Homeಅಂತರಾಷ್ಟ್ರೀಯಸುಡಾನ್ ಬಿಕ್ಕಟ್ಟಿನ ಮೂಲವೇನು?

ಸುಡಾನ್ ಬಿಕ್ಕಟ್ಟಿನ ಮೂಲವೇನು?

- Advertisement -
- Advertisement -

ಏಪ್ರಿಲ್ 15, 2023ರಿಂದ ಸುಡಾನ್ ದೇಶವು- ರಾಜಧಾನಿ ಖಾರ್ಟೂಮ್ ಮತ್ತು ದರ್ಫರ್ ನಗರಗಳಲ್ಲಿ ಪ್ರಸ್ತುತ ಮಿಲಿಟರಿ ಆಡಳಿತದ ಪ್ರತಿಸ್ಪರ್ಧಿ ಬಣಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳನ್ನು ಕಂಡಿದೆ. ರ್‍ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಎಂಬ ಸೇನಾ ಘಟಕವು ಸರಕಾರದ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡುವುದರೊಂದಿಗೆ ಈ ಘರ್ಷಣೆ ಆರಂಭವಾಯಿತು. ಘರ್ಷಣೆಯಲ್ಲಿ ಈಗಾಗಲೇ ಐನೂರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಆರ್‌ಎಸ್‌ಎಫ್ ಘಟಕದ ನಾಯಕ ಮೊಹಮ್ಮದ್ ಹಮ್ದಾನ್ ದಗಾಲೊ ಮತ್ತು ಸೇನಾ ನಾಯಕ ಅಬ್ದೆಲ್ ಫತಾಹ್ ಅಲ್-ಬುರ್ಹಾನ್ ಅವರಿಬ್ಬರೂ- ತಾವು ಸೇನಾ ಮುಖ್ಯಸ್ಥರ ನಿವಾಸ, ಖಾರ್ಟೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸೇನಾ ಮುಖ್ಯ ಕಚೇರಿ, ಅಧ್ಯಕ್ಷೀಯ ಅರಮನೆ ಮುತ್ತು ಸುಡಾನ್ ಟಿವಿ ಮುಖ್ಯ ಕಚೇರಿ ಮುಂತಾದ ಸರಕಾರದ ಪ್ರಮುಖ ತಾಣಗಳನ್ನು ನಿಯಂತ್ರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಬಿಕ್ಕಟ್ಟು ಸುಡಾನಿನ ಕೆಲವು ವರ್ಷಗಳ ತೀವ್ರತರ ರಾಜಕೀಯ ಅಸ್ಥಿರತೆಯ ನಂತರ ಬಂದಿದೆ. ಈ ಅಸ್ಥಿರತೆಯು 2019ರಲ್ಲಿ ಹಿಂದಿನ 30 ವರ್ಷಗಳ ಕಾಲ ದೇಶದ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಒಮರ್ ಅಲ್ ಬಶೀರ್ ಅವರ ಉಚ್ಚಾಟನೆ ಮಾಡಿದಾಗ ಆರಂಭವಾಯಿತು. ಅವರ ಆಡಳಿತದ ಕೊನೆಯು ಸಾಮೂಹಿಕ ಪ್ರತಿಭಟನೆಗಳಿಂದ ಗುರುತಿಸಲ್ಪಡುತ್ತದೆ. ಡಿಸೆಂಬರ್ 2018ರಲ್ಲಿ ಆರಂಭವಾದ ಪ್ರತಿಭಟನೆಗಳು ಹಲವಾರು ತಿಂಗಳುಗಳ ಕಾಲ ಮುಂದುವರಿದು, ಅವರ 30 ವರ್ಷಗಳ ಆಡಳಿತ ಕೊನೆಗೊಳಿಸುವ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆಗಳನ್ನು ತರುವ ಬೇಡಿಕೆಗಳನ್ನು ಮುಂದಿಟ್ಟಿದವು. ಆರಂಭದಲ್ಲಿ ಈ ಪ್ರತಿಭಟನೆಗಳಿಗೆ ಕಿಡಿ ಹಚ್ಚಿದ್ದು ಏರುತ್ತಿದ್ದ ಆಹಾರ ಬೆಲೆಗಳು. ಆದರೆ, ನಂತರ ಇದು ವ್ಯಾಪಕವಾದ ಸರಕಾರ ವಿರೋಧಿ ಪ್ರಜಾಸತ್ತಾತ್ಮಕ ಆಂದೋಲನವಾಗಿ ಬೆಳೆಯಿತು.

