾಯಕರ ಮತ್ತು ಅಮಾನವೀಯವಾದ ದಂಡಸಂಹಿತೆಯಾದ ಮನುಸ್ಮೃತಿಯನ್ನು 25 ಡಿಸೆಂಬರ್ 1927ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಮಹದ್ ಸಮ್ಮೇಳನದಲ್ಲಿ ಬಹಿರಂಗವಾಗಿ ಸುಟ್ಟು ಹಾಕಿದ್ದರು.

“ನಮ್ಮಲ್ಲಿರುವ ಕೊರತೆಗಳನ್ನು ನಿವಾರಿಸಿಕೊಂಡು ಮನುಷ್ಯನು ನಿರ್ಮಿಸಿದ ಎಲ್ಲ ಬಗೆಯ ಅಡೆತಡೆಗಳನ್ನು ನಿವಾರಿಸಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಟ್ಟು ಸಾಮಾಜಿಕ ಕ್ರಾಂತಿಯನ್ನುಂಟುಮಾಡುವುದೇ ನಮ್ಮ ಸತ್ಯಾಗ್ರಹದ ಉದ್ದೇಶ” ಎಂದು ಅವರು ಎಚ್ಚರಿಸಿದ್ದರು. ಹೀಗಾಗಿ ಡಿಸೆಂಬರ್‌ 25 ದಲಿತ, ದಮನಿತ, ಶೂದ್ರ ಸಮುದಾಯಗಳ ಪಾಲಿಗೆ ಮಹತ್ವದ್ದಾಗಿದೆ.

“ಆರ್‌ಎಸ್‌ಎಸ್‌- ಬಿಜೆಪಿಯು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಯೊಂದು ಚಟುವಟಿಕೆಗಳ ಹಿಂದೆಯೂ ಸಂವಿಧಾನವನ್ನು ಬುಡಮೇಲು ಮಾಡಿ, ಆ ಸ್ಥಾನದಲ್ಲಿ ‘ಮನುಸ್ಮೃತಿ’ಯನ್ನು ಮರುಸ್ಥಾಪನೆ ಮಾಡುವ ಮಹಾನ್ ಸಂಚು, ಪಿತೂರಿ ಇದೆ. ಹಾಗಾಗಿಯೇ ಅಂದು ಅಂಬೇಡ್‌ರವರು ಈ ದಲಿತ- ಹಿಂದುಳಿದ ಜಾತಿಗಳ ವಿರೋಧಿ, ಮಹಿಳಾ ವಿರೋಧಿ ಹಾಗೂ ಜೀವ ವಿರೋಧಿ ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು. ಮತ್ತೆ ಸುಡಬೇಕಾದ ಪರಿಸ್ಥಿತಿಯನ್ನು ಈ ಆರ್‌ಎಸ್‌ಎಸ್ ಬಿಜೆಪಿಯು ನಮ್ಮ ಮುಂದೆ ತಂದೊಡ್ಡಿದೆ. ಹೀಗಾಗಿ ನಮ್ಮ ಸಂವಿಧಾನವನ್ನು ಎದೆಗಪ್ಪಿಕೊಂಡು ನಮ್ಮ ಸಂವಿಧಾನಕ್ಕೆ ಅಡ್ಡಗಾಲಾಗಿರುವ ಈ ಮನುಸ್ಮೃತಿಯನ್ನು ಸುಡಲಾಗುತ್ತಿದೆ” ಎಂದು ದಸಂಸ ಐಕ್ಯತಾ ಸಮಿತಿ ತಿಳಿಸಿದೆ.

ರಾಜಧಾನಿ ಬೆಂಗಳೂರು, ಬೀದರ್‌, ಯಾದಗಿರಿ, ಕೋಲಾರ, ಗುಲ್ಬರ್ಗ, ರಾಯಚೂರು, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮನುಸ್ಮೃತಿ ಸುಡಲಾಗಿದೆ.

