Homeಅಂತರಾಷ್ಟ್ರೀಯಟರ್ಕಿ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರೀಕರಣದ ಕರಿನೆರಳು

ಟರ್ಕಿ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರೀಕರಣದ ಕರಿನೆರಳು

- Advertisement -
- Advertisement -

14ನೇ ಮೇ 2023ರಂದು ನಡೆದ ಸಾರ್ವತ್ರಿಕ ಚುನಾವಣೆಯು ಟರ್ಕಿಯ ರಾಜಕೀಯವನ್ನೇ ಬದಲಿಸುವ ಮಹತ್ವದ ಕಾಲಘಟ್ಟವಾಗಿದೆ. ಏಕೆಂದರೆ ಹಿಂದೆ ಚಾಲ್ತಿಯಲ್ಲಿದ್ದ ಸಂಸತ್ತು ಮಾದರಿಯಿಂದ ಅಧ್ಯಕ್ಷೀಯ ವ್ಯವಸ್ಥೆಗೆ ಹೊರಳಿಕೊಂಡ ನಂತರ ಟರ್ಕಿಯಲ್ಲಿ ನಡೆದಿರುವ ಎರಡನೇ ಚುನಾವಣೆ ಇದಾಗಿದೆ. ಈ ಬದಲಾವಣೆಯು ಸರ್ಕಾರದೊಳಗಿನ ಅಧಿಕಾರ ಕೇಂದ್ರೀಕರಣ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ.

ಇತ್ತೀಚಿನ ಚುನಾವಣೆಯಲ್ಲಿ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರು ಅಧ್ಯಕ್ಷರಾಗಿ ಚುನಾಯಿತರಾದರು. ಸಂಸದೀಯ ಚುನಾವಣೆಗಳಲ್ಲಿ ಅವರ ಪಕ್ಷವಾದ ಜಸ್ಟೀಸ್ ಮತ್ತು ಡೆವಲಪ್ಮೆಂಟ್ ಪಕ್ಷವು (ಎಕೆಪಿ) ದೊಡ್ಡ ನಷ್ಟ ಅನುಭವಿಸಿತ್ತು. ಯಾವುದೇ ಪಕ್ಷವು ಬಹುಮತ ಪಡೆಯದಿದ್ದರೂ, ಎಕೆಪಿ ಪಕ್ಷವು ಇತರೆ ಮೂರು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೂ 21ನೇ ಶತಮಾನದಲ್ಲಿ ಚುನಾವಣಾ ಕಣದಲ್ಲಿ ಎಕೆಪಿ ಪಕ್ಷವು ತೋರಿರುವ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ.

ಈ ಹಿಂದೆ ಎಕೆಪಿ ಪಕ್ಷವು ಕೇವಲ ಒಂದು ರಾಜಕೀಯ ಪಕ್ಷದೊಂದಿಗೆ ಕೂಡಿ ಸರ್ಕಾರ ರಚಿಸಿತ್ತು ಆದರೆ, ಇಂದಿನ ಪರಿಸ್ಥಿತಿ ಇನ್ನಷ್ಟು ದುಸ್ತರವೆನಿಸಿದೆ. ಇರುವ ಒಟ್ಟು 600 ಕ್ಷೇತ್ರಗಳ ಪೈಕಿ 267 ರಲ್ಲಿ ಮಾತ್ರವೇ ಎಕೆಪಿ ಪಕ್ಷ ಗೆಲುವು ಸಾಧಿಸಿದೆ. ಅಂದರೆ, ಕಳೆದ ಚುನಾವಣೆಯಲ್ಲಿ ಎಕೆಪಿ ಪಕ್ಷ ಗೆದ್ದ ಕ್ಷೇತ್ರಗಳಿಗಿಂತ 28 ಕ್ಷೇತ್ರಗಳು ಕಡಿಮೆ.

