1992ರಲ್ಲಿ ರಾಮ ಜನ್ಮಭೂಮಿ ಆಂದೋಲನದ ಕಾವು ಹೆಚ್ಚುತ್ತಿದ್ದಂತೆ ಬಿಜೆಪಿ ನಾಯಕ ವಿಜಯ ರಾಜೇ ಸಿಂಧಿಯಾ ಅವರು ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಬಾಬರಿ ಮಸೀದಿಗೆ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು ಮತ್ತು ಅಂದಿನ ಪ್ರಧಾನಿ ನರಸಿಂಹರಾವ್ ತಮ್ಮ ಮಂತ್ರಿಗಳ ಸಲಹೆಯನ್ನು ಕಡೆಗಣಿಸಿ ಬಿಜೆಪಿ ನಾಯಕನ ಮಾತಿನಲ್ಲಿ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದರು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಬಹಿರಂಗಪಡಿಸಿದ್ದಾರೆ.
ನಿನ್ನೆ ಹಿರಿಯ ಪತ್ರಕರ್ತೆ ನೀರ್ಜಾ ಚೌಧರಿ ಅವರ ‘ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶರದ್ ಪವಾರ್, ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ನಾನು ರಕ್ಷಣಾ ಸಚಿವನಾಗಿದ್ದೆ. ಅಂದು ನಡೆದ ಸಭೆಯಲ್ಲಿ ನಮ್ಮ ಜೊತೆ ಅಂದಿನ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ ಜೊತೆಗಿದ್ದರು ಎಂದು ಹೇಳಿದರು.
ಸಭೆಯಲ್ಲಿ ಹಲವು ಸಚಿವರಿದ್ದರು ಮತ್ತು ನಾನು ಅವರಲ್ಲಿ ಒಬ್ಬನಾಗಿದ್ದೆ, ಸಭೆಯಲ್ಲಿ ಪ್ರಧಾನ ಮಂತ್ರಿಗಳು ಸರ್ವ ಪಕ್ಷದ ನಾಯಕರ ಸಭೆಯನ್ನು ಕರೆಯಬೇಕೆಂದು ನಿರ್ಧರಿಸಲಾಗಿತ್ತು ಎಂದು ಎನ್ಸಿಪಿ ಮುಖ್ಯಸ್ಥರು ಹೇಳಿದ್ದಾರೆ.
ಆ ಸಭೆಯಲ್ಲಿ ವಿಜಯ ರಾಜೇ ಸಿಂಧಿಯಾ ಅವರು ಬಾಬರಿ ಮಸೀದಿಗೆ ಏನೂ ಆಗುವುದಿಲ್ಲ ಎಂದು ಪ್ರಧಾನಿ ನರಸಿಂಹ ರಾವ್ ಅವರಿಗೆ ಭರವಸೆ ನೀಡಿದ್ದರು. ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ ಅವರು ಏನು ಬೇಕಾದರೂ ಅನಾಹುತ ಆಗಬಹುದು ಎಂದು ಹೇಳಿದ್ದರು, ಆದರೆ ಪ್ರಧಾನಿ ರಾವ್ ಅವರು ಸಿಂಧಿಯಾ ಅವರನ್ನು ನಂಬಲು ನಿರ್ಧರಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಮಸೀದಿ ಧ್ವಂಸದ ನಂತರ ರಾವ್ ಅವರು ಕೆಲವು ಹಿರಿಯ ಪತ್ರಕರ್ತರೊಂದಿಗೆ ನಡೆಸಿದ ಸಂವಾದವನ್ನು ಎಂಎಸ್ ಚೌಧರಿ ಅವರು ನೆನಪಸಿಕೊಳ್ಳುತ್ತಾ, ಮಸೀದಿ ಧ್ವಂಸವಾದಾಗ ಪ್ರಧಾನಿ ಏನು ಮಾಡುತ್ತಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರಧಾನಿ ರಾವ್ ಅವರು ಉತ್ತರಿಸುತ್ತಾ, ಅವರು ಆಗ ಸುಮ್ಮನಿದ್ದರು. ಏಕೆಂದರೆ ಅದು ಬೆಳೆಯುವ ಹುಣ್ಣು ಅದು ಕೊನೆಗೊಳ್ಳುತ್ತದೆ ಮತ್ತು ಬಿಜೆಪಿ ತನ್ನ ಪ್ರಮುಖ ರಾಜಕೀಯ ಅಸ್ತ್ರವೊಂದನ್ನು ಕಳೆದುಕೊಳ್ಳುತ್ತದೆ ಎಂದು ಅವರು ಭಾವಿಸಿದ್ದರು ಎಂದು ಹೇಳಿರುವುದಾಗಿ ನೆನಪಿಸಿಕೊಂಡಿದ್ದಾರೆ.
ಇದನ್ನು ಓದಿ: 1980 ಮೊರಾದಾಬಾದ್ ಗಲಭೆ: RSS, ಬಿಜೆಪಿಯ ಆರೋಪಿಗಳ ಹೆಸರು ಕೈಬಿಟ್ಟ ನ್ಯಾಯಾಂಗ ತನಿಖಾ ವರದಿ