ಹಿರಿಯ ಹೋರಾಟಗಾರರಾದ ಎನ್.ವೆಂಕಟೇಶ್, ವಿ.ನಾಗರಾಜ್‌, ಮಾವಳ್ಳಿ ಶಂಕರ್‌, ಕರಿಯಪ್ಪ ಗುಡಿಮನಿ, ದು.ಸರಸ್ವತಿ, ಶ್ರೀಪಾದ್ ಭಟ್ ಸೇರಿದಂತೆ ವಿವಿಧ ಮುಖಂಡರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀಪಾದ್ ಭಟ್‌ ಮಾತನಾಡಿ, “ಮನುಸ್ಮೃತಿ ಎಂಬುದು ನಮ್ಮ ವ್ಯವಸ್ಥೆಯೊಳಗೆ, ಜನರ ಮನಸ್ಸಿನೊಳಗೆ ಬೆರೆತಿದೆ. ಅದನ್ನು ಹೋಗಲಾಡಿಸುವ ಅಗತ್ಯವಿದೆ. ಮನುಸ್ಮೃತಿಯು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದೊಳಗೆ ಹಬ್ಬುತ್ತಿದೆ. ನ್ಯಾಯಮೂರ್ತಿಯೊಬ್ಬರು ಮನುಸ್ಮೃತಿಯನ್ನು ಉದಾಹರಿಸಿ ಸಮರ್ಥಿಸುವುದು ವಿಷಾದನೀಯ. ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂಬುದು ನಮ್ಮ ಮುಂದಿರುವ ಸವಾಲು” ಎಂದು ಎಚ್ಚರಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮನುಸ್ಮೃತಿಯನ್ನು ದಹಿಸಲಾಯಿತು.

“ಆರ್‌ಎಸ್‌ಎಸ್‌ ಬಲವಾಗುತ್ತಿದೆ. ಅದರ ಸಿದ್ಧಾಂತವೇ ಮನುಸ್ಮೃತಿಯಾಗಿದೆ. ವಿ.ಡಿ.ಸಾವರ್ಕರ್‌ ಅದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆರ್‌ಎಸ್‌ಎಸ್‌ ಅನ್ನು ಸೋಲುವುದು ಮುಖ್ಯವಾಗಿದೆ. ಅಂಬೇಡ್ಕರ್‌ ಅವರ ವಿಚಾರಗಳನ್ನು ತಿರುಚಿ ಕೋಮು ರಾಜಕಾರಣ ಮಾಡಲು ಆರ್‌ಎಸ್‌ಎಸ್ ಯತ್ನಿಸುತ್ತದೆ. ಮನುಸ್ಮೃತಿಯನ್ನು ಅಂಬೇಡ್ಕರ್‌ ಸುಟ್ಟಿರುವ ಕುರಿತು ಆರ್‌ಎಸ್‌ಎಸ್‌ ನಿಲುವೇನು ಎಂದು ನಾವು ಪ್ರಶ್ನಿಸಬೇಕು” ಎಂದರು.

ತುಮಕೂರು: ಅಘೋಷಿತವಾಗಿ ಮನುವಾದ ಜಾರಿಯಲ್ಲಿದೆ- ದೊರೈರಾಜ್

ತುಮಕೂರಿನ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡ ದಲಿತ ಸಂಘಟನೆಗಳು ಮನುಸ್ಮೃತಿಯನ್ನು ಸುಟ್ಟು ದೇಶದ ಅಲಿಖಿತ ಸಂವಿಧಾನವನ್ನು ಬಹಿಷ್ಕರಿಸುವಂತೆ ಕರೆ ನೀಡಿದವು.

