Homeಕರ್ನಾಟಕಮತ್ತೆ ಭುಗಿಲೆದ್ದ ಕಾವೇರಿ ನದಿ ವಿವಾದ; ಮಳೆ ಮತ್ತು ಮಾತುಕತೆಯೇ ಪರಿಹಾರ

ಮತ್ತೆ ಭುಗಿಲೆದ್ದ ಕಾವೇರಿ ನದಿ ವಿವಾದ; ಮಳೆ ಮತ್ತು ಮಾತುಕತೆಯೇ ಪರಿಹಾರ

- Advertisement -
- Advertisement -

ಅದು 2002ನೇ ಇಸವಿ; ರಾಜ್ಯದಲ್ಲಿ ಬರ ಆವರಿಸಿತ್ತು. ಅಂತಹ ಸಂದರ್ಭದಲ್ಲಿಯೂ ಕಾವೇರಿ ನೀರನ್ನು ಹರಿಸಬೇಕೆಂದು ತಮಿಳುನಾಡು ಸರ್ಕಾರ ಒತ್ತಡ ಹಾಕಿತ್ತು. ಸುಪ್ರೀಂ ಕೋರ್ಟ್ ಸಹ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶಿಸಿತ್ತು. ಆದೇಶ ಧಿಕ್ಕರಿಸಿದ್ದ ಕರ್ನಾಟಕ ರಾಜ್ಯ ಸರ್ಕಾರ ಪ್ರತಿಭಟನೆ ಹಾದಿ ಹಿಡಿದಿತ್ತು. ಮಂಡ್ಯ-ಮೈಸೂರಿನಲ್ಲಿ ರೈತರು ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದರು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸಿಎಂ ಆಗಿದ್ದ ಎಸ್.ಎಂ ಕೃಷ್ಣರವರು ಬೆಂಗಳೂರಿನಿಂದ ಕೆ.ಆರ್.ಎಸ್‌ವರೆಗೆ ಪಾದಯಾತ್ರೆ ಹೋರಾಟವನ್ನು ಕೈಗೊಂಡಿದ್ದರು. ಪಾದಯಾತ್ರೆ ಮಂಡ್ಯ ತಲುಪಿದ ಸಂದರ್ಭದಲ್ಲಿ ಹಲವು ಗಂಟೆಗಳ ಕಾಲ ಜೋರು ಮಳೆ ಸುರಿಯಿತು. ಅಲ್ಲಿಗೆ ಪಾದಯಾತ್ರೆಯೂ ನಿಂತಿತು. ರೈತರ ಹೋರಾಟವೂ ನಿಂತಿತು. ತಮಿಳುನಾಡು ಸಹ ಸುಮ್ಮನಾಯಿತು. ಅಂದು ಆರಂಭವಾದ ಮಳೆ ಆಗ ತಾತ್ಕಾಲಿಕ ಪರಿಹಾರ ನೀಡಿತ್ತು.

ಶತಮಾನದ ಇತಿಹಾಸ ಹೊಂದಿರುವ ಕಾವೇರಿ ನದಿ ವಿವಾದ ಇಂದು ಮತ್ತೆ ಭುಗಿಲೆದ್ದಿದೆ. ಕಾರಣ ಎರಡೂ ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದೆ. ತಮಿಳುನಾಡು ತನ್ನ ಪಾಲಿನ ನೀರು ಬಿಡುವಂತೆ ಒತ್ತಾಯ ಮಾಡುತ್ತಿದೆ. ನಮಗೇ ನೀರು ಕೊರತೆಯಿರುವಾಗ ಹೆಚ್ಚಿನ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರ ವಾದಿಸಿದೆ. ಈ ಕುರಿತು ಎರಡು ರಾಜ್ಯಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಇತ್ತ ರಾಜ್ಯದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ಪ್ರತಿ ಬರಗಾಲದಲ್ಲಿ ಧುತ್ತನೇ ಉದಯವಾಗುವ ಈ ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ಎಂಬ ಚರ್ಚೆ ಎದ್ದಿದೆ. ಅದಕ್ಕೂ ಮುನ್ನ ವಿವಾದದ ಇತಿಹಾಸದ ಮೇಲೆ ಕಣ್ಣು ಹಾಯಿಸೋಣ.