ಪ್ರಮುಖ ವಿರೋಧ ಪಕ್ಷವಾದ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (ಸಿಎಚ್‌ಪಿ) ಕಳೆದ ಬಾರಿಗಿಂತ 23 ಹೆಚ್ಚುವರಿ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಭಾರತದ ಕಾಂಗ್ರೆಸ್ ಪಕ್ಷದೊಂದಿಗೆ ಹೋಲಿಸಲಾಗುವ ಸಿಎಚ್‌ಪಿ ಪಕ್ಷವು ಟರ್ಕಿ ದೇಶದ ರಾಜಕೀಯ ಆಗುಹೋಗುಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳು

2023ರ ಮೇ 14 ರಂದು ಮೊದಲ ಹಂತದ ಮತದಾನ ನಡೆದಾಗ ನಾಲ್ಕು ಜನ ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಎರ್ಡೋಗನ್ ಶೇ.49.52ರಷ್ಟು ಮತಗಳನ್ನು ಪಡೆದರೆ, ಎದುರಾಳಿ ಕೆಮಾಲ್ ಕಿಲಿಡಾರೊಗ್ಲು ಶೇ.44.88 ಮತಗಳಿಗೆ ಸೀಮಿತಗೊಂಡಿದ್ದರು. ಇನ್ನು ತೀವ್ರ-ಬಲಪಂಥೀಯ ಅಭ್ಯರ್ಥಿಗಳಾಗಿದ್ದ ಮುಹರ್ರ್‍ಎಮ್ ಇನ್ಸ್ ಮತ್ತು ಸಿನಾನ್ ಓಗಾನ್ ಸಹ ಕಣದಲ್ಲಿದ್ದರು. ಅದರಲ್ಲಿ ಸಿನಾನ್ ಓಗಾನ್ 5.2% ಮತ ಗಳಿಸಿ, ಎರ್ಡೋಗನ್‌ರ ಮತ ಪಾಲನ್ನು ಕಡಿತಗೊಳಿಸಿದರು. ಒಟ್ಟಿನಲ್ಲಿ ಯಾರೊಬ್ಬರೂ ಸಹ ಶೇ.50 ರಷ್ಟು ಮತಗಳನ್ನು ಪಡೆಯಲು ವಿಫಲವಾದ್ದರಿಂದ ಟರ್ಕಿಯ ಅಧ್ಯಕ್ಷೀಯ ಚುನಾವಣೆಯು ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತೊಮ್ಮೆ ಚುನಾವಣೆ ನಡೆಸಲಾಯಿತು. ಇದು ರಾಷ್ಟ್ರದ ಗಮನ ಸೆಳೆದು, ಜನರ ಬದಲಾವಣೆಯ ಬಯಕೆ ಮತ್ತು ರಾಜಕೀಯ ಪಕ್ಷಗಳ ವೈವಿಧ್ಯಮಯ ಸಿದ್ದಾಂತಗಳು ಕಣದಲ್ಲಿದ್ದಿದ್ದನ್ನು ಪ್ರತಿನಿಧಿಸಿತ್ತು. ಎರಡನೇ ಸುತ್ತಿನ ಚುನಾವಣೆಯಲ್ಲಿ ಎರ್ಡೋಗನ್ 52% ಮತಗಳನ್ನು ಪಡೆದು ಮೂರನೇ ಬಾರಿಗೆ ಅಧಿಕಾರಕ್ಕೇರಿದರೆ, ಎದುರಾಳಿ ಕೆಮಾಲ್ ಕಿಲಿಡಾರೊಗ್ಲು 48% ಮತಗಳೊಂದಿಗೆ ಸೋಲೊಪ್ಪಿಕೊಂಡರು.

ಸಂಸತ್ತಿನ ಚುನಾವಣೆಯು ವೈವಿಧ್ಯಮಯ ವಿಷಯಗಳ ಕುರಿತು ಚರ್ಚೆಗೆ ಕಾರಣವಾಗಿತ್ತು. ಆದರೆ ಅಧ್ಯಕ್ಷೀಯ ಸ್ಪರ್ಧೆಯು ರಾಷ್ಟ್ರೀಯತೆಯ ಸುತ್ತಲಿನ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಚುನಾವಣಾ ಪ್ರಚಾರಗಳು ಹೆಚ್ಚಾಗಿ ಅಭ್ಯರ್ಥಿಗಳ ವ್ಯಕ್ತಿತ್ವ – ವರ್ಚಸ್ಸು, ರಾಷ್ಟ್ರೀಯತೆ, ಭಯೋತ್ಪಾದನೆ ಮತ್ತು ಟರ್ಕಿಶ್ ಹೆಮ್ಮೆಯ ವಿಷಯಗಳ ಮೇಲೆಯೇ ಕೇಂದ್ರೀಕೃತವಾದ್ದವು.

