ರಾಜಸ್ಥಾನದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಸ್ಮಾನ್ ಘನಿ ಬಂಧನದ ಬಗ್ಗೆ ಮಾತನಾಡಲು ಸ್ವಪಕ್ಷದ ಅಲ್ಪಸಂಖ್ಯಾತ ಘಟಕದ ನಾಯಕರು ಮುಂದೆ ಬರುತ್ತಿಲ್ಲ. ‘ಪ್ರಜಾಪ್ರಭುತ್ವ’ ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ತಿಳಿದಿದ್ದರೂ ಈ ‘ಅನ್ಯಾಯದ ಬಂಧನ’ದ ಬಗ್ಗೆ ಬಿಜೆಪಿಯಲ್ಲಿರುವ ಅಲ್ಪಸಂಖ್ಯಾತ ಘಟಕದ ನಾಯಕರು ಮುಂದೆ ಬರುತ್ತಿಲ್ಲ, ಒಂದು ವೇಳೆ ಮಾತನಾಡಿದರೂ ಅವರು ತಮ್ಮ ಗುರತನ್ನು ಮರೆ ಮಾಚುವಂತೆ ಆಗ್ರಹಿಸುತ್ತಿದ್ದು, ಅವರಿಗೆ ಮಾತನಾಡಿದರೆ ಪಕ್ಷದಿಂದ ಉಚ್ಛಾಟನೆ ಮತ್ತು ಬಂಧನದ ಭೀತಿ ಕಾಡುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.
ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರನ್ನು ಅವಮಾನಿಸಬಾರದು. ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಕಾರಣಕ್ಕೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿ ಬಳಿಕ ಬಂಧಿಸಲಾಗಿತ್ತು. ‘ಶಾಂತಿ ಭಂಗ’ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಉಸ್ಮಾನ್ ಘನಿ ಅವರನ್ನು ಬಂಧಿಸಿದ್ದಾರೆ. ಇದು ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕಾರಣಕ್ಕೆ ನಡೆದ ಬಂಧನವಾಗಿದ್ದು, ಸರ್ವಾಧಿಕಾರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಈ ಬಂಧನದ ಬಗ್ಗೆ ಬಿಜೆಪಿ ಅಲ್ಪಸಂಖ್ಯಾತರ ಸೆಲ್ನ ಯಾವ ನಾಯಕರು ಕೂಡ ತುಟಿ ಬಿಚ್ಚುತ್ತಿಲ್ಲ, ಅವರಿಗೂ ಮಾತನಾಡಿದರೆ ತಮ್ಮನ್ನು ಉಚ್ಛಾಟಿಸುವ, ಬಂಧಿಸುವ ಭೀತಿ ಕಾಡುತ್ತಿದೆ ಎಂದು ಹೇಳಲಾಗಿದೆ.
ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತರ ಸೆಲ್ನ ಓರ್ವ ನಾಯಕ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಘನಿ ಅವರ ಕಠಿಣ ಪರಿಶ್ರಮ ನೋಡಿ ಬಿಜೆಪಿ ಪಕ್ಷಕ್ಕೆ ಸ್ಪೂರ್ತಿಯಿಂದ ಸೇರಿಕೊಂಡಿದ್ದೇನೆ. ನಾನು ಈಗಾಗಲೇ ಬಿಜೆಪಿಯಿಂದ ಪ್ರಭಾವಿತನಾಗಿದ್ದೆ. ಅಲ್ಪಸಂಖ್ಯಾತರ ಸೆಲ್ನಲ್ಲಿ ಅನೇಕ ನಾಯಕರಿದ್ದಾರೆ, ಆದರೆ ಘನಿಯಂತೆ ಪಕ್ಷಕ್ಕಾಗಿ ಶ್ರಮಿಸಿದವರು ಇಲ್ಲಿ ಯಾರೂ ಇಲ್ಲ. ಎಲ್ಲರೂ ಅವನನ್ನು ತಿಳಿದಿದ್ದಾರೆ. ಅವರು ಪಕ್ಷದ ಅಲ್ಪಸಂಖ್ಯಾತರ ಸೆಲ್ನ ಮುಖ್ಯಸ್ಥರಾಗಿದ್ದರು. ಬಿಕಾನೇರ್ನ ಹೊರಗಿನ ಸಭೆಗಳಿಗೂ ಹಾಜರಾಗಿದ್ದರು, ಅವರು ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಅವರು ತಮ್ಮ ಹೇಳಿಕೆ ವೇಳೆ ಹೆಸರು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಕೇಳಿಕೊಂಡಿದ್ದಾರೆ.