ಒಮರ್ ಅಲ್ ಬಶೀರ್

ಅವರ ಉಚ್ಛಾಟನೆಯ ನಂತರ ಒಂದು ತಾತ್ಕಾಲಿಕವಾದ ನಾಗರಿಕ-ಸೇನಾ ಜಂಟಿ ಸರಕಾರದ ಸರಕಾರದ ಸ್ಥಾಪನೆಯಾಯಿತು. ಆದರೆ ನಂತರ ಅಕ್ಟೋಬರ್ 2021ರಲ್ಲಿ ಬುರ್ಹಾನ್ ಮತ್ತು ದಗಾಲೊ ನೇತೃತ್ವದಲ್ಲಿ ಕ್ರಾಂತಿ ನಡೆದು, ಸೇನೆಯು ಸಂಪೂರ್ಣ ಅಧಿಕಾರವನ್ನು ತನ್ನ ವಶಕ್ಕೆ ಪಡೆಯಿತು. ಮಿಲಿಟರಿ ಕೂಟವು ನಂತರ ಒಂದು ನಾಗರಿಕ ಸರಕಾರಕ್ಕೆ ಅಧಿಕಾರ ಬಿಟ್ಟುಕೊಡಲು ಒಪ್ಪಿತಾದರೂ, ದಗಾಲೊ ಮತ್ತು ಬುರ್ಹಾನ್ ನಡುವಿನ ಸಂಘರ್ಷದ ಮೇಲಾಟವು ಒಂದು ಔಪಚಾರಿಕ ಒಪ್ಪಂದವನ್ನು ವಿಳಂಬಗೊಳಿಸಿತು.

ಆರ್‌ಎಸ್‌ಎಫ್ ಪಡೆಗಳನ್ನು ಅಧಿಕೃತ ಸೇನೆಯೊಂದಿಗೆ ವಿಲೀನಗೊಳಿಸುವುದಕ್ಕೆ ಸಂಬಂಧಿಸಿ, ದಗಾಲೊ ಮತ್ತು ಬುರ್ಹಾನ್ ಮತ್ತೆಮತ್ತೆ ಘರ್ಷಣೆಗೆ ಇಳಿದಿದ್ದಾರೆ. ಆರ್‌ಎಸ್‌ಎಫ್ ಒಂದು ಅರೆ ಸೈನಿಕ ಮಿಲಿಟರಿ ಪಡೆಯಾಗಿದ್ದು, ದರ್ಫರ್ ಕದನದ ಸಮಯದಲ್ಲಿ ಸೇನೆಯ ಜೊತೆಗೆ ಹೋರಾಡಿತ್ತು. 2019ರಲ್ಲಿ ಒಮರ್ ಅಲ್ ಬಶೀರ್ ಉಚ್ಚಾಟನೆಗಾಗಿ ಆಂದೋಲನ ನಡೆಸುತ್ತಿದ್ದ ಪ್ರತಿಭಟನಾಕಾರರ ವಿರುದ್ಧ ಆರ್‌ಎಸ್‌ಎಫ್ ಪಡೆಗಳನ್ನು ಬಳಸಲಾಗುತ್ತಿತ್ತು. ಏಪ್ರಿಲ್ 11, 2023ರಲ್ಲಿ ದಗಾಲೊ ಆರ್‌ಎಸ್‌ಎಫ್ ಪಡೆಗಳನ್ನು ಮೆರೋವೆ ಮತ್ತು ಖಾರ್ಟೂಮ್ ಪ್ರದೇಶಗಳಲ್ಲಿ ನಿಯೋಜಿಸಿದರು. ಅವುಗಳನ್ನು ಹಿಂದೆ ಹೋಗುವಂತೆ ಬುರ್ಹಾನ್ ಅವರ ಪಡೆಗಳು ಆಗ್ರಹಿಸಿದಾಗ ಅವು ನಿರಾಕರಿಸಿದವು; ಇದರಿಂದ ಕದನ ಆರಂಭವಾಯಿತು. ಏಪ್ರಿಲ್ 13, 2023ರಲ್ಲಿ ಕಾದಾಟ ಉಲ್ಬಣಿಸಿತು.

