Homeಮುಖಪುಟಮಣಿಪುರ ಹಿಂಸಾಚಾರ: ಸಿಬಿಐ ಅಡಿಯಲ್ಲಿನ ಪ್ರಕರಣಗಳ ವಿಚಾರಣೆ ಅಸ್ಸಾಂ ಹೈಕೋರ್ಟ್​ಗೆ ವರ್ಗಾಯಿಸಿದ ಸುಪ್ರೀಂ

ಮಣಿಪುರ ಹಿಂಸಾಚಾರ: ಸಿಬಿಐ ಅಡಿಯಲ್ಲಿನ ಪ್ರಕರಣಗಳ ವಿಚಾರಣೆ ಅಸ್ಸಾಂ ಹೈಕೋರ್ಟ್​ಗೆ ವರ್ಗಾಯಿಸಿದ ಸುಪ್ರೀಂ

- Advertisement -
- Advertisement -

”ಮಣಿಪುರದ ನಡೆದ ಹಿಂಸಾಚಾರದಿಂದ ಕಣಿವೆ ಮತ್ತು ಬೆಟ್ಟಗಳಲ್ಲಿರುವ ಜನಾಂಗಗಳು ಸಂತ್ರಸ್ತರಿದ್ದಾರೆ. ಅವರಲ್ಲಿ ಯಾರು ಹೆಚ್ಚು ಸಾವು ನೋವು ಅನುಭವಿಸಿದ್ದಾರೆಂದು ನಾವು ಹೇಳಲಾಗುವುದಿಲ್ಲ, ಎರಡೂ ಸಮುದಾಯದವರು ಬಲಿಪಶುಗಳಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿರುವ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಅಸ್ಸಾಂ ಹೈಕೋರ್ಟ್​ಗೆ ವರ್ಗಾಯಿಸಲಾಗಿದೆ ಎಂದು ಸುಪ್ರೀಂ ಕೋರ್ಟ್​​ ಇಂದು (ಆ.25) ಆದೇಶವನ್ನು ನೀಡಿದೆ.

ಈ ಪ್ರಕರಣಗಳನ್ನು ವ್ಯವಹರಿಸಲು ಒಬ್ಬರು ಅಥವಾ ಹೆಚ್ಚಿನ ನ್ಯಾಯಾಂಗ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡುವಂತೆ ಗುವಾಹಾಟಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಸುಪ್ರೀಂ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಮಣಿಪುರ ಹಿಂಸಾಚಾರದ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸದಂತೆ ಹಲವು ನಿರ್ದೇಶನಗಳನ್ನು ನೀಡಿದೆ. ಜತೆಗೆ ಆರೋಪಿಗಳನ್ನು ಕೋರ್ಟ್​​ಗೆ ಹಾಜರುಪಡಿಸುವ ಪ್ರಕ್ರಿಯೆ, ಬಂಧನ, ನ್ಯಾಯಾಂಗ ಬಂಧನ ಮತ್ತು ಅದರ ವಿಸ್ತರಣೆಗೆ ಸಂಬಂಧಿಸಿದ ನ್ಯಾಯಾಂಗ ಕಾರ್ಯವಿಧಾನಗಳನ್ನು ಗುವಾಹಾಟಿ ಹೈಕೋರ್ಟ್​​​ ಆನ್‌ಲೈನ್‌ ಮೂಲಕ ನಡೆಸಲಿದೆ ಎಂದು ಹೇಳಿದೆ.

ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಈಗಾಗಲೇ  ನ್ಯಾಯಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಅವರನ್ನು ವಿಚಾರಣೆಗೆ ಮಣಿಪುರದಿಂದ ಗೌಹಾಟಿಯ ಹೈಕೋರ್ಟ್​ಗೆ ಕರೆದುಕೊಂಡ ಬರಲು ಸಾಧ್ಯವಾಗದಿದ್ದರೆ, ಆನ್​​ಲೈನ್​​ ಮೂಲಕವೇ ಅವರನ್ನು ನ್ಯಾಯಧೀಶರ​ ಮುಂದೆ ಹಾಜರು ಪಡಿಸಬಹುದು ಎಂದು ಹೇಳಿದೆ. ಒಂದು ವೇಳೆ ನೆಟ್​​ವರ್ಕ್​​​ ಸಮಸ್ಯೆ ಅಥವಾ ತಾಂತ್ರಿಕ ದೋಷಗಳಿಂದ ಆನ್​​​ಲೈನ್​ನಲ್ಲಿ ಹಾಜರುಪಡಿಸಲು ಸಾಧ್ಯವಾಗದಿದ್ದಾರೆ ಅಥವಾ ಅವರನ್ನು ಕೋರ್ಟ್​ ಮುಂದೆ ಕರೆದುಕೊಂಡು ಬರುವುದು ಅನಿವಾರ್ಯ ಇದೆ ಎಂದು ಕಂಡು ಬಂದರೆ ಮಾತ್ರ ಅವರನ್ನು ನ್ಯಾಯಲಯದ ಮುಂದೆ ಕರೆದುಕೊಂಡು ಬರಲು ಅನುಮತಿ ನೀಡಲಾಗಿದೆ.