ಬಿಕಾನೆರ್ ನಿವಾಸಿಯಾಗಿರುವ ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ರಂಜಾನ್ ಅಲಿ, ಘನಿ ಅವರು ಬಿಜೆಪಿ, ಆರೆಸ್ಸೆಸ್ ಮತ್ತು ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದಿರುವುದನ್ನು ಒಪ್ಪಿಕೊಂಡಿದ್ದಾರೆ. ಗಣಿ ಏಳು-ಎಂಟು ವರ್ಷಗಳ ಕಾಲ ಪಕ್ಷದಲ್ಲಿದ್ದರು. ಅವರು ಈ ಹಿಂದೆ ಅಲ್ಪಸಂಖ್ಯಾತರ ಸೆಲ್ನ ಜಿಲ್ಲಾ ಉಪಾಧ್ಯಕ್ಷರಾಗಿದ್ದರು ಮತ್ತು ಕಳೆದ ಮೂರು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿದ್ದರು ಎಂದು ಹೇಳಿದ್ದಾರೆ. ಘನಿ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿರುವುದು ಸರಿಯಾಗಿದೆ. ಅವರು ಪಕ್ಷಕ್ಕೆ ನಿಷ್ಠರಾಗಿಲ್ಲದ ಕಾರಣ ಅವರನ್ನು ಉಚ್ಚಾಟಿಸಲಾಗಿದೆ. ಪಕ್ಷದಲ್ಲಿರುವಾಗ ಪಕ್ಷದ ವಿರುದ್ಧ ಅವರು ಹೇಗೆ ಮಾತನಾಡುತ್ತಾರೆ? ನಾನು ಕಳೆದ 40 ವರ್ಷಗಳಿಂದ ಪಕ್ಷದಲ್ಲಿದ್ದೇನೆ ಮತ್ತು ನಿನ್ನೆ ಸೇರಿರುವ ಈ ಜನರು ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಘನಿಯನ್ನು ಕಾಂಗ್ರೆಸ್ ದಾರಿ ತಪ್ಪಿಸಿದೆ ಎಂದು ಹೇಳಿದ್ದಾರೆ. ಬಿಜೆಪಿ ಅವರಿಗೆ ಗೌರವ ಮತ್ತು ಖ್ಯಾತಿಯನ್ನು ನೀಡಿದೆ ಮತ್ತು ಅವರ ಸಹೋದರನಿಗೆ ಕೌನ್ಸಿಲರ್ ಟಿಕೆಟ್ ನೀಡಿದೆ. ಪಕ್ಷದಿಂದಾಗಿ ಜನರು ಘನಿ ಅವರನ್ನು ತಿಳಿದಿದ್ದಾರೆ ಎಂದು ಹೇಳಿದ್ದು, ಘನಿ ಅವರ ಬಂಧನದ ಬಗ್ಗೆ ಕೇಳಿದಾಗ ರಂಜಾನ್ ಅಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
2014ರಲ್ಲಿ ಬಿಕಾನೇರ್ನಲ್ಲಿ ವಾರ್ಡ್ ನಂ.55 ರಿಂದ ಕೌನ್ಸಿಲರ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಘನಿ ಅವರ ಸಹೋದರ ಮೊಯಿನ್ ಖಾನ್ ಕೂಡ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.
ಕಳೆದ ಏಪ್ರಿಲ್ 21ರಂದು ರಾಜಸ್ಥಾನದಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮುಸಲ್ಮಾನರ ವಿರುದ್ಧ ಖುದ್ದು ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ, “ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದೇ ಕಾಂಗ್ರೆಸ್ನ ಪ್ರಣಾಳಿಕೆ” ಎಂದಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವುದರ ಜೊತೆ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು.
ಹಿಂದಿಯ ಖಾಸಗಿ ಸುದ್ದಿ ಸಂಸ್ಥೆ 24 ನ್ಯೂಸ್ ಪತ್ರಕರ್ತ ರಾಜೀವ್ ರಂಜನ್ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ‘ಮಹೋಲ್ ಕ್ಯಾ ಹೇ’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಬಿಕಾನೇರ್ನ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿದ್ದ ಉಸ್ಮಾನ್ ಘನಿ ಅವರನ್ನು ಮಾತನಾಡಿಸಿದ್ದರು.
ಪ್ರಧಾನಿಯ ದ್ವೇಷ ಭಾಷಣದ ಬಗ್ಗೆ ಪತ್ರಕರ್ತ ರಾಜೀವ್ ರಂಜನ್ ಅಭಿಪ್ರಾಯ ಕೇಳಿದಾಗ, ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರನ್ನು ಅವಮಾನಿಸಬಾರದು. ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ ಎಂದು ಉಸ್ಮಾನ್ ಘನಿ ಹೇಳಿದ್ದರು. ಅ ಬಳಿಕ ಘನಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇದರ ಬೆನ್ನಲ್ಲಿ ಶಾಂತಿ ಭಂಗದ ಆರೋಪದಲ್ಲಿ ಬಂಧನವೂ ನಡೆದಿತ್ತು.
ಇದನ್ನು ಓದಿ: ಪನ್ನೂನ್ ಹತ್ಯೆ ಸಂಚು: ಮೋದಿ ಆಪ್ತರ ಕಡೆ ಬೊಟ್ಟು?