ಚಾಲನಾ ಸಮಿತಿಯ ಪರವಾಗಿ ಮಾತನಾಡಿದ ಕೆ.ದೊರೈರಾಜ್, “ಇಂದು ದೇಶದಲ್ಲಿ ಅಘೋಷಿತವಾಗಿ ಜಾರಿಯಲ್ಲಿರುವ ಮನು ಕಾನೂನು ಜಾತಿ ವ್ಯವಸ್ಥೆಯನ್ನು, ಮಹಿಳಾ ಶೋಷಣೆಯನ್ನು ಪ್ರತಿಪಾದಿಸುತ್ತಿದೆ. ಇದಕ್ಕೆ ವಿರುದ್ದವಾಗಿ ಭಾರತ ಸಂವಿಧಾನವು ಸಮಾನತೆ, ಭ್ರಾತೃತ್ವ ಪ್ರತಿಪಾದಿಸುತ್ತದೆ. ಆದರೆ ಇಂದು ಆಡಳಿತದಲ್ಲಿರುವ ಸರ್ಕಾರಗಳು ಅಂಬೇಡ್ಕರ್‌ರವರು ರಚಿಸಿರುವ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಮಾನವ ವಿರೋಧಿ ಮನುಸ್ಮೃತಿಯನ್ನು ಧಿಕ್ಕರಿಸಿ ಸಂವಿಧಾನವನ್ನು ಎದೆಗಪ್ಪಿಕೊಳ್ಳುವುದು ಇಂದು ಮುಖ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ತುಮಕೂರಿನಲ್ಲಿ ಮನುಸ್ಮೃತಿಯನ್ನು ಸುಡಲಾಯಿತು.

ದಸಂಸದ ಹಿರಿಯ ಮುಖಂಡರಾದ ನರಸಿಂಹಯ್ಯ ಮಾತನಾಡಿ, “ದೇಶದಲ್ಲಿ 8 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ, ಮನುವಾದವನ್ನು ಚಾಚು ತಪ್ಪದೇ ಅನುಷ್ಠಾನಗೊಳಿಸುತ್ತಿದೆ. 1950ರಲ್ಲಿ ಜಾರಿಯಾದ ಸಂವಿಧಾನದ ಆಶಯವನ್ನು ಬುಡಮೇಲು ಮಾಡಲು ಮನುಸ್ಮೃತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಸಾಮಾಜಿಕ ಸಮಾನತೆಯ ಆಶಯಗಳನ್ನು ಅಂಬೇಡ್ಕರ್ ಪ್ರತಿಪಾದಿಸಿದರು. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅಂಬೇಡ್ಕರರ ಆಶಯಗಳು ಜಾರಿಯಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘಟನೆಗಳ ಮುಖಂಡರಾದ ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, ದಸಂಸದ ಹಿರಿಯರಾದ ಜೈಮೂರ್ತಿ, ಚಂದ್ರಯ್ಯ, ರಾಜಣ್ಣ, ಪಿ.ಎನ್.ರಾಮಯ್ಯ, ದಸಂಸ ಜಿಲ್ಲಾ ಸಂಚಾಲಕರಾದ ಕೊರಟಗೆರೆ ರಾಮಾಂಜಿನಯ್ಯ, ತುರುವೇಕರೆ ಸಂಚಾಲಕರಾದ ಹೆಚ್ಕೆ ಜಗದೀಶ್, ಮಧುಗಿರಿ ಸಂಚಾಲಕರಾದ ರಂಗನಾಥ್, ಪೋಸ್ಟ್ ಮರಿಯಪ್ಪ, ತುಮಕೂರು ಗ್ರಾಮಾಂತರದ ಶಿವರಾಜು, ಅಂಜಿನ್ ಮೂರ್ತಿ, ಕೋರಾ ರಾಜಣ್ಣ, ಮದಕರಿ ಸಂಘದ ರಂಗನಾಥ್, ಟಿ.ಸಿ.ರಾಮಯ್ಯ, ತುಮಕೂರು ಕೊಳಗೇರಿ ಸಮಿತಿಯ ದೊಡ್ಡರಂಗಯ್ಯ, ಅರುಣ್, ತಿರುಮಲಯ್ಯ, ತೇಜಸ್ಕುಮಾರ್, ಪುಟ್ಟಾಂಜನೇಯ್ಯ, ಧನಂಜಯ್, ಮಾರುತಿ, ಅಮರ್ ಮೊದಲಾದವರು ಪಾಲ್ಗೊಂಡಿದ್ದರು.

