ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ನಡೆಯುವಂತಹ ದೌರ್ಜನ್ಯದ ಘಟನೆಯೊಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಹಲವು ದುಷ್ಕರ್ಮಿಗಳು ಸೇರಿಕೊಂಡು ದಲಿತ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ, ಅವರನ್ನು ಮರಕ್ಕೆ ಕಟ್ಟಿಹಾಕಿ, ಅವಾಚ್ಯವಾಗಿ ನಿಂದಿಸುತ್ತಾ ಚಿತ್ರಹಿಂಸೆ ನೀಡಲಾಗಿದೆ.
ಘಟನೆಯು ಶುಕ್ರವಾರ ಮುಂಜಾನೆ ಅರೇಹಳ್ಳಿ ಹೋಬಳಿಯ ಬೆಳ್ಳಾವರ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ಯುವಕನನ್ನು ಕಿತ್ತಾವರ ಗ್ರಾಮದ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಬೇಲೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕನ ಮೇಲೆ ನಡೆದ ಅಮಾನವೀಯ ದೌರ್ಜನ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಂಜುನಾಥ್ ಅವರು ಕಳ್ಳತನ ನಡೆಸಿದ್ದಾರೆ ಎಂದು ಆರೋಪಿಸಿದ್ದ ದುಷ್ಕರ್ಮಿಗಳು ಅವರನ್ನು ಮರಕ್ಕೆ ನೇತುಹಾಕಿ, ಅವಾಚ್ಯವಾಗಿ ನಿಂದಿಸುತ್ತಾ ಥಳಿಸಿದ್ದಾರೆ. ಸಂತ್ರಸ್ತ ಯುವಕನ ಅವರ ಸೊಂಟಕ್ಕೆ ಮತ್ತು ಕಾಲಿನ ಹೆಬ್ಬೆರಳಿಗೆ ಹಗ್ಗ ಕಟ್ಟಿ ಚಿತ್ರಹಿಂಸೆ ನೀಡಿದ್ದಲ್ಲದೆ, ನಾಯಿಯನ್ನು ಛೂ ಬಿಟ್ಟು ದಾಳಿ ಮಾಡಿಸಲಾಗಿದೆ ಎಂದು ಅರೋಪಿಸಲಾಗಿದೆ.
ದುಷ್ಕರ್ಮಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಅರೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕೆತ್ಸೆಗೆ ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ನಾನುಗೌರಿ.ಕಾಂಗೆ ಹೇಳಿವೆ.
ಬೆಲ್ಳಾವರ ಗ್ರಾಮದ ಕೆಪಿ ರಾಘವೇಂದ್ರ (40), ಉಮೇಶ (36), ಮಲ್ಲಿಗನೂರು ಕೀರ್ತಿ (31) ಧೋಲನ ಮನೆ ಶಾಮ್ರುಲ್ (43), ಕಿತ್ತಾವರ ಗ್ರಾಮದ ನವೀನ್ ರಾಜ್ (36) ಎಂಬವರನ್ನು ಬಂಧಿಸಲಾಗಿದೆ ಎಂದು ನಾನುಗೌರಿ.ಕಾಂಗೆ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಹಿತಿಗಾಗಿ ಅರೆಹಳ್ಳಿ ಪೊಲೀಸ್ ಠಾಣೆಯ ಎಸ್ಐ ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಿತ್ತಾಗಿದ್ದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಘಟನೆ ಬಗ್ಗೆ ಮಾಹಿತಿಗೆ ಬೇಲೂರು ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ ಅವರನ್ನು ಕೂಡಾ ನಾನುಗೌರಿ.ಕಾಂ ಸಂಪರ್ಕಿಸಿದೆ. ಆದರೆ ಕರೆ ಸ್ವೀಕರಿಸಿದ ಅವರು, “ನಾನು ಎರಡು ದಿನಗಳಿಂದ ಬೆಂಗಳೂರಿನಲ್ಲಿ ಇದ್ದು, ಈ ಬಗ್ಗೆ ಯಾವುದೆ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ.
ವಿಡಿಯೊ ಎಚ್ಚರಿಕೆ: ಅಶ್ಲೀಲ ಬೈಗುಳ ಮತ್ತು ಹಿಂಸೆಯಿದೆ