ಕಾವೇರಿ ನದಿಯು ಕೊಡಗು ಜಿಲ್ಲೆಯ ತಲಕಾವೇರಿ ಎಂಬಲ್ಲಿ ಹುಟ್ಟಿ ಕೊಡಗು, ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಮೂಲಕ ಹಾದು ತಮಿಳುನಾಡು ಪ್ರವೇಶಿಸುತ್ತದೆ. ಈ ನದಿ ನೀರಿನ ಹಂಚಿಕೆಯ ಕುರಿತು 1892ರಲ್ಲಿಯೇ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ ಒಪ್ಪಂದಗಳು ಏರ್ಪಟ್ಟಿದ್ದವು. ಆ ಒಪ್ಪಂದದಂತೆ ಕರ್ನಾಟಕವು ನದಿಯ ಮೇಲ್ಭಾಗದ ರಾಜ್ಯ ಮತ್ತು ತಮಿಳುನಾಡು ಕೆಳಭಾಗದ ರಾಜ್ಯವಾದ್ದರಿಂದ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸಬೇಕೆಂಬ ನಿಯಮಗಳಿದ್ದವು. ಆನಂತರ ಕರ್ನಾಟಕದಲ್ಲಿ ಕೆಆರ್‌ಎಸ್ ಅಣೆಕಟ್ಟು ಮತ್ತು ತಮಿಳುನಾಡಿನಲ್ಲಿ ಮೆಟ್ಟೂರು ಅಣೆಕಟ್ಟು ಕಟ್ಟಲು ಯೋಜನೆಗಳು ಆರಂಭವಾಗಿ 1924ರಲ್ಲಿ ಮತ್ತೊಂದು ಒಪ್ಪಂದವಾಯಿತು. ಆ ಪ್ರಕಾರ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕೆಂಬ ತೀರ್ಮಾನವಾಯಿತು. ಅಲ್ಲದೇ ಮೇಲ್ಭಾಗದ ರಾಜ್ಯವಾದ ಕರ್ನಾಟಕವು ಕಾವೇರಿ ನದಿ ನೀರಿನ ಸಹಜ ಹರಿವಿಗೆ ತಡೆಯೊಡ್ಡುವಂತಿಲ್ಲ; ಅಂದರೆ ತಮಿಳುನಾಡಿನ ಒಪ್ಪಿಗೆಯಿಲ್ಲದೆ ತನ್ನ ನೆಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ಅಣೆಕಟ್ಟು, ಡ್ಯಾಂ ನಿರ್ಮಾಣ ಮಾಡುವಂತಿರಲಿಲ್ಲ ಎಂಬ ಷರತ್ತು ಹೇರಲ್ಪಟ್ಟವು.

ಈ ಎಲ್ಲಾ ಒಪ್ಪಂದಗಳು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದ್ದವು. ಅಂದಿನ ಬ್ರಿಟಿಷ್ ಅಧಿಪತ್ಯದಲ್ಲಿದ್ದರಿಂದ ಮೈಸೂರು ಸಂಸ್ಥಾನ ಅದನ್ನು ವಿರೋಧಿಸಲಾಗಲಿಲ್ಲ. ಆದರೆ ಸ್ವಾತಂತ್ರ್ಯಾ ನಂತರವೂ ಅವುಗಳನ್ನು ರದ್ದುಪಡಿಸುವ ಗೋಜಿಗೆ ಕರ್ನಾಟಕವನ್ನು ಆಳಿದವರು ಹೋಗಲಿಲ್ಲ. ಅದು ಈ ವಿವಾದ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಯಿತು. ತಮಿಳುನಾಡು ಸರ್ಕಾರದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ 1990ರಲ್ಲಿ ಕಾವೇರಿ ನದಿ ನೀರು ಹಂಚಿಕೆಗೆ ನ್ಯಾಯಾಧೀಕರಣ ಸ್ಥಾಪಿಸಿತು. ಇದನ್ನು ಕರ್ನಾಟಕ ತೀವ್ರವಾಗಿ ವಿರೋಧಿಸಿತು. ನ್ಯಾಯಾಧೀಕರಣವು 1991ರಲ್ಲಿ ತಮಿಳುನಾಡಿಗೆ ಪ್ರತಿವರ್ಷ 205 ಟಿಎಂಸಿ ನೀರನ್ನು ಬಿಡಬೇಕು ಮತ್ತು ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು ವಿಸ್ತರಿಸಬಾರದು ಎಂದು ತೀರ್ಪು ನೀಡಿತು. ಎರಡೂ ರಾಜ್ಯಗಳ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಕಾವೇರಿ ವಿವಾದ ದೊಡ್ಡ ಸ್ವರೂಪ ಪಡೆದುಕೊಂಡಿತು.

