ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಕಳೆದ ವರ್ಷ ಕ್ಷಮಾದಾನ ಪಡೆದಿರುವ ಅಪರಾಧಿ ಇಂದು ವಕೀಲಿ ವೃತ್ತಿ ನಡೆಸುತ್ತಿದ್ದಾನೆ ಎಂದು ತಿಳಿಸಿದಾಗ ಗುರುವಾರ ಸುಪ್ರೀಂ ಕೋರ್ಟ್ ”ಕಾನೂನು ಉದಾತ್ತ ವೃತ್ತಿ ಎಂದು ಭಾವಿಸಲಾಗಿದೆ” ಹೇಳಿದೆ.
2002ರ ಮಾರ್ಚ್ 3ರಂದು ನಡೆದ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಆ ಸಮಯದಲ್ಲಿ ಅವಳು ಗರ್ಭಿಣಿಯಾಗಿದ್ದಳು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ 14 ಸದಸ್ಯರನ್ನು ಅಹಮದಾಬಾದ್ ಬಳಿ ಗಲಭೆಕೋರರು ಹತ್ಯೆ ಮಾಡಿದ್ದಾರೆ. ಒಬ್ಬ ವ್ಯಕ್ತಿ ತನ್ನ ತಾಯಿಯ ತೋಳುಗಳಿಂದ ಹುಡುಗಿಯನ್ನು ಕಿತ್ತುಕೊಂಡು ಅವಳ ತಲೆಯನ್ನು ಬಂಡೆಯ ಮೇಲೆ ಒಡೆದು ಕ್ರೌರ್ಯ ಮೆರೆದಿದ್ದನು.
ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳು ಕಳೆದ ವರ್ಷದ ಆ.15ರಂದು ಕ್ಷಮಾದಾನದ ಲಾಭ ಪಡೆದು ಬಿಡುಗಡೆಗೊಂಡಿದ್ದರು. ಅವರ ಬಿಡುಗಡೆಯನ್ನು ಬಾನೋ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಗುರುವಾರ ಅಪರಾಧಿ ರಾಧೇಶ್ಯಾಮ ಶಾಗೆ ನೀಡಿದ ಕ್ಷಮಾದಾನವನ್ನು ಸಮರ್ಥಿಸಿಕೊಂಡ ವಕೀಲ ರಿಶಿ ಮಲ್ಹೋತ್ರಾ ಅವರು, ತನ್ನ ಕಕ್ಷಿದಾರ ಈಗ ಗುಜರಾತಿನಲ್ಲಿ ಮೋಟರ್ ವಾಹನ ಅಪಘಾತ ಪ್ರಕರಣಗಳ ನ್ಯಾಯಾಧಿಕರಣದಲ್ಲಿ ವಕೀಲಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾನೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಉಜ್ಜಲ ಭುಯಾನ್ ಅವರ ಪೀಠಕ್ಕೆ ತಿಳಿಸಿದರು.
ಅವರು ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ ಮತ್ತು ರಾಧೇಶ್ಯಾಮ ಶಾ ವಿರುದ್ಧ ಒಂದೇ ಒಂದು ಪ್ರಕರಣವಿಲ್ಲ. ಆತ ವೃತ್ತಿಯಲ್ಲಿ ವಕೀಲನಾಗಿದ್ದನು, ಇದೀಗ ಕ್ಷಮಾದಾನದ ಬಳಿಕ ಮತ್ತೆ ವಕೀಲಿ ಆರಂಭಿಸಿದ್ದಾನೆ ಎಂದು ತಿಳಿಸಿದರು.
”ಅಪರಾಧಿಯೋರ್ವ ವಕೀಲಿ ವೃತ್ತಿಯನ್ನು ನಡೆಸಲು ಪರವಾನಿಗೆಯನ್ನು ನೀಡಬಹುದೇ?” ಎಂದು ಸುಪ್ರೀಂ ಪ್ರಶ್ನಿಸಿದೆ. ”ನೀವು (ಶಾ) ಅಪರಾಧಿಯಾಗಿದ್ದೀರಿ, ಅದರಲ್ಲಿ ಯಾವುದೇ ಸಂಶಯವಿಲ್ಲ. ನಿಮಗೆ ಸಿಕ್ಕಿರುವ ಕ್ಷಮಾದಾನದಿಂದಾಗಿ ನೀವು ಜೈಲಿನಿಂದ ಹೊರಗಿದ್ದೀರಿ. ಶಿಕ್ಷೆಯ ಅವಧಿ ಮಾತ್ರ ಕಡಿತಗೊಂಡಿದೆ, ದೋಷ ನಿರ್ಣಯವು ಹಾಗೆಯೇ ಇರುತ್ತದೆ” ಎಂದು ಹೇಳಿತು.
”ಅಪರಾಧಿಯೋರ್ವ ವಕೀಲಿ ವೃತ್ತಿಯನ್ನು ನಡೆಸಬಹುದೇ ಎನ್ನುವುದನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪರಿಶೀಲಿಸಬೇಕು” ಎಂದು ನ್ಯಾಯಾಧೀಶರು ಹೇಳಿದರು.
ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಆಯ್ದ ವ್ಯಕ್ತಿಗಳಿಗೆ ಮಾತ್ರ ಏಕೆ ಕ್ಷಮಾದಾನ?; ಗುಜರಾತ್, ಕೇಂದ್ರಕ್ಕೆ ಸುಪ್ರೀಂ ತರಾಟೆ