ಟರ್ಕಿಯ ಎರಡು ವಿಭಿನ್ನ ವಿಚಾರಧಾರೆಗಳು

ಟರ್ಕಿಯು ಎರಡು ವಿಭಿನ್ನ ರಾಷ್ಟ್ರೀಯತಾವಾದಿ ವಿಚಾರಧಾರೆಗಳಿಂದ ನಿರೂಪಿಸಲ್ಪಟ್ಟಿದೆ. ಮೊದಲನೆಯದು ಮುಸ್ತಫಾ ಕೆಮಾಲ್ ಅಟಾತುರ್ಕ್‌ನಿಂದ ಪ್ರೇರಿತವಾದದ್ದು; ಗಣರಾಜ್ಯದ ತತ್ವಗಳು, ಜಾತ್ಯತೀತತೆ, ಪ್ರಗತಿಪರತೆ, ಆಡಳಿತ ಸುಧಾರಣೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಆಗುಹೋಗುಗಳ ಮೇಲೆ ಕೇಂದ್ರಿತವಾದ ತತ್ವಗಳ ಆಧಾರದ ಮೇಲೆ ಆಧುನಿಕ ಜಾತ್ಯತೀತ ರಾಷ್ಟ್ರವನ್ನು ನಿರ್ಮಾಣ ಮಾಡುವ ಸಿದ್ಧಾಂತದ ತಳಹದಿಯನ್ನು ಹೊಂದಿದೆ. ಇದನ್ನು ಕೆಮಾಲಿಸಂ ಅಥವಾ ಅಟಾತುರ್ಕಿಸಂ ಎಂದು ಕರೆಯಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಮತ್ತೊಂದು ಸಿದ್ಧಾಂತವು ಟರ್ಕಿಯನ್ನು ಪುರಾತನ ನಾಗರಿಕತೆಯ ಕೇಂದ್ರವೆಂದು ಬಣ್ಣಿಸುತ್ತದೆ. ಅದು ಟರ್ಕಿಯು ತನ್ನ ಹಿಂದಿನ ಗತವೈಭವಕ್ಕೆ ಮರಳಬೇಕೆಂದು ಬಯಸುತ್ತದೆ. ಇದನ್ನು ಒಟ್ಟೋಮನಿಸಂ ಎಂದು ಕರೆಯಲಾಗುತ್ತದೆ. ಈ ಸಿದ್ಧಾಂತವು ಇಸ್ಲಾಮಿಕ್ ಕ್ಯಾಲಿಫೇಟ್ ಮಾದರಿಯ ಅಭಿವೃದ್ದಿಯನ್ನು ಬೆಂಬಲಿಸುತ್ತದೆ ಮತ್ತು ಇದರ ಅನುಯಾಯಿಗಳು ಸಂಪ್ರದಾಯವಾದಿಗಳಾಗಿದ್ದು ಹಾಗೂ ಧಾರ್ಮಿಕ ಮೂಲಭೂತವಾದವನ್ನು ಅಪ್ಪಿಕೊಳ್ಳುತ್ತಾರೆ.

