Homeಮುಖಪುಟಒಡಿಸ್ಸಾ ರೈಲು ದುರಂತ ನಿರ್ಲಕ್ಷ್ಯದಿಂದ ಸಂಭವಿಸಿದೆ; ಅಪರಿಚಿತರ ವಿರುದ್ಧ ಎಫ್‌ಐಆರ್‌

ಒಡಿಸ್ಸಾ ರೈಲು ದುರಂತ ನಿರ್ಲಕ್ಷ್ಯದಿಂದ ಸಂಭವಿಸಿದೆ; ಅಪರಿಚಿತರ ವಿರುದ್ಧ ಎಫ್‌ಐಆರ್‌

- Advertisement -
- Advertisement -

ಒಡಿಸ್ಸಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸೋಮವಾರ ಎಫ್‌ಐಆರ್‌ ದಾಖಲಾಗಿದ್ದು, “ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ” ಎಂದು ಉಲ್ಲೇಖಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಒಡಿಶಾದ ಸರ್ಕಾರಿ ರೈಲ್ವೆ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ, ಅಪರಿಚಿತ ವ್ಯಕ್ತಿಗಳನ್ನು ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದೆ.

ಭಾರತದಲ್ಲಿ ನಡೆದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾದ ಬಾಲಸೋರ್‌ ದುರಂತದಲ್ಲಿ 288 ಪ್ರಯಾಣಿಕರು ಸಾವನ್ನಪ್ಪಿದರು ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡರು.

ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು), ದುಷ್ಕೃತ್ಯ ಅಥವಾ ನಿರ್ಲಕ್ಷ್ಯದ ಕ್ರಿಯೆಯ ಮೂಲಕ ಜೀವಕ್ಕೆ ಹಾನಿ, ಅಪಾಯವನ್ನುಂಟುಮಾಡುವ ಆರೋಪಗಳಿಗೆ ಸಂಬಂಧಿಸಿದ ಸೆಕ್ಷನ್ 37, 38 ಮತ್ತು ಸೆಕ್ಷನ್‌ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರೈಲ್ವೆ ಕಾಯ್ದೆಯ ಸೆಕ್ಷನ್‌ 153 (ರೈಲ್ವೇ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು ಮಾಡುವ ಕಾನೂನುಬಾಹಿರ ಮತ್ತು ನಿರ್ಲಕ್ಷ್ಯದ ಕ್ರಮ), 154 ಮತ್ತು 175 (ಜೀವಕ್ಕೆ ಅಪಾಯ ತಂದೊಡ್ಡುವುದು) ಅಡಿಯಲ್ಲೂ ಅಪರಿಚಿತ ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.

“ಪ್ರಸ್ತುತ ನಿರ್ದಿಷ್ಟ ರೈಲ್ವೆ ಉದ್ಯೋಗಿಗಳ ಅಪರಾಧವನ್ನು ಖಚಿತಪಡಿಸಲಾಗಿಲ್ಲ, ಇದು ತನಿಖೆಯ ಸಮಯದಲ್ಲಿ ಬೆಳಕಿಗೆ ಬರಲಿದೆ” ಎಂದು ಎಫ್‌ಐಆರ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಸಬ್ ಇನ್ಸ್ ಪೆಕ್ಟರ್ ಪಾಪುಕುಮಾರ್ ನಾಯ್ಕ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಜೂನ್ 2 ರಂದು ಹೌರಾದಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್, ಒಡಿಶಾದ ಬಾಲಸೋರ್ ಬಳಿ ಲೂಪ್ ಲೈನ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಮೇಲ್ಮುಖ ಮಾರ್ಗವನ್ನು ಪ್ರವೇಶಿಸುವಂತೆ ಆರಂಭದಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿತ್ತು, ಆದರೆ ನಂತರ ಸಿಗ್ನಲ್ ತೆಗೆಯಲಾಯಿತು. ಇದರ ಬೆನ್ನಲ್ಲೇ ಎಕ್ಸ್ ಪ್ರೆಸ್ ರೈಲು ಲೂಪ್ ಲೈನ್ ಪ್ರವೇಶಿಸಿತು.