ಮೈಸೂರು: ಜಾತಿಗಳನ್ನು ವಿಂಗಡಿಸಿ ಶೋಷಿಸಲಾಗುತ್ತಿದೆ- ದಸಂಸ

ಮೈಸೂರಿನ ಪುರಭವನದಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಎದುರು ‘ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ- ಮನುಸ್ಮೃತಿಗೆ ಕೊಳ್ಳಿ ಇಡೋಣ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕಲಾಯಿತು.

“ಈ ದೇಶದ ಬಹುಸಂಖ್ಯಾತ ದುಡಿಯುವ ವರ್ಗಗಳನ್ನು ಶಿಕ್ಷಣ, ಸಮಾನತೆ, ಸ್ವಾತಂತ್ಯ್ರ, ಆರ್ಥಿಕ ಸಾವಲಂಬನೆಗಳಿಂದ ವಂಚಿಸಲಾಗುತ್ತಿದೆ. ಕಸುಬಿನ ಆಧಾರದಲ್ಲಿ ಜಾತಿಗಳನ್ನಾಗಿ ವಿಂಗಡಿಸಿ ಶೋಷಿಸುತ್ತಲೇ ಬರಲಾಗಿದೆ. ಇದಕ್ಕೆ ಪರೋಕ್ಷವಾಗಿ ಕಾರಣವಾಗಿರುವ ಮನಸ್ಮೃತಿಯನ್ನು ಸುಟ್ಟು ಭಸ್ಮ ಮಾಡಲಾಗಿದೆ” ಎಂದು ದಸಂಸ ಹೋರಾಟಗಾರರು ಹೇಳಿದರು.

ಮೈಸೂರಿನಲ್ಲಿ ಮನುಸ್ಮೃತಿಯನ್ನು ದಹಿಸಲಾಯಿತು.

“ಜಾತಿ ಮತ್ತು ಅಸ್ಪ್ರಶ್ಯತೆ ಅಸಮಾನತೆಗೆ ಮೂಲ ಕಾರಣ ಎಂಬುವುದನ್ನು ಆಳವಾಗಿ, ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ ಅಂಬೇಡ್ಕರ್‌ ಅವರು, ಅಂದೇ ಮನುಸ್ಮೃತಿಗೆ ಬೆಂಕಿ ಇಟ್ಟಿದ್ದರು. ಈ ಚಳವಳಿಯನ್ನು ಮುಂದುವರಿಸುವ ಸಮಾಜದಲ್ಲಿ ಸಮಾನತೆಯ ಕಡೆ ಹೋಗುವುದಕ್ಕೆ ಹೆಜ್ಜೆ ಹಾಕಿದ್ದೇವೆ” ಎಂದರು.

ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಆಲಗೋಡು ಶಿವಕುಮಾರ್‌, ಚುಂಚನಳ್ಳಿ ಮಲ್ಲೇಶ್‌, ಶಂಭುಲಿಂಗಸ್ವಾಮಿ, ಮಲ್ಲಹಳ್ಳಿ ನಾರಾಯಣ್, ರತ್ನಪುರಿ ಪುಟ್ಟಸ್ವಾಮಿ, ಬಿಡಿ ಶಿವಬುದ್ದಿ, ಕಾರ್ಯ ಬಸವಣ್ಣ, ಆರ್.ಎಸ್ ದೊಡ್ಡಣ್ಣ, ಜನಮನ ಗೋಪಾಲ್, ರತಿ ರಾವ್, ಕಲ್ಲಳ್ಳಿ ಕುಮಾರ್, ರಾಜು ಚಿಕ್ಕ ಹುಣಸೂರು, ರಾಮಕೃಷ್ಣ ಅತ್ತಿಕುಪ್ಪೆ ಸೇರಿ ನೂರಾರು ದಲಿತ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.