ಹಿನ್ನೆಲೆ

ಸುಡಾನಿನಲ್ಲಿ ರಾಜಕೀಯ ತಳಮಳ ಈಗ ಕೆಲವು ವರ್ಷಗಳಿಂದ ಇದೆ. 2019ರಲ್ಲಿ ಸೇನೆಯು ಒಮರ್ ಅಲ್ ಬಶೀರ್ ಅವರನ್ನು ಕಿತ್ತೆಸೆದಾಗ ಒಂದು ತಾತ್ಕಾಲಿಕ ಸರಕಾರ ಮತ್ತು ಪ್ರಜಾಪ್ರಭುತ್ವದ ಹಾದಿಯ ಭರವಸೆ ನೀಡಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಮಿಲಿಟರಿಯು ಅಧಿಕಾರವನ್ನು ಬಲಪಡಿಸಿಕೊಂಡು, ಸರಕಾರವನ್ನು ನೇರವಾಗಿ ನಿಯಂತ್ರಿಸುವುದು ಕಂಡುಬಂದಿದ್ದು, ಸುಡಾನಿನಲ್ಲಿ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ. ಸರಕಾರದ ನೇರ ನಿಯಂತ್ರಣ ತೆಗೆದುಕೊಂಡ ಮೇಲೆ ಜನರಲ್ ಅಬ್ದೆಲ್ ಫತಾಹ್ ಅಲ್ ಬುರ್ಹಾನ್ ಸುದ್ದಿಗೋಷ್ಟಿಯೊಂದನ್ನು ಕರೆದು ತನ್ನ ಕಾರ್ಯಾಚರಣೆಯ ವಿವರಗಳನ್ನು ನೀಡಿದರು. ದೇಶವು ಅವ್ಯವಸ್ಥೆಗೆ ಧುಮುಕುವುದನ್ನು ತಡೆಯಲು ನಿಯಂತ್ರಣ ಅಗತ್ಯವಾಯಿತೆಂದು ಹೇಳಿಕೊಂಡ ಅವರು, ಒಂದು ತುರ್ತುಸ್ಥಿತಿ ಘೋಷಣೆ ಮಾಡಿದರು ಮತ್ತು ತಂತ್ರಜ್ಞರನ್ನು ಒಳಗೊಂಡ ಸರಕಾರವನ್ನು ರಚಿಸುವ ಭರವಸೆ ನೀಡಿದರು.

ಒಮರ್ ಅಲ್ ಬಶೀರ್ ಅವರನ್ನು ಕಿತ್ತು ಹಾಕಿದ್ದು ಸುಡಾನಿನ ಇತಿಹಾಸದಲ್ಲಿ ಒಂದು ಗಮನಾರ್ಹ ಕ್ಷಣ. ಆದರೆ, ಅಂದಿನಿಂದ ದೇಶವು ಕೋವಿಡ್-19 ಮತ್ತು 2020ರ ಒಂದು ವಿಫಲ ದಂಗೆ ಯತ್ನವೂ ಸೇರಿದಂತೆ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಜೊತೆಗೆ ಖಾರ್ಟೂಮ್‌ನಲ್ಲಿ ಮಿಲಿಟರಿ ಪರ ಪ್ರತಿಭಟನೆಗಳು ಕೂಡಾ ನಡೆದಿದ್ದು, ಸೇನೆ ಮತ್ತು ನಾಗರಿಕ ಸರಕಾರದ ನಡುವಿನ ಉದ್ವಿಗ್ನತೆಯನ್ನು ಅದು ತೋರಿಸುತ್ತದೆ. ಹೆಮೆಟ್ಟಿ ಮತ್ತು ರಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಸುಡಾನಿನ ರಾಜಕೀಯದ ಎರಡು ಪ್ರಮುಖ ಬಣಗಳು. ಹೆಮೆಟ್ಟಿ ಕೂಡಾ ಒಂದು ಮಾಜಿ ಅರೆಸೈನಿಕ ಪಡೆಯಾಗಿದ್ಧು, ಒಮರ್ ಅಲ್ ಬಶೀರ್ ಪತನದ ನಂತರ ಅಧಿಕಾರಕ್ಕೆ ಏರಿತ್ತು. ಹೀಗಿದ್ದರೂ, ಆರ್‌ಎಸ್‌ಎಫ್ ಯುದ್ಧಾಪರಾಧದ ಆರೋಪಗಳನ್ನು ಎದುರಿಸುತ್ತಿದ್ದು, ಸುಡಾನಿನ ರಾಜಕೀಯದಲ್ಲಿ ಅದರ ಭವಿಷ್ಯದವು ಅನಿಶ್ಚಿತವಾಗಿದೆ.