ಇದಾದ ನಂತರ ಹೌರಾ ಕಡೆಗೆ ಹೊರಟಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಬಂದಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಳಿತಪ್ಪಿದ ಕೋಚ್‌ಗಳಿಗೆ ಡಿಕ್ಕಿ ಹೊಡೆಯಿತು. ಸಿಗ್ನಲ್ ದೋಷದಿಂದ ಅಪಘಾತ ಸಂಭವಿಸಿರಬಹುದು ಎಂದು ರೈಲ್ವೆಯ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕೇಂದ್ರೀಯ ತನಿಖಾ ದಳದ 10 ಸದಸ್ಯರ ತಂಡವು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಅದರ ತನಿಖೆಯನ್ನು ಸೋಮವಾರ ಪ್ರಾರಂಭಿಸಿತು ಎಂದು ಪಿಟಿಐ ವರದಿ ಮಾಡಿದೆ.

ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಭಾನುವಾರ ಶಿಫಾರಸು ಮಾಡಿದೆ. ಈ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ 12 ರಾಜಕೀಯ ಪಕ್ಷಗಳು ಪ್ರಶ್ನಿಸಿದ್ದು, “ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಗೆ ಕಾನೂನು ಜಾರಿ ಸಂಸ್ಥೆಗಳ ತನಿಖೆ ಸರಿಯಲ್ಲ” ಎಂದು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, “ಸಿಬಿಐ ಅಪರಾಧಗಳನ್ನು ತನಿಖೆ ಮಾಡಲು ಇದೆ, ರೈಲ್ವೆ ಅಪಘಾತಗಳನ್ನಲ್ಲ” ಎಂದು ಟೀಕಿಸಿದ್ದಾರೆ.

“…ಹೆಚ್ಚುವರಿಯಾಗಿ, ಸಿಬಿಐನವರು ರೈಲ್ವೆ ಸುರಕ್ಷತೆ, ಸಿಗ್ನಲಿಂಗ್ ಮತ್ತು ನಿರ್ವಹಣೆ ವಿಚಾರಗಳಲ್ಲಿ ತಾಂತ್ರಿಕ ಪರಿಣತಿಯನ್ನು ಹೊಂದಿರುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿರಿ: ಒಡಿಶಾ ರೈಲು ಅಪಘಾತದಲ್ಲಿ ಸತ್ತವರ ಸಂಖ್ಯೆ 500 ರಷ್ಟಿದೆ, ಆದರೆ ಕೇಂದ್ರ ಕಡಿಮೆ ಲೆಕ್ಕ ತೋರಿಸುತ್ತಿದೆ: ಮಮತಾ ಬ್ಯಾನರ್ಜಿ ಆರೋಪ

ಕಾನ್ಪುರದಲ್ಲಿ 2016ರಲ್ಲಿ ರೈಲು ಹಳಿ ತಪ್ಪಿ 150 ಪ್ರಯಾಣಿಕರು ಸಾವಿಗೀಡಾಗಿದ್ದನ್ನು ಖರ್ಗೆ ಉಲ್ಲೇಖಿಸಿದ್ದಾರೆ. ಆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿದ್ದನ್ನು ಅವರು ಪ್ರಸ್ತಾಪಿಸಿದ್ದಾರೆ.

“2017ರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತಾ, ‘ಪಿತೂರಿ’ ನಡೆದಿದೆ ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡಿರಿ. ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ದೇಶಕ್ಕೆ ಭರವಸೆ ನೀಡಲಾಯಿತು. ಆದರೆ 2018ರಲ್ಲಿ ಎನ್ಐಎ ತನಿಖೆಯನ್ನು ಮುಕ್ತಾಯಗೊಳಿಸಿತು. ಆರೋಪಪಟ್ಟಿ ಸಲ್ಲಿಸಲು ನಿರಾಕರಿಸಿತು. ರಾಷ್ಟ್ರವು ಇನ್ನೂ ಕತ್ತಲೆಯಲ್ಲಿದೆ. 150 ಸಾವುಗಳಿಗೆ ಯಾರು ಹೊಣೆ?” ಎಂದು ಖರ್ಗೆ ಕೇಳಿದ್ದಾರೆ.

ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಇದರ ನಡುವೆ ತನ್ನ ಸಿಗ್ನಲಿಂಗ್ ವ್ಯವಸ್ಥೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಸುರಕ್ಷತಾ ಅಭಿಯಾನವನ್ನು ರೈಲ್ವೆ ಇಲಾಖೆ ಪ್ರಾರಂಭಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...