ಗುವಾಹಾಟಿ ನ್ಯಾಯಾಲಯದಲ್ಲಿ ಆನ್‌ಲೈನ್ ಮೋಡ್ ಮೂಲಕ ಸಿಬಿಐ ಪ್ರಕರಣಗಳ ವಿಚಾರಣೆಗೆ ಅನುಕೂಲವಾಗುವಂತೆ ಸರಿಯಾದ ಇಂಟರ್ನೆಟ್ ಸೇವೆಗಳನ್ನು ಒದಗಿಸುವಂತೆ ಮಣಿಪುರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಣಿಪುರದಿಂದ ವೀಡಿಯೊ ಕಾನ್ಫರೆನ್ಸಿಂಗ್ ಇತ್ಯಾದಿಗಳಿಗೆ ಸರಿಯಾದ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಗುವಾಹಟಿಯಲ್ಲಿ ಖುದ್ದು ಹಾಜರಾಗಲು ಬಯಸುವವರಿಗೆ ಅದರ ನಿರ್ದೇಶನಗಳು ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆಗಸ್ಟ್ 21ರಂದು, ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಮೇಲ್ವಿಚಾರಣೆಗೆ ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿತ್ತು. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಲಾಗಿದೆ.

ಈ ಜನಾಂಗೀಯ ಹಿಂಸಾಚಾರದಿಂದ ಹಲವಾರು ಮಣಿಪುರ ನಿವಾಸಿಗಳು ತಮ್ಮ ಗುರುತಿನ ದಾಖಲೆಗಳನ್ನು ಕಳೆದುಕೊಂಡಿರುವುದನ್ನು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಗಮನಿಸಿದ್ದು, ಈಗಾಗಲೇ ಸುಪ್ರೀಂ ನೇಮಿಸಿದ ಸಮಿತಿಯು ಆಧಾರ್ ಕಾರ್ಡ್‌ ಮತ್ತು ಇತರ ದಾಖಲೆಗಳನ್ನು ತಕ್ಷಣದಿಂದಲೇ ನೀಡಲು ರಾಜ್ಯ ಸರ್ಕಾರ ಮತ್ತು ಯುಐಡಿಎಐ ಸೇರಿದಂತೆ ಇತರರಿಗೆ ಇಲಾಖೆ ನಿರ್ದೇಶನ ರವಾನಿಸುವಂತೆ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ಪ್ರಸ್ತುತ ಹಂತದಲ್ಲಿ, ಮಣಿಪುರದ ಒಟ್ಟಾರೆ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ನಡೆಸಲು ಒಬ್ಬರು ಅಥವಾ ಹೆಚ್ಚಿನ ನ್ಯಾಯಾಂಗ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡುವಂತೆ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಸುಪ್ರೀಂ ಕೋರ್ಟ್ ಕೋರಿದೆ.

ಮಣಿಪುರದಲ್ಲಿ ಮಾತನಾಡುವ ಒಂದು ಅಥವಾ ಹೆಚ್ಚು ಭಾಷೆಗಳನ್ನು ತಿಳಿದಿರುವ ನ್ಯಾಯಾಧೀಶರನ್ನು ನಾಮನಿರ್ದೇಶನ ಮಾಡುವಂತೆ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಮಣಿಪುರ ರಾಜ್ಯಪಾಲರನ್ನು ಭೇಟಿ ಮಾಡಿದ ಸಿಪಿಐ(ಎಂ) ನಿಯೋಗ: ಪರಿಹಾರ ಶಿಬಿರಗಳಲ್ಲಿನ ಭೀಕರ ಪರಿಸ್ಥಿತಿ ಕುರಿತು ಚರ್ಚೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read