ಇದನ್ನೂ ಓದಿ: ನ್ಯಾಯಾಂಗ ’ಸುಧಾರಣೆ’ಗಳ ವಿರುದ್ಧ ಪ್ರತಿಭಟಿಸುತ್ತಿರುವ ಇಸ್ರೇಲ್

ಸುಡಾನಿಗೆ ದೀರ್ಘಕಾಲದ ಸಂಘರ್ಷದ ಇತಿಹಾಸವಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಜೊತೆಗೆ ಅದರ ಸಂಬಂಧದಲ್ಲಾದ ಇತ್ತೀಚಿನ ಬದಲಾವಣೆಗಳು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಸುಡಾನ್ ಸಾಲಮನ್ನಾ ಪಡೆದು, ಹೊಸ ಸಾಲಗಳಿಗೆ ಅರ್ಹವಾಗಿದ್ದರೂ, ಐಎಂಎಫ್ ಈಗ ಸಾಲ ಮತ್ತು ನೆರವನ್ನು ಅಮಾನತಿನಲ್ಲಿ ಇರಿಸಿದ್ದು, ದೇಶದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಹೆಚ್ಚುವರಿಯಾಗಿ ಹೊಸ ಸರಕಾರವು ಅಭಿವೃದ್ಧಿ ಸಾಲ ಪಡೆಯುವ ಯೋಜನೆ ಹೊಂದಿದ್ದರೂ, ದೇಶದ ಸಂಘರ್ಷದ ಇತಿಹಾಸವು ಅದರ ಪ್ರಯತ್ನವನ್ನು ಇನ್ನಷ್ಟು ಜಟಿಲಗೊಳಿಸಬಹುದು.

ಸುಡಾನಿನಲ್ಲಿ ಸೇನೆಯು ಅಷ್ಟೊಂದು ಪ್ರಬಲವಾಗಿರುವುದು ಏಕೆ?

’ಭಯೋತ್ಪಾದನೆ ವಿರುದ್ಧ ಯುದ್ಧ’ ಆರಂಭವಾದಾಗ ಹಲವಾರು ಪಾಶ್ಚಿಮಾತ್ಯ ಶಕ್ತಿಗಳು ಉತ್ತರ ಆಫ್ರಿಕಾದ ಹಲವಾರು ಸರಕಾರಗಳ ಜೊತೆ ಸೇನಾ ಸಂಬಂಧಗಳನ್ನು ಸ್ಥಾಪಿಸಿದವು. ಇದು ನಾಗರಿಕ ಸರಕಾರಗಳು ಮತ್ತು ಸೇನೆಗಳ ನಡುವೆ ಗಮನಾರ್ಹವಾದ ಅಧಿಕಾರದ ಅಸಮತೋಲನ ಉಂಟುಮಾಡಿತು. ಹಿಂದಿನಿಂದಲೂ ಇಲ್ಲಿ ನಾಗರಿಕ ಸರಕಾರಗಳು ದುರ್ಬಲವಾಗಿದ್ದು, ಅವುಗಳನ್ನು ವಿದೇಶಿ ಸರಕಾರಗಳು ಬಳಸಿಕೊಂಡುಬಂದಿವೆ. ಸೇನೆಗಳಿಗೆ ಹಣ ಮತ್ತು ಕಣ್ಗಾವಲು ಸಾಧನಗಳು ಸಿಗುತ್ತಿವೆ. ಈ ಅಸಮತೋಲನವು ಹಲವಾರು ಆಫ್ರಿಕನ್ ದೇಶಗಳಲ್ಲಿ ಮತ್ತೆಮತ್ತೆ ಸೇನಾದಂಗೆಗಳಿಗೆ ಕಾರಣವಾಗಿ ಸೇನೆಗಳು ನಾಗರಿಕ ಸರಕಾರಗಳನ್ನು ಉರುಳಿಸುವುದಕ್ಕೆ ಕಾರಣವಾಗಿದೆ.