ಕರ್ನಾಟಕ ರಾಜ್ಯ ನೀರು ಬಿಡುವುದಿಲ್ಲವೆಂದು ಸುಗ್ರೀವಾಜ್ಞೆ ಹೊರಡಿಸಿತು. ಅದನ್ನು ತಿರಸ್ಕರಿಸಿ ನೀರು ಬಿಡುವಂತೆ ಸುಪ್ರೀಂ ಆದೇಶಿಸಿತು. ಆನಂತರ ಉತ್ತಮ ಮಳೆಯಾದ ವರ್ಷಗಳಲ್ಲಿ ಕರ್ನಾಟಕ ಸರಾಗವಾಗಿ ನೀರು ಹರಿಸುತ್ತಿತ್ತು. ಮಳೆ ಕೊರತೆಯಾದಾಗ, ಬರ ಬಂದಾಗ ನೀರು ಬಿಡಲು ಸಾಧ್ಯವಾಗುತ್ತಿರಲಿಲ್ಲ. ಆಗ ವಿವಾದ ಮತ್ತೆ ಮೇಲೆದ್ದು ಬರುತ್ತಿತ್ತು. ಈ ನಡುವೆ 1997ರಲ್ಲಿ ಅಂದಿನ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿನಿಧಿಗಳನ್ನು ಒಳಗೊಂಡ ಕಾವೇರಿ ನದಿ ಪ್ರಾಧಿಕಾರ ರಚಿಸಲಾಯಿತು. 2002ರಲ್ಲಿ ಬರ ಬಂದಿದ್ದಾಗಲೂ ಪ್ರತಿ ದಿನ ಕನಿಷ್ಟ 9,000 ಕ್ಯುಸೆಕ್ಸ್ ನೀರು ಹರಿಸಬೇಕೆಂದು ಕಾವೇರಿ ನದಿ ಪ್ರಾಧಿಕಾರ ಆದೇಶಿಸಿತ್ತು. ಅದನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿತ್ತು. ಹೀಗೆ ಪ್ರತಿಯೊಂದು ಸಂದರ್ಭದಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇತ್ತು ಎಂದು ರೈತರು ಆರೋಪಿಸುತ್ತಾರೆ.

ಇದನ್ನೂ ಓದಿ: ಜಲ ವಿವಾದ: ಪ್ರಧಾನಿ ಬಳಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯಲಾಗುವುದು; ಸಿಎಂ ಸಿದ್ದರಾಮಯ್ಯ

2007ರಲ್ಲಿ ನ್ಯಾಯಮಂಡಳಿಯು ಅಂತಿಮ ತೀರ್ಪು ಪ್ರಕಟಿಸಿತು. ಅದರಂತೆ ಒಂದು ಸಾಮಾನ್ಯ ವರ್ಷದಲ್ಲಿ ಕಾವೇರಿ ಕಣಿವೆಯಲ್ಲಿ 740ಟಿಎಂಸಿ ನೀರು ಸಂಗ್ರಹವಾಗುತ್ತಿದ್ದು ಅದರಲ್ಲಿ ಕರ್ನಾಟಕವು 270 ಟಿಎಂಸಿ ಇಟ್ಟುಕೊಂಡು 419 ಟಿಎಂಸಿ ನೀರನ್ನು ತಮಿಳುನಾಡಿಗೂ, 30 ಟಿಎಂಸಿ ನೀರನ್ನು ಕೇರಳಕ್ಕೂ ಮತ್ತು 7 ಟಿಎಂಸಿ ನೀರನ್ನು ಪುದುಚೇರಿಗೂ ಹರಿಸಬೇಕೆಂದು ಆದೇಶಿಸಲಾಗಿತ್ತು. ತಮಿಳುನಾಡಿನಲ್ಲಿ ಹರಿಯುವ ನೀರು ಸೇರಿದರೆ ಕರ್ನಾಟಕದ ಅಣೆಕಟ್ಟುಗಳಿಂದ 192 ಟಿಎಂಸಿ ನೀರನ್ನು ಪ್ರತಿವರ್ಷ ಹರಿಸಬೇಕಾಗಿತ್ತು.

ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳು ಮೇಲ್ಮನವಿಗಳನ್ನು ಸಲ್ಲಿಸಿದ್ದವು. ಅವುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2018ರ ಫೆಬ್ರುವರಿ 16ರಂದು ತೀರ್ಪು ನೀಡಿತು. ಅದರಂತೆ ತಮಿಳುನಾಡಿನಲ್ಲಿರುವ ಅಂತರ್ಜಲ ಮತ್ತು ಬೆಂಗಳೂರಿಗೂ ಕುಡಿಯುವ ನೀರು ಪೂರೈಕೆ ಮಾಡುವುದನ್ನು ಪರಿಗಣಿಸಿ ಇನ್ನು ಮುಂದೆ ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರು ಬಿಡಬೇಕು. ಕರ್ನಾಟಕವು 270 ಟಿಎಂಸಿಯಿಂದ 284.75 ಟಿಎಂಸಿ ನೀರು ಪಡೆಯಬಹುದು, ಅದರಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಪ್ರಮಾಣ 4.75 ಟಿಎಂಸಿ ಎಂದಿದೆ. ಒಂದು ಹಂತಕ್ಕೆ ಎಲ್ಲಾ ರಾಜ್ಯಗಳಿಗೂ ಸಮಾಧಾನ ತರುವ ರೀತಿಯ ತೀರ್ಪು ಇದಾಗಿದೆ.

