ಯಾದಗಿರಿ: ಅಗತ್ಯ ವಸ್ತುಗಳನ್ನು ಕಾನೂನು ಬಾಹಿರವಾಗಿ ಸಾಗಣೆ ಮತ್ತು ಖರೀದಿ ಮಾಡಿದ ಆರೋಪದಲ್ಲಿ ಸಿಲುಕಿದ್ದ ಚಿತ್ತಾಪುರದ ಬಿಜೆಪಿ ಮುಖಂಡ ಸೇರಿದಂತೆ ಮೂವರ ಮೇಲೆ ಆರೋಪ ಸಾಬೀತಾಗಿದ್ದು, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಯಾದಗಿರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಬಿಜೆಪಿ ಮುಖಂಡ ಮಣಿಕಂಠ ನರೇಂದ್ರ ರಾಠೋಡ್, ಬಾಪುಗೌಡ ಬಸವರಾಜ ಪಾಟೀಲ್, ರಾಜುಗೌಡ ರಾಚಣ್ಣ ಸಾಹುಕಾರ್ ಎಂಬವರನ್ನು ಅಪರಾಧಿಗಳೆಂದು ಗುರುತಿಸಿರುವ ಜೆಎಂಸಿ ಕೋರ್ಟ್ ಶುಕ್ರವಾರ ತೀರ್ಪು ನೀಡಿದ್ದು, ಒಂದು ವರ್ಷ ಸಾದಾ ಜೈಲು ಶಿಕ್ಷೆ, ತಲಾ 10 ಸಾವಿರ ರೂ ದಂಡ ವಿಧಿಸಿದೆ.
“ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಎರಡು ತಿಂಗಳ ಸೆರೆ ವಾಸ ವಿಧಿಸಲಾಗುವುದು” ಎಂದು ನ್ಯಾಯಾಧೀಶರಾದ ರವೀಂದ್ರ ಹೊನ್ನಾಳಿಯವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ?
ಹಾಲಿನ ಪ್ಯಾಕೇಟ್ಗಳ ಮೇಲೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮುದ್ರೆ ಇದ್ದು, ಅಂಗನವಾಡಿಗಳಿಗೆ ವಿತರಿಸಬೇಕಿದ್ದ ಹಾಲಿನ ಪ್ಯಾಕೇಟ್ಗಳನ್ನು ಆಟೋದಲ್ಲಿ ಆರೋಪಿ ಬಾಪುಗೌಡ ಬಸವರಾಜ ಪಾಟೀಲ್ ಸಾಗಿಸುತ್ತಿದ್ದನು. ನಂದಿನಿ ಮಿಲ್ಕ್ ಪೌಡರ್ ಇರುವ 500 ಗ್ರಾಂನ ಒಟ್ಟು 340 ಪ್ಯಾಕೇಟ್ಗಳನ್ನು ಸಾಗಣೆ ಮಾಡುತ್ತಿದ್ದಾಗ ರೈಡ್ ಮಾಡಿದ್ದ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಕುರಿತಂತೆ ಯಾದಗಿರಿ ಪೊಲೀಸ್ ಠಾಣೆಯಲ್ಲಿ 2015ರಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ಮಾಡಿದಾಗ ಬಾಪುಗೌಡನು, ಮಣಿಕಂಠ ರಾಠೋಡ್ ಅವರಿಗೆ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಕೋರ್ಟ್ನಲ್ಲಿ ತಪ್ಪೊಪ್ಪಿಕೊಂಡಿದ್ದನು. ಆಟೋವನ್ನು ವಶಪಡಿಸಿಕೊಂಡಿದ್ದ ಪೊಲೀಸರು, ಸಾಕ್ಷಿ ಸಮೇತವಾಗಿ ದೋಷರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಗೆ ಶಿಕ್ಷೆಯಾಗಲು ಅಗತ್ಯವಿದ್ದ ಎಲ್ಲ ದಾಖಲಾತಿಗಳನ್ನು ಒದಗಿಸಿದ್ದರು. ಸರಕಾರದ ಪರವಾಗಿ ಹಿರಿಯ ಅಭಿಯೋಜಕ ಬಿ.ರಂಗಯ್ಯ ನ್ಯಾಯಾಲಯದಲ್ಲಿ ವಾದಿಸಿದ್ದರು.
ಅವಶ್ಯಕ ವಸ್ತುಗಳ ಕಾಯಿದೆ 1955ರ ಸೆಕ್ಷನ್ 3 ಮತ್ತು 7ರ ಅಡಿಯಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೂ ಶಿಕ್ಷೆಯಾಗಿದೆ.