ತಾವು ರಾಜಕೀಯ ಬಿಕ್ಕಟ್ಟಿಗೆ ಸ್ಪಂದಿಸುತ್ತಿರುವುದಾಗಿಯೂ, ಶೀಘ್ರದಲ್ಲೇ ನಾಗರಿಕ ಸರಕಾರವನ್ನು ಮರಳಿಸಲಾಗುವುದು ಎಂದು ಮಿಲಿಟರಿ ಸರಕಾರಗಳು ಯಾವಾಗಲೂ ಹೇಳಿಕೊಳ್ಳುತ್ತವೆ. ಆದರೆ, ಯಾವತ್ತೂ ಸರಕಾರದ ಎರಡು ಅಂಗಗಳ ನಡುವೆ ಹೆಚ್ಚಾಗಿ ಉದ್ವಿಗ್ನತೆ ಉಂಟಾಗುತ್ತಿರುತ್ತವೆ. ಜಗತ್ತಿನಾದ್ಯಂತ ಖಾಸಗಿ ಮಿಲಿಟರಿ ಪಡೆಗಳು ಇಲ್ಲಿ ಅಸ್ತಿತ್ವದಲ್ಲಿ ಇರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಸಂಘರ್ಷದ ಪ್ರದೇಶದಿಂದ ಮಿಲಿಟರಿಗಳು ಹಿಂತೆಗೆದಾಗ ಇವು ಪ್ರವೇಶಿಸಿ, ಆಗಲೇ ಇರುವ ಉದ್ವಿಗ್ನತೆ ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತವೆ.

ಆಫ್ರಿಕಾ- ನಿರ್ದಿಷ್ಟವಾಗಿ ಸುಡಾನ್ ಈ ಪ್ರಕ್ರಿಯೆಗೆ ಮತ್ತೆಮತ್ತೆ ಗುರಿಯಾಗಿದೆ. ಶೀತಲ ಸಮರದ ನಂತರದ ವರ್ಷಗಳಲ್ಲಿ ಆಫ್ರಿಕಾವು ಶಸ್ತ್ರಾಸ್ತ್ರ ಮಾರಾಟ ಜಾಲಗಳ ಗುರಿಯಾಗಿದ್ದು, ಖಾಸಗಿ ಸೇನೆಗಳ ಜೊತೆಗೆ ಬಂಡುಕೋರ ಗುಂಪುಗಳು ಮತ್ತು ಸರಕಾರಗಳೆಲ್ಲವೂ ಈ ವ್ಯಾಪಾರದಲ್ಲಿ ತೊಡಗಿಕೊಂಡಿವೆ. ಸುಡಾನ್ ನಿರ್ದಿಷ್ಟವಾಗಿ ಮತ್ತು ವಿಭಜನೆಯ ನಂತರ ದಕ್ಷಿಣ ಸುಡಾನ್ ವಿಶೇಷವಾಗಿ ಇಂತಹ ಹಲವಾರು ಸಂಘರ್ಷಗಳನ್ನು ಕಂಡಿದೆ.