ಚುನಾವಣೆಯಲ್ಲಿ ಚರ್ಚೆಯಾದ ಪ್ರಮುಖ ಸಮಸ್ಯೆಗಳು

ಸಿರಿಯಾ-ಟರ್ಕಿಯಲ್ಲಿ ಕಳೆದ ವರ್ಷ ಘಟಿಸಿದ, 50,000ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಭೂಕಂಪವನ್ನು ನಿಭಾಯಿಸಿದ ರೀತಿಯು ಈ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ವಿಷಯವಾಗಿತ್ತು. ಭೂಕಂಪದಂತಹ ತುರ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಕಾರಣಕ್ಕೆ ಎರ್ಡೋಗನ್ ಕಟು ಟೀಕೆಗೆ ಗುರಿಯಾಗಬೇಕಾಯಿತು. ತನ್ನ ಅಧಿಕಾರಾವಧಿಯಲ್ಲಿ ಎರ್ಡೋಗನ್ ವಿಪತ್ತು ನಿರ್ವಹಣೆಗೆ ನೀಡಬೇಕಿದ್ದ ಹಣಕಾಸನ್ನು ಕಡಿತಗೊಳಿಸಿ, ಅದರ ಬದಲಿಗೆ ಸರ್ಕಾರೇತರ ಸಂಸ್ಥೆಗಳಿಗೆ ಮಣೆಹಾಕಿದರು. ಇದು ಭೂಕಂಪದ ಸಂದರ್ಭದಲ್ಲಿ ಅಪಾರ ತೊಂದರೆಗೆ ಎಡೆ ಮಾಡಿಕೊಟ್ಟಿತು. 1999ರಲ್ಲಿ ನಡೆದಿದ್ದ ಭೂಕಂಪದ ಸಂದರ್ಭದಲ್ಲಿ ಸಾವಿರಾರು ಜನರು ಅಸು ನೀಗಿದ್ದರು. ಆನಂತರ ನಡೆದ 2002ರ ಚುನಾವಣೆಯಲ್ಲಿ ಎರ್ಡೋಗನ್ ಟರ್ಕಿಯ ನಾಯಕರಾಗಿ ಹೊರಹೊಮ್ಮಿದ್ದರು. ಆ ವರ್ಷದ ಭೂಕಂಪನದ ನಂತರ ಎರ್ಡೋಗನ್ ರಾಷ್ಟ್ರೀಯ ವಿಪತ್ತುಗಳನ್ನು ತಡೆಗಟ್ಟಲು ಸಮರ್ಥ ಕೇಂದ್ರೀಕೃತ ನಾಯಕತ್ವವಿರಬೇಕು ಎಂದು ಪ್ರಚಾರ ಮಾಡಿದ್ದಲ್ಲದೆ, ನೈಸರ್ಗಿಕ ವಿಕೋಪಗಳಿಗೆ ತುರ್ತಾಗಿ ಸ್ಪಂದಿಸುವ ಮತ್ತು ಪಾರದರ್ಶಕ ಆಡಳಿತ ನೀಡುವ ಭರವಸೆ ನೀಡಿದ್ದರು. ಅಂತಿಮವಾಗಿ ಸಿಎಚ್‌ಪಿ ವಿರುದ್ಧ 363 ಸೀಟುಗಳನ್ನು ಪಡೆದು ವಿಜಯಿಯಾಗಿದ್ದಾರೆ.

ಇದನ್ನೂ ಓದಿ: ಸುಡಾನ್ ಬಿಕ್ಕಟ್ಟಿನ ಮೂಲವೇನು?

ಈ ಚುನಾವಣೆಯಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಮತ್ತು ಭಯೋತ್ಪಾದನೆಯ ಬಗ್ಗೆ ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದವು. ಅಧ್ಯಕ್ಷೀಯ ಸ್ಪರ್ಧೆಯು ಟರ್ಕಿಶ್ ರಾಷ್ಟ್ರೀಯತೆಯ ಎರಡು ವಿಭಿನ್ನ ದೃಷ್ಟಿಕೋನಗಳ ಮೇಲೆ ಕೇಂದ್ರೀಕರಿಸಿತು. ಬಹುಪಾಲು ಟರ್ಕಿಯನ್ನರು ಸಿರಿಯನ್ ನಿರಾಶ್ರಿತರು ವಾಪಸ್ ಸಿರಿಯಾಕ್ಕೆ ಮರಳಬೇಕೆಂದು ಬಯಸುತ್ತಾರೆ ಎಂದು ಚುನಾವಣಾ ಸಮೀಕ್ಷೆಗಳು ನುಡಿದಿದ್ದವು. ಹಾಗಾಗಿ ಎಲ್ಲಾ ಪ್ರಮುಖ ಅಧ್ಯಕ್ಷೀಯ ಅಭ್ಯರ್ಥಿಗಳು ನಿರಾಶ್ರಿತರ ವಾಪಸಾತಿಯನ್ನು ಬೆಂಬಲಿಸಿದರು. ಎಲ್ಲಾ ಅಧ್ಯಕ್ಷೀಯ ಅಭ್ಯರ್ಥಿಗಳು ಟರ್ಕಿಯ ಕುರ್ದಿಶ್-ಬಹುಸಂಖ್ಯಾತ ಪ್ರದೇಶಗಳಲ್ಲಿನ ಭಿನ್ನಾಭಿಪ್ರಾಯ, ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ಸಿರಿಯಾದ ಕುರ್ದಿಶ್-ನಿಯಂತ್ರಿತ ಪ್ರದೇಶಗಳ ಮೇಲೆ ಬಾಂಬ್ ದಾಳಿಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದರು.

ನಿರ್ದಿಷ್ಟ ಸಮಸ್ಯೆಗಳ ಸಂದರ್ಭದಲ್ಲಿ, ಸಿಎಚ್‌ಪಿ ಪಕ್ಷವು ಎಕೆಪಿ ಪಕ್ಷಕ್ಕಿಂತ ಹೆಚ್ಚೇನೂ ಭಿನ್ನವಾಗಿರುವುದಿಲ್ಲ. ಸಿಎಚ್‌ಪಿ ಪಕ್ಷವು ಸಂಸದೀಯ ಮಾದರಿಯ ಪ್ರಜಾಪ್ರಭುತ್ವಕ್ಕೆ ಮರಳುವ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಮತ್ತು ಎರ್ಡೋಗನ್‌ರವರ ನವ ಉದಾರವಾದಿ ಆರ್ಥಿಕ ನೀತಿಗಳಿಂದ ಒಂದು ಸಣ್ಣ ಹೆಜ್ಜೆ ದೂರ ನಿಲ್ಲುವ ಬಗ್ಗೆ ಪ್ರಚಾರ ಮಾಡಿತು. ಈ ನಡೆಗಳು ಪ್ರಗತಿಪರ ಶಕ್ತಿಗಳಿಗೆ ಸ್ವಲ್ಪ ಆಶಾದಾಯಕವಾಗಿ ತೋರಿದ್ದವು. ಆದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೋಗನ್‌ನ ವಿಜಯ ಮತ್ತು ಸಂಸತ್ತಿನ ಮೇಲೆ ಅವರ ಮುಂದುವರಿದ ಆಳ್ವಿಕೆಯಿಂದಾಗಿ ಆ ಆಶಾವಾದವು ಕರಗಿಹೋಗಿದೆ. ಜಾತ್ಯತೀತತೆ, ಮಹಿಳಾ ಹಕ್ಕುಗಳು ಮತ್ತು ಎಲ್‌ಜಿಬಿಟಿಕ್ಯುಐ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಿಎಚ್‌ಪಿ ಹೆಚ್ಚು ಪ್ರಗತಿಪರ ನಿಲುವನ್ನು ಹೊಂದಿದೆ.

