ನಾಗಮಂಗಲ ತಾಲ್ಲೂಕಿನ ಕಚೇರಿಯ ಅವ್ಯವಸ್ಥೆಗಳ ಬಗ್ಗೆ ಬಂದ ದೂರುಗಳ ಆಧಾರದ ಮೇಲೆ ಪರಿಶೀಲನೆ ನಡೆಸಿ ತಹಸೀಲ್ದಾರ್’ರವರಿಗೆ ಲೋಪದೋಷಗಳ ಪಟ್ಟಿ ನೀಡಲು ಹೋದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (KRS) ಮುಖ್ಯಸ್ಥರಾದ ರವಿಕೃಷ್ಣಾ ರೆಡ್ಡಿ ಮತ್ತು ಮುಖಂಡರನ್ನು ಬಂಧಿಸಲಾಗಿದೆ.
“ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ “ಲಂಚಮುಕ್ತ ಕರ್ನಾಟಕ” ಅಭಿಯಾನದ ಭಾಗವಾಗಿ ಇಂದು ನಾಗಮಂಗಲ ತಾಲ್ಲೂಕಿನ ಕಚೇರಿಯ ಅವ್ಯವಸ್ಥೆಗಳ ಬಗ್ಗೆ ಮತ್ತು ನಮಗೆ ಬಂದ ದೂರುಗಳ ಬಗ್ಗೆ ಅಲ್ಲಿ ಪರಿಶೀಲಿಸಿ ತಹಸೀಲ್ದಾರ್’ರವರಿಗೆ ಲೋಪದೋಷಗಳ ಪಟ್ಟಿ ನೀಡಲು ಹೋದಾಗ, ಅಲ್ಲಿ ಅಸಭ್ಯವಾಗಿ ಮತ್ತು ಅಧಿಕಾರಿಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿರುವ ತಹಸೀಲ್ದಾರ್ ಕುಂಜಿ ಅಹ್ಮದ್ ನಮ್ಮ ಮೇಲೆ ಸುಳ್ಳು ಆರೋಪಗಳ ದೂರು ನೀಡಿ, ಸ್ಥಳೀಯ ಗೂಂಡಾಗಳನ್ನು ಪ್ರಚೋದಿಸಿ ಹಲ್ಲೆ ಮಾಡುವ ವಾತಾವರಣ ನಿರ್ಮಿಸಿ, ಸ್ಥಳೀಯ ಪೊಲೀಸರನ್ನು ಶಾಮೀಲು ಮಾಡಿಕೊಂಡು ದೂರು ದಾಖಲಿಸಿ ನಮ್ಮನ್ನು ಬಂಧಿಸುವಂತೆ ಮಾಡಿರುತ್ತಾರೆ” ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ
“ಇಡೀ ಘಟನೆ ನಮ್ಮ ಪಕ್ಷದ FB ಪುಟದಲ್ಲಿ ಲೈವ್ ದಾಖಲಾಗಿರುತ್ತದೆ. ಇದನ್ನು ಈ ಮೂಲಕ ಕಂದಾಯ ಸಚಿವ ಆರ್ ಆಶೋಕ್ ಅವರ ಗಮನಕ್ಕೆ ತರುತ್ತಿದ್ದೇವೆ. ನಿಮ್ಮ ಇಲಾಖೆಯ ಸದರಿ ಅಧಿಕಾರಿಯ ಒಟ್ಟಾರೆ ವರ್ತನೆ ಅನೇಕ ಸಂಶಯಗಳನ್ನು ಹುಟ್ಟಿಸುತ್ತಿದೆ ಮತ್ತು ಅವರು ಇಲ್ಲಿ ಒಂದು ಖಾಸಗಿ ಪಟಾಲಂ ಕಟ್ಟಿಕೊಂಡು ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಕ್ಕಿಬೇಳೆಯಿಂದ ಪಿಪಿಇ ಕಿಟ್ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ
ಈ ಕುರಿತು ಗಮನ ಹರಿಸಬೇಕು ಎಂದು ಮುಖ್ಯಮಂತ್ರಿಯವರಲ್ಲಿಯೂ ಮನವಿ ಮಾಡಿದ್ದಾರೆ.
ನಾಗಮಂಗಲದ ಪೊಲೀಸ್ ಠಾಣೆಯಲ್ಲಿ ಪಕ್ಷದ ನಾಯಕರು. ರಾಜ್ಯಾಧ್ಯಕ್ಷರೂ ಸೇರಿದಂತೆ ಹಲವರನ್ನು ಕಳೆದ ಎರಡು ಗಂಟೆಗಳಿಂದ ಠಾಣೆಯಲ್ಲಿ ಇರಿಸಿಕೊಂಡು ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಫೇಸ್ಬುಕ್ ಪುಟದಿಂದ ಘಟನೆಯ ಸಂಪೂರ್ಣ ವಿವರ ವೀಡಿಯೋ ದಾಖಲಾಗಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಪೊಲೀಸ್ ಠಾಣೆಯಿಂದಲೇ ಮಾತನಾಡಿದ ರವಿಕೃಷ್ಣಾ ರೆಡ್ಡಿ, “ಇಲ್ಲಿನ ಎಸ್ಐ ರವಿಶಂಕರ್ಗೆ ಯಾವುದೆ ನಿಯಮಗಳು ಗೊತ್ತಿಲ್ಲ. ಇನ್ನು ತಹಶೀಲ್ದಾರ್ ಕುಂಜಿ ಅಹ್ಮದ್ ಅವರು ಸ್ಥಳೀಯ ಗೂಂಡಾಗಳನ್ನು ಕರೆಸಿ ಪರಿಸ್ಥಿತಿಯನ್ನು ಉದ್ವಿಘ್ನಗೊಳಿಸಿದ್ದಾರೆ. ಅವರನ್ನೆ ಸಾರ್ವಜನಿಕರು ಎಂದು ಬಿಂಬಿಸಿ ಅವಾಂತರ ಸೃಷ್ಟಿಸಿದ್ದಾರೆ” ಎಂದು ಹೇಳಿದರು.
ಇಂದು ಸಂಜೆಯ ವೇಳೆಗೆ ತಮ್ಮನ್ನು ಮಂಡ್ಯ ಕಾರಾಗೃಹಕ್ಕೆ ಕಳುಹಿಸುತ್ತಾರೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಪೊಲೀಸರು ರವಿಕೃಷ್ಣಾರೆಡ್ಡಿ ಮೇಲೆ ಗೂಂಡಾಗಿರಿ ನಡೆಸಿದ್ದು, ತಮ್ಮ ಸೆಕ್ಸ್ ಹಗರಣ ಮುಚ್ಚಿಡುವುದಕ್ಕಾ!?