ಮಳೆ ಬಾರದಿರುವುದೇ ಸಮಸ್ಯೆ

ಕರ್ನಾಟಕದ ಕೆಆರ್‌ಎಸ್, ಹೇಮಾವತಿ, ಕಬಿನಿ ಮತ್ತು ಹಾರಂಗಿ ಜಲಾಶಯಗಳಿಂದ ಸಾಧಾರಣ ವರ್ಷಗಳಲ್ಲಿ ವಾರ್ಷಿಕ 177.25 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕು. 2021 ಮತ್ತು 2022ರಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಅದಕ್ಕಿಂತಲೂ ಹೆಚ್ಚಿನ ನೀರನ್ನು ಹರಿಸಲಾಗಿದೆ. ಆದರೆ 2023ರಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ನೀರು ಹರಿಸುವುದು ಅಸಾಧ್ಯವಾಗಿದೆ. ಅಲ್ಲದೇ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಿನಲ್ಲಿ ಕ್ರಮವಾಗಿ 34, 50, 40 ಟಿಎಂಸಿ ನೀರು ಹರಿಸಬೇಕೆಂದು ನ್ಯಾಯಾಧೀಕರಣ ಹೇಳಿತ್ತು. ಈ ಸಂದರ್ಭದಲ್ಲಿ ಮಳೆ ಇಲ್ಲದಿರುವುದರಿಂದ ಈ ಕುರಿತು ಮರುಪರಿಶೀಲನೆ ಮಾಡಬೇಕಾಗಿದೆ. ತಮಿಳುನಾಡು ಸರ್ಕಾರವು 15,000 ಕ್ಯುಸೆಕ್ಸ್ ಹರಿಸಬೇಕೆಂಬ ಬೇಡಿಕೆ ಇಟ್ಟಿದೆ. ಸದ್ಯ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ಆಸುಪಾಸಿನಲ್ಲಿದ್ದು, ಪ್ರತಿನಿತ್ಯ 10,000 ಕ್ಯುಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದು ಹೋರಾಟದ ಸೂಚನೆ ನೀಡಿವೆ. ರೈತರು ನೀರು ಹರಿಸುವುದನ್ನು ನಿಲ್ಲಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಕರ್ನಾಟಕ ಸರ್ಕಾರ ಸರ್ವಪಕ್ಷ ಸಭೆ ನಡೆಸುತ್ತಿದೆ.

ಇಲ್ಲಿ ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕಾದ್ದು ಇದು ಸಾಧಾರಣ ವರ್ಷ ಅಲ್ಲ. ಬದಲಿಗೆ ಸಂಕಷ್ಟದ ವರ್ಷವಾಗಿದೆ. ಹಾಗಾಗಿ ಇಂತಿಷ್ಟೇ ನೀರು ಬಿಡಿ ಎಂದು ಒತ್ತಾಯ ಮಾಡುವುದನ್ನು ಬಿಡಬೇಕು. ಅಲ್ಲದೇ 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ “ಮಳೆ ಕಡಿಮೆಯಾದಾಗ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಕಾವೇರಿ ಆಯೋಗ ನೀರಿನ ಪ್ರಮಾಣವನ್ನು ನಿರ್ಧರಿಸುವುದು” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಸದ್ಯ ಮಳೆ ಇಲ್ಲಿದಿರುವುದರಿಂದ ಕಾವೇರಿ ಮೇಲುಸ್ತುವಾರಿ ಮಂಡಳಿಯು ಮಳೆ ಪ್ರಮಾಣ, ಡ್ಯಾಂಗಳ ನೀರಿನ ಮಟ್ಟ, ನೀರಿನ ಹರಿವು, ಆವಿಯಾಗುವ ಪ್ರಮಾಣ, ರಾಜ್ಯಗಳ ಅಗತ್ಯ ಇತ್ಯಾದಿಗಳೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅಂಕಿಅಂಶಗಳ ಸಮೇತ ಎರಡು ರಾಜ್ಯಗಳ ಪ್ರತಿನಿಧಿಗಳ ಜೊತೆ ಮಾತನಾಡಿ ಸಮಾಧಾನಕಾರ ನಿಲುವಿಗೆ ಬರಬೇಕಿದೆ. ಇದಕ್ಕೆ ಮುಖ್ಯವಾಗಿ ಪ್ರಧಾನಿಗಳ ಇಚ್ಛಾಶಕ್ತಿ ಬೇಕಾಗಿದೆ.