ಉಡುಪಿ: ಶೇ. 50ರಷ್ಟು ಮನುಸ್ಮೃತಿ ಜಾರಿಗೊಂಡಿದೆ- ಸುಂದರ್‌ ಮಾಸ್ತರ್‌

ಕೋಮು ಕಲಹ ಹಾಗೂ ಕೋಮು ಸಾಮರಸ್ಯ ಎರಡಕ್ಕೂ ಸಾಕ್ಷಿಯಾಗಿರುವ ಉಡುಪಿಯಲ್ಲಿ ದಲಿತ ಮುಖಂಡರು ಮನುಸ್ಮೃತಿ ದಹಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಸುಂದರ್ ಮಾಸ್ತರ್, ಕಳೆದ ಏಳೆಂಟು ವರ್ಷಗಳಲ್ಲಿ ಶೇ.50ರಷ್ಟು ಭಾಗ ಮನುಸ್ಮೃತಿ ಜಾರಿಗೊಂಡಿದೆ. ಇದು ಪೂರ್ತಿಯಾಗಿ ಜಾರಿಗೊಂಡರೆ, ನಮ್ಮ ಬದುಕನ್ನು ನಾವು ಕಳೆದುಕೊಳ್ಳುತ್ತೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ದಲಿತರೆಲ್ಲ ಒಗ್ಗೂಡಿ ಇನ್ನಷ್ಟು ತೀವ್ರತರವಾದ ಹೋರಾಟಗಳನ್ನು ಮಾಡಬೇಕು” ಎಂದು ಆಶಿಸಿದರು.

ಉಡುಪಿಯಲ್ಲಿ ಮನುಸ್ಮೃತಿ ದಹನ ಕಾರ್ಯಕ್ರಮ ನಡೆಯಿತು.

“ದೇಶದಲ್ಲಿ ದಲಿತರ ಮೇಲೆ ಸಾವಿರಾರು ದೌರ್ಜನ್ಯ ಪ್ರಕರಣಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಬಾಯಿ ಬಿಡುತ್ತಿಲ್ಲ, ಒಂದೇ ಒಂದು ಖಂಡನೆ ಅವರ ಬಾಯಿಂದ ಬರುತ್ತಿಲ್ಲ. ಅವರು ಸಂಪೂರ್ಣವಾಗಿ ಆರ್‌.ಎಸ್.ಎಸ್.ಗೆ ಒಗ್ಗಿಕೊಂಡಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಸಂಘಪರಿವಾರ ಅಂಬೇಡ್ಕಲ್‌ ಬರೆದ ಸಂವಿಧಾನವನ್ನು ಯಾವತ್ತೂ ಒಪ್ಪದೆ, ಮನುಸ್ಮೃತಿಯ ಆಧಾರದಲ್ಲಿ ದಲಿತರನ್ನು ಧಮನಿಸುವ ಕೆಲಸವನ್ನು ಈಗಲೂ ಮಾಡುತ್ತಿದೆ ಎಂದು ಆರೋಪಿಸಿದರು.

ದಲಿತ ಮುಖಂಡರಾದ ಮಂಜುನಾಥ್ ಗಿಳಿಯಾರು, ಶ್ಯಾಮರಾಜ್ ಬಿರ್ತಿ, ಶೇಖರ್ ಹೆಜಮಾಡಿ, ವಿಶ್ವನಾಥ ಬೆಳ್ಳಂಪಳ್ಳಿ, ವಾಸುದೇವ ಮುದ್ದೂರು, ಸಂಜೀವ ಬಳ್ಕೂರು, ಹರೀಶ್ ಮಲ್ಪೆ, ಶ್ಯಾಮಸುಂದರ ತೆಕ್ಕಟ್ಟೆ, ಕುಮಾರ್‌ ಕೋಟ‍, ದಲಿತ ಪರ ಹೋರಾಟಗಾರರಾದ ಬಾಲಕೃಷ್ಣ ಶೆಟ್ಟಿ, ಪ್ರೊ.ಫಣಿರಾಜ್‌, ಶ್ರೀರಾಮ ದಿವಾಣ, ಯಾಸಿನ್ ಕೋಡಿಬೆಂಗ್ರೆ ಹಾಜರಿದ್ದರು.