ಸುಡಾನಿನಲ್ಲಿ 2019ರಲ್ಲಿ ತಳಮಟ್ಟದ ಪ್ರಜಾಸತ್ತಾತ್ಮಕ ಆಂದೋಲನವು ಉಂಟಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಅದನ್ನು ಬುಡಮೇಲು ಮಾಡಿವೆ. ರಾಪಿಡ್ ಸಪೋರ್ಟ್ ಫೋರ್ಸಸ್‌ನ ಭವಿಷ್ಯದ ಕುರಿತ ಅನಿಶ್ಚಿತತೆ ಮತ್ತು ಅದರ ಮೇಲೆ ಇರುವ ಯುದ್ಧಾಪರಾಧಗಳ ಆರೋಪವು ಇತ್ತೀಚೆಗೆ ಬುರ್ಹಾನ್ ಅಧಿಕಾರ ಕಿತ್ತುಕೊಂಡಿರುವುದರಲ್ಲಿ ಅದು ವಹಿಸಿರಬಹುದಾದ ಪಾತ್ರದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಸುಡಾನಿನಲ್ಲಿ ಸಂಘರ್ಷದ ಮತ್ತು ಅಧಿಕಾರದ ಸಂಚಲನೆಯ ಇತಿಹಾಸವು ಅಲ್ಲಿ ಅಂತಾರಾಷ್ಟ್ರೀಯ ನೆರವಿನ ಮತ್ತು ಸುಡಾನ್ ಪ್ರಜಾಪ್ರಭುತ್ವಕ್ಕೆ ಮರಳುವಲ್ಲಿ ಭಾಗವಹಿಸುವಿಕೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಪಾಶ್ಚಿಮಾತ್ಯ ಶಕ್ತಿಗಳು ಮತ್ತು ಅಂತಾರಾಷ್ಟ್ರೀಯ ಸಮುದಾಯಗಳು, ಸೇನಾ ಸರಕಾರಗಳು ಅಥವಾ ಖಾಸಗಿ ಮಿಲಿಟರಿ ಪಡೆಗಳನ್ನು ಬೆಂಬಲಿಸುವ ಮೂಲಕ ಈ ರಾಜಕೀಯ ಸಂಚಲನವನ್ನು ಬಿಗಡಾಯಿಸುವುದರಿಂದ ದೂರ ಉಳಿಯುವುದು ನಿರ್ಣಾಯಕ. ಬದಲಾಗಿ ಅವು ಪ್ರಜಾಸತ್ತಾತ್ಮಕ ಮತ್ತು ನಾಗರಿಕ ಸಮಾಜದ ಸಂಸ್ಥೆಗಳ ಬಲಪಡಿಸುವಿಕೆಗೆ ಆದ್ಯತೆ ನೀಡಬೇಕು.

ಭಾರತೀಯರ ಬಗ್ಗೆ ಆತಂಕ

ಸುಡಾನಿನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ಸುರಕ್ಷತೆ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳ ಜೊತೆಗೆ ಮಾತನಾಡಿದ್ದಾರೆ. ಒಬ್ಬ ಭಾರತೀಯ ನಾಗರಿಕ ಮೃತಪಟ್ಟಿರುವುದಾಗಿ ಏಪ್ರಿಲ್ 16, 2023ರಂದು ಸುಡಾನಿನಲ್ಲಿರುವ ಭಾರತೀಯ ದೂತಾವಾಸವು ದೃಢೀಕರಿಸಿದ್ದು, ಅಲ್ಲೊಂದು ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿ, ಭಾರತೀಯರಿಗೆ ಸುರಕ್ಷಾ ಸೂಚನೆಗಳನ್ನು ಹೊರಡಿಸಿದೆ. ಸಿದ್ದರಾಮಯ್ಯ ಅವರು ಟ್ವಿಟ್ಟರಿನಲ್ಲಿ, ಕರ್ನಾಟಕದ ಹಕ್ಕಿಪಿಕ್ಕಿ ಆದಿವಾಸಿ ಸಮುದಾಯದ 31 ಮಂದಿಯನ್ನು ಸುರಕ್ಷಿತವಾಗಿ ಮರಳಿ ತರುವಂತೆ ಒತ್ತಾಯಿಸಿದ್ದಾರೆ. ಆದರೆ ಜೈಶಂಕರ್ ಮಾತ್ರ ಸಿದ್ದರಾಮಯ್ಯ ಅವರು ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. 24, ಏಪ್ರಿಲ್ 2023ರಂದು ಭಾರತೀಯರ ಒಂದು ತಂಡವನ್ನು ರಕ್ಷಿಸಿ ಕರೆತಂದಿರುವ ಬಗ್ಗೆ ಜೈಶಂಕರ್ ಅವರು ಮಾಡಿದ ಒಂದು ಟ್ವೀಟ್‌ಗೆ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದರು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....