ಪರ್ಯಾಯ ಚಿಂತನೆಗಳ ನೆಲೆ ಕುಗ್ಗುತ್ತಿದೆ

ಟರ್ಕಿಯ ಪ್ರಸ್ತುತ ರಾಜಕೀಯ ಸಂರಚನೆಯು ಭಿನ್ನಾಭಿಪ್ರಾಯಕ್ಕೆ ಬಹಳ ಕಡಿಮೆ ಅವಕಾಶ ನೀಡಿದೆ. ಬಲಪಂಥೀಯರ ಗೆಲುವಿನಿಂದಾಗಿ ಕೇಂದ್ರೀಕರಣ ಮತ್ತು ಸಂಕುಚಿತ ಮನಸ್ಥಿತಿಯ ವಾತಾವರಣ ಆವರಿಸಿಕೊಳ್ಳುತ್ತಿದೆ. ಈ ಚುನಾವಣೆ ಹೆಚ್ಚೆಚ್ಚು ಧ್ರುವೀಕರಣಗೊಂಡಿತ್ತು. ಜನ ಬೆಂಬಲದ ದೃಷ್ಟಿಯಲ್ಲಿ ಚುನಾವಣೆ ಮುಗಿಯುವವರೆಗೂ ಸಮೀಕ್ಷೆಗಳು ಅನಿಶ್ಚಿತವಾಗಿದ್ದವು.

ಹಾಗಾಗಿ ಹಿಂದಿನ ದಿನಗಳಿಗೆ ಮರಳುವುದು ಮಾತ್ರವೇ ಏಕೈಕ ಭರವಸೆಯಾಗಿದೆ. ಅಂದರೆ ಎರ್ಡೋಗನ್ ಪೂರ್ವದ ಮಾದರಿಯ ರಾಜಕೀಯಕ್ಕೆ ಕರೆ ನೀಡುವುದಾಗಿದೆ. ರಾಜಕೀಯ ವಿರೋಧವನ್ನು ದಮನ ಮಾಡುತ್ತಿರುವ ಇಂದಿನ ಒಟ್ಟೊಮೊನಿಸ್ಟ್ ರಾಜಕೀಯಕ್ಕೆ ಕೆಮಾಲಿಸಂ ಮಾತ್ರ ನಿಜವಾದ ಪರ್ಯಾಯವಾಗಿದೆ. ಸಂಸತ್ತಿನ ಚುನಾವಣೆಗಳಲ್ಲಿ ಸಿಎಚ್‌ಪಿ ಪಕ್ಷದ ಉತ್ತಮ ಪ್ರದರ್ಶನವು ಬದಲಾವಣೆಗೆ ಇನ್ನೂ ಅವಕಾಶವಿದೆ ಎಂಬುದನ್ನು ತೋರಿಸುತ್ತದೆ. ಆದರೆ ಆ ಬದಲಾವಣೆಗೆ ತೀವ್ರತರದ ಕ್ರಾಂತಿಕಾರಕ ಚಳವಳಿ ಅಥವಾ ದೀರ್ಘ ಸಮಯವನ್ನು ಬೇಡುತ್ತದೆ. ಅಲ್ಲಿಯವರೆಗೆ, ಎರ್ಡೋಗನ್ ಟರ್ಕಿಶ್ ರಾಜಕೀಯದ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ತಮ್ಮ ಕಾರ್ಯಸೂಚಿಯನ್ನು ಮುಂದುವರಿಸುತ್ತಾರೆ.

ಈ ಚುನಾವಣೆಗಳು ಕಳೆದುಹೋದ ಅವಕಾಶವನ್ನು ತೋರಿಸುತ್ತವೆ. ಸಿರಿಯನ್-ಟಿರ್ಕಿಶ್ ಭೂಕಂಪನವನ್ನು ಅತ್ಯಂತ ಕಳಪೆ ರೀತಿಯಲ್ಲಿ ನಿಭಾಯಿಸಿದ್ದರಿಂದ ಎರ್ಡೋಗನ್ ಅವರ ಜನಪ್ರಿಯತೆಯು ಸಾರ್ವಕಾಲಿಕವಾಗಿ ಕುಸಿತಗೊಂಡಿತ್ತು. ಪ್ರತಿಪಕ್ಷಗಳ ಬಲ ಹೆಚ್ಚುತ್ತಿರುವಾಗಲೂ, ಅದು ಇನ್ನೂ ಸಾಕಷ್ಟು ಬಲವಾಗಿಲ್ಲ ಎಂಬುದನ್ನು ತೋರಿಸುತ್ತದೆ.

ಕಿಶೋರ್ ಗೋವಿಂದ

ಕನ್ನಡಕ್ಕೆ: ಮುತ್ತುರಾಜು & ಶಶಾಂಕ್ ಎಸ್.ಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...