ಕೋಲಾರದಲ್ಲಿ ಮನುಸ್ಮೃತಿ ದಹನ

ಕೋಲಾರ ನಗರದ ನಚಿಕೇತ ನಿಲಯದ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಎದುರು ಮನುಸ್ಮೃತಿಯನ್ನು ದಹಿಸಲಾಯಿತು.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮಖಂಡರಾದ ಅಣ್ಣಯ್ಯ, ಜಿಗಣೆ ಶಂಕರ್, ಸ್ಪೆಕ್ಸ್ ನಾರಾಯಣಸ್ವಾಮಿ ಮಾತನಾಡಿದರು. ದಸಂಸ ಜಿಲ್ಲಾ ಸಂಚಾಲಕರಾದ ಹಾರೋಹಳ್ಳಿ ರವಿ, ಮೆಕಾನಿಕ್ ಶ್ರೀನಿವಾಸ, ಸೀಪೂರು ದೇವರಾಜ್, ಹಿರೇಕರಪನಹಳ್ಳಿ ರಾಮಪ್ಪ, ಕಲಾವಿದರಾದ ಹಿರೇಕರಪನಹಳ್ಳಿ ಯಲ್ಲಪ್ಪ, ಬಸಪ್ಪ, ಮಂಜುನಾಥ, ಮಾರ್ಜೇನಹಳ್ಳಿ ಮುನಿಸ್ವಾಮಿ, ದೊಡ್ಡಮಲೆ ರವಿ, ಬೀರಮಾನಹಳ್ಳಿ ಆ೦ಜಿನಪ್ಪ, ಅಂಬೇಡ್ಕರ್ ನಗರ ಮುನಿಯಪ್ಪ, ವಿ.ಎಂ. ಸಂಘರ್ಷ, ಫೋಟೋಗ್ರಾಫರ್ ಸುಬ್ರಮಣಿ ಮೊದಲಾದವರು ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೀಸಲಾತಿ ಸವಲತ್ತು ಪಡೆದು ಸರಕಾರಿ ಹುದ್ದೆ, ವೇಗದ ಬಡ್ತಿ ಪಡೆದು ಮುಂದುವರಿದಿರುವ ಹೆಚ್ಚಿನ ಪಾಲು ದಲಿತರು ಬ್ರಾಹ್ಮಣ್ಯಕ್ಕೆ ಅಡಿಯಾಳಾಗಿದ್ದಾರೆ. ಇವರಿಗೆ ದೊರೆತಿರುವ ಈ ಸವಲತ್ತು ಉಳಿದ ಬಡದಲಿತರಿಗೆ ದೊರಕಬೇಕಾದರೆ, ದಲಿತರೊಳಗೆ ಹಣಕಾಸು ಮಟ್ಟದ ನೆಲೆಗಟ್ಟಿನಲ್ಲಿ ಒಳಮೀಸಲಾತಿ ಕೊಡಬೇಕಿದೆ. ಮೀಸಲಾತಿ ಹಂಚಿಕೆ ಸಾಮಾಜಿಕ, ಕಲಿಕೆಯಲ್ಲಿ ಹಿಂದುಳಿದಿರುವಿಕೆಯೊಂದಿಗೆ ಈ ಹೊತ್ತಿಗೆ ಹಣಕಾಸು ಮುಂದುವರಿಕೆಯನ್ನು ನೆಲೆಗಟ್ಟಾಗಿಸಿಕೊಳ್ಳಬೇಕಿದೆ.

LEAVE A REPLY

Please enter your comment!
Please enter your name here

- Advertisment -

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...