ಕಾವೇರಿ ಗಲಾಟೆಯೆಂದರೆ ಪ್ರತಿಭಟನೆ, ರಸ್ತೆ ಬಂದ್, ಟೈರು ಸುಡುವುದು ಇಷ್ಟೇ ಅಲ್ಲ. ಈ ವಿವಾದ ಆರಂಭವಾದಾಗಲೇ ಕರ್ನಾಟಕ ಪ್ರಜ್ಞಾವಂತ ರೈತರು ಮತ್ತು ತಮಿಳುನಾಡಿನ ರೈತರು ಸೇರಿ ಕಾವೇರಿ ಕುಟುಂಬ ಎಂಬ ನಿಯೋಗ ರಚಿಸಿದ್ದರು. ಆ ನಿಯೋಗವು ಎರಡು ರಾಜ್ಯಗಳ ಪರಿಸ್ಥಿತಿ ಅಧ್ಯಯನ ಮಾಡಿ ಮಾತುಕತೆಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ಯಾವ ಸರ್ಕಾರಗಳು ಅವರ ಮಾತನ್ನು ಕೇಳಿಸಿಕೊಳ್ಳದೇ ತಮ್ಮ ಮೊಂಡುವಾದವನ್ನು ಮುಂದೆ ಮಾಡಿದವು. ಅದರ ಪರಿಣಾಮವನ್ನು ನಾವೀಗಾಗಲೇ ನೋಡಿದ್ದೇವೆ. ಗಲಾಟೆ ಭುಗಿಲೆದ್ದಾಗ ಅದು ಬೆಂಗಳೂರಿನಲ್ಲಿ ಕನ್ನಡಿಗ-ತಮಿಳರ ನಡುವಿನ ಗಲಭೆ ರೂಪ ಪಡೆದುಕೊಂಡಿದೆ. ಆದರೆ ಆ ಗಾಯಗಳೆಲ್ಲ ಮಾಯುವ ಹಂತದಲ್ಲಿ ನಾವಿದ್ದೇವೆ. ಉತ್ತಮ ಮಳೆ ಮತ್ತು ಮಾತುಕತೆ ಮೂಲಕ ಮಾತ್ರವೇ ಈ ಸಮಸ್ಯೆ ಬಗೆಹರಿಸಬಹುದೆಂಬುದನ್ನು ಇತಿಹಾಸವೂ ಹೇಳುತ್ತಿದೆ. ಹಾಗಾಗಿ ಕಾವೇರಿ ವಿಚಾರದಲ್ಲಿ ಆಡಳಿತ ಪಕ್ಷವಾಗಲಿ, ವಿಪಕ್ಷಗಳಾಗಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡುವುದರ ಬದಲಿಗೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿರುವುದು ಈ ಸಂದರ್ಭದ ಅಗತ್ಯವಾಗಿದೆ.

ಒಟ್ಟಾರೆ ಕಾವೇರಿ ನದಿ ನೀರಿನ ವಿವಾದವು ಮಾನವ ಕುಲಕ್ಕೆ ದೊಡ್ಡ ಪಾಠ ಹೇಳುತ್ತಿದೆ. ನೀರಿನ ಮಿತ ಬಳಕೆ, ಬೆಳೆಗಳ ಬದಲಾವಣೆ, ಕಾಡು ಸಂರಕ್ಷಣೆ, ಪರಿಸರ ಸಮತೋಲನ ಕಾಪಾಡಿಕೊಳ್ಳದಿದ್ದರೆ ಮುಂದೆ ಎಂತಹ ಭೀಕರ ಪರಿಸ್ಥಿತಿ ಬರಬಹುದು ಎಂಬುದರ ಸೂಚಕವಾಗಿದೆ. ಹಾಗಾಗಿ ಈ ವಿಚಾರದಲ್ಲಿ ಆಳುವ ಸರ್ಕಾರಗಳು ಮೊದಲು ಎಚ್ಚರಗೊಳ್ಳುವಂತೆ ಮತ್ತು ಸುಸ್ಥಿರ ಪರಿಸರಸ್ನೇಹಿ ಕ್ರಮಗಳನ್ನು ಪಾಲಿಸುವಂತೆ ಒತ್ತಡ ತರಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...