ಮುಖ್ಯಮಂತ್ರಿ ಹೇಮಂತ್ ಸೋರೆನ್ ಹಾಗೂ ಸೋರೆನ್ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ವಿರುದ್ಧ ರಾಂಚಿಯ ಕಂಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕರ್ತ ಸೋನು ಟಿರ್ಕಿ ಅವರು ದೂರಿನ ಮೇರೆಗೆ ಆಗಸ್ಟ್ 23 ರಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಬಿಜೆಪಿ ನಡೆಸುತ್ತಿರುವ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಬಾಬುಲಾಲ್ ಮರಾಂಡಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಸೋರೆನ್ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ್ದಾರೆ ಮತ್ತು ಇದು ಅವರ ಹಾಗೂ ಆದಿವಾಸಿಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಆಗಸ್ಟ್ 23ರಂದು ಎಫ್ಐಆರ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 500 (ಮಾವದಾನಿ) ಸೆಕ್ಷನ್ 505 (ಸಾರ್ವಜನಿಕವಾಗಿ ಎಂದನು ಮತ್ತು 504/2 (ಉದ್ದೇಶಪೂರ್ವಕ ಮೂದಲಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಮರಾಂಡಿ ವಿರುದ್ಧದ ಕ್ರಮಕ್ಕೆ ಬಿಜೆಪಿ ಟೀಕೆ
ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲಾಗಿರುವುದಕ್ಕೆ ಬಿಜೆಪಿ ಕಿಡಿಕಾರಿದೆ. ಮರಾಂಡಿ ಅವರ ವಿರುದ್ಧ ಇತ್ತೀಚಿನ ದಿನಗಳಲ್ಲಿ ದಾಖಲಾಗಿರುವ ನಾಲ್ಕನೇ ಸರ್ಕಾರಿ ಪ್ರಾಯೋಜಿತ ಪ್ರಕರಣ ಇದು ಎಂದು ಹೇಳಿದೆ.
”ಉಳಿದ ಮೂರು ಪ್ರಕರಣಗಳು ಸಿಂಮ್ದಗಾ, ಲಾಖೆಹರ್ ಮತ್ತು ದೇವರ್ನಲ್ಲಿ ದಾಖಲಾಗಿವೆ. ಬಿಜೆಪಿಯ ಸಂಕಲ್ಪ ಯಾತ್ರೆಗೆ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಆಡಳಿತ ಪಕ್ಷವು ಕಂಗೆಟ್ಟಿದೆ” ಎಂದು ಬಿಜೆಪಿ ಟೀಕಿಸಿದೆ.
”ಮರಾಂಡಿ ಅವರು ರಾಜ್ಯವನ್ನು ಹಸಿವು, ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಮುಕ್ತಗೊಳಿಸುವುದಕ್ಕಾಗಿ ಅಕ್ಟೋಬರ್ 10ರ ವರೆಗೆ ಸಂಕಲ್ಪ ಯಾತ್ರೆ ಮುಂದುವರಿಸಲಿದ್ದಾರೆ” ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ: ‘ನೀವು ವಕೀಲಿ ವೃತ್ತಿ ನಡೆಸಲು ಹೇಗೆ ಸಾಧ್ಯ?’: ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗೆ ಸುಪ್ರೀಂ ಪ್